Friday, 18th October 2024

ಲೈಂಗಿಕ ದೌರ್ಜನ್ಯ ತಡೆ ಮಾರ್ಗಸೂಚಿ ಮತ್ತಷ್ಟು ಆದ್ಯತೆ ಅಗತ್ಯ

ಲೈಂಗಿಕ ದೌರ್ಜನ್ಯ ವಿಷಯದಲ್ಲಿ ಕಾನೂನು ಬಿಗಿಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರಕಾರ ಪ್ರಾಮುಖ್ಯತೆ ನೀಡಿದೆ. ಇದರ
ಅನ್ವಯ ರಾಜ್ಯ ಸರಕಾರಗಳಿಗೆ ಕೆಲವು ಮಹತ್ವದ ಸಲಹೆಗಳನ್ನು ನೀಡಲಾಗಿದೆ.

ಪ್ರಸ್ತುತದ ಸನ್ನಿವೇಶದಲ್ಲಿ ಇದೊಂದು ಮಹತ್ವದ ಬೆಳವಣಿಗೆ. ರಾಷ್ಟ್ರದಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರದಲ್ಲಿ ಇಂಥ ಕುಕೃತ್ಯಗಳ ತಡೆಗಾಗಿ ಬಹಳಷ್ಟು ಜಾಗೃತಿ ಮೂಡಲಾರಂಭಿಸಿದೆ. ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು, ಆಕ್ರೋಶಗಳು ವ್ಯಕ್ತವಾಗತೊಡಗಿವೆ.’

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸರಕಾರಗಳು ಸಹ ಅತ್ಯಾಚಾರದಂಥ ಸಾಮಾಜಿಕ ಪಿಡುಗಿನ ನಿರ್ಮೂಲನೆಗಾಗಿ ಬಹಳಷ್ಟು ಮಹತ್ವ ನೀಡಲಾರಂಭಿಸಿವೆ. ಇಂಥ ಬೆಳವಣಿಗೆಯ ಪರಿಣಾಮದಿಂದಾಗಿ ಇದೀಗ ಕೇಂದ್ರ ಗೃಹ ಸಚಿವಾಲಯ ಮಹತ್ವದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪೊಲೀಸರು ದೂರು ದಾಖಲಿಸಿಕೊಂಡ ಯಾವುದೇ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎರಡು ತಿಂಗಳ ಅವಧಿಯಲ್ಲಿ ಪೂರೈಸಬೇಕೆಂಬುದು ಮಾರ್ಗಸೂಚಿಯ ಆದೇಶ.ಈ ಮಹತ್ವದ ನಿರ್ಣಯದಿಂದ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡಲು ಸಾಧ್ಯ. ಜತೆಗೆ ಕುಕೃತ್ಯ ಎಸಗಿದ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆ ಜಾರಿಗೊಳಿಸುವಲ್ಲಿಯೂ ಪೂರಕವಾಗಿದೆ. ಆದರೆ ಅತ್ಯಾಚಾರ ನಡೆದ ನಂತರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸು ವುದು ಎಷ್ಟು ಮುಖ್ಯವೋ ಅದೇ ರೀತಿ ಅತ್ಯಾಚಾರಗಳ ತಡೆಗೂ ಕೆಲವು ಮಹತ್ವದ ಕ್ರಮಗಳನ್ನು ಶೀಘ್ರವೇ ಜಾರಿಗೊಳಿಸ ಬೇಕಿರು ವುದು ಅತಿ ಅವಶ್ಯ.

ಲೈಂಗಿಕತೆಯನ್ನು ಪ್ರಚೋದಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಅಶ್ಲೀಲ ಜಾಹೀರಾತುಗಳನ್ನು ತಡೆಯಬೇಕು. ಸಾಮಾಜಿಕ
ಜಾಲತಾಣಗಳಲ್ಲಿ ಕಂಡುಬರುವ ಲೈಂಗಿಕ ಪ್ರಚೋದಿತ ದೃಶ್ಯಗಳಿಗೆ ಕಡಿವಾಣ ಹಾಕಬೇಕು. ಈ ರೀತಿ ನಿಯಂತ್ರಣಕ್ಕಾಗಿ ಕೆಲವು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕಾಗಿರುವುದು ಇಂದಿನ ಅವಶ್ಯ. ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಜಾರಿ ಗೊಳಿಸುವಷ್ಟೇ, ಲೈಂಗಿಕ ಪ್ರಚೋದನೆಯ ತಡೆಯ ಬಗ್ಗೆಯೂ ಸರಕಾರಗಳು ಸೂಕ್ತ ಕ್ರಮ ಜರುಗಿಸಬೇಕಿರುವುದು ಮುಖ್ಯ.