Sunday, 8th September 2024

ಒಂದು ವೇಳೆ ಮೋದಿ ಸರ್ವಾಧಿಕಾರಿಯಾಗಿದ್ದರೆ ಏನೆಲ್ಲ ಆಗುತ್ತಿತ್ತು ?

ಬುಲೆಟ್ ಪ್ರೂಫ್

ವಿನಯ್ ಖಾನ್

vinaykhan078@gmail.com

‘ರಾಷ್ಟ್ರಪತಿ ಜವಾಹರ್‌ಲಾಲ್ ಕೀ ಜೈ. ಹಾಗೇ ಆ ರಾಷ್ಟ್ರಪತಿ ಮೇಲೆ ನೋಡಿ ಅಲ್ಲಿ ನೆರದಿದ್ದಂತಹ ಜನ ಸಮೂಹದ ಮಧ್ಯೆ ಸರಸರನೇ ನಡೆದು ಹೋಗುತ್ತಿದ್ದಾನೆ, ಅವನ ಕೈ ಮೇಲೇರಿ ಒಂದಾಗಿ ನಮಸ್ಕಾರವನ್ನೂ ಮಾಡುತ್ತಿದ್ದಾರೆ. ಅವನ ಮಂಕು ಕವಿದಿದ್ದ ಮುಖದಲ್ಲಿ ಒಂದು ನಗೆ ಅರಳುತ್ತದೆ. ಅದು ಅವನ ಸ್ವಂತದ ನಗುವಾಗಿದ್ದರೂ, ಅದನ್ನು ನೋಡಿದ ಜನರು ಪ್ರತಿನಗುವನ್ನು ಅವನ ಮೇಲೆ ಬೀರಿ, ಕೂಗಾಡುತ್ತಿದ್ದಾರೆ.

ಹಾಗೆ ನಗು ಮುಂದೆ ಹೋಗಿ ಮತ್ತೇ ಆ ಮುಖದಲ್ಲಿ ಆ ಎಲ್ಲ ಹಲವಾರು ಒಟ್ಟುಗೂಡಿದ ಭಾವನೆಗಳ ನಡುವೆ ಶಿಸ್ತು, ಗಾಢತೆ ಮತ್ತು ನಿರ್ಭಾವುಕತೆ, ಎಲ್ಲ
ಒಟ್ಟು ಸೇರಿದ ಭಾವನೆಗಳ ನಡುವೆಯೂ ಮೂಡಿತು. ಅದು ಯಾವ ರೀತಿ ಇತ್ತೆಂದರೆ, ಆ ನಗು ಮತ್ತು ನಡುವಳಿಕೆಯ ಹಿಂದೆ ಒಂದು ಸತ್ಯತೆಯೂ ಇತ್ತು;
ಅದು ಜನರ ಪ್ರೀತಿ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿ ಜನಪ್ರಿಯ ಆಗುವ ಸಣ್ಣ ತಂತ್ರವೂ ಆಗಿತ್ತು. ಇರಬಹುದೇನೋ?

ಅವನನ್ನು ಮತ್ತೇ ನೋಡಿ. ಅಲ್ಲಿ ದೊಡ್ಡ ಮೆರವಣಿಗೆ ನಡೆಯುತ್ತಿದೆ. ನೂರಾರು ಸಾವಿರಾರು ಜನ ಅವನ ಕಾರಿನ ಸುತ್ತ ಸುತ್ತಿ ಹಿರಿಹಿಗ್ಗಿನಿಂದ ಘೋಷಣೆ ಗಳನ್ನು ಹಾಕುತ್ತಿದ್ದಾರೆ. ಅವನು ತನ್ನ ಕಾರಿನ ಮೇಲೆ ಎದ್ದು ನಿಂತ, ತನ್ನನ್ನು ತಾನು ಸಮತೋಲನ ಮಾಡಿಕೊಂಡು, ಸೀದಾ ಅದರಲ್ಲೇ ಉದ್ದಕ್ಕೆ ಕಾಣುವ, ಒಂಥರಾ ದೇವರು, ಶಾಂತ, ಗಂಭೀರನಾಗಿ ಆ ಗಲಾಟೆಯ ನಡುವೆಯೂ ಸ್ಥಿರವಾಗಿದ್ದಾನೆ….

