Saturday, 27th July 2024

ಅರುಣಾಚಲ ಎಂದೆಂದಿಗೂ ನಮ್ಮದೇ

ಅರುಣಾಚಲ ಪ್ರದೇಶ ಭೌಗೋಳಿಕವಾಗಿ ತನ್ನ ಗಡಿಗೇ ಸೇರಿದ್ದು ಎಂದು ಚೀನಾದ ಮತ್ತೊಮ್ಮೆ ಪ್ರತಿಪಾದಿಸಿದೆ. ಈ ಹಿಂದೆಯೂ ಹಲವು ಬಾರಿ ಚೀನಾ ಹೀಗೆ ಪ್ರತಿಪಾದಿಸಿತ್ತು. ಅರುಣಾಚಲ ಪ್ರದೇಶ ಭಾರತಕ್ಕೇ ಸೇರಿದ್ದು ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಚೀನಾ ಮತ್ತೆ ಮತ್ತೆ ಆ ಪ್ರದೇಶದ ಬಗೆಗೆ ಹಕ್ಕು ಸಾಧಿಸುವ ಮಾತುಗಳನ್ನಾಡುತ್ತಲೇ ಇರುವುದು ಆ ದೇಶದ ಹತಾಶೆಯ ಪ್ರತೀಕ.

ಅರುಣಾಚಲ ಪ್ರದೇಶದಲ್ಲಿ ಭಾರತ ಸರಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಅಲ್ಲಿನ ಪೌರರಿಗೆ ಸುಗಮ ಬದು ಕಿಗೆ ಅವಶ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಅಲ್ಲಿನ ಗಡಿ ಪ್ರದೇಶಗಳಿಗೆ ಕ್ಷಿಪ್ರವಾಗಿ ಧಾವಿಸಬಲ್ಲ ಸರ್ವಋತು ರಸ್ತೆ ಗಳನ್ನು ನಿರ್ಮಿಸುತ್ತಿದೆ. ಇತ್ತೀಚೆಗೆ ಲೋಕಾರ್ಪಣೆಯಾದ ಸೆಲಾ ಸುರಂಗ ಅವುಗಳಲ್ಲಿ ಒಂದು. ಇದನ್ನು ಸ್ವತಃ ಪ್ರಧಾನಿ ಮೋದಿ ಅಲ್ಲಿಗೆ ತೆರಳಿ ಉದ್ಘಾಟಿಸಿದ್ದಾರೆ. ತವಾಂಗ್ ಪ್ರದೇಶದಲ್ಲಿ ಈ ಸುರಂಗವು ಸಂಪರ್ಕ ಕಲ್ಪಿಸಲಿದೆ. ಇದರಿಂದ ತವಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯು ಹೆಚ್ಚು ನಿಗಾ ಇರಿಸಲು ಸಾಧ್ಯವಾಗಲಿದೆ.

ಚಳಿಗಾಲದಲ್ಲಿ ಗಡಿಯಲ್ಲಿ ಯಾವುದೇ ತುರ್ತು ಸಂದರ್ಭ ಎದುರಾದರೆ, ಸೇನೆಯು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಸುರಂಗವು ಅನುಕೂಲ ಕಲ್ಪಿಸಲಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಕ್ಷಿಪ್ರವಾಗಿ
ನಿಯೋಜಿಸಲು, ಶಸಾಸಗಳನ್ನು ಸಾಗಿಸಲು ಕೂಡ ಅನುಕೂಲವಾಗಲಿದೆ. ಇವೆಲ್ಲವೂ ಚೀನಾವನ್ನು ಕೆರಳಿಸಿದೆ. ೧೯೬೨ರಲ್ಲಿ ನಡೆದ ಯುದ್ಧದಲ್ಲಿ ಅರುಣಾಚಲ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಆದರೆ ೨೦೧೯ರಲ್ಲಿ ನಡೆದ ಗಲ್ವಾನ್ ಗಡಿ ಚಕಮಕಿಯಲ್ಲಿ ಚೀನಾಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.

೧೯೬೨ರ ಭಾರತಕ್ಕೂ ೨೦೨೪ರ ಭಾರತಕ್ಕೂ ವ್ಯತ್ಯಾಸವಿದೆ. ಲಕ್ಷದ್ವೀಪದಲ್ಲಿ ಸೇನಾ ನೆಲೆ ಸ್ಥಾಪಿಸುವ ಮೂಲಕ ಚೀನಾದ ಸಾಗರ ವಿಸ್ತರಣೆಗೆ ಭಾರತ ಪರೋಕ್ಷ ಉತ್ತರವನ್ನೂ ನೀಡಿದೆ. ಹೀಗೆ ವ್ಯೂಹಾತ್ಮಕ ಸನ್ನದ್ಧತೆ ಹಾಗೂ ರಾಜನೈತಿಕತೆ- ಎರಡೂ ಹಾದಿಗಳಲ್ಲಿ ಭಾರತದ ಉಪಕ್ರಮಗಳು ಚೀನಾವನ್ನು ಪರಿಣಾಮಕಾರಿಯಾಗಿ ಎದುರಿಸಿವೆ. ಚೀನಾ ಏನು ಬೇಕಿದ್ದರೂ ಹೇಳಲಿ, ಅರುಣಾಚಲ ಪ್ರದೇಶ ನಮ್ಮದೆಂಬ ಭಾರತದ ನಿಲುವಿನನೂ ಬದಲಾವಣೆಯಿಲ್ಲ.

Leave a Reply

Your email address will not be published. Required fields are marked *

error: Content is protected !!