Sunday, 8th September 2024

ಅಕ್ರೇಸಿಯ: ಇಂದಲ್ಲ ನಾಳೆ…ಮತ್ತೆ ನಾಳೆಯಲ್ಲ ನಾಡಿದ್ದು…!

ಶ್ವೇತಪತ್ರ

shwethabc@gmail.com

ಅಬ್ರಕದಬ್ರ ಇದೊಂದು ಮ್ಯಾಜಿಕ್ ಪದ. ಜಾದುಗಾರ ತನ್ನ ಯಕ್ಷಿಣಿ ವಿದ್ಯೆಯ ಚಾತುರ್ಯ ಪ್ರದರ್ಶಿಸಲು ನಮ್ಮ ಗಮನ ಬೇರೆಡೆ ಸೆಳೆಯಲು ಬಳಸುವ ಮಾಯಾ ಪದ. ಅಂಬ್ರೋಸಿಯ ಗ್ರೀಕ್ ಮತ್ತು ರೋಮನ್ ಪುರಾಣದ ಆಹಾರ ದೈವ. ಅದೇ ರೀತಿ ‘ಅಕ್ರೇಸಿಯ’ ಗ್ರೀಕ್ ತತ್ವಜ್ಞಾನಿಗಳಾದ ಸಾಕ್ರೆಟಿಸ್ ಮತ್ತು ಅರಿಸ್ಟಾಟಲ್ ಬಳಸಿದ ಪದ.

ಇಂಗ್ಲಿಷ್‌ನಲ್ಲಿ ಪ್ರೋಕ್ರಾಸ್ಟಿನೇಷನ್ ಅಂತಲೂ ಕನ್ನಡದಲ್ಲಿ ವಿಳಂಬ ಪ್ರವೃತ್ತಿ ಎನ್ನಲು ಅಡ್ಡಿಯಿಲ್ಲ. ಹೆಚ್ಚಿನ ಜನರು ಇದನ್ನು ಸೋಮಾರಿತನವೆಂದೇ ತಪ್ಪಾಗಿ ಭಾವಿಸುತ್ತಾರೆ. ವಿಳಂಬ ಪ್ರವೃತ್ತಿ ಸೋಮಾರಿತನವಲ್ಲ. ಮಾಡುವ ಕೆಲಸವನ್ನು ಮುಂದೆ ಹಾಕುತ್ತಾ ಬೇರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮನಸ್ಥಿತಿ. ನಾವೆಲ್ಲರೂ ಒಂದಿ ಲ್ಲೊಂದು ಹಂತದಲ್ಲಿ ಎದುರಿ ಸುವ ಸವಾಲೇ ಈ ಪ್ರೊಕ್ರಾಸ್ಟಿನೇಷನ್. ಅಂಕಣಕಾರರಂತೂ ಈ ಪರಿಸ್ಥಿತಿಯನ್ನು ಎದುರಿಸಿಯೇ ಇರುತ್ತೇವೆ.

ಸಾಕಷ್ಟು ಸಮಯ, ಉತ್ಸಾಹ, ಆಸಕ್ತಿ, ವಿಷಯ ಎಲ್ಲವೂ ಇದ್ದರೂ ಬರೆಯಲು ಕೂತು ಇನ್ಯಾವುದೋ ಕೆಲಸದಲ್ಲಿ ಎಂಗೇಜ್ ಆಗಿಬಿಡುವುದು. ಈ ಮನಸ್ಥಿತಿಯ ಜೊತೆಗೆ ನಮ್ಮ ಹೋರಾಟ ಇಂದು ನಿನ್ನಯದಲ್ಲ. ಶತಮಾನಗಳಿಂದಲೂ ಮನುಷ್ಯರ ಒಡನಾಡಿಯೇ ಆಗಿರುವ ನಿಧಾನಗತಿ ವರ್ತನೆ, ವಿಳಂಬ ಮನೋಸ್ಥಿತಿ ಇದು. ಇನ್ಯಾಕ್ಟ್ ಕಾಲಾತೀತ. ಈ ವರ್ತನೆಯನ್ನು ವಿವರಿಸಲು ಸಾಕ್ರೇಟಿಸ್ ಮತ್ತು ಅರಿಸ್ಟಾಟಲ್ ಬಳಸಿದ ಪದವೇ ಅಕ್ರೇಸಿಯ.

