Saturday, 7th September 2024

ಕಾರಂತರ ಬದುಕಿನ ವಿಶಿಷ್ಠ, ಅಪೂರ್ವ ಒಳನೋಟಗಳು

ಶಶಾಂಕಣ

shashidhara.halady@gmail.com

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹೆಮ್ಮರ ಎನ್ನಬಹುದಾದ ಡಾ.ಶಿವರಾಮ ಕಾರಂತರ ಕುರಿತು ಅವರ ಮಕ್ಕಳು ಬರೆದ ಈ ಒಂದು ಪುಸ್ತಕ, ಹೆಚ್ಚು ಜನರ ಗಮನ ಸೆಳೆದಿಲ್ಲ ಎಂದೇ ಹೇಳಬಹುದು. ಸುಮಾರು 47 ಕಾದಂಬರಿಗಳನ್ನು, 400 ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ ಶಿವರಾಮ ಕಾರಂತರನ್ನು, ಅವರ ಮೂವರು ಮಕ್ಕಳು ವಿಶಿಷ್ಟ ದೃಷ್ಟಿಕೋನದಿಂದ  ನೋಡಿ, ಬರೆದ ಪುಸ್ತಕ ಇದು. ಕನ್ನಡದ ಸಾಹಿತಿಗಳ ಕುರಿತು ಅವರ ಮಕ್ಕಳು ಬರೆದ ಪುಸ್ತಕಗಳು ಕಡಿಮೆ ಎಂದೇ ಹೇಳಬ ಹುದು; ತೇಜಸ್ವಿಯವರು ತಮ್ಮ ತಂದೆಯ ಕುರಿತು ಬರೆದ ‘ಅಣ್ಣನ ನೆನಪು’ ಇಲ್ಲಿ ನೆನಪಾಗುತ್ತದೆ.

ಶಿವರಾಮ ಕಾರಂತರನ್ನು ಅವರ ಮಕ್ಕಳು ಕರೆಯುತ್ತಿದ್ದುದು ‘ತಾತ’ ಎಂದು! ಆದ್ದರಿಂದ, ಮೂವರು ಮಕ್ಕಳು ಸೇರಿ ಕಾರಂತರ ಕುರಿತು ಬರೆದ ಪುಸ್ತಕಗಳನ್ನು ಕನ್ನಡದಲ್ಲಿ ‘ತಾತನ ನೆನಪು’ ಎಂದೂ ಕರೆಯಬಹುದು. ಈ ಪುಸ್ತಕವು ಇಂಗ್ಲಿಷ್‌ ನಲ್ಲಿರುವು ದರಿಂದಾಗಿ, ಹೆಚ್ಚು ಕನ್ನಡಿಗ ಓದುಗರ ಗಮನ, ಮನ ಸೆಳೆದಿಲ್ಲ ಎನ್ನಬಹುದೇನೊ. ‘ಗ್ರೋವಿಂಗ್ ಅಪ್ ಕಾರಂತ’ ಈ ಪುಸ್ತಕವನ್ನು ಕೆ.ಉಲ್ಲಾಸ ಕಾರಂತ, ಮಾಳವಿಕಾ ಕಪೂರ್ ಮತ್ತು ಕ್ಷಮಾ ರಾವ್ ಒಟ್ಟಾಗಿ ಬರೆದು, ರೂಪಿಸಿದ್ದಾರೆ. ಇಲ್ಲಿ ಮಾಳವಿಕಾ ಕಪೂರ್ ಮತ್ತು ಕ್ಷಮಾ ರಾವ್ ಅವರ  ಅಪರೂಪದ ಬರಹಗಳಿದ್ದು, ಪುಸ್ತಕ ಹೆಚ್ಚಿನ ಭಾಗದಲ್ಲಿ ಉಲ್ಲಾಸ ಕಾರಂತರ ಬರಹಗಳೇ ಇವೆ.

