Saturday, 27th July 2024

ಮಾಡಿದ ಪ್ರತಿಜ್ಞಾವಿಧಿಯನ್ನು ಮರೆತರೇ ಹೆರಿಗೆ ವೈದ್ಯರು ?

ಶಿಶಿರ ಕಾಲ

shishirh@gmail.com

Hippocrates of Kos- ಹಿಪ್ಪಾಕ್ರಾಟ್ಸ್‌ನನ್ನು ‘ವೈದ್ಯಶಾಸ್ತ್ರದ ಪಿತಾಮಹ’ ಎಂದು ಕರೆಯಲಾಗುತ್ತದೆ. ಅವನಿದ್ದದ್ದು ಎರಡೂವರೆ ಸಾವಿರ ವರ್ಷದ ಹಿಂದಿನ ಗ್ರೀಸ್ ನಲ್ಲಿ. ಆ ಕಾಲಕ್ಕೆ ಅಲ್ಲಿ ಸಾಕಷ್ಟು ದುರುಳ, ಕಪಟ ವೈದ್ಯರಿದ್ದರು. ವೈದ್ಯನಾದವನು ಹೀಗಿರಬೇಕು, ಹೀಗಿರಬಾರದು; ಇಂತಿಂಥದ್ದನ್ನೆಲ್ಲ ಮಾಡಬೇಕು, ಮಾಡಬಾರದು ಎಂದೆಲ್ಲ ಚಂದಕ್ಕೆ ಬರೆದಿಟ್ಟವನು ಈತ. ಈಗಲೂ ವೈದ್ಯರು ವೃತ್ತಿ ಆರಂಭಿಸುವುದಕ್ಕಿಂದ ಮೊದಲು ಮಾಡುವ ಭಾಷೆ-ಪ್ರಮಾಣದಲ್ಲಿರುವ (Oath) ಬಹುತೇಕ ಭಾಗಗಳು ಅಂದು ಆತ ಬರೆದಿಟ್ಟದ್ದು.

ಅದಕ್ಕೊಂದಿಷ್ಟು ಬದಲಾವಣೆ ಮಾಡಿಕೊಂಡರೂ, ಅದರ ಹೂರಣ ಆತ ಹೇಳಿದ್ದೇ ಇದೆ. ರೋಗಿಗಳಿಗೆ ನ್ಯಾಯಯುತವಾದ ರೀತಿಯಲ್ಲಿ ಚಿಕಿತ್ಸೆ ನೀಡುವುದು, ಸತ್ಯದಿಂದ ನಡೆಯುವುದು, ಗೌಪ್ಯತೆ ಕಾಪಾಡುವುದು, ಗೌರವದಿಂದ ನೋಡಿಕೊಳ್ಳುವುದು ಇತ್ಯಾದಿ. ಒಳ್ಳೆಯ, ಮಾನವೀಯ ವೈದ್ಯರಲ್ಲಿ ಇರುವ ಗುಣಗಳವು. ಆತ ಅಲ್ಲಿ ನ್ಯಾಯ-ಅನ್ಯಾಯದ ಪಠ್ಯವನ್ನು ಬರೆಯುವ ಸಮಯದಲ್ಲಿ ಇತ್ತ ಭಾರತದಲ್ಲಿ ಆತ್ರೇಯ, ಸುಶ್ರುತರು ವೈದ್ಯಕೀಯ ಶಿಕ್ಷಣ ನೀಡುವ ಗುರುಕುಲವನ್ನು
ತೆರೆದಿದ್ದರು, ಆ ಕಾಲದಲ್ಲಿಯೇ. ವೈದ್ಯಕೀಯ ಇತಿಹಾಸವನ್ನು ಗಮನಿಸಿದಲ್ಲಿ ಗ್ರೀಕರಿಗಿಂತ ಮೊದಲೇ ನಮ್ಮಲ್ಲಿ ಅಚ್ಚುಕಟ್ಟಾದ ವೈದ್ಯಕೀಯ ವ್ಯವಸ್ಥೆ ಇತ್ತು ಎಂಬುದು ಸ್ಪಷ್ಟವಾಗುತ್ತದೆ.

ನೀವು ಇವತ್ತು ಯಾವುದೇ ಮುಂದುವರಿದ ದೇಶಗಳನ್ನು ತೆಗೆದುಕೊಳ್ಳಿ, ಅಲ್ಲಿ ಭಾರತೀಯ ವೈದ್ಯರದ್ದೇ ಸಿಂಹಪಾಲು. ಅಮೆರಿಕದಲ್ಲಿ ೮೦,೦೦೦ಕ್ಕಿಂತ ಜಾಸ್ತಿ ವೈದ್ಯರು ಒಂದೋ ಭಾರತೀಯರು ಅಥವಾ ಭಾರತೀಯ ಮೂಲದವರು. ತಲಾ ಹತ್ತರಲ್ಲಿ ಒಬ್ಬರು. ಇದರ ಜತೆಯಲ್ಲಿ ಇನ್ನೊಂದು ೪೦,೦೦೦ ಭಾರತೀಯ ಫೆಲೋಸ್, ರೆಸಿಡೆಂಟ್ಸ್ ಮತ್ತು ವೈದ್ಯ ವಿದ್ಯಾರ್ಥಿಗಳು ಸದ್ಯ ಅಮೆರಿಕದಲ್ಲಿದ್ದಾರೆ. ಇಲ್ಲಿನ ಯಾವುದೇ ಆಸ್ಪತ್ರೆಗೆ ಹೋದರೂ ಭಾರತೀಯ ವೈದ್ಯರು ಇದ್ದೇ ಇರುತ್ತಾರೆ.

ಪ್ರಮಾಣದ ಅಂದಾಜಿಗೆ ಹೇಳುವುದಾದರೆ, ಅಮೆರಿಕದ ಪ್ರತಿ ೭ ರೋಗಿಗಳಲ್ಲಿ ಒಬ್ಬರಿಗೆ ಚಿಕಿತ್ಸೆ ಕೊಡುವುದು ಭಾರತೀಯ ವೈದ್ಯರು. ಅಮೆರಿಕವೊಂದೇ ಅಲ್ಲ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಹೀಗೆ ಜಗತ್ತಿನ ನಕಾಶೆಯಲ್ಲಿ ಎಲ್ಲಿಯೇ ಕೈ ಇಡಿ, ಅಲ್ಲಿ ಭಾರತೀಯ ವೈದ್ಯರಿದ್ದಾರೆ, ಜಗದ್ವ್ಯಾಪಿ. ಅಮೆರಿಕದಲ್ಲಂತೂ ಭಾರತೀಯ ವೈದ್ಯರುಗಳಿಗೆ ಎಲ್ಲಿಲ್ಲದ ಮರ್ಯಾದೆಯಿದೆ. ಭಾರತೀಯ ವೈದ್ಯರೆಂದರೆ ಶಾಣ್ಯಾ ಮಂದಿ! ಇತ್ತೀಚೆಗೆ ಅಮೆರಿಕನ್ ಸ್ನೇಹಿತನೊಬ್ಬ ನನ್ನಲ್ಲಿ ಹೀಗೆ ಕೇಳಿದ್ದ- ‘ವೈದ್ಯರನ್ನು ತಯಾರಿಸುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಬಹಳಷ್ಟು ಮಂದಿ ವೈದ್ಯರಿದ್ದಾರೆ ಅಲ್ಲವೇ?’.

ಭಾರತದಲ್ಲಿ ೧೩ ಲಕ್ಷ ವೈದ್ಯರಿರುವುದೇನೋ ನಿಜ, ಆದರೆ ಜನಸಂಖ್ಯೆಗನುಗುಣವಾಗಿ ಲೆಕ್ಕ ಹಾಕಿದರೆ ಭಾರತದ್ದು ೧೨೦ನೇ ಸ್ಥಾನ. ಅಮೆರಿಕದಲ್ಲಿ ಪ್ರತಿ ಹತ್ತು ಸಾವಿರ ಜನರಿಗೆ ೩೫ರಷ್ಟು ವೈದ್ಯರಿದ್ದರೆ, ನಮ್ಮಲ್ಲಿ ಬರೀ ೭. ಪಾಕಿಸ್ತಾನ, ಶ್ರೀಲಂಕಾ ಈ ಆಜುಬಾಜು ದೇಶಗಳಲ್ಲಿ ನಮ್ಮಲ್ಲಿಗಿಂತ ಹೆಚ್ಚಿನ ಅನುಪಾತದಲ್ಲಿ ವೈದ್ಯರಿದ್ದಾರೆ! ‘ವೈದ್ಯೋ ನಾರಾಯಣೋ ಹರಿಃ’ ಈ ವಾಕ್ಯವನ್ನು ವೈದ್ಯರೇ ದೇವರು ಎಂಬರ್ಥದಲ್ಲಿ ಬಳಸುವುದಿದೆ. ಅಸಲಿಗೆ ಶರೀರವು ವ್ಯಾಧಿಗ್ರಸ್ತ, ಜರ್ಜರಿತವಾಗಿ ಕಳೇಬರದಂತಾದಾಗ ಗಂಗಾಜಲವೇ ಔಷಽ, ಹರಿಯೇ ವೈದ್ಯ ಎಂಬುದು ಈ ಶ್ಲೋಕದ ನಿಜವಾದ ಅರ್ಥ, ಇರಲಿ. ಆದರೆ ವೈದ್ಯರೇ ದೇವರೆಂಬ ಭಾವನೆ ನಮ್ಮಲ್ಲಿರುವುದು ಸುಳ್ಳಲ್ಲ.

ನಮ್ಮ ತಾಲೂಕಿನ ಜನಪ್ರಿಯ ವೈದ್ಯರಲ್ಲಿ ಒಬ್ಬರಾಗಿದ್ದವರು ಟಿ.ಟಿ.ಹೆಗಡೆ. ಅವರು ಬಹುಶಃ ೬೦ರ ದಶಕದಲ್ಲಿಯೇ ಪ್ರಾಕ್ಟೀಸ್ ಆರಂಭಿಸಿದವರು. ಕ್ಲಿನಿಕ್ ಅವರ ಮನೆಯ ಪಕ್ಕದಲ್ಲಿಯೇ ಇತ್ತು. ಅಲ್ಲಿ ಯಾವಾಗ ನೋಡಿದರೂ ಜನಜಂಗುಳಿ. ಕುಮಟಾದ ಅಕ್ಕಪಕ್ಕದ ನೂರೆಂಟು ಹಳ್ಳಿಗರಿಗೆ ಇವರು ದೇವರು. ಊರಿನ ಡಾಕ್ಟರ್ ಬಳಿ ಆರಾಮಾಗದಿದ್ದಲ್ಲಿ, ಟಿ.ಟಿ.ಹೆಗಡೆಯವರ ಔಷಧ ಬಿದ್ದರೆ ಆರೋಗ್ಯ ಸುಧಾರಿಸಿಬಿಡುತ್ತದೆ ಎಂಬ ಗಟ್ಟಿ ನಂಬಿಕೆ. ಹೆಗಡೆಯವರೂ ಹಾಗೆಯೇ ಇದ್ದರು. ಸಜ್ಜನ ಸಮರ್ಥ ವೈದ್ಯರು. ರೋಗಿ ಬಡವನಾಗಿದ್ದರೆ ಚಿಕಿತ್ಸೆಗೆ ಹಣ ಪಡೆಯುತ್ತಿರಲಿಲ್ಲ. ಅಷ್ಟೇ ಅಲ್ಲ, ಅವರೇ ಔಷಧ ಕೊಳ್ಳಲು, ಊರಿಗೆ ವಾಪಸಾಗಲು, ಬಸ್ಸಿಗೆಂದು ಕಿಸೆಯಲ್ಲಿ ಹಣ ತುರುಕಿ ಕಳಿಸಿಕೊಡುತ್ತಿದ್ದರು.

ಅವರಿಗೆ ರೋಗಿಗಳಲ್ಲಿ ವಿಚಿತ್ರ ಸಲಿಗೆಯಿತ್ತು. ರೋಗಿಯು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಜೋರಾಗಿ ಕೂಗಾಡಿ, ಬೈದು, ತಲೆಯ ಮೇಲೆ ಪೆಟ್ಟು ಕೊಡುವುದೂ ಇತ್ತು. ವೈದ್ಯ-ರೋಗಿಗಳ ಅಂಥ ಸಂಬಂಧವನ್ನು ನಾನು ಇನ್ನೆಲ್ಲಿಯೂ ಕಂಡಿಲ್ಲ. ಹಾಗಂತ ಈ ರೀತಿಯ ವೈದ್ಯರು ವಿರಳರಲ್ಲ, ಸಾಕಷ್ಟಿದ್ದಾರೆ. ಪ್ರತಿ ತಾಲೂಕಿನಲ್ಲೂ ಒಬ್ಬಿಬ್ಬರು ಇದ್ದಾರೆ. ಅವರೆಲ್ಲ ನಿಜವಾಗಿಯೂ ದೇವರೇ. ಆದರೆ ಈಗೀಗ, ಒಂದೆರಡು ದಶಕದಿಂದೀಚೆಗೆ ವೈದ್ಯರೆಂದರೆ ತೀರಾ ಕಮರ್ಷಿಯಲ್ ಎಂಬ ಅನಿಸಿಕೆ ಜನಸಾಮಾನ್ಯರಲ್ಲಿ ಹೆಚ್ಚುತ್ತಿದೆ. ‘ಆಸ್ಪತ್ರೆಗೆ ಹೋದರೆ ನಮ್ಮ ಆರ್ಥಿಕತೆಯ ಆರೋಗ್ಯವೂ ಹಾಳಾಗುತ್ತದೆ’, ‘ಆಸ್ಪತ್ರೆಗಳು ಸರ್ವೀಸ್ ಅಲ್ಲ, ಬಿಸಿನೆಸ್’ ಎನಿಸುತ್ತಿದೆ ಜನರಿಗೆ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲವಲ್ಲ! ಕಳೆದ ಒಂದು ದಶಕದಿಂದ ಇದೊಂದು ವಿಷಯ ಆಗಾಗ ನನ್ನ ಗಮನಕ್ಕೆ ಬರುತ್ತಿದೆ. ಭಾರತದಲ್ಲಿ ಯಾರಿಗೇ ಮಗುವಾದ ಸುದ್ದಿಯಾಗಲಿ, ಬಹುತೇಕ ಎಲ್ಲವೂ ಸಿ-ಸೆಕ್ಷನ್.

ಹೊಟ್ಟೆಯನ್ನು ಕೊಯ್ದು ಮಗುವನ್ನು ತೆಗೆಯುವುದು. ಯಾರನ್ನೇ ಕೇಳಿ, ‘ಮಗು ದೊಡ್ಡದಿತ್ತಂತೆ, ತಲೆ ಕೆಳಗಾಗಿರಲಿಲ್ಲವಂತೆ, ಹೊಕ್ಕಳ ಬಳ್ಳಿ ಕುತ್ತಿಗೆಗೆ ಸಿಕ್ಕಿಕೊಂಡಿತ್ತಂತೆ, ಇನ್ನೇನೋ ಅಂತೆ’ ಇತ್ಯಾದಿ ಸಬೂಬಿನ ಸಿಸೇರಿಯನ್‌ಗಳು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದಲ್ಲಿರುವ ಭಾರತೀಯ ಮೂಲದವರಿಗೆ
ಮಗುವಾದಲ್ಲಿ, ಒಂದೇ ಒಂದು ಸಿ-ಸೆಕ್ಷನ್ ಆದ ಸುದ್ದಿ ಹತ್ತು ವರ್ಷದಲ್ಲಿ ಒಮ್ಮೆಯೂ ಕೇಳಿದ್ದಿಲ್ಲ. ಅಮೆರಿಕದಲ್ಲಿ ಸಿ-ಸೆಕ್ಷನ್ ಎಂದರೆ ಅದು ಅತ್ಯಂತ ಅಸಹಜ ಎಂಬುದು ಜನಸಾಮಾನ್ಯ ನಂಬಿಕೆ. ಹಾಗಂತ ಇಲ್ಲೇನು ಸಿ-ಸೆಕ್ಷನ್‌ನ ಪ್ರಮಾಣ ಕಡಿಮೆಯೆಂದಲ್ಲ.

ಯುರೋಪಿಯನ್ ಮಕ್ಕಳು ದೊಡ್ಡ ಆಳತನದವು. ಅಲ್ಲದೆ ಅಮೆರಿಕನ್ನರ ಜೀವನಶೈಲಿ, ಆಹಾರ, ವಂಶವಾಹಿನಿ ಅಂಥದ್ದು. ಆದರೆ ಇಲ್ಲಿ ನೆಲೆಸಿರುವ ಭಾರತೀಯರಲ್ಲಿ ಸಿ-ಸೆಕ್ಷನ್ ನಾನು ಕಂಡಂತೆ ತೀರಾ ಕಡಿಮೆ, ಅಪರೂಪ. ಇವೆಲ್ಲ ಕೇವಲ ನನ್ನ ಅನುಭವಕ್ಕೆ ಬಂದ ಕೆಲವೇ ಘಟನೆಗಳನ್ನಾಧರಿಸಿದ್ದರಿಂದ ಇದಷ್ಟಕ್ಕೆ ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು. ಹಾಗಾಗಿಯೇ ಒಂದಿಷ್ಟು ವಿವರಗಳು. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (ಡಬ್ಲ್ಯುಎಚ್‌ಒ) ಪ್ರಕಾರ ಶೇ.೮೫ಕ್ಕಿಂತ ಜಾಸ್ತಿ ಸಹಜ ಹೆರಿಗೆಯಾಗಬೇಕು. ಸಿಸೇರಿಯನ್ ಶೇ.೧೦-೧೫ ಮೀರಬಾರದು. ಡಬ್ಲ್ಯುಎಚ್‌ಒ ಸಾಕಷ್ಟು ಪ್ರಮಾಣದ ದತ್ತಾಂಶಗಳನ್ನಿಟ್ಟು ಕೊಂಡು, ಸಾವಿರದೆಂಟು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೊಟ್ಟ ಸಂಖ್ಯೆ ಇದು. ಈ ಪ್ರಮಾಣ ಮೀರಿದರೆ ಒಂದೋ ಅಲ್ಲಿನ ಜನಸಾಮಾನ್ಯರ ಆರೋಗ್ಯ ಅಷ್ಟು ಹದಗೆಟ್ಟುಬಿಟ್ಟಿದೆ ಅಥವಾ ಅಲ್ಲಿನ ವೈದ್ಯ ವ್ಯವಸ್ಥೆ ದಂಧೆಗಿಳಿದಿದೆ- ಎರಡೇ ಸಾಧ್ಯತೆಗಳು.

ಭಾರತದಲ್ಲಿನ ಸಿಸೇರಿಯನ್ ಪ್ರಮಾಣ ಎಷ್ಟು ಗೊತ್ತೇ? ಶೇ.೨೧.೫. ಅದೇನೂ ಅಷ್ಟು ಜಾಸ್ತಿಯಲ್ಲ. ಆದರೆ ಹೆದರಿಸುವ ಇನ್ನೊಂದು ಸಂಖ್ಯೆಯಿದೆ. ಅದು ಭಾರತದ ಪ್ರೈವೇಟ್ ಆಸ್ಪತ್ರೆಗಳಲ್ಲಿನ ಸಿಸೇರಿಯನ್ ಪ್ರಮಾಣ. ಅದು ಬರೋಬ್ಬರಿ ಶೇ.೪೭.೪ರಷ್ಟು. ಈಗ ಖಾಸಗಿ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಎರಡರಲ್ಲಿ ಒಂದು ಮಗು ಅಸಹಜ ಜನನ, ಸಿಸೇರಿಯನ್‌ನಿಂದ. ಇದೆಲ್ಲ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಹೆಲ್ತ್’ನ (ಎನ್‌ಐಎಚ್) ಅಂಕಿ-ಅಂಶಗಳು. ಪ್ರೈವೇಟ್ ಆಸ್ಪತ್ರೆಗಳೆಲ್ಲ ಇರುವುದು ಪೇಟೆಯಲ್ಲಿ. ಪೇಟೆಯಲ್ಲಿರುವ ಇಂದಿನ ಯುವಜನಾಂಗ ಆಲಸಿ, ವ್ಯಾಯಾಮ ಮಾಡುವುದಿಲ್ಲ, ಅವರದ್ದು ದಿಕ್ಕೆಟ್ಟ ಆಹಾರ, ಜೀವನ ಪದ್ಧತಿ ಅದುವೇ ಇದಕ್ಕೆಲ್ಲ ಕಾರಣ ಎಂಬ ಒಂದು ವಾದ.

ಇದು ಕೂಡ ಸಿಸೇರಿಯನ್ ಹೆಚ್ಚಾಗಲು ಕಾರಣವಾಗಿರಬಹುದು, ಆದರೆ ಇಬ್ಬರಲ್ಲಿ ಒಬ್ಬರಿಗೆ ಆಗುವಷ್ಟೇ? ಅದೇ ಅದೇ ಊರು, ಪೇಟೆಗಳಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಪ್ರಮಾಣ ಕೇವಲ ಶೇ.೧೪. ಹಾಗಾದರೆ ಪೇಟೆಯ ಅದೇ ಗಾಳಿ ನೀರು, ಪ್ರದೂಷಣೆ ಸೇವಿಸುವ ಬಡವರಷ್ಟೇ ಆರೋಗ್ಯವಾಗಿದ್ದಾ ರೆಯೇ? ಪೇಟೆಯ ಮಧ್ಯಮ ವರ್ಗದವರು ಮತ್ತು ಶ್ರೀಮಂತರೆಲ್ಲ ಅಷ್ಟು ರೋಗಗ್ರಸ್ತರಾಗಿಬಿಟ್ಟಿದ್ದಾರೆಯೇ? ಅಥವಾ ಪ್ರೈವೇಟ್ ಆಸ್ಪತ್ರೆಗಳು ವ್ಯಾಪಾರಕ್ಕೆ ಇಳಿದುಬಿಟ್ಟಿವೆಯೇ? ಈ ಎಲ್ಲ ಪ್ರಶ್ನೆಗಳು ಸಹಜ.

೧೯೮೦ರ ಸಮಯದಲ್ಲಿ ಭಾರತದಲ್ಲಿ ಸಿ-ಸೆಕ್ಷನ್ ಕ್ರಮದಿಂದ ಮಕ್ಕಳನ್ನು ಹೊರಜಗತ್ತಿಗೆ ತರುವ ಕೆಲಸ ವ್ಯಾಪಕವಾಯಿತು. ಸಿ-ಸೆಕ್ಷನ್ ನಿಜವಾಗಿಯೂ ವೈದ್ಯಕೀಯ ಆವಿಷ್ಕಾರಗಳಲ್ಲಿ ಬಹುಮುಖ್ಯವಾದದ್ದು. ಇದಕ್ಕಿಂತ ಮೊದಲು ಹೆರಿಗೆಯ ಸಮಯದಲ್ಲಿ ಏನೇ ಹೆಚ್ಚುಕಡಿಮೆಯಾದರೂ ಅನ್ಯಮಾರ್ಗಗಳಿರಲಿಲ್ಲ. ಆ ಕಾರಣಕ್ಕೆ ಶೇ.೧೦-೧೫ರಷ್ಟು ಪ್ರಮಾಣದ ಹೆರಿಗೆಯಲ್ಲಿ ತಾಯಿ ಅಥವಾ ಹೆಚ್ಚಾಗಿ ಮಗುವಿನ ಮರಣವಾಗುತ್ತಿತ್ತು. ಇಂದು ಜನನ ಸಮಯದಲ್ಲಿನ ಸಾವು ಬಹಳ ಕಡಿಮೆಯಾಗಿದೆ. ಅದಕ್ಕೆ ಸಿಸೇರಿಯನ್ ಕಾರಣ. ಆದರೆ ಸಿಸೇರಿಯನ್ ಎಂದಿಗೂ ಅಸಹಜ, ಅಸ್ವಾಭಾವಿಕ. ಅದು ಹೆರಿಗೆಯ ಕಟ್ಟ ಕಡೆಯ ಆಯ್ಕೆ. ಇನ್ನು ಬೇರೆ ದಾರಿಯೇ ಇಲ್ಲವೆಂದಾಗ ಅದು. ಆದರೆ ಇಂದು ಸಿಸೇರಿಯನ್ ಎಂದರೆ ಸ್ವಾಭಾವಿಕ ಎಂಬಂತಾಗಿದೆ.

ಅದರಲ್ಲಿಯೂ, ಸಿಸೇರಿಯನ್ ಆಯಿತು ಎಂಬುದನ್ನು ಗಂಡಸರಲ್ಲಿ ಹೇಳುವಾಗ ಯಾವುದೇ ಬೇಸರವಿರದಷ್ಟು ನಾವು ಅದನ್ನು ಒಪ್ಪಿಬಿಟ್ಟಿದ್ದೇವೆ. ಮಗು ಹುಟ್ಟಿದ ಸಂಭ್ರಮದಲ್ಲಿ ಇದು ಮರೆಯಾಗಿ ಹೋಗುತ್ತದೆ. ಸಿಸೇರಿಯನ್ ದೊಡ್ಡ ವಿಷಯವೇ ಅಲ್ಲವೆಂದುಕೊಂಡವರ ಗಮನಕ್ಕೆ- ಸಿಸೇರಿಯನ್ ನಲ್ಲಿ ಗಾಯದಿಂದಾಗಿ, ಅನ್ಯ ಅಂಗಾಂಗಗಳಿಗೆ ವೈದ್ಯರ ಕೈ ತಪ್ಪಿನಿಂದ ಘಾಸಿಯಾಗಿ ತಾಯಿಯ ಸಾವಾಗುವ ಪ್ರಮಾಣ ಸಹಜ ಹೆರಿಗೆಗಿಂತ ೫ ಪಟ್ಟು ಜಾಸ್ತಿ. ಸಿಸೇರಿಯನ್‌ನಿಂದ ಹೆಣ್ಣು ಅನುಭವಿಸುವ ಕಷ್ಟಗಳು ಒಂದೆರಡಲ್ಲ. ಕಿಬ್ಬೊಟ್ಟೆಯ ಭಾಗದಲ್ಲಿ ಯಾರೋ ಒಳಗಿನಿಂದ ಹಿಡಿದು ಎಳೆದಂತಾಗುವುದು, ಆ ಭಾಗದಲ್ಲಿ ಜೋಮು ಹಿಡಿಯುವುದು, ಮರಗಟ್ಟಿದಂತಾಗುವುದು ಇವು ಸಾಮಾನ್ಯ.

ಇದಕ್ಕೆ ಆ ಭಾಗದ ನರ, ಮಾಂಸಖಂಡಗಳಿಗೆ ಆದ ಘಾಸಿ ಕಾರಣ. ಅಷ್ಟೇ ಅಲ್ಲ, ಸಿಸೇರಿಯನ್ ಆದ ಹೆಣ್ಣಿನಲ್ಲಿ ಶಾಶ್ವತ ಬೆನ್ನುನೋವು ಕೂಡ ಸಾಮಾನ್ಯ. ಹೊಟ್ಟೆ
ಕೊಯ್ದರೆ ಬೆನ್ನೇಕೆ ನೋಯಬೇಕು? ಹೊಟ್ಟೆಯನ್ನು ಕೊಯ್ಯುವಾಗ ಆ ಭಾಗದ ಮಾಂಸಖಂಡವನ್ನು ಕೂಡ ಬಿರಿಯಲಾಗುತ್ತದೆ. ಇದಾದ ನಂತರ ದೇಹ ಎಷ್ಟೇ ಸಹಜ ಸ್ಥಿತಿಗೆ ಮರಳುತ್ತದೆಯೆಂದರೂ ಈ ಭಾಗದ ಮಾಂಸಖಂಡ ಗಳು ಮಾತ್ರ ಪೂರ್ಣ ಪುನಶ್ಚೇತನಗೊಳ್ಳುವುದಿಲ್ಲ. ಶಕ್ತಿ ಕಳೆದುಕೊಂಡಿರುತ್ತವೆ. ಅದರ ನೇರ ಪರಿಣಾಮವಾಗಿ, ಬೆನ್ನಿಗೆ ಒತ್ತಡ ಹೆಚ್ಚುತ್ತದೆ. ಆ ಲೋಪವನ್ನು ಬೆನ್ನು ನಿಭಾಯಿಸಬೇಕು. ಹಾಗಾಗಿ ಬೆನ್ನುನೋವು. ತಿಂಗಳು ತುಂಬುವಾಗ ಹೆಣ್ಣಿನ ದೇಹ ಸಹಜ ಹೆರಿಗೆಗೆ ಬೇಕಾಗುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿರುತ್ತದೆ.

ಹಾರ್ಮೋನುಗಳು, ದೈಹಿಕ ಬದಲಾವಣೆಗಳು ಇತ್ಯಾದಿ. ಈ ಸಮಯದಲ್ಲಿ ಅನಾಮತ್ತು ದೇಹದಿಂದ ಮಗುವನ್ನು ಅಸಹಜವಾಗಿ ಹೊರತೆಗೆದುಬಿಟ್ಟರೆ? ಆಗ ತಾಯಿಯ ದೇಹದಲ್ಲಿ ಆಗಲೇಬೇಕಾದ ಘಟನೆಗಳು ಸಂಭವಿಸುವುದಿಲ್ಲ. ಇದರಿಂದ ದೇಹ ಏರುಪೇರಾಗಿಬಿಡುತ್ತದೆ. ಒಟ್ಟಾರೆ ಇದೆಲ್ಲದರ ಪರಿಣಾಮವನ್ನು ಹೆಣ್ಣು ಜೀವಮಾನವಿಡೀ ಅನುಭವಿಸಬೇಕಾಗುತ್ತದೆ. ಈಗ ಕೆಲವು ದಿನಗಳ ಹಿಂದೆ ಇಲ್ಲಿರುವ ಸುಪ್ರಸಿದ್ಧ ಭಾರತೀಯ ವೈದ್ಯರಾದ ಪಳನಿಯಪ್ಪನ್ ಮಣಿಕ್ಕಮ್ ಅವರ
ಸಂದರ್ಶನವೊಂದನ್ನು ನೋಡುತ್ತಿದ್ದೆ. ಅವರೇನೂ ಹೆರಿಗೆ ತಜ್ಞರಲ್ಲ. ಗ್ಯಾಸ್ಟ್ರೋ ಎಂಟರಾಲಜಿಸ್ಟ್- ಜೀಣಾಂಗವ್ಯೂಹ ಸಂಬಂಧಿ ವೈದ್ಯರು. ನಮ್ಮ ಕರುಳಿನಲ್ಲಿ ಹತ್ತರಿಂದ ನೂರು ಟ್ರಿಲಿಯನ್‌ನಷ್ಟು ಗಟ್ಸ್ ಬಯೋಮ್ ಇರುತ್ತವೆ.

ಇವು ಬಹುತೇಕ ಬ್ಯಾಕ್ಟೀರಿಯಾಗಳು. ಇವು ಜೀರ್ಣಕ್ರಿಯೆಗೆ, ನಮ್ಮ  ಆರೋಗ್ಯ ಕಾಪಾಡಿಕೊಳ್ಳಲಿಕ್ಕೆ ಹೀಗೆ ಎಲ್ಲದಕ್ಕೂ ಬಹಳ ಮುಖ್ಯ. ಇವು ಲೆಕ್ಕ ಮೀರಿ ಸತ್ತವೆಂದರೆ ಅಥವಾ ಅವಶ್ಯವಿರುವ ಬ್ಯಾಕ್ಟೀರಿಯಾಗಳ ಪ್ರಮಾಣದಲ್ಲಿ ಹೆಚ್ಚುಕಡಿಮೆಯಾದರೆ ಅದು ದೊಡ್ಡ ಸಮಸ್ಯೆ. ಡಾ.ಮಣಿಕ್ಕಮ್ ಹೇಳುವಂತೆ ಇವುಗಳಲ್ಲಿ ಬಹುತೇಕ ಬ್ಯಾಕ್ಟೀರಿಯಾಗಳು ಮಗುವಿನ ಖಾಲಿಹೊಟ್ಟೆ, ಕರುಳಿಗೆ ಮೊದಲ ಬಾರಿ ಸೇರುವುದು ಯಾವಾಗ ಗೊತ್ತಾ? ಸಹಜ ಹೆರಿಗೆಯಾಗುವಾಗ, ಮಾರ್ಗಮಧ್ಯ ದಲ್ಲಿ. ಅಲ್ಲಿಂದಲೇ ಹಾಲು ಇತ್ಯಾದಿ ಜೀರ್ಣಿಸಿಕೊಳ್ಳಲು ಬೇಕಾಗುವ ಮೈಕ್ರೋಬಯೋಮ್ ಸ್ಥಾಪನೆಯಾಗುವುದು.

ಸಿಸೇರಿಯನ್ ಆದ ಮಕ್ಕಳಲ್ಲಿ ಅಜೀರ್ಣ, ಮಲಬದ್ಧತೆ ಹೆಚ್ಚಾಗಿ ಕಾಣಿಸಿಕೊಳ್ಳಲು ಕರುಳಿನಲ್ಲಿನ ಬ್ಯಾಕ್ಟೀರಿಯಾಗಳ ಕೊರತೆಯೇ ಕಾರಣ. ನಂತರದ ಬದುಕಿ ನಲ್ಲಿಯೂ ಈ ಕರುಳಿನ ಬ್ಯಾಕ್ಟೀರಿಯಾಗಳು ವ್ಯತ್ಯಾಸವಾಗುತ್ತವೆ. ಅವು ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ಸಂಖ್ಯೆಯಲ್ಲಿ ಹೆಚ್ಚುಕಡಿಮೆಯಾಗುತ್ತವೆ. ಅವನ್ನು ನಿಭಾಯಿಸಲೆಂದೇ ಪಂಚಗವ್ಯ ಸೇವನೆಯ ವ್ಯವಸ್ಥೆ ನಮ್ಮಲ್ಲಿ ಬಂದಿದೆ. ಇದೆಲ್ಲ ಹೇಳಿದ್ದು ಡಾ.ಮಣಿಕ್ಕಮ್. ಇನ್ನು ನಮ್ಮ ಚರ್ಮದ ಮೇಲೆ ಅಸಂಖ್ಯ ಸೂಕ್ಷ್ಮಾಣು ಜೀವಿಗಳು ವಾಸಿಸುತ್ತವೆ. ಆರೋಗ್ಯಕರ ವ್ಯಕ್ತಿಯ ಚರ್ಮದ ಮೇಲೆ ಸಾವಿರಕ್ಕಿಂತ ಹೆಚ್ಚಿನ ವೈವಿಧ್ಯದ ಸುಮಾರು ಒಂದೂವರೆ ಟ್ರಿಲಿಯನ್ ಸೂಕ್ಷ್ಮಾಣು ಜೀವಿಗಳು ಇರಬೇಕು. ಅವುಗಳಲ್ಲಿ ಹೆಚ್ಚಿನವನ್ನು ಮಗು ಪಡೆಯುವುದು ತಾಯಿಯಿಂದ, ಅದು ಸಹಜ ಹೆರಿಗೆಯ ಸಮಯದಲ್ಲಿ ಮಾತ್ರ ಸಾಧ್ಯ.

ಹಾಗಾಗದಿದ್ದಲ್ಲಿ ಮಗುವಿನ ಚರ್ಮರೋಗಗಳಿಗೆ, ಅಸ್ತಮಾ, ಅಲರ್ಜಿಗಳಿಗೆ ಇದುವೇ ಕಾರಣವಾಗುತ್ತದೆ. ಹೀಗೆ ನೂರೆಂಟು ರೀತಿಯ ಅಡ್ಡ ಪರಿಣಾಮ ಸಿಸೇರಿಯನ್‌ನಿಂದ ಇದೆ- ತಾಯಿಗೂ, ಮಗುವಿಗೂ. ಇದು ಎಂದೂ ಸಹಜವಲ್ಲ, ಸ್ವಾಭಾವಿಕವೂ ಅಲ್ಲವೆಂಬ ವಿಷಯ ಹೆಣ್ಣಿಗಿಂತ ಜಾಸ್ತಿ ಇಂದಿನ ಗಂಡಸರು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಹೆಣ್ಣಿಗೆ ಇದೆಲ್ಲ ಗೊತ್ತಿದೆ. ಆದರೆ ಸಾಮಾಜಿಕ ಸಹಜತೆಯಿಂದಾಗಿ ಆಕೆಯೂ ಸಿಸೇರಿಯನ್ ಅನ್ನು ಸುಲಭದಲ್ಲಿ ಒಪ್ಪಿಬಿಡುತ್ತಿದ್ದಾಳೆ.

ನಾನು ಭಾರತದಲ್ಲಿರುವ ನನ್ನ ಕೆಲವು ಸ್ನೇಹಿತರ ಹೆರಿಗೆಯ ಅನುಭವಗಳನ್ನು ಕೇಳಿದ್ದೇನೆ. ಎಲ್ಲರಲ್ಲಿಯೂ ಆತಂಕದ ಕೆಲವು ಘಟನೆಗಳು ಸಾಮಾನ್ಯ. ಅವರಲ್ಲಿ ಬಹುತೇಕರು ಹೋದದ್ದು ಖಾಸಗಿ ಆಸ್ಪತ್ರೆಗೆ. ಸಾಮಾನ್ಯವಾಗಿ, ಗರ್ಭಧಾರಣೆಯಾದಾಗಿನಿಂದ ಯಾವುದೇ ಕಾಂಪ್ಲಿಕೇಷನ್, ತೊಡಕುಗಳಿರುವುದಿಲ್ಲ. ಎಲ್ಲವೂ ಸರಿಯಿದೆ ಎಂದೇ ಎಲ್ಲ ಸ್ಕಾ ನಿಂಗುಗಳು, ಪರೀಕ್ಷೆಗಳು ಹೇಳುತ್ತಿರುತ್ತವೆ. ಅಂತೆಯೇ ವೈದ್ಯರು ಕೂಡ. ಆದರೆ ಕೊನೆಯಲ್ಲಿ ಆಗುವುದು ಮಾತ್ರ ಸಿಸೇರಿಯನ್. ಮನುಷ್ಯನ ಗರ್ಭಧಾರಣೆ ಅವಽ ನಲವತ್ತು ವಾರ- ೨೮೦ ದಿನ. ಇದು ಹೆರಿಗೆಯ ದಿನವನ್ನು ಅಂದಾಜಿಸಲು ಬಳಸುವ ಲೆಕ್ಕಾಚಾರ. ಆದರೆ ಸರಿಯಾಗಿ ೨೮೧ನೇ ದಿನವೇ ಹೆರಿಗೆಯಾಗುವ ಪ್ರಮಾಣ ಮಾತ್ರ ಕೇವಲ ಶೇ.೪ರಷ್ಟು. ಹೆರಿಗೆಯ ದಿನಾಂಕದ ಲೆಕ್ಕಾಚಾರವು, ಹೆಣ್ಣು ಕೊನೆಯ ಬಾರಿ ಋತುಮತಿಯಾದ ದಿನ ಮತ್ತು ಆ ಚಕ್ರದ ಸರಾಸರಿ ದಿನಗಳ ಅಂತರವನ್ನು ಅವಲಂಬಿಸಿರುತ್ತದೆ.

ಅದನ್ನೇ ತಾಯಿ ತಪ್ಪಾಗಿ ಹೇಳಿದ್ದಿದ್ದರೆ? ಅಲ್ಲದೆ, ೪೦ ವಾರವೆನ್ನುವುದು ‘ಇದಮಿತ್ಥಂ’ ಅಲ್ಲ. ಹೆಣ್ಣಿನ ದೇಹ ಬೇರೆ ಬೇರೆ, ಮಗುವಿನ ಬೆಳವಣಿಗೆ ಕೂಡ. ಅವೆರಡೂ ಒಂದಕ್ಕೊಂದು ಹೊಂದಿಕೆಯಾಗುವಾಗ ಕೆಲ ದಿನಗಳ ಆಚೀಚೆ ಸಹಜ. ೪೨ನೇ ವಾರದವರೆಗೂ ಅದು ಹೋಗಬಹುದು. ಅಲ್ಲದೆ ಕೊನೆಯ ಕೆಲವು ವಾರಗಳು
ಮಗುವಿಗೆ ಅತ್ಯಂತ ಮುಖ್ಯವಾದವು. ಹೀಗಿರುವಾಗ ೪೦ ವಾರವಾಗಿ ಎರಡು ದಿನ ಕಳೆಯಿತು, ಕಾಂಪ್ಲಿಕೇಷನ್ ಇದೆ, ತಲೆ ಕೆಳಗಾಗಿಲ್ಲ, ಕರುಳಬಳ್ಳಿ ಕುತ್ತಿಗೆಗೆ ಸಿಕ್ಕಿಕೊಳ್ಳಬಹುದು ಇತ್ಯಾದಿ ಕಾರಣ ಕೊಟ್ಟು, ‘ಹೇಳುವುದನ್ನು ಹೇಳಿದ್ದೇನೆ, ಇದಕ್ಕಿಂತ ಜಾಸ್ತಿ ರಿಸ್ಕ್ ತೆಗೆದುಕೊಂಡರೆ ನಾನು ಜವಾಬ್ದಾರನಲ್ಲ’ ಎಂದು ವೈದ್ಯರೇ ಹೇಳಿಬಿಟ್ಟರೆ ಎಂಥವನ ಕೈಕಾಲೂ ಕಂಪಿಸಿಬಿಡುತ್ತದೆ. ಇನ್ನೊಬ್ಬ ವೈದ್ಯರ ಅಭಿಪ್ರಾಯ ತೆಗೆದುಕೊಳ್ಳೋಣ ಎಂದರೆ ಡಾಕ್ಟರ್ ಸಿಟ್ಟಿಗೇಳುತ್ತಾನೆ(ಳೆ).

ಆಗಲೇ, ವೈದ್ಯರೇ ನಾರಾಯಣ- ‘ಹರಿ’ ಎಂದು ಸಿಸೇರಿಯನ್‌ಗೆ ಒಪ್ಪಿಕೊಂಡುಬಿಡುವುದು. ಇದೆಲ್ಲವನ್ನು ಪರಾಮರ್ಶಿಸುವವರು ಯಾರೂ ಇಲ್ಲ. ಸಮಸ್ಯೆ
ನಿಜವಾಗಿತ್ತೋ, ಸುಳ್ಳೋ? ದೇವರೇ ಬಲ್ಲ. ಸಹಜ ಹೆರಿಗೆಗೆ ಆರೆಂಟು ತಾಸಿನಿಂದ ಎರಡು ದಿನ ಬೇಕಾಗಬಹುದು. ಅಷ್ಟು ಸಮಯ ತಾಯಿಯನ್ನು ನೋಡಿ ಕೊಳ್ಳುತ್ತಿರಬೇಕು. ಅಷ್ಟು ದೀರ್ಘ ಸಮಯದಲ್ಲಿ ಏನೇ ಹೆಚ್ಚುಕಮ್ಮಿಯಾದಲ್ಲಿ ಬೇಕು ಎಂದು ಸಿಸೇರಿಯನ್‌ಗೆ ಬೇಕಾಗುವ ವೈದ್ಯರು, ಅರಿವಳಿಕೆ ತಜ್ಞರು, ಸಲಕರಣೆಗಳು ಇವೆಲ್ಲವನ್ನೂ ತಯಾರಾಗಿಸಿಯೇ ಇಟ್ಟುಕೊಳ್ಳಬೇಕು. ಅದೇ ಪೂರ್ವನಿರ್ಧರಿತ ಸಿಸೇರಿಯನ್ ಆದರೆ ಅದ್ಯಾವ ರಗಳೆಯೂ ಇಲ್ಲ. ಇದು ಖಾಸಗಿ ಆಸ್ಪತ್ರೆಗಳಿಗೆ ಎಲ್ಲಾ ರೀತಿಯಲ್ಲಿಯೂ ಹಣ ಬರುವ ಸುಲಭ ಮಾರ್ಗ.

ಎಲ್ಲಿಯ ಡಬ್ಲ್ಯುಎಚ್‌ಒ ಹೇಳಿದ ಶೇ.೧೫ರ ಪ್ರಮಾಣ, ಎಲ್ಲಿಯ ಶೇ.೪೯ರ ಪ್ರಮಾಣ? ಖಾಸಗಿ ಆಸ್ಪತ್ರೆಯ ಸಿಸೇರಿಯನ್ ಪ್ರಮಾಣವನ್ನು ಕಂಡಾಗ ಇದೆಲ್ಲವನ್ನೂ
ಇನ್ಯಾವ ರೀತಿಯಲ್ಲಿಯೂ ವಿಶ್ಲೇಷಿಸಲಿಕ್ಕೆ ಅಸಾಧ್ಯ. ಈಗಿರುವ ಪ್ರಶ್ನೆ, ಇದೆಲ್ಲವನ್ನೂ ಸರಿ ಮಾಡುವುದು ಯಾರು, ಹೇಗೆ, ಯಾವಾಗ? ತಂದೆ-ತಾಯಿಯನ್ನು ಅಸಹಾಯಕರನ್ನಾಗಿಸಿ ಹೊಟ್ಟೆ ಕೊಯ್ಯಲು ಮುಂದಾಗುವ ಆಸ್ಪತ್ರೆಗಳನ್ನು ಯಾರು ಪ್ರಶ್ನಿಸುವವರು, ಹಿಡಿತದಲ್ಲಿಡುವವರು? ಅದು ಸರಕಾರದ ಕೆಲಸವಲ್ಲವೇ? ಎನ್‌ಐಎಚ್ ಪ್ರಕಾರ ಸಿಸೇರಿಯನ್ ಪ್ರಮಾಣ ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.೪೦೦ರಷ್ಟು ಜಾಸ್ತಿಯಾಗಿದೆ. ಛೇ!

Leave a Reply

Your email address will not be published. Required fields are marked *

error: Content is protected !!