….ಜವಾಹರ್‌ಲಾಲ್ ಈಗಾಗಲೇ ಸುಸ್ತು, ಸಪ್ಪೆಯಾಗಿದ್ದಾನೆ, ಹೀಗೆಯೇ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದರೆ, ಅವನು ಕ್ರಮೇಣವಾಗಿ
ಹದಗೆಡಬಹುದು. ಅವನು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ, ಅದು ಹೇಗೆ ಎಂದರೆ, ಹುಲಿ ಸವಾರಿ ಮಾಡುವವನನ್ನು ಕೆಳಗಿಳಿಸುವುದಕ್ಕಾಗುವುದಿಲ್ಲ.
ಆದರೆ, ಹೆಚ್ಚಿನ ಜವಾಬ್ದಾರಿ, ಹೊರೆಗಳಿಂದ ಮಾನಸಿಕ ಕ್ಷೀಣಿಸುವಿಕೆ ಮತ್ತು ದಾರಿ ತಪ್ಪುವುದರಿಂದ ತಡೆಯಬಹುದು. ಭವಿಷ್ಯತ್‌ನಲ್ಲಿ ಅವನಿಂದ ಒಳ್ಳೆಯ ಕೆಲಸಗಳನ್ನು ಕೇಳುವುದು ನಮ್ಮ ಕರ್ತವ್ಯ. ಹೊಗಳಿಕೆ ಮತ್ತು ಶ್ಲಾಘನೆಗಳಿಂದ ಅದನ್ನು ಮತ್ತು ಅವನನ್ನು ಕೆಡಸದಿರೋಣ. ಅವನ ಜಂಭ ಭಯಾನಕವಾಗಿ ಹೆಚ್ಚಿದೆ. ಅದನ್ನು ತನಿಖೆ ಮಾಡಬೇಕು. ನಮಗೆ ಸರ್ವಾಧಿಕಾರಿ ಬೇಡ’ ಈ ಲೇಖನ ೧೯೩೭ ನವೆಂಬರ್‌ನಲ್ಲಿ ‘ದಿ ಮಾರ್ಡರ್ನ್ ರಿವೀವ್ ಆ- ಕಲ್ಕತ್ತಾ’ ಪತ್ರಿಕೆಯಲ್ಲಿ ಭಿತ್ತರಿಸುತ್ತದೆ. ಆಗೆಲ್ಲ ಜವಾಹರ್‌ಲಾಲ್ ನೆಹರೂ ದೇಶಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸಿದ್ದ ನಾಯಕ.

ಕಾಂಗ್ರೆಸ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭರವಸೆಯ ನಾಯಕರೂ ಆಗಿದ್ದರು. ಅಂತಹ ಸಮಯದಲ್ಲಿ ‘ನಮಗೆ ಸರ್ವಾಧಿಕಾರಿ ಬೇಡ’ ಎಂಬುವ ಶೀರ್ಷಿಕೆ ಇಡೀ ದೇಶಾದ್ಯಂತ ಸದ್ದು ಮಾಡುತ್ತೆ. ತಮ್ಮ ನಾಯಕನ ವಿರುದ್ಧ ಬರೆದ ಲೇಖನವನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್‌ನವರಿಂದ ಆಗುವುದಿಲ್ಲ. ಕಾಂಗ್ರೆಸ್ ಹಾಗೂ ದೇಶದ ಹಲವು ಜನರ ಚರ್ಚೆಯಲ್ಲಿ ಈ ಲೇಖನದ ವಿಷಯ ಹಾದು ಹೋಗುತ್ತದೆ. ಎಲ್ಲರೂ ನೆಹರೂರನ್ನು ಹೊಗಳಿ ಅಟ್ಟಕ್ಕೇರಿಸು ತ್ತಿದ್ದ ಸಮಯದಲ್ಲಿ ಅವರ ವಿರುದ್ಧ ಬರೆದ ಲೇಖನವೂ ತಳಮಳವನ್ನೂ ಹುಟ್ಟಿಸುತ್ತದೆ.

ಆ ಅಂಕಣದಲ್ಲಿ ನೆಹರೂರವರ ಬಗ್ಗೆ ಹಿಗ್ಗಾ ಮುಗ್ಗಾ ಟೀಕಿಸಿ, ಜನರಲ್ಲೂ ನೆಹರೂ ಮೇಲೆ ಗಟ್ಟಿಯಾದ ನಂಬಿಕೆಯನ್ನೂ ಇಡಬೇಡಿ ಎಂದು ತಾಕೀತು
ಮಾಡುತ್ತಾರೆ. ಆದರೆ, ಆ ಲೇಖನದಲ್ಲಿ ಲೇಖಕರ ಹೆಸರು ಇಲ್ಲದಿದ್ದರಿಂದ ಕೆಲವು ದಿನಕ್ಕೆ ಈ ವಿಚಾರವನ್ನು ಜನರು ಮರೆಯುತ್ತಾರೆ. ಕೆಲ ವರ್ಷಗಳ
ನಂತರ ಎಲ್ಲರಿಗೂ ಗೊತ್ತಾಗಿದ್ದು, ಈ ಲೇಖನವನ್ನು ಬರೆದಿದ್ದು ಸ್ವತಃ ಜವಾಹರ್‌ಲಾಲ್ ನೆಹರೂ! ನೆಹರೂ ವಿರುದ್ಧ ಇಂದಿನ ಕಾಲದಲ್ಲೂ ಹಲವಾರು
ಅಪಸ್ವರಗಳಿವೆ. ಇಲ್ಲ ಅಂತಲ್ಲ, ಹಾಗಂತ ಈ ದೇಶ ಇರುವವರೆಗೂ ಅವರನ್ನು ಮರೆಯಲಾಗುವುದಿಲ್ಲ.

ಏಕೆಂದರೆ, ಅವರು ಈ ದೇಶದ ಮೊದಲ ಪ್ರಧಾನಿ. ಅದೇ ರೀತಿ ಒಂದು ಸಂಸ್ಥೆಯ ಮೊದಲ ಮುಖ್ಯಸ್ಥ ಯಾವಾಗಲೂ ಆ ಸಂಸ್ಥೆಯನ್ನು ಕಟ್ಟುವಲ್ಲಿ ಮುಖ್ಯ ಪಾತ್ರವಹಿಸುತ್ತಾನೆ. ಏಕೆಂದರೆ, ಅವನು ಹಾಕಿಕೊಟ್ಟ ದಾರಿಯಲ್ಲೇ ಆ ಸಂಸ್ಥೆ ನಡೆಯಬೇಕು. ಅಷ್ಟೇ ಏಕೆ, ಆಪಲ್ ಇಂದು ಹಲವಾರು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಸೀವ್ ಜಾಬ್ಸ್ ಬದುಕಿದ್ದ ಕಾಲಕ್ಕಿಂತ ಚೆನ್ನಾಗಿ ಬೆಳೆದು ನಿಂತಿದೆ. ಆದರೂ, ಆಪಲ್ ಅಂತ ಬಂದಾಗ ನೆನಪಾಗು ವುದು ಸ್ಟೀವ್ ಜಾಬ್ಸ್ ಹೊರತು ಟಿಮ್ ಕೂಕ್ ಅಲ್ಲ. ಅಂತೆಯೇ ಮೈಕ್ರೋಸಾಫ್ಟ್ ಎಂದ ತಕ್ಷಣ ನೆನಪಾಗುವುದು ಆ ಸಂಸ್ಥೆಯನ್ನು ಕಟ್ಟಿದ ಬಿಲ್‌ಗೇಟ್ಸ್ ಹೆಸರೇ ಹೊರತು ಇಂದಿನ ಸಿಇಒ ಸತ್ಯ ನಡೆಲ್ಲ ಅಲ್ಲ.

