Saturday, 27th July 2024

ಆಧುನಿಕ ಅಣಕವಾಡು ಆರಂಭಿಸಿದ್ದು ಕೈಲಾಸಂ

ಸಂವಾದ-೩೭೦

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ಅಣಕವಾಡು ಎಂಬ ಪನ್‌ಡ್ರೈವ್’ ಬಗ್ಗೆ ಮಾತನಾಡಿದ ಅಣಕು ರಾಮನಾಥ್

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಅಣಕುವಾಡು. ಮೂಲ ಹಾಡಿನ ಸಾಹಿತ್ಯಕ್ಕೆ ಪ್ರತಿಸಾಹಿತ್ಯ ಸೃಷ್ಟಿಸಿ, ಅದೇ ದಾಟಿಯಲ್ಲಿ ಹಾಡುವುದೇ ಅಣಕುವಾಡು. ಅದೊಂದು ರೀತಿಯ ಪನ್. ಆದರೆ, ಅಣಕವಾಡು ಎಂದರೇನು? ಅದು ಯಾವಾಗ ಪ್ರಾರಂಭವಾಯಿತು ? ಎಂಬುದಕ್ಕೆ ಸರಿಯಾದ ಉಲ್ಲೇಖ ವಿಲ್ಲ.

ಕೇಶೀರಾಜನ ಶಬ್ದಮಣಿ ದರ್ಪಣದಲ್ಲಿ ಒಂದು ಕಡೆ, ಅಣಕವಾಡು ಎಂಬ ಪದದ ಉಲ್ಲೇಖವಿದೆ. ಹೀಗಾಗಿ ಅದಕ್ಕೂ ಮುಂಚಿತ ವಾಗಿಯೇ ಅಣಕುವಾಡು ಇತ್ತು ಎಂಬುದು ಗೊತ್ತಾಗುತ್ತದೆ. ಆದರೆ, ಆಧುನಿಕ ಕಾಲದಲ್ಲಿ ಆದು ಆರಂಭವಾಗಿದ್ದು ಕೈಲಾಸಂ ಅವರಿಂದ ಎಂದು ಅಣಕು ರಾಮನಾಥ್ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಅಣಕ ವಾಡು ಎಂಬ ಪನ್‌ಡ್ರೈವ್’ ಬಗ್ಗೆ ಮಾತ ನಾಡಿದ ಅವರು, ಕೈಲಾಸಂ ಅವರು ಸುರುಳಿ ಬಿದ್ದನು ಬೋರನು ಎಂಬ ಒಂದು ಸುಂದರವದ ಅಣಕುವಾಡು ಬರೆದಿದ್ದಾರೆ. ಆ ಅಣಕುವಾಡಿನ ಪರಂಪರೆ ಮುಂದು ವರಿದು ರಾಶಿಯವರ ಕೆಣಕೋಣು ಬಾರ ಎಂಬ ಪುಸ್ತಕ, ಗುಡಿಬಂಡೆ ರಾಮಾಚಾರ್ ಅವರ ಹಾಡುಗಳಿಂದ ಜನಪ್ರಿಯತೆ ಗಳಿಸಲಾರಂಭಿಸಿತು. ಈ ಅಣಕುವಾಡು ಹೆಚ್ಚು ಪ್ರಸಿದ್ಧವಾಗಲು ಒಬ್ಬ ವ್ಯಕ್ತಿ ಮತ್ತು ಒಂದು ಸಂಸ್ಥೆ ಮುಖ್ಯ ಕಾರಣವಾಯಿತು.

ವೈ.ವಿ. ಗುಂಡುರಾವ್ ಅವರ ಸ್ನೇಹಿತ ಮಂಜು ನಾಥ್ ಎಂಬುವವರು ಬರೆದಿದ್ದ, ‘ಕಂಡೇ ಹರಿಯ ಕಂಡೇ, ದೇವಾದಿ ದೇವ ದನುಜಾದಿ ವಂದ್ಯ, ದರಣೀಶನ’ ಹಾಡಿಗೆ ಅಣಕವಾಡು, ‘ಹಂಡೇ ಕರಿಯ ಹಂಡೇ… ಮುತ್ತಾತ ತನ್ನ ಮದುವೇಲಿ ಪಡೆದ, ಮಣಭಾರದ, ಭವ್ಯ ಒಡಲ ಬಹಳ ಹಳೆಯ ಕಂಡೆ ಕರಿಯ ಹಂಡೆ’ ಎಂಬ ಅಣಕುವಾಡು ರಚಿಸಿದರು ಎಂದು ತಿಳಿಸಿದರು.

