ಬೆಂಗಳೂರು: ಇನ್ನೂ ಮುಂದೆ ಅನಗತ್ಯವಾಗಿ ಸಂಚಾರ ಮಾಡುವ ವಾಹನಗಳನ್ನು ಜಪ್ತಿ ಮಾಡುವ ಜೊತೆಗೆ ವಾಹನಗಳ ಸವಾರರು ಮತ್ತು ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಮೇ 24ರವರೆಗೆ ಘೋಷಣೆಯಾಗಿದ್ದ ಲಾಕ್ ಡೌನ್ ಅನ್ನು ಮತ್ತೆ 14 ದಿನಗಳ ಕಾಲ ಅಂದರೆ ಜೂನ್ 7ರವರೆಗೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆನ್ನಲ್ಲೆ ಬಿಗಿಯಾದ ಲಾಕ್ ಡೌನ್ ಜಾರಿಗೆ ತರಲು ಸೂಚನೆ ನೀಡಿದ್ದರು.
ಶನಿವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತರು ನಗರ ಸಂಚಾರ ನಡೆಸಿದರು. ಹಡ್ಸನ್ ವೃತ್ತ, ಚಾಲುಕ್ಯ ವೃತ್ತ, ಮೆಕ್ರಿ ವೃತ್ತ, ಕೋಗಿಲು ಕ್ರಾಸ್, ಆರ್ ಎಂ ವಿ ಎಕ್ಸ್ ಟೆನ್ಷನ್ ಸೇರಿದಂತೆ ಹಲವೆಡೆ ಸಂಚಾರ ಮಾಡಿದರು. ಇಂದಿನಿಂದ ಅನಗತ್ಯವಾಗಿ ಸಂಚರಿಸುವ ವಾಹನಗಳ ಜಪ್ತಿಯ ಜೊತೆಗೆ ವಾಹನಗಳ ಚಾಲಕರನ್ನು, ಹಿಂಬದಿ ಸವಾರರನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ನಿಗದಿತ ಉದ್ದೇಶವಿಲ್ಲದೆ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ವಶಪಡಿಸಿಕೊಂಡವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅನಗತ್ಯವಾಗಿ ಸಂಚರಿಸುವುದು ದೃಢವಾದರೆ ಪ್ರಕೃತಿ ವಿಕೋಪ ಕಾಯ್ದೆಯ ಅಡಿ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.