ಅದರ ಜೊತೆಗೆ ಅಮೆರಿಕದ ಅಧ್ಯಕ್ಷರ ಬಗ್ಗೆ ಯೋಚಿಸಿದಾಗ ಜಾರ್ಜ್ ವಾಷಿಂಗ್ಟನ್ ನೆನಪಾಗುವುದೂ ಸಾಮಾನ್ಯ. ಹಾಗೇ, ಈಗಲೂ, ಮುಂದೆಯೂ ಭಾರತದ ಬಗ್ಗೆ, ಅದು ನಡೆದು ಬಂದ ಹಾದಿ ಬಗ್ಗೆ ಮಾತನಾಡುವ ಸಂದರ್ಭ ಬಂದಾಗ ಎಲ್ಲರೂ ಜವಾಹರ್ ಲಾಲ್ ನೆಹರೂ ಹೆಸರು ನೆನಪಿಸುವುದು ಸಾಮಾನ್ಯ ಬಿಡಿ. ಇನ್ನೂ ಯಾಕೆ ನೆಹರೂ ಗ್ರೇಟ್ ಆಗುತ್ತಾರೆ ಎನ್ನಲು ಹಲವಾರು ವಿಚಾರಗಳಿವೆ, ಅದರಲ್ಲಿ ಪ್ರಮುಖವಾದದ್ದು ೧೯೪೮ರಲ್ಲಿ ಮಹಾತ್ಮ ಗಾಂಧಿ, ೧೯೫೦ರಲ್ಲಿ ಪಟೇಲರು ಸೇರಿದಂತೆ ಭಾರತಕ್ಕೆ ಸ್ವಾತಂತ್ರ ಸಿಕ್ಕ ಸನಿಹದರಲ್ಲಿಯೇ ಭಾರತದ ಹಲವು ಹಿರಿಯ ಸ್ವಾತಂತ್ರ ನಾಯಕರ ದೇಹಾಂತ್ಯ ವಾಗುತ್ತದೆ. ಮತ್ತು ಆಗ ತಾನೇ ಸಿಕ್ಕಿದ್ದ ಸ್ವಾತಂತ್ರ, ಜನರು ಕಾಂಗ್ರೆಸ್‌ನ ಮೇಲೆ ಇಟ್ಟಿದ್ದ ಭರವಸೆ, ಅದರೊಂದಿಗೆ ಅನಕ್ಷರಸ್ಥತೆ, ಸಾಮಾಜಿಕ ಜಾಲತಾಣ ಮತ್ತು ಸಂಪರ್ಕದ ಕೊರತೆ, ಬ್ರಿಟೀಷರ ಕೆಳಗೆ ಆಳಿಸಿಕೊಂಡವರಿಗೆ, ಭಾರತದ ಒಬ್ಬ ಮನುಷ್ಯ ಆಳಿದರೆ ಧಂಗೆ ಏಳುತ್ತಿರಲಿಲ್ಲ.

ಎಲ್ಲದಕ್ಕಿಂತ ಹೆಚ್ಚೆಂದರೆ, ಆಗಿನ ಕಾಲದಲ್ಲಿ ಭಾರತದಲ್ಲಿ ಅತ್ಯಂತ ಹಿರಿಯ, ಜನಪ್ರಿಯ, ಪ್ರಶ್ನಾರ್ಹ ನಾಯಕರಾಗಿ ಉಳಿದಿದ್ದು ನೆಹರೂ ಅವರು ಒಬ್ಬರೆ! ಅವರು ಮನಸ್ಸು ಮಾಡಿದ್ದರೆ, ಕೋರಿಯಾದ ಕಿಮ್ ಇಲ್ ಸಂಗ್, ಜಿಂಬಾಬ್ವೆಯ ರಾಬರ್ಟ್ ಮುಗಾಂಬೆ ರೀತಿ ಯಲ್ಲಿ ಭಾರತದ ಸರ್ವಾಧಿಕಾರಿಯಾಗುವ ಅವಕಾಶ ವಿದ್ದರೂ ಅವರು ಆಗಲಿಲ್ಲ. ಅದಕ್ಕೆ ಹಲವಾರು ಕಾರಣಗಳಿರಬಹುದು. ಅಥವಾ ನೆಹರೂ ಅವರು ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ಇಟ್ಟ ನಂಬಿಕೆಯೂ ಇರಬಹುದು. ಆದರೆ, ಈಗಿನ ಭಾರತ ದಲ್ಲಿ ಸರ್ವಾಧಿಕಾರಿಯಾಗುವುದು ಕಠಿಣ ಅಥವಾ ಸುಲಭದ ಮಾತಲ್ಲ, ಅದು ಆಗುವುದೂ ಇಲ್ಲ.

ಸ್ವಲ್ಪ ಕಟ್ಟುನಿಟ್ಟು ಮಾಡಿದ್ದ ನರೇಂದ್ರ ಮೋದಿಯವರನ್ನೇ ಸರ್ವಾಧಿಕಾರಿ ಎನ್ನುವ ಜನ ಇನ್ನೂ ನಿಜವಾದ ಸರ್ವಾಧಿಕಾರ ಆಡಳಿತ ಜಾರಿಗೆ ಬಂದಿದ್ದರೆ, ಸುಮ್ಮನಿರುತ್ತಿದ್ದರೇ? ಅದಕ್ಕಿಂತ ವಿಭಿನ್ನವಾಗಿ ರಾಜಕಾರಣ ಮಾಡಿದ್ದು, ನೆಹರೂ ಅವರ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ, ಮುಂದೆ ಇಂದಿರಾ ಗಾಂಧಿ. ಈ ದೇಶದ ರಾಜಕಾರಣದ ಎಲ್ಲ ರೀತಿಯ ಅನುಭವವನ್ನು ಹೊಂದಿದವರು, ಮೊದಲು ಮಂತ್ರಿಯಾಗಿ ಮುಂದೆ ಪ್ರಧಾನ ಮಂತ್ರಿಯಾಗಿ, ಮತ್ತೇ ಸಾದಾ ಜನರಾಗಿ ಅದಾದ ಮೇಲೆ ಮತ್ತೇ ಪ್ರಧಾನ ಮಂತ್ರಿ ಹುದ್ದೆಗೇರಿ, ಅವರ ರಾಜಕಾರಣದ ಹಾದಿಯಲ್ಲಿ ಸಿಕ್ಕ ಹಲವಾರು
ತೊಡಕುಗಳನ್ನು ಸಲೀಸಾಗಿ ಮುರಿದು ಹಾಕಿ, ದೇಶದ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿರುವ ತುರ್ತು ಪರಿಸ್ಥಿತಿಯನ್ನೂ ಹೇರಿ, ಅದಾದ ಮೇಲೆ ಯಾವುದೇ ಪದವಿಯಿಲ್ಲದೇ ಮತ್ತೇ ಇನ್ನೊಮ್ಮೆ ಪ್ರಧಾನ ಮಂತ್ರಿ ಆಗುವುದು ಸುಲಭದ್ದಲ್ಲ.

ಭಾರತದಲ್ಲಿ ಸರ್ವಾಧಿಕಾರಿ ಎಂಬ ಪ್ರಶ್ನೆ ಮೂಡಿದಾಗ ಹೆಚ್ಚು ಕಡಿಮೆ ಜನರಿಗೆ ನೆನಪಾಗುವುದು ಇಂದಿರಾ ಗಾಂಧಿ, ಇನ್ನು ಕೆಲವು ಜನರಿಗೆ ನರೇಂದ್ರ ಮೋದಿ! ಇನ್ನೂ ತುರ್ತು ಪರಿಸ್ಥಿತಿಯ ಸಮಯದಲ್ಲಿ ಭಾರತದಲ್ಲಿ ಏನಾಗಿತ್ತು ಎನ್ನುವುದರ ಬಗ್ಗೆ ಎಲ್ಲರಿಗೂ ಸಂಪೂರ್ಣ ಮಾಹಿತಿ ಇದೆ. ಕಂಡಲ್ಲಿ ಬಂಧಿಸಿದ ರಾಜಕೀಯ ವಿರೋಧಿಗಳು, ಜನಸಂಖ್ಯೆ ಕಡಿಮೆ ಮಾಡಲು ಮಾಡಿದ, ವ್ಯಾಸೆಕ್ಟಮಿಗಳು. ಹೆಚ್ಚಿನ ವ್ಯಾಸೆಕ್ಟಮಿ ಮಾಡಿದ ರಾಜ್ಯದ ಮುಖ್ಯಮಂತ್ರಿಗಳನ್ನು ಇಂದಿರೆಯ ಮಗ ಸಂಜಯ ಸಂತುಷ್ಟಿ ಪಡಿಸುತ್ತಿದ್ದದ್ದು. ವ್ಯಾಸೆಕ್ಟಮಿಗಾಗಿ ರಾಜ್ಯದ ಮುಖ್ಯಮಂತ್ರಿಗಳ ನಡುವೆ ಸಂಜಯ್ ಗಾಂಽ ಸ್ಪರ್ಧೆ ಏರ್ಪಡಿಸಿದ್ದು, ದೆಹಲಿಯ ಸ್ಲಂಗಳನ್ನು ರಾತ್ರೋ ರಾತ್ರಿ ನೆಲಸಮ ಮಾಡಿದ್ದು, ಪತ್ರಿಕಾ ಸ್ವಾತಂತ್ರದ ಮೇಲೆ ನಿರ್ಬಂಧ, ಜನರ ವೈಯಕ್ತಿಕ ಸ್ವಾತಂತ್ರದ ಮೇಲೆ ನಿರ್ಬಂಧ. ಹೀಗೆ ಸಾವಿರಾರು ವಿಷಯಗಳು ಇಲ್ಲಿ ಬಂದು ಹೋಗಬಹುದು.

ಎಲ್ಲದಕ್ಕಿಂತ ಹೆಚ್ಚಾಗಿ ಇಂದಿರಾ ಗಾಂಧಿ ನಿಜವಾಗಲೂ ಸರ್ವಾಧಿಕಾರಿಯಾಗಿದ್ದರೆ? ಅಥವಾ ಇಂದಿರಾ ಅವರ ತಂದೆಯ ತರಹ ಪ್ರಜಾಸತ್ತೀಯ
ನಾಯಕರಾಗಿದ್ದರೆ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿದಾಗ, ಒಂದು ವಿಷಯ ನೆನಪಿಗೆ ಬಂತು ಅದು, ಅದು ಸಲ್ಮಾನ್ ರಶ್ದಿ ಅವರ ‘ಮಿಡ್ ನೈಟ್ ಚಿಲ್ಡ್ರನ್ಸ್’ ಪುಸ್ತಕವನ್ನು ಇಂದಿರಾ ಗಾಂಧಿ ಭಾರತದಲ್ಲಿ ಬ್ಯಾನ್ ಮಾಡಿದ್ದು, ಅದು ಯಾವುದಕ್ಕೆ ಗೊತ್ತಾ? ಆ ಪುಸ್ತಕದ ೨೮ನೇ ಅಧ್ಯಾಯದಲ್ಲಿ ‘ಆಗಾಗ ಹೇಳಿದ್ದು ಏನೆಂದರೆ, ಶ್ರೀಮತಿ ಗಾಂಧಿ ನಿರ್ಲಕ್ಷ್ಯದಿಂದ ಸಂಜಯ್ ಗಾಂದಿ ತಂದೆ ನಿಧನವಾಗಿದ್ದಾರೆ ಎಂದು ಸಂಜಯ್ ಗಾಂಧಿ ಅವರ ತಾಯಿಯ ಮೇಲೆ
ಆರೋಪ ಮಾಡಿದ್ದಾರೆ.

ಅದಕ್ಕಾಗಿಯೇ ಸಂಜಯ್ ಏನು ಮಾಡಿದರೂ ಶ್ರೀಮತಿ ಗಾಂಧಿ ಅದನ್ನು ತಡೆಯುವುದಿಲ್ಲ’ ಈ ಒಂದು ವಾಕ್ಯ ಇಂದಿರಾ ಗಾಂಧಿ ಅವರಲ್ಲಿದ್ದ ಸರ್ವಾಧಿ ಕಾರಿಯನ್ನು ಮತ್ತೊಮ್ಮೆ ಹೊರಬರುವಂತೆ ಮಾಡಿ, ೧೯೮೪ರಲ್ಲಿ ಆ ಪುಸ್ತಕದ ಮೇಲೆ ನಿರ್ಬಂಧನೆಯನ್ನೂ ಹೇರುತ್ತಾರೆ. ಇದನ್ನು ಸ್ವತಃ ಸಲ್ಮಾನ್ ರಶ್ದಿ ಅವರೇ ಬರೆದುಕೊಂಡಿದ್ದಾರೆ. ಹಾಗಂತ ಆ ಪುಸ್ತಕದಲ್ಲಿ ಇಂದಿರಾ ಗಾಂಧಿಯವರ ಯಾವುದೇ ತೇಜೋವಧೆಯನ್ನೂ ಮಾಡಿರಲಿಲ್ಲ. ಆದರೂ ಆ ಪುಸ್ತಕ ನಿರ್ಬಂಧವನ್ನು ಅನುಭವಿಸಲಾಗಿಯೇ ಬಂತು. ಇರಲಿ, ಇನ್ನೂ ನಿನ್ನೆಗೆ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ೪೯ ವರ್ಷ ಸಹ ಆಯಿತು. ಭಾರತದಲ್ಲಿ ಸರ್ವಾಧಿಕಾರವನ್ನು ಸಾಧಿಸಬಹುದು ಎಂದು ಇಂದಿರಾ ಗಾಂಧಿ ತೋರಿಸಿಕೊಟ್ಟಿದ್ದರು.

ಎಲ್ಲದಕ್ಕಿಂತ ಹೆಚ್ಚಾಗಿ, ಕಳೆದ ಚುನಾವಣೆ ಮತ್ತು ಸ್ವಲ್ಪ ವರ್ಷಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ದೂಷಿಸ
ಲಾಗಿತ್ತು. ಹಾಗಂತ ಮೋದಿ ತನ್ನ ಅಧಿಕಾರವನ್ನು ಉಳಿಸಬೇಕೆಂದು ಎಂದು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿರಲಿಲ್ಲ. ಸುಖಾ ಸುಮ್ಮನೆ,
ಪ್ರತಿಪಕ್ಷದವರನ್ನು ಜೈಲಿಗೆ ತಳ್ಳಿ, ತನ್ನ ಶಕ್ತಿ ಪ್ರದರ್ಶನ ಮಾಡಿರಲಿಲ್ಲ. ಆದರೂ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರು ಸಂವಿಧಾನ ವನ್ನೇ ಎದುರಿಗಿಟ್ಟುಕೊಂಡು ಚುನಾವಣೆ ನಡೆಸಿದರು.

ನರೇಂದ್ರ ಮೋದಿಯವರನ್ನು ಸರ್ವಾಧಿಕಾರಿ ಎಂದವರು ಎಷ್ಟು ಜನವೋ? ಎಲ್ಲದಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರು
ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ, ಅಹಮದಾಬಾದ್‌ಗೆ ಒಂದು ಕಾರ್ಯಕ್ರಮದ ಅಥಿತಿಯಾಗಿ ಹೋಗಿದ್ದ ರಾಹುಲ್ ಗಾಂಧಿ ಅವರು
ಮೋದಿ ಅವರನ್ನು ‘ಮಾವೋ ಝೆದೊಂಗ್’ಗೆ ಹೋಲಿಸಿದ್ದರು. ಎಲ್ಲದಕ್ಕೂ ಮಿಗಿಲಾಗಿ ಅದರ ಮುಂದಿನ ಪ್ರಶ್ನೆ; ನರೇಂದ್ರ ಮೋದಿ ಅವರಿಗೆ ಸ್ಪರ್ಧೆ
ನೀಡಬಲ್ಲ ರಾಜಕಾರಣಿಗಳ ಹೆಸರನ್ನು ಹೇಳಿ ಎಂದು ರಾಹುಲ್ ಅವರಿಗೆ ಕೇಳಿದಾಗ ಅವರು ಹೇಳಿದ್ದು ಪಿ.ಚಿದಂಬರಂ, ಆಗಿನ ಪ್ರಧಾನಿ ಆಗಿದ್ದ ಮನಮೋಹನ ಸಿಂಗ್, ಎ.ಕೆ. ಆಂಟನಿ, ಜೈರಾಮ್ ರಮೇಶ್ ಅವರ ಹೆಸರನ್ನು, ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವುದು, ಆಗಾಗ ಸುದ್ದಿಗೋಷ್ಠಿಗಳನ್ನು ಕರೆಯುವುದನ್ನು ಬಿಟ್ಟರೆ, ಹೇಳಿಕೊಳ್ಳುವಂತಹ ಕೆಲಸವನ್ನೇನೂ ಮಾಡೇ ಇಲ್ಲ.

ಇನ್ನೂ, ಉಳಿದ ಮೂರು ಜನ ಈಗ ರಾಜಕೀಯದಲ್ಲಿ ಯಾವುದೇ ರೀತಿಯ ಹಿಡಿತವನ್ನಂತೂ ಹಿಡಿದಿಲ್ಲ. ಇರಲಿ! ಇನ್ನೂ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಆದಮೇಲಂತೂ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎನ್ನದಿದ್ದ ದಿನ ಕಾಂಗ್ರೆಸ್ ಮತ್ತು ಆ ಪಕ್ಷವನ್ನೇ ನಂಬಿ ಕೊಂಡು ವಿಡಿಯೊ ಪ್ರಸಾರ ಮಾಡುತ್ತಿರುವ ಕೆಲವು ಯೂಟ್ಯೂಬರ್‌ಗೂ ಬೋರ್ ಅನ್ನಿಸಿರಬಹುದು.

ಎಷ್ಟೋ ಸಲ ಅನ್ನಿಸಿದ್ದು, ನರೇಂದ್ರ ಮೋದಿ ಸರ್ವಾಧಿಕಾರಿ ಆಗಿದ್ದರೆ, ಈ ದೇಶದ ಪರಿಸ್ಥಿತಿ, ರಾಜಕೀಯದ ಪರಿಸ್ಥಿತಿ ಹೇಗಿರುತ್ತಿತ್ತು ಎನ್ನುವುದರ
ಬಗ್ಗೆ ಹಲವಾರು ಬಾರಿ ಯೋಚನೆಗಳು ಬಂದು ಹೋಗಿದ್ದಂತು ಖರೆ, ಮೋದಿ ಸರ್ವಾಧಿಕಾರಿ ಆಗಿದ್ದರೆ, ೨೦೧೨ರಲ್ಲಿ ತೆರೆಕಂಡ ಡಿಕ್ಟೇಟರ್ ಸಿನಿಮಾದ
ಹೀರೋ (ಡಿಕ್ಟೇಟರ್) ಅಲಾದ್ದೀನ್ ರೀತಿಯಲ್ಲೇ ಚುನಾವಣೆಯ ಸಮಯದಲ್ಲಿ ವಿರೋಧ ಪಕ್ಷದವರಿಗೆ ಮತ ಹಾಕುವವರನ್ನು ಫಿರಂಗಿ ಬಿಟ್ಟು
ಜನರನ್ನು ಬೆದರಿಸುತ್ತಿದ್ದರೆ? ಮೋದಿ ಅವರಿಗೆ ಬೇಜಾರು, ವಿರೋಧ ಮಾಡಿದವರನ್ನು ದಯೆಯಿಲ್ಲದೆ ಹತ್ಯೆ ಮಾಡಿಸುತ್ತಿದ್ದರೆ? ಸಿನಿಮಾ ಪರಿಧಿಯನ್ನು
ಬಿಟ್ಟು ಯೋಚಿಸಿದಾಗ ಈ ದೇಶದ ಪರಿಸ್ಥಿತಿ ಹೇಗಿರಬಹುತ್ತು? ಜರ್ಮನ್‌ನಲ್ಲಿ ನೆಲೆಹೊಂದಿರುವ ಧ್ರುವ ರಾಠಿ ಅನ್ನುವ ಯೂಟ್ಯೂಬರ್ ತನ್ನ ಪ್ರತಿ
ವಿಡಿಯೊದಲ್ಲಿ ಮೋದಿ ಅವರನ್ನು ತೆಗಳಲು ಆಗುತ್ತಿತ್ತೆ? ಇನ್ನೂ ಎಷ್ಟೋ ಜನ ಯೂಟ್ಯೂಬ್, ಸ್ಟ್ಯಾಂಡ್ ಅಪ್ ಕಾಮಿಡಿಯನ್ನುವ ಹೆಸರಿನಲ್ಲಿ
ಮೋದಿಯುವರ ವಿರುದ್ಧ ತಮ್ಮ ಹಸಿ ಹಸಿ ವಿರೋಧವನ್ನು ತೋರಿಸುತ್ತಿದ್ದರೆ? ಪ್ರತಿ ದಿನವೂ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಸಾವಿರ-ಲಕ್ಷ ಸಂಖ್ಯೆಯಲ್ಲಿ ಮೋದಿ ಅವರ ವಿರುದ್ಧ ಪೋಸ್ಟ್ ಹಾಕುತ್ತಿದ್ದರೆ? ರಾಹುಲ್ ಗಾಂಧಿ, ಸೋನಿಯಾ, ಪ್ರಿಯಾಂಕಾ ಅವರು ಮೋದಿಯವರನ್ನು ಜನರ ಮುಂದೆಯೇ
‘ಚೌಕಿದಾರ್ ಚೋರ್’ ಎಂದು ಕರೆಯುತ್ತಿದ್ದರೆ? ಸಂವಿಧಾನ ಕೈಯಲ್ಲಿ ಹಿಡಿದುಕೊಂಡು ಪ್ರತಿ ಸಂಸತ್ ಅಧಿವೇಶನದಲ್ಲಿ ಸದನದ ಬಾವಿಗಿಳಿದೋ, ಅಥವಾ ಸದನದಿಂದ ಹೊರಬಂದೋ ಹೋರಾಟ ಮಾಡುತ್ತಿದ್ದರೆ? ದೇಶಾದ್ಯಂತ ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟ ಆಗುತ್ತಿತ್ತೆ? ರೈತರ ಹೆಸರಿನ ಹಲವರು ದೆಹಲಿಯಲ್ಲಿ ದಾಂಗುಡಿಯಿಟ್ಟು ಹಲವಾರು ಅವಾಂತರಗಳಿಗೆ ಕಾರಣವಾಗುತ್ತಿದ್ದರೆ? ಈ ಅಂಕಣ ಯಾರದೇ ಮುಲಾಜಿಗೇ ಬೀಳದೆ ಪ್ರಕಟ
ವಾಗುತ್ತಿತ್ತೇ? ಹೀಗೆ ಮೋದಿ ಸರ್ವಾಧಿಕಾರಿಯಾಗಿದ್ದರೆ ಮತ್ತೆನೆನೆಲ್ಲ ಆಗಬಹುದಿತ್ತು?

Leave a Reply

Your email address will not be published. Required fields are marked *

error: Content is protected !!