Thursday, 19th September 2024

BY Vijayendra: ಮತಾಂಧರಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌ ಸರಕಾರ: ವಿಜಯೇಂದ್ರ ಟೀಕೆ

by vijayendra

ಬೆಂಗಳೂರು: ಕಾಂಗ್ರೆಸ್‌ ಸರಕಾರ (Congress Government) ಮತಾಂಧತೆಯನ್ನು ಪೋಷಿಸಿ ಕಿಡಿಗೇಡಿಗಳನ್ನು ರಕ್ಷಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ (BJP State president) ಬಿ.ವೈ ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ದಾವಣಗೆರೆಯ (Davanagere Tense) ಘಟನೆಯ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಒಂದು ರಾಜಕೀಯ ಪಕ್ಷ ಮತದಾರರನ್ನು ಆಕರ್ಷಿಸಲು ರಾಜಕಾರಣ ಮಾಡುವುದು ತಪ್ಪಲ್ಲ, ಆದರೆ ಮತಾಂಧತೆ ಪೋಷಿಸುವುದು, ಕಿಡಿಗೇಡಿಗಳನ್ನು ರಕ್ಷಿಸುವುದು ಲಜ್ಜೆಗೆಟ್ಟ ರಾಜಕಾರಣದ ಪರಮಾವಧಿಯಾಗುತ್ತದೆ. ಸದ್ಯ ಇದು ನಮ್ಮ ಕರ್ನಾಟಕದ ಪರಿಸ್ಥಿತಿಯಾಗಿದ್ದು ಕಾಂಗ್ರೆಸ್ಸಿನ ಅಲಿಖಿತ ಬೆಂಬಲ ವಿದ್ರೋಹಿ ಶಕ್ತಿಗಳಿಗೆ ಮತಾಂಧತೆಯ ಅಮಲು ತುಂಬಿದೆ, ಪರಿಣಾಮ ಹಿಂದೂ ಧಾರ್ಮಿಕ ಆಚರಣೆಯ ಮೇಲೆ ಈ ದುಷ್ಟ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ, ಮೊನ್ನೆ ನಾಗಮಂಗಲ ಆಯಿತು, ಇದೀಗ ದಾವಣೆಗೆರೆಯಲ್ಲಿ ಬಾವುಟ ಕಟ್ಟುವ ವಿಚಾರಕ್ಕೆ ಹಿಂದೂ ಯುವಕರ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ಈ ಸರ್ಕಾರ ಪೋಲಿಸರ ಕೈಕಟ್ಟಿ ಕೂರಿಸಿದೆ, ಕಾಂಗ್ರೆಸ್ ಮನಸ್ಥಿತಿಯ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ತಂದು ಕೂರಿಸಿದೆ. ಕೆಲವೆಡೆ ಮತೀಯ ಶಕ್ತಿಗಳೇ ತಮಗೆ ಬೇಕಾದ ಅಧಿಕಾರಿಗಳನ್ನು ಆಗ್ರಹಪೂರ್ವಕವಾಗಿ ವರ್ಗಮಾಡಿಸಿಕೊಂಡಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಮೊಘಲ್ ಕಾಲದ ಮನಸ್ಥಿತಿ ಬೆಳೆಸಿಕೊಂಡಿರುವ ಮತೀಯ ಗುಂಪು ಭಾರತೀಯ ಆಚಾರ-ವಿಚಾರ, ಹಬ್ಬ- ಉತ್ಸವಗಳ ಮೇಲೆ ಮುಗಿಬೀಳುತ್ತಿವೆ ಇದನ್ನು ನೋಡಿದರೆ ಭಾರತಕ್ಕೆ ದಾಳಿ ಇಟ್ಟಿದ್ದ ಮಹಮದ್ ಘಜನಿಯ ದೇವಾಲಯಗಳ ಧ್ವಂಸದ ಇತಿಹಾಸ ನೆನಪಿಸಿಕೊಳ್ಳುವಂತಾಗುತ್ತಿದೆ ಎಂದಿದ್ದಾರೆ.

ನಾಗಮಂಗಲದ ಘಟನೆಗೆ ಪಿ.ಎಫ್.ಐ ಉಗ್ರ ಸಂಘಟನೆಯ ನಂಟು ಇರುವ ಬಗ್ಗೆ ಪೋಲಿಸ್ ಮೂಲಗಳೇ ಶಂಕೆ ವ್ಯಕ್ತ ಪಡಿಸುತ್ತಿವೆ. ಮಾನ್ಯ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಏನು ಮಾಡಲು ಹೊರಟಿದೆ ? ರಾಷ್ಟ್ರ ಕವಿ ಕುವೆಂಪು ಅವರು ಬಣ್ಣಿಸಿದ ‘ಸರ್ವಜನಾಂಗದ ಶಾಂತಿಯ ತೋಟ’ ಉಗ್ರ ಮನಸ್ಥಿತಿಯ ದುರುಳರ ಕೂಟಗಳಿಗೆ ನೆಲೆಯಾಗುತ್ತಿದೆ, ಇದನ್ನು ನೋಡಿ ಕರುನಾಡ ಜನತೆ ಸುಮ್ಮನೆ ಕೂರಬೇಕೆ? ಭ್ರಷ್ಟ ಹಗರಣಗಳ ಜತೆಗೇ ಕೋಮುವಾದಿಗಳ ರಕ್ಷಣೆಗೂ ನಿಂತಿರುವ ಈ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಕೊನೆಗೊಳಿಸಲು ಹೋರಾಡುವುದೇ ನಮಗಿರುವ ಮಾರ್ಗ ಎಂದು ವಿಜಯೇಂದ್ರ ಹೇಳಿದ್ದಾರೆ.

ದಾವಣಗೆರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಹಿಂದೂ ಯುವಕರ ಮೇಲೆ ದೌರ್ಜನ್ಯ ನಡೆಸಿದ ಹಲ್ಲೆಕೋರ ದುಷ್ಕರ್ಮಿಗಳ ಮೇಲೆ ಕೂಡಲೇ ಕ್ರಮ ಜರುಗಿಸದಿದ್ದರೆ ಮುಂದಾಗುವ ಪರಿಣಾಮಗಳಿಗೆ ಪೋಲಿಸರೇ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: CM Siddaramayya: ಸಿಎಂ ಸಿದ್ದರಾಮಯ್ಯರಿಂದ ಸರ್ದಾರ್ ಪಟೇಲರ ಪುತ್ಥಳಿಗೆ ಮಾಲಾರ್ಪಣೆ