ನಿಮ್ಮ ಮನಸ್ಸಿನ ತೀರ್ಪಿನ ವಿರುದ್ಧವಾಗಿ ನಡೆದುಕೊಳ್ಳುವ ವರ್ತನೆಯೇ ಅಕ್ರೇಸಿಯ. ಮುಖ್ಯ ಕೆಲಸವೊಂದನ್ನು ಮಾಡ  ಬೇಕೆಂದು ತಿಳಿದಿದ್ದರೂ ಮತ್ತೊಂದು ಕೆಲಸದಲ್ಲಿ ತೊಡಗುವುದೇ ವಿಳಂಬ ಪ್ರವೃತ್ತಿ. ಅಂದುಕೊಂಡಿದ್ದನ್ನು ಮಾಡಲು ತಡೆದು ಬಿಡುವ ಮನಸ್ಸಿನ ಶಕ್ತಿಯೇ ಇದಾಗಿದೆ. ವಿಳಂಬ ಪ್ರವೃತ್ತಿಯನ್ನು ವಿವರಿಸುವ ಮನೋವೈಜ್ಞಾನಿಕ ಸಂಶೋಧನಾ ವಿದ್ಯಮಾ ನವೇ ‘ಸಮಯ ಅಸಾಮಂಜಸ್ಯ’ (Time inconsistency).

ನಮ್ಮ ಮೆದುಳು ಭವಿಷ್ಯದ ಪ್ರತಿ-ಲಾಪೇಕ್ಷೆಗಿಂತ ಈ ಕ್ಷಣದ ಪ್ರತಿಫಲಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ, ಹಾಗಾಗಿ ವಿಳಂಬ ಪ್ರವೃತ್ತಿ ಹೆಚ್ಚು. ಹೊಸ ವರ್ಷದಿಂದ ತೂಕ ಇಳಿಸಿಕೊಳ್ಳೋಣ, ಈ ಬಾರಿ ನನ್ನ ಹುಟ್ಟು ಹಬ್ಬದಿಂದಹೊಸ ಭಾಷೆ ಕಲಿಯಬೇಕು,
ಮುಂದಿನ ತಿಂಗಳಿನಿಂದ ಹೊಸ ಪುಸ್ತಕ ಬರೆಯಬೇಕು ಹೀಗೆ… ಈ ಭವಿಷ್ಯದ -ಚರ್ ಪ್ಲಾನ್‌ಗಳ ಜೊತೆಗೆ ನಾವು ಈ ಕ್ಷಣದಲ್ಲಿ ಬದುಕಬೇಕು. ಹೀಗೆ ಬದುಕುವಾಗ ಸ್ನೇಹಿತರೋ, ಮನೆಯವರೋ ಹೇ… ಇವತ್ತೊಂದಿನ ಐಸ್ ಕ್ರೀಮ್ ತಿಂದು ಬಿಡು ನಾಳೆಯಿಂದ ಜಾಸ್ತಿ ವಾಕ್ ಮಾಡು, ಇವತ್ತೊಂದಿನ ನಮ್ ಜೊತೆ ಸಿನಿಮಾ ನೋಡಲು ಬಾ, ನಾಳೆಯಿಂದ ಪುಸ್ತಕ ಬರೆಯುವೆಯಂತೆ.

ಇವತ್ತೊಂದಿನ ಆರಾಮಾಗಿರೋಣ ನಾಳೆಯಿಂದ ನೋಡಿಕೊಳ್ಳೋಣ. ’ಸ್ಲಿಮ್ ಅಂಡ್ ಫಿಟ್ ಆಗಬೇಕು’ ಆದರೆ ಈ ಕ್ಷಣದ ನಮ್ಮ ಮನಸ್ಥಿತಿಗೆ ‘ಪಾನಿಪೂರಿ ತಿನ್ನಬೇಕು’! ದುಡ್ಡು ಕೂಡಿಡಬೇಕು ಆದರೆ, ಈ ಕ್ಷಣಕ್ಕೆ ಶಾಪಿಂಗ್ ಮಜಾ ಬೇಕು, ಮುಂದಿನ ದಿನಗಳಲ್ಲಿ ದುಡ್ಡು ಕೂಡಿಟ್ಟರಾಯಿತು. ಹೀಗೆ ಈ ಕ್ಷಣದ ಆತ್ಮತೃಪ್ತಿಗಳು ಮೆದುಳಿಗೆ ಅಭ್ಯಾಸವಾಗಿ ಮಾಡುವ ಕೆಲಸವನ್ನು ಮುಂದೂಡು ತ್ತಲೇ ಇರುತ್ತದೆ.

