ಮಂಗಳೂರು: ಎಡನೀರು ಮಠದ ಪೀಠಾಧಿಪತಿ ಕೇಶವಾನಂದ ಭಾರತಿ ಶ್ರೀ (79) ಅನಾರೋಗ್ಯದಿಂದಾಗಿ ಭಾನುವಾರ ಶ್ರೀಕೃಷ್ಣೈಕ್ಯರಾದರು. ಯಕ್ಷಗಾನ ಕಲಾವಿದರಿಗೆ ಮನ್ನಣೆ ಸಿಗಲು ತಳಪಾಯ ರೂಪಿಸಿದ್ದರು. ಶ್ರೀಗಳೇ ಮೇಳವನ್ನ ಮುನ್ನಡೆ ಸುತ್ತಾ ಭಾಗವತಿಕೆ ನಡೆಸುತ್ತಿದ್ದರು.
ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಶ್ರೀಗಳು, ದೀರ್ಘಕಾಲ ಅನಾರೋಗ್ಯದಿಂದಿದ್ದರು. ಶ್ರೀಗಳ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಸಂತಾಪ
‘ದೀನದಲಿತರ ಸಬಲೀಕರಣಕ್ಕಾಗಿ ಮತ್ತು ಸಮುದಾಯದ ಸೇವೆಗಾಗಿ ಪೂಜ್ಯ ಕೇಶವಾನಂದ ಭಾರತಿ ಸ್ವಾಮೀಜಿ ಅವರನ್ನು ನಾವು ಸದಾ ನೆನೆಯುತ್ತೇವೆ. ಅವರು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಶ್ರೇಷ್ಠ ಸಂವಿಧಾನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸ್ವಾಮೀಜಿ ಅವರು ಸದಾ ನಮ್ಮ ನೆನಪಿನಲ್ಲಿರುತ್ತಾರೆ.ಮುಂದಿನ ತಲೆಮಾರುಗಳಿಗೆ ಸ್ಫೂರ್ತಿಯಾಗಿರುತ್ತಾರೆ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯವರು ಟ್ವೀಟ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಸಂತಾಪ
ಕಾಸರಗೋಡು ಜಿಲ್ಲೆಯ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಅವರ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಸಂತಾಪ ವ್ಯಕ್ತಪಡಿಸಿದ್ದಾರೆ.
‘ಕೇಶವಭಾರತಿ ಸ್ವಾಮೀಜಿ ಅವರು ಉತ್ತಮ ತತ್ವಜ್ಞಾನಿ, ಶಾಸ್ತ್ರೀಯ ಗಾಯಕ ಹಾಗೂ ಸಾಂಸ್ಕೃತಿಕ ಮಿಶ್ರಣದ ಪ್ರತೀಕವಾಗಿದ್ದರು’ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬಣ್ಣಿಸಿದ್ದಾರೆ. ಅವರ ಜೀವನವು ಭವಿಷ್ಯದ ಪೀಳಿಗೆಗೆ ದಾರಿ ತೋರುವ ಬೆಳಕಾಗಿರುತ್ತದೆ. ಓಂ ಶಾಂತಿ’ ಎಂದು ನಾಯ್ಡು ಅವರು ಟ್ವೀಟ್ನಲ್ಲಿ ಸಂತಾಪ ಸೂಚಿಸಿದ್ದಾರೆ.