ಗುಡಿ ಬಂಡೆ ರಾಮಾಚಾರ್ಯರು ಅಲ್ಲಿ ಇಲ್ಲಿ ಹಾಡುತ್ತಿದ್ದರು, ಅದನ್ನು ಹೊರತಾಗಿ ಎಲ್ಲೇ ನೋಡಿದರೂ ೫-೬ ಅಣಕುವಾಡು ಗಳು ಕಾಣುತ್ತಿತ್ತು. ಗಾನವಿನೋದಿನಿ ತಂಡದವರು ಅಣಕುವಾಡುಗಳನ್ನು ಹಾಡುತ್ತಿದ್ದರು. ನಿಮ್ಮ ಬಳಿ ಕೇವಲ ೮-೬ ಅಣಕ ವಾಡು ಇರುವುದೇ ಎಂದು ಕೇಳಿದಾಗ, ಹೌದು, ನೀವೂ ಬರೆದುಕೊಡಿ ಎಂದಿದ್ದರು. ಅದರಂತೆ ಮೊಟ್ಟ ಮೊದಲು ಒಬ್ಬ ವಕೀಲನ ಮೇಲೆ ಅಣಕವಾಡು ಬರೆದಿದ್ದೆ. ನಂತರ ಕಕ್ಷೀದಾರನ ಬಗ್ಗೆ ಬರೆದುಕೊಡುವಂತೆ ಹೇಳಿದ್ದರು.

ಅಲ್ಲಿಂದ ಅಣಕುವಾಡಿನೊಂದಿಗೆ ನನ್ನ ಪಯಣ ಆರಂಭವಾಯಿತು ಎಂದರು. ನಮ್ಮ ಸುತ್ತಮುತ್ತಲಿನ ವಿಚಾರವನ್ನು ಹುಡುಕುತ್ತಾ ಹೋದರೆ ವಿಷಯಗಳು ತಾವಾಗಿಯೇ ಸಿಗುತ್ತಾ ಹೋಗುತ್ತವೆ. ಜನಪ್ರಿಯವಾದ ಹಾಡಿನಲ್ಲಿರುವ ಸಾಹಿತ್ಯವನ್ನು ತೆಗೆದು ಈ ವಿಚಾರವನ್ನು ಸೇರಿಸಿದರೆ ಅಣಕುವಾಡು ಸಿದ್ಧವಾಗುತ್ತದೆ.

ಅಪಾರ್ಟ್‌ಮೆಂಟ್‌ನಲ್ಲಿ ಜೀವನ ಮಾಡುತ್ತಿರುವವರ ಪಾಡನ್ನು, ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೇಲೆನಿಲ್ಲಾ ಸುಳ್ಳು ಹಾಡಿಗೆ ಹೋಲಿಸಿ ಬರೆದಾಗ,

|| ಇಲ್ಲೆ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲಾ
ಸುಳ್ಳು
-ರು ರೂ- ಎರಡರ ಮಧ್ಯೆ ಮೂರು
ದಿನದ ಬಾಳು.. ಹೇ ಮೂರು ದಿನದ ಬಾಳು.
ಕಪ್ಪು-ಬಿಳುಪು ಹಣವನು ತೆತ್ತು -ಟು
ಕೊಂಡರೂನೂ
ತೆರುತಲೆಯಿಹೆವು ರಾಶಿ ರಾಶಿ ಮಂತ್ಲಿ
ಮೈಂಟೋನೆನ್ಸು
ತುಳಸಿ ಕಟ್ಟೆ ರಂಗೋಲಿಗೂ ಜಾಗವಿಲ್ಲ ಇಲ್ಲಿ
ಎಲ್ಲ ಜಾತಿ ಜನಗಳ ಮಧ್ಯೆ, ಹೊಂದ್ಕೊಂಡ್
ಹೋಗ್ತೀವ್ ಇಲ್ಲಿ ||
|| ಮೇಲಿನ ರೂ- ನಮ್ಮದಲ್ಲ, ಬೇರೇಯವರ -ರು
ಕೆಳಗಿನ -ರು ನಮ್ಮದಲ್ಲ, ಬೇರೆಯವರ
ರೂ-
ನಾಲ್ಕು ಗೋಡೆ ಮಧ್ಯೆ ಇಹೆವು ಬಂದಿಗಳಂತೆ
ಇಲ್ಲಿ
ಮಾಲಿಕರೆಂದು ಬರಿದೇ ಭ್ರಮೆಯು
ನಮದೇನಿಲ್ಲಾ ಇಲ್ಲಿ||

