Thursday, 19th September 2024

ವಾಯುಸೇನೆ ಸಾಮರ್ಥ್ಯಕ್ಕೆ ಸಾಕ್ಷಿ

ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದ್ದು, ಭಾರತೀಯ ಸೇನೆಯ ಶೌರ್ಯದ ಸಂಕೇತ. ಆದರೆ ಈ ಸಂಗತಿಯು ಸಂಭ್ರಮಕ್ಕೆಕಾರಣವಾಗುವುದಕ್ಕಿಂತಲೂ ವಿವಾದಿತ ಹೇಳಿಕೆ ಗಳಿಗೆ ಆಸ್ಪದವಾಗಿದ್ದು, ದುರಂತ.

ಶ್ಲಾಘನೆ ವ್ಯಕ್ತವಾಗುವುದಕ್ಕಿಂತಲೂ ಈ ಕಾರ್ಯಾಚರಣೆಗೆ ಸಾಕ್ಷ್ಯವೇನು ಎಂಬ ಹೇಳಿಕೆಗಳು ಕೇಳಿಬಂದದ್ದು ಸೈನಿಕರ ಕಾರ್ಯ ಕ್ಷಮತೆಯನ್ನು ಅಣಕಿಸುವಂತಾಗಿತ್ತು. ಆದರೆ ಇದೀಗ ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾಲಿ ಈ ಬಗ್ಗೆ ಹೇಳಿಕೆ ನೀಡಿದ್ದ ರಿಂದ ಭಾರತೀಯ ವಾಯುಸೇನೆಯ ಸಾಮರ್ಥ್ಯ ಸಾಬೀತಾದಂತಾಗಿದೆ.

ಈ ಹಿಂದೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ ಸುಮಾರು 300 ಉಗ್ರರು ಮೃತರಾಗಿರುವುದು ನಿಜ ಎಂದು ಪಾಕಿಸ್ತಾನ ಕೊನೆಗೂ ಸತ್ಯ ಒಪ್ಪಿಕೊಂಡಂತಾಗಿದೆ. 200ಕ್ಕೂ ಅಧಿಕ ಉಗ್ರರನ್ನು ಹೊಂದಿದ್ದ ಜೈಷ್ ಎ ಮೊಹಮ್ಮದ್ ಉಗ್ರರ ನೆಲೆಯನ್ನು ಭಾರತೀಯ ಯುದ್ಧ ವಿಮಾನಗಳು ದ್ವಂಸಗೊಳಿಸಿದ್ದವು. 45ವರ್ಷಗಳ ನಂತರ ಪಾಕಿಸ್ತಾನವನ್ನು ಪ್ರವೇಶಿಸಿದ ಭಾರತೀಯ ಸೇನೆ 21 ನಿಮಿಷಗಳಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿತ್ತು.

ತರಬೇತಿ ಪಡೆಯುತ್ತಿದ್ದ ಉಗ್ರರ ತಾಣವನ್ನು ದ್ವಂಸಗೊಳಿಸಿದ್ದರಿಂದ ಮುಂದೆ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿತ್ತು. ಭಾರತೀಯ ವಾಯುಸೇನೆ ಇಂದು ಅನೇಕ ಸೌಲಭ್ಯಗಳನ್ನು ಹೊಂದುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದರೆ ಮೀರಜ್ ವಿಮಾನದ ಮೂಲಕ 2019ರ ಫೆಬ್ರವರಿ 26ರಂದು ನಡೆಸಿದ ಈ ದಾಳಿ ಭಾರತೀಯ ಸೇನೆಯ ಇತಿಹಾಸದಲ್ಲಿ ಅಚ್ಚಳಿಯದ ಘಟನೆ.

ಸೇನಾ ಕಾರ್ಯವನ್ನು ಶ್ಲಾಸದೆ ಸಾಕ್ಷ್ಯಗಳನ್ನು ಕೇಳಿದವರಿಗೆ ಇದೀಗ ಉತ್ತರ ದೊರೆದಂತಾಗಿದ್ದು, ಸೇನಾ ಕಾರ್ಯಕ್ಕೆ ಗೌರವ ಸೂಚಿಸಬೇಕಿರುವುದು ಭಾರತೀಯರೆಲ್ಲರ ಕರ್ತವ್ಯ.