ಇತ್ತೀಚೆಗೆ ನನ್ನ ವಿದ್ಯಾರ್ಥಿ ಒಬ್ಬಳ ವಾಟ್ಸಪ್ ಸ್ಟೇಟಸ್ ನ ಒಕ್ಕಣೆ ಹೀಗಿತ್ತು UZಠ್ಚಿeಜ್ಞಿಜ ಘೆಛಿಠ್ಛ್ಝಿಜ್ಡಿ eZmmಜ್ಝ್ಝಿqs,
ಛಿಞಛಿಞಚಿಛ್ಟಿo eಟಞಛಿಡಿಟ್ಟh/ ಛ್ಡಿZಞo/ ಛಿomಟ್ಞoಜಿಚಿಜ್ಝಿಜಿಠಿಜಿಛಿo, ಖಠಿಜ್ಝ್ಝಿ ಡಿZಠ್ಚಿeಛಿo ಘೆಛಿಠ್ಛ್ಝಿಜ್ಡಿ oಠ್ಟಿಛಿooqs. ಅಸೈನ್ಮೆಂಟ್ ಗಳಿವೆ, ಪರೀಕ್ಷೆಗಳಿವೆ, ಓದುವ ಜವಾಬ್ದಾರಿ ಇದ್ದರೂ ನಮ್ಮ ವಿದ್ಯಾರ್ಥಿನಿಯರು ಓದುವುದನ್ನು  ಮುಂದಕ್ಕಾಕು ತ್ತಲೇ ಇರುತ್ತಾರೆ, ನಾವು ಕೆಲಸಗಳನ್ನು ಮುಂದೂಡುತ್ತೇವೆ ಅಷ್ಟೇ. ಅರ್ಧ ಗಂಟೆಯಲ್ಲಿ ಮಾಡಿ ಮುಗಿಸುವ ಕೆಲಸವನ್ನು ಎಂಟು ಗಂಟೆಯಲ್ಲಿ ಮಾಡಿರುತ್ತೇವೆ.

ನಿಮಗೆಲ್ಲ ನೆನಪಿರಬಹುದು, ನಾನು ನನ್ನಂತಹ ಅನೇಕರು ಪುಟ್ಟ ಊರುಗಳಿಂದ ಬೆಂಗಳೂರಿಗೆ ಬಂದ ಹೊಸತರಲ್ಲಿ -ಟ್ಪಾತ್ ಮೇಲೆ ಕಂಡ ಮೂವತ್ತು ದಿನಗಳಲ್ಲಿ  ಇಂಗ್ಲಿಷ್ ಕಲಿಯಿರಿ, ಮೂವತ್ತು ದಿನಗಳಲ್ಲಿ ಹಿಂದಿ ಕಲಿಯಿರಿ ಪುಸ್ತಕಗಳನ್ನು ನಮ್ಮ ಬ್ಯಾಗ್‌ಗೆ ಸೇರಿಸಿದ್ದೆವು. ಆ ಪುಸ್ತಕಗಳು ಮನೆಯ ಬುಕ್ ರಾಕ್ ಸೇರಿ ಇದುವರೆಗೂ ಧೂಳು ಹಿಡಿದು ಕೂತಿವೆಯೇ ಹೊರತು ಓದಿದ್ದಂತೂ ನೆನಪಿಲ್ಲ. ಹಿಂದಿ ಇಂಗ್ಲಿಷ್ ಕಲಿಯುವ ತವಕವಿದ್ದರೂ ಕಲಿಯಲಾರದೆ ನಾಳೆ, ನಾಡಿದ್ದು ಅಂತ ಮುಂದೂಡಿದ್ದು
ಮಾತ್ರ ಇದೆ ಅಕ್ರೇಸಿಯಾ! ಮನೆ ಕ್ಲೀನ್ ಮಾಡಲು ನಿಂತರೆ ಮದುವೆಯಲ್ಲೋ, ನಾಮಕರಣದಲ್ಲೋ ಯಾರೋ ಕೊಟ್ಟ ಗಿಫ್ಟ್ ಗಳ ಒಳಗೆ ಮುಳುಗಿಬಿಡುವ ಜೀವ ನಮ್ಮದು, ಮದುವೆ ಫೋಟೋ ಹರವಿ ಕೂಡುವ ತವಕ, ಕಪಾಟಿನಿಂದ ಇಣುಕುವ ಹಳೆಯ ಪುಸ್ತಕದಲ್ಲಿ ಮನಸ್ಸನ್ನು ಹುದುಗಿಸುವುದು ಎಲ್ಲವನ್ನು ಮಾಡಿರುತ್ತೇವೆ ಮನೆ ಕ್ಲೀನಿಂಗ್ ಒಂದನ್ನು ಬಿಟ್ಟು. ವಿಳಂಬ ಪ್ರವೃತ್ತಿ ನಮಗೆ ನಾವೇ ಮಾಡಿಕೊಳ್ಳಬಹುದಾದ ಹಾನಿ ಎನ್ನುತ್ತಾರೆ ಪ್ರೇರಣಾ ಮನೋವಿಜ್ಞಾನದ ಪ್ರೊಫೆಸರ್ ಡಾ.ಪಿಯರ್ ಸ್ಟೀಲ್.