ಲಿಂಕ್ ನರಸಿಂಹಯ್ಯ ವಿಶೇಷ : ಎಲ್ಲದಕ್ಕೂ ರಾಮಾಯಣವನ್ನು ಲಿಂಕ್ ಮಾಡುತ್ತಿದ್ದವರು ಲಿಂಕ್ ನರಸಿಂಹಯ್ಯ. ಅವರ ಹುಚ್ಚು ಬಿಡಿಸಬೇಕು ಎಂದು ಕೆಲವು ವಿದ್ವಾಂಸರು ನಿರ್ಧರಿಸಿ, ಅವರನ್ನು ಕರೆದು, ಕಣ್ಣಾಮುಚ್ಚೆ ಕಾಡೆಗೂಡೆ ಉದ್ದಿನ ಮೂಟೆ ಉರುಳೇ ಹೋಯ್ತು ಹಾಡನ್ನು ಲಿಂಕ್ ಮಾಡಲು ಹೇಳಿದರು.

ಆಗ ಲಿಂಕ್ ನರಸಿಂಹಯ್ಯ, ಸ್ವಾಮಿ ೨೪ ಸಾವಿರ ಶ್ಲೋಕದಲ್ಲಿ ಹೇಳಿರುವ ರಾಮಾಯಣವನ್ನು ನಾಲ್ಕೇ ಸಾಲಿನಲ್ಲಿ ಹೇಳಿಬಿಟ್ಟರಿ
ಎಂದರು. ‘ಕಣ್ಣಾಮುಚ್ಚೇ-ದಶರಥನು ಕಣ್ಣು ಮುಚ್ಚಲು, ಕಾಡೇ ಗೂಡೇ-ರಾಮನಿಗೆ ಕಾಡೇ ಗೂಡಾಯಿತು, ಉದ್ದಿನ ಮೂಟೆಯಂತೆ ಮೆರೆಯುತ್ತಿದ್ದ ರಾವಣ ಉರಳೇ ಹೋದ ಇದೇ ರಾಮಾಯಣ ಎಂದರು.

ನನಗೆ ಒಮ್ಮೆ ರಾಮಾಯಣವನ್ನು ಮೊಬೈಲ್ ಗೆ ಲಿಂಕ್ ಮಾಡಿ ಎಂಬ ಸವಾಲು ಎದುರಾಯಿತು. ಮೊಬೈಲ್ ಎಂದರೆ ಅದರಲ್ಲಿ ಒಂದು ಸಿಮ್ ಇರುತ್ತದೆ. ಸಿಮ್, (ಎಸ್‌ಐಎಂ) ರಾಮ- ಸಿಂಪ್ಲಿಸಿಟಿ, ಹನುಮಂತ- ಇಂಡಿವಿಜುವಾಲಿಟಿ, ಶ್ರೀಲಂಕ ಪೋರ್ಟೆಬಿಲಿಟಿ.
ಈ ಸಿಮ್ ಒಳಗೊಂಡ ಮೊಬೈಲೇ ರಾಮಾಯಣ ಎಂದೆ ಎಂದು ಹೇಳಿದರು.

***

ನಾವು ಸಿನಿಮಾ ಹಾಡಿನ ಪಲ್ಲವಿಗೆ ಮಾತ್ರ ಅಣಕುವಾಡು ಮಾಡುತ್ತೇವೆ. ಆದರೆ, ರಮ್‌ನಾಥ್ ಅವರು ಇಡೀ ಮೂಲ ಹಾಡಿನ ಪದಪದಕ್ಕೂ ಅಣಕುವಾಡು ಸೇರಿಸಿ ಹಾಡುತ್ತಾರೆ. ಅದು ಅವರ ಶಕ್ತಿ.
– ಶ್ರೀವತ್ಸ ಜೋಶಿ ಅಂಕಣಕಾರ

ನಿಮ್ಮ ಹೆಸರು ರಮಾನಾಥ್ ಅಥವ ರಾಮ್‌ನಾಥರೋ ಎಂದು ಕೇಳಿದೆ. ಏನಾದರು ಅನ್ನಿ ಆದರೆ, ರಮ್‌ನಾಥ್ ಎಂದು ಮಾತ್ರ ಹೇಳಬೇಡಿ ಎಂದು ಪನ್ ಮಾಡಿದ್ದರು. ಮಾತು ಮಾತಿಗೆ ಪನ್ ಮಾಡುವುದು ಅವರ ವಿಶೇಷತೆ. ಇವರ ನಿಜವಾದ ಪ್ರತಿಭೆ, ಸುಧಾ
ವಾರಪತ್ರಿಕೆಯಲ್ಲಿ ಬರುವ ಪ್ರಶ್ನೋತ್ತರದಲ್ಲಿ ಕಂಡು ಬರುತ್ತದೆ.
– ಡುಂಡಿರಾಜ್ ಹಾಸ್ಯ ಸಾಹಿತಿ

error: Content is protected !!