Thursday, 19th September 2024

ದೊರೆತರೆ ಅವಕಾಶ ಕೇಂದ್ರಕ್ಕೆ ಉತ್ತಮ ಫಲಿತಾಂಶ

ದೇಶಕಂಡ ಅಪರೂಪದ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸದೃಢ ಭಾರತ ನಿರ್ಮಾಣಕ್ಕಾಗಿ ಹಲವು ಕನಸುಗಳನ್ನು ಕಂಡಿದ್ದರು. ಅವುಗಳಲ್ಲಿ ರಕ್ಷಣಾ ತಂತ್ರಜ್ಞಾನ ಉತ್ಪಾದನಾ ವಲಯವನ್ನು ಸ್ವದೇಶಿಗೊಳಿಸುವುದು ಮುಖ್ಯವಾದದ್ದು. ಈ ಕನಸು ನನಸಾಗುವ ನಿಟ್ಟಿನಲ್ಲಿ ಇದೀಗ ಹಲವು ಪ್ರಯತ್ನಗಳು ಸಾಗುತ್ತಿವೆ.

ಇಂಥದೊಂದು ಪ್ರಯತ್ನದ ಸಾಗುತ್ತಿರುವ ಕೇಂದ್ರ ಸರಕಾರ ಸಕಲ ಸೌಲಭ್ಯಗಳನ್ನು ಹೊಂದಿರುವ ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸುವುದರಿಂದ ಉಪಯೋಗ ವಾಗಲಿದೆ. ಇದೀಗ ಇಂಥ ಹಬ್‌ಗಳ ಸ್ಥಾಪನೆಗೆ ಎಲ್ಲ ರೀತಿಯಲ್ಲಿಯೂ ಕರ್ನಾಟಕ ಸೂಕ್ತವಾದ ಸ್ಥಳ. ಕರ್ನಾಟಕಕ್ಕೆ ಅವಕಾಶ ನೀಡುವುದರಿಂದ ನಮ್ಮ ರಾಜ್ಯಕ್ಕೆ ಅನುಕೂಲವಾಗುವುದರ ಜತೆಗೆ ಕೇಂದ್ರಕ್ಕೂ ಒಳ್ಳೆಯ ಫಲಿತಾಂಶ ದೊರೆಯುವಲ್ಲಿ ನೆರವಾಗಲಿದೆ.

ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪನ್ನಗಳ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಸ್ಥಾಪಿಸುವುದು ಉತ್ತಮ ಕಾರ್ಯ. ಇದಕ್ಕಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಅವರು ಕೇಂದ್ರ ರಕ್ಷಣಾ ಖಾತೆ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಕೇಂದ್ರ ಸರಕಾರ ಅನುಮತಿ ನೀಡುವುದರಿಂದ ರಾಜ್ಯದ ಜತೆ ಕೇಂದ್ರಕ್ಕೂ ಅನುಕೂಲವಾಗಲಿದೆ. ಉತ್ತಮ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಅನುಕೂಲಕರ ಪರಿಸರ ಹಾಗೂ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು, ಪ್ರಯೋಗಾಲಯಗಳನ್ನು ಒಳಗೊಂಡಿದೆ ಕರ್ನಾಟಕ.

ಜತೆಗೆ ದೇಶದ ಶೇ.25ಕ್ಕೂ ಹೆಚ್ಚು ಏರ್‌ಕ್ರಾಫ್ಟ್ ಮತ್ತು ಸ್ಪೇಸ್ ಕ್ರಾಫ್ಟ್ ಕೈಗಾರಿಕೆಗಳು ರಾಜ್ಯದಲ್ಲಿವೆ. ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಶೇ.67ರಷ್ಟು ಏರ್‌ಕ್ರಾಫ್ಟ್ ಮತ್ತು ಹೆಲಿಕ್ಯಾಪ್ಟರ್ ಉತ್ಪಾದನೆ ರಾಜ್ಯದಲ್ಲಿ ನಡೆಯುತ್ತದೆ. ವಿಶ್ವ ಏರೋಸ್ಪೇಸ್ ನಗರಗಳ ಸೂಚ್ಯಾಂಕದ ಮೊದಲ 10ನೇ ಸ್ಥಾನದಲ್ಲಿದೆ ಬೆಂಗಳೂರು. ಏರೋಸ್ಪೇಸ್ ಹಾಗೂ ಡಿಫೆನ್ಸ್ ಪಾಲಿಸಿ ಜಾರಿಗೊಳಿಸಿದ ರಾಜ್ಯವಾ ಗಿಯೂ ಗಮನಸೆಳೆದಿವೆ. ಇಷ್ಟೆಲ್ಲ ಪೂರಕ ವಾತವರಣ ಹೊಂದಿರುವ ಕರ್ನಾಟಕದಲ್ಲಿ ಹಬ್‌ಗಳ ಸ್ಥಾಪನೆಗೆ ಅವಕಾಶ ನೀಡುವು ದರಿಂದ ಕೇಂದ್ರವು ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.