ಅಭಿವೃದ್ಧಿ ದೃಷ್ಟಿಯಿಂದ ವೇಗವಾಗಿ ಸಾಗುತ್ತಿರುವ ಬೆಂಗಳೂರು ನಗರವು ಅಪರಾಧ ಚಟುವಟಿಗಳಿಗೂ ಕುಖ್ಯಾತಿ ಪಡೆಯುತ್ತಿದೆ. ಒಂದೆಡೆ ವೇಗವಾಗಿ ಪ್ರಗತಿಪಥದತ್ತ ಸಾಗುತ್ತಿದ್ದರೆ, ಮತ್ತೊಂದೆಡೆ ಇಲ್ಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಉಂಟಾಗುತ್ತಿದೆ. ಈ ಕಳಂಕ ನಿವಾರಿಸಲು ಇದೀಗ ಪೊಲೀಸರು ಕೈಗೊಂಡಿರುವ ಕ್ರಮ ಉತ್ತಮ ವಾದದ್ದಾಗಿದೆ.
ಕಳೆದ 22 ದಿನಗಳಲ್ಲಿ ಬೆಂಗಳೂರಿನ ಪೊಲೀಸರು 6 ಶೂಟೌಟ್ ನಡೆಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡುವ ಹಾಗೂ ಗೂಂಡಾವರ್ತನೆ ತೋರುವ ರೌಡಿಗಳಿಗೆ ಮುಲಾಜಿಲ್ಲದೆ ಶೂಟೌಟ್ ಮೂಲಕ ಉತ್ತರಿಸುವುದಾಗಿ ಸಂದೇಶ ರವಾನಿಸಿದ್ದಾರೆ ಪೊಲೀಸರು. ಇದರಿಂದ ರೌಡಿಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಶೂಟೌಟ್ಗಳು ಸರಿಯಲ್ಲ ಎಂಬ
ವಾದವೂ ಕೇಳಿಬರುತ್ತಿದೆ.
ಆದರೆ ಅಪರಾಧ ನಿಯಂತ್ರಣದ ಹಿನ್ನೆಲೆಯಲ್ಲಿ ಪೊಲೀಸರ ಈ ಕಾರ್ಯ ಶ್ಲಾಘನಾರ್ಹವಾದದ್ದಾಗಿದೆ. ವಾಣಿಜ್ಯ ರಾಜಧಾನಿ
ಮುಂಬೈಯನ್ನು ಮೀರಿಸಿ, ದೇಶದ ಎರಡನೇ ಅಪರಾಧ ನಗರದ ಕುಖ್ಯಾತಿಗೆ ಪಾತ್ರವಾಗಿತ್ತು ಬೆಂಗಳೂರು. 2016ರಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ವಿಶ್ಲೇಷಿಸಿದ್ದ ರಾಷ್ಟ್ರೀಯ ಅಪರಾಧ ದಾಖಲೆಗಳ ದಳ (ಎನ್ಸಿಆರ್ಬಿ) ಪ್ರಕಾರ ದೇಶದ 19 ನಗರ ಗಳಲ್ಲಿ ದೆಹಲಿ ಪ್ರಥಮ ಹಾಗೂ ಬೆಂಗಳೂರು ದ್ವಿತೀಯ ಸ್ಥಾನಗಳಿಸಿದ್ದವು.
ಒಂದೆಡೆ ಐಟಿ ಸಿಟಿ ಎಂಬ ಖ್ಯಾತಿ ಜತೆಗೆ ಅಪರಾಧ ಪ್ರಕರಣಗಳಿಂದ ಕುಖ್ಯಾತಿಗೆ ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಯನ್ನು
ಗಮನಿಸಿದರೆ ರೌಡಿಗಳನ್ನು ಮಟ್ಟಹಾಕುವಲ್ಲಿ ಇದು ಸೂಕ್ತವಾಗಿದೆ. ಎಲ್ಲ ಪ್ರಕರಣಗಳಿಗೂ ಶೂಟೌನ್ ಉತ್ತರವಲ್ಲ. ರೌಡಿಗಳೇ ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟು ಕ್ರೌರ್ಯತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪೊಲೀಸರ ಈ ಕಾರ್ಯ ಉತ್ತಮ ಹಾಗೂ ಶ್ಲಾಘನಾರ್ಹ ಕ್ರಮವಾಗಿದೆ.