ಒಂದು ಕೆಲಸವನ್ನಷ್ಟೇ ಈ ಸಂದರ್ಭದಲ್ಲಿ ನಾವು ಅವಾಯ್ಡ್ ಮಾಡಿರುವುದಿಲ್ಲ ಹಾಗೆ ಮಾಡುವ ಆಲೋಚನೆಯನ್ನೇ ಮೈಗೂಡಿಸಿಕೊಂಡು ಬಿಟ್ಟಿರುತ್ತೇವೆ. ಹಾಗಾಗಿ ಈ ವಿಳಂಬ ಪ್ರವೃತ್ತಿ ಅತಾರ್ಕಿಕ ಮತ್ತು ನಮ್ಮನ್ನು ಕೊಳೆಯುವಂತೆ ಮಾಡುತ್ತದೆ. ನಾವೆಲ್ಲ ಈ ವಿಳಂಬ ಮನೋಭಾವಕ್ಕೆ ಏಕೆ ಪಕ್ಕಾಗುತ್ತೇವೆಂದರೆ ಕೆಲಸದ ಬಗೆಗೆ ನಮಗಿರುವ ನೆಗೆಟಿವ್ ಮನಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ ಹೋದಾಗ. ಆದರೆ ಇದೊಂದು ಸರಿಪಡಿಸಲಾಗದ ಸಮಸ್ಯೆಯಲ್ಲ.

ಇದೊಂದು ಭಾವನೆಗಳನ್ನು ನಿರ್ವಹಿಸಲು ಹೆಣಗಾಡುವ ಸವಾಲು. ಕೆಲವು ಕೆಲಸದ ಬಗ್ಗೆ ನಮಗಿರುವ ಋಣಾತ್ಮಕ ಮನಸ್ಥಿತಿ. ಇದು ನಮ್ಮ ಬೇಜಾರಿನಿಂದಲೂ, ಆತಂಕದಿಂದಲೂ, ಹತಾಶೆಯಿಂದಲೂ, ನಮ್ಮ ಬಗ್ಗೆ ನಮಗಿರುವ ಅಸಮಾಧಾನದಿಂದಲೂ, ಅಪನಂಬಿಕೆಯಿಂದಲೂ ಉಂಟಾಗಬಹುದು. ಅಲ್ಪಾವಽಯ ಮೂಡ್ ನಿಂದಾಗಿ ಉಂಟಾಗುವ ವಿಳಂಬ ಪ್ರವೃತ್ತಿ ದೀರ್ಘಾವಧಿ
ಕೆಲಸಗಳ ಮೇಲೆ ಪರಿಣಾಮ ಉಂಟು ಮಾಡುವುದರಿಂದ ನಮ್ಮ ಈ ಕ್ಷಣದ ಮೂಡ್‌ಗಳನ್ನು ರಿಪೇರಿ ಮಾಡುವುದು
ಮುಖ್ಯ ವಾಗಬೇಕು.

ಕೆಲವೊಮ್ಮೆ ಮಾಡಬೇಕಾದ ಕೆಲಸಗಳ ಬಗ್ಗೆ ನಮಗಿರುವ ತಿರಸ್ಕಾರದಿಂದಲೂ ಈ ವಿಳಂಬ ಪ್ರವೃತ್ತಿ ಬರಬಹುದು. ಅಂದರೆ ಬಾತ್ರೂಮ್ ಕ್ಲೀನಿಂಗ್, ಓದು, ಬರೆಯುವುದು ಯಾವುದೇ ಇರಬಹುದು ಆ ವಿಷಯದ ಬಗ್ಗೆ ಪ್ರೀತಿ ಆಸಕ್ತಿ ಇಲ್ಲದಿದ್ದಾಗ ಮನಸ್ಸಿನ ಮೂಲೆಯಲ್ಲಿ ಒಂದು ತಿರಸ್ಕಾರದ ಭಾವ ಮೂಡಿರುತ್ತದೆ. ಅದು ಈ ನಿಧಾನಗತಿ ವರ್ತನೆಗೆ ಕಾರಣವಾಗಿ ಬಿಡಬಹುದು. ಇನ್ನೂ
ಕೆಲವೊಮ್ಮೆ ನಮ್ಮ ಬಗ್ಗೆ ನಮಗೇ ಇರುವ ಅಪನಂಬಿಕೆ, ಕಡಿಮೆ ಆತ್ಮಸ್ಥೈರ್ಯ, ಅಸ್ಥಿರತೆಯ ಭಾವಗಳಾದ ನನ್ನಿಂದ ಈ ಕೆಲಸ ಮಾಡಲು ಸಾಧ್ಯವೇ? ನಾನಷ್ಟು ಬುದ್ಧಿವಂತನಲ್ಲ… ನಾನು ಮಾಡಿದರೆ ಜನ ಏನೆಂದುಕೊಂಡಾರು? ಮಾಡುವ ಕೆಲಸದಲ್ಲಿ ತಪ್ಪಾಗಿ ಬಿಟ್ಟರೆ… ಮೇಲಿನ ಎಲ್ಲಾ ಭಾವಗಳು, ಅನಿಸಿಕೆಗಳು ನಮ್ಮಲ್ಲಿ ವಿಳಂಬ ಪ್ರವೃತ್ತಿಯನ್ನು ಉಂಟು ಮಾಡಿಬಿಡಬಲ್ಲವು.

ನಮಗೆ ಇರುವ ಸ್ವಯಂ ನಿಂದನೆಯ ಆಲೋಚನೆಗಳು ವಿಳಂಬದ ಕಡೆಗೆ ತಿರುಗಿ ಬಿಟ್ಟಿರುತ್ತವೆ. ಈ ತೆರನಾದ ಆಲೋಚನೆಗಳನ್ನು ’ಪ್ರೋಕ್ರಾಸ್ಟಿನೇಷನ್ ಅರಿವು’ ಎನ್ನಬಹುದು. ಇವೇ ಆಲೋಚನೆಗಳೇ ಮತ್ತೊಂದಿಷ್ಟು ವಿಳಂಬದ ಆಲೋಚನೆಗೆ ಕಾರಣವಾಗುತ್ತಾ ಒತ್ತಡ, ಯಾತನೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ. ಆದರೂ ನಾವೇಕೆ ನಿಧಾನಿಸುತ್ತೇವೆ ಗೊತ್ತೆ? ಕೆಲವೊಮ್ಮೆ ಕೆಲಸ ಗಳನ್ನು ಮುಂದೆ ಹಾಕಿದಾಗ ತಾತ್ಕಾಲಿಕ ಉಪಶಮನ ದೊರಕಿಸಿಕೊಡುತ್ತದೆ. ಮನುಷ್ಯನ ಮೂಲಭೂತ ಸ್ವಭಾವವಿರುವುದೇ ಇಲ್ಲಿ. ಯಾವುದು ಸದಾ ನಮಗೆ ಪ್ರಯೋಜನಕಾರಿಯಾಗಿ ತೋರುವ ವರ್ತನೆಗಳನ್ನು ಪದೇಪದೇ ಮುಂದುವರಿಸುತ್ತಾ ಮೈಗೂಡಿಸಿಕೊಳ್ಳುತ್ತೇವೆ.

ಹಾಗಾಗಿಯೇ ವಿಳಂಬ ಪ್ರವೃತ್ತಿ ಕೇವಲ ಏಕ ಮಾತ್ರ ವರ್ತನೆ ಅಲ್ಲ ಅದೊಂದು ಚಕ್ರದ ಹಾಗೆ ಸುಲಭವಾಗಿ ದೀರ್ಘಕಾಲದ ಅಭ್ಯಾಸವಾಗಿ ಬಿಡಬಲ್ಲದು. ನಮ್ಮಷ್ಟಕ್ಕೆ ನಾವೇ ವಿಳಂಬ ಪ್ರವೃತ್ತಿಯನ್ನು ನಿಲ್ಲಿಸಿಬಿಡಲು ಸಾಧ್ಯವಿಲ್ಲ. ಇದು ಭಾವನೆಗಳ
ಸಮಸ್ಯೆಯೇ ಹೊರತು ಉತ್ಪಾದಕತೆಯದ್ದಲ್ಲ. ಇದಕ್ಕೆ ಪರಿಹಾರ ಕೇವಲ ಟೈಮ್ ಮ್ಯಾನೇಜ್ಮೆಂಟ್ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದಲ್ಲ, ನಮ್ಮನ್ನು ನಿಯಂತ್ರಿಸಲು ಹೊಸ ಕಲಿಕೆಯ ತಂತ್ರಗಳನ್ನು ಅಳವಡಿಸಿಕೊಂಡುಬಿಡುವುದು.

ಅಷ್ಟೇ ಅಲ್ಲ ಭಾವನೆಗಳನ್ನು ಹೊಸ ದಾರಿಯಲ್ಲಿ ನಿಯಂತ್ರಿಸುವುದನ್ನು ರೂಢಿಸಿಕೊಳ್ಳಬೇಕು. 2010ರಲ್ಲಿ ವಿಳಂಬ ಪ್ರವೃತ್ತಿಯ ಮೇಲೆ ನಡೆದ ಸಂಶೋಧನೆ ಏನು ಹೇಳುತ್ತದೇ ಗೊತ್ತೆ? ವಿಳಂಬ ಪ್ರವೃತ್ತಿಯ ಸಂದರ್ಭದಲ್ಲಿ ನಿಮ್ಮನ್ನು ನೀವು ಕ್ಷಮಿಸಿಬಿಡಿ ಎನ್ನುವುದನ್ನು ಒತ್ತಿ ಹೇಳುತ್ತದೆ. 2010ರಲ್ಲಿ ವಿದ್ಯಾರ್ಥಿಗಳ ಮೇಲೆ ವಿಳಂಬ ಪ್ರವೃತ್ತಿಯ ಕುರಿತಾಗಿ ನಡೆಸಿದ ಸಂಶೋಧನೆ ಯಲ್ಲಿ ಯಾವ ವಿದ್ಯಾರ್ಥಿಗಳು ತಮ್ಮನ್ನು ತಮ್ಮ ವಿಳಂಬ ಪ್ರವೃತ್ತಿಯ ಸ್ವಭಾವದಿಂದ ಮೊದಲ ಪರೀಕ್ಷೆಯಲ್ಲಿ ಕಡಿಮೆ ಓದಿ ಕಡಿಮೆ ಅಂಕ ಗಳಿಸಿ ತಮ್ಮನ್ನು ತಾವು ಕ್ಷಮಿಸಿಕೊಂಡು ಹೀಗೆ ಕ್ಷಮಿಸಿಕೊಂಡ ಅವರ ಸ್ವಭಾವವು ನಂತರದ ಪರೀಕ್ಷೆಗಳಲ್ಲಿ ಅವರ ಅಸಮರ್ಪಕ ವರ್ತನೆಯನ್ನು ಮೀರಿ ಅವರು ಮುಂಬರುವ ಪರೀಕ್ಷೆಗಳಿಗೆ ಗಮನಹರಿಸಿದ್ದರಿಂದ ಅವರು ತಮ್ಮ ಹೊರೆ ಇಳಿಸಿ ಕೊಂಡು ಮುಂದುವರಿಯಲು ಸಾಧ್ಯವಾಯಿತು.

ಮತ್ತೊಂದು ತಂತ್ರ ಸ್ವಯಂ ಅನುಭೂತಿ. ನಮ್ಮನ್ನು ನಾವು ಹೆಚ್ಚು ಅರ್ಥ ಮಾಡಿಕೊಳ್ಳುತ್ತಾ ನಮ್ಮ ತಪ್ಪುಗಳನ್ನು ಸೋಲು ಗಳನ್ನು ಎದುರಿಸಿದಾಗ ವಿಳಂಬ ಪ್ರವೃತ್ತಿಯನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಬಹುದು. ವಿಳಂಬ ಪ್ರವೃತ್ತಿಯವರಲ್ಲಿ ಅಧಿಕ ಒತ್ತಡ ಮತ್ತು ಕಡಿಮೆ ಸ್ವಾನುಭೂತಿ ಇರುವುದು ಸಂಶೋಧನೆಯಿಂದ ಸಾಬೀತಾಗಿದೆ. ಸ್ವಯಂ ಅನುಭೂತಿಗೆ ಸಂಬಂಧಿತ ನೆಗೆಟಿವ್ ಪ್ರತಿಕ್ರಿಯೆಗಳಿಗೆ ಸ್ವಯಂ ಅನುಭೂತಿಯೇ ಸಹಾಯಕವಾಗಬಲ್ಲದು. ಸ್ವಯಂ ಅನುಭೂತಿಗೆ ಹೊರಗಿನಿಂದ ಯಾವುದೇ ಪುಷ್ ಬೇಕಿಲ್ಲ. ಬೇಕಿರುವುದು ನಮ್ಮ ಸವಾಲುಗಳನ್ನು ಒಪ್ಪಿಕೊಳ್ಳುವ ನಮ್ಮ ಮನಸ್ಥಿತಿಯಷ್ಟೇ.

ಯಾವುದೇ ಕೆಲಸ ಮಾಡುವಾಗ ಅದಕ್ಕೊಂದು ಪಾಸಿಟಿವ್ ರಿಫ್ರೇಂ ಹಾಕಿಕೊಳ್ಳಿ. ಕೆಲಸಗಳನ್ನು ತಕ್ಷಣ ಮಾಡಿ ಮುಗಿಸುವುದರಿಂದ ದೊರಕುವ ಉಪಯುಕ್ತತೆ ನೆನಪಿಸಿಕೊಳ್ಳಿ. ದೇಹ ಹಾಗೂ ಮನಸ್ಸನ್ನು ಅರಳಿಸುವ, ಮತ್ತೆ ಮತ್ತೆ ಆಸೆಗಳನ್ನು ಚಿಗುರಿಸುವ ಕುತೂಹಲಗಳನ್ನು ಬೆಳೆಸಿಕೊಳ್ಳಿ. ಮುಂದಿನ ಕೆಲಸದ ಆಲೋಚನೆಗಳನ್ನು ಸದಾ ಉತ್ತೇಜಿಸಿ. ಉತ್ಸಾಹದಾಯಕ ಸಮಯದಲ್ಲಿ ಈ
ವಿಳಂಬ ಪ್ರವೃತ್ತಿಯನ್ನು ಹೇಗೆ ನಿಲ್ಲಿಸಬೇಕೆಂಬ ತಾತ್ಕಾಲಿಕ ಯೋಚನೆ ಮನಸ್ಸಿಗೆ ಸಂತೃಪ್ತಿ, ಉಲ್ಲಾಸ ನೀಡಬಲ್ಲದು ಪ್ರಯತ್ನಿಸಿ … ಈಗ ಓದು ಮುಗಿದಿದ್ದರೆ ಹೋಗಿ ಮಾಡಬೇಕಾದ ಕೆಲಸಗಳನ್ನು ಮಾಡಿ ಮುಗಿಸಿ, ವಿಳಂಬ ಪ್ರವೃತ್ತಿಯು ನಿಮ್ಮ ಕೆಲಸಗಳನ್ನು ಮುಂದಕ್ಕಾಕುವ ಮೊದಲು!

error: Content is protected !!