ವೆಸ್ಟ್‌ಲ್ಯಾಂಡ್ ಸಂಸ್ಥೆಯು 2021ರಲ್ಲಿ ಪ್ರಕಟಿಸಿದ ಈ ಅಪರೂಪದ ಗ್ರಂಥದಲ್ಲಿ ಅಡಕಗೊಂಡಿರುವ ವಿಶಿಷ್ಟ, ಅಪರೂಪದ ಫೊಟೋಗಳು ಪುಸ್ತಕದ ಮೌಲ್ಯವನ್ನ ಹೆಚ್ಚಿಸಿವೆ. ಹಾಗೆ ನೋಡಿದರೆ, ಕನ್ನಡಿಗರಿಗೆ ಕಾರಂತರ ಬದುಕು ಒಂದು ತೆರೆದ ಪುಸ್ತಕವೇ ಸರಿ. ಶಿವರಾಮ ಕಾರಂತರು ತಾವೇ ಸ್ವತಃ ಮೂರು ಆತ್ಮಕಥೆಗಳನ್ನು ಬರೆದಿದ್ದಾರೆ! ಇದೂ ಸಹ ಒಂದು ವಿಶಿಷ್ಟ ದಾಖಲೆ! ಹುಚ್ಚು ಮನಸ್ಸಿನ ಹತ್ತು ಮುಖಗಳು, ಸ್ಮೃತಿ ಪಟಲದಿಂದ ಮತ್ತು ಅಳಿದುಳಿದ ನೆನಪುಗಳು – ಈ ಮೂರು ಗ್ರಂಥ ಗಳಲ್ಲಿ ಕಾರಂತರು ತಮ್ಮ ಬದುಕಿನ ಬಹಳಷ್ಟು ವಿಚಾರಗಳನ್ನು ಮುಕ್ತವಾಗಿ ಬರೆದುಕೊಂಡಿದ್ದಾರೆ.

1948ರಷ್ಟು ಮುಂಚೆಯೇ ಕಾರಂತರು ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಬರೆದಿದ್ದರು! ನಂತರ ಸ್ಮೃತಿ ಪಟಲದಿಂದ 1977-79 ಮತ್ತು ಅಳಿದುಳಿದ ನೆನಪುಗಳು 1995ರಲ್ಲಿ ಪ್ರಕಟಗೊಂಡವು. ಈ ನಡುವೆ, ಅವರ ಮೊದಲ ಆತ್ಮಕಥೆ  ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಇದನ್ನು ಅವರೇ ಇನ್ನಷ್ಟು ನೆನಪುಗಳನ್ನು ಸೇರಿಸಿ, ಆ ಪುಸ್ತಕದ ಗಾತ್ರವನ್ನು ವೃದ್ಧಿಸಿದರು. ಕಾರಂತರ ಮೂರು ಆತ್ಮಕಥೆಗಳು ಒಟ್ಟಾಗಿ ಸೇರಿದರೆ, ಗಾತ್ರದಲ್ಲಿ, ಅನುಭವದಲ್ಲಿ ಬಹಳ ವಿಶಿಷ್ಟ ಎಂದೇ ಹೇಳಬಹುದು.

ಶಿವರಾಮ ಕಾರಂತರನ್ನು ‘ಕಡಲ ತಡಿಯ ಭಾರ್ಗವ’ ಎಂದು ಕರೆದಿದ್ದುಂಟು; ಅವರ ನಿಷ್ಠುರ, ಖಚಿತ ಮಾತುಗಳನ್ನು ಕಂಡು ಆ ರೀತಿ ಕರೆದಿರಬಹುದು. ಆದರೆ, ಅವರು ಅದಕ್ಕಿಂತ ಸಾಕಷ್ಟು ಭಿನ್ನ ಮತ್ತು ಉನ್ನತ ಎಂಬುದು ಸ್ಪಷ್ಟ. ಅವರು ನೃತ್ಯ ಕಲಾವಿ ದರು, ಚಿತ್ರ ಕಲಾವಿದರು, ಕಾದಂಬರಿಕಾರರು, ಪತ್ರಕರ್ತರು, ವಿಜ್ಞಾನ ಲೇಖಕ, ಪರಿಸರ ಹೋರಾಟಗಾರ, ಅನುವಾದಕ, ಮಕ್ಕಳ ಸಾಹಿತಿ, ನಾಟಕಕಾರ, ಸಮಾಜ ಸುಧಾರಕ, ವೇಶ್ಯಾ ವಿವಾಹ ಪ್ರತಿಪಾದಕ, ಯಕ್ಷಗಾನ ಸಂಶೋ ಧಕ, ಯಕ್ಷಗಾನ ಕಲಾವಿದ, ಯಕ್ಷಗಾನ ತರಬೇತುಗಾರ, ಬ್ಯಾಲೆ ಸಂಶೋಧಕ, ಚುನಾವಣೆಗಳಲ್ಲಿ ಸ್ಪರ್ಧಿಸುವ ಮೂಲಕ ರಾಜಕಾರಣಿ, ಸ್ವಾತಂತ್ರ್ಯ ಹೋರಾಟ ಗಾರ, ಉದ್ಯಮಿ, ಪ್ರಕಾಶಕ .. ಹೀಗೆ ಅವರ ಜೀವನದ ಮತ್ತು ಪ್ರಯೋಗಗಳ ವ್ಯಾಪ್ತಿ ವಿಸ್ತಾರ ವಾದದ್ದು.

ಅವರ ಮೂರು ಆತ್ಮಕಥೆಗಳನ್ನು ಓದುವಮೂಲಕ ಅವರ ಬದುಕಿನ ಪರಿಚಯವನ್ನು ಮಾಡಿಕೊಳ್ಳಲು ಸಾಧ್ಯ; ಅವುಗಳ ಜತೆ, ಅವರ ಮೂವರು ಮಕ್ಕಳು ತಮ್ಮ ತಂದೆಯನ್ನು ನೋಡಿದ ರೀತಿಯು ‘ಗ್ರೋವಿಂಗ್ ಅಪ್ ಕಾರಂತ್’ನಲ್ಲಿ ತೆರೆದುಕೊಂಡಿದ್ದು, ಕಾರಂತರ ಬದುಕನ್ನು ಇನ್ನಷ್ಟು ಆಪ್ತವಾಗಿ, ವಾಸ್ತವಕ್ಕೆ ಹತ್ತಿರವಾಗಿ ಗ್ರಹಿಸಲು ಸಾಧ್ಯವಾಗಿದೆ. ಶಿವರಾಮ ಕಾರಂತರಿಗೆ ನಾಲ್ವರು ಮಕ್ಕಳು; ಅವರ ಪೈಕಿ ಹರ್ಷ 1960ರ ದಶಕದಲ್ಲೇ ಆರೋಗ್ಯದ ಸಮಸ್ಯೆಯಿಂದಾಗಿ ತೀರಿಕೊಂಡರು. ಅವರ
ಹೆಸರಿನಲ್ಲಿ ಕಾರಂತರು ‘ಹರ್ಷ ಪ್ರಕಟಣಾಲಯ’ ತೆರೆದು, ತಮ್ಮ ಪುಸ್ತಕಗಳನ್ನು ತಾವೇ ಮುದ್ರಿಸಿ, ಪ್ರಕಟಿಸಿದ್ದೂ ಇದೆ. ಆ ಸಂದರ್ಭಗಳಲ್ಲಿ , ಲಾರಿಯಲ್ಲಿ ಮುದ್ರಣಕ್ಕೆ ಅಗತ್ಯ ಎನಿಸುವ ಕಾಗದವು ಪುತ್ತೂರಿಗೆ, ಅಂದರೆ ಕಾರಂತರು ಆಗ ವಾಸಿಸಿದ್ದ
ಸ್ಥಳಕ್ಕೆ ಬಂದಾಗ, ಮನೆಯವರೂ ಸೇರಿದಂತೆ ಎಲ್ಲರಿಗೂ ಅಚ್ಚರಿ. ಆದರೆ ಕಾರಂತರ ಸಾಹಸಗಳಿಗೆ ಮಿತಿಯೇ ಇಲ್ಲ; ಸಾಕಷ್ಟು ಸಾಲ ಮಾಡಿ ತಮ್ಮ ಪುಸ್ತಕಗಳನ್ನು, ವಿಜ್ಞಾನ ಪ್ರಪಂಚ ಎಂಬ ಜ್ಞಾನಕೋಶಗಳ ಸಂಪುಟಗಳನ್ನು ಮುದ್ರಿಸುತ್ತಿದ್ದರು.

ಪುಸ್ತಕ ಪ್ರಕಟಣೆಗಾಗಿ ಹಣ ಸಂಪಾದಿಸಲು, ಕಾರಂತರು ಮರದ ಕಾರ್ಖಾನೆಯನ್ನೂ ನಡೆಸುತ್ತಿದ್ದರು. ನಮ್ಮ ನಾಡಿನ ಹಲವು
ಪ್ರಖ್ಯಾತ ಸಾಹಿತಿಗಳಿಗೆ ಆದಾಯ ಮೂಲವಿತ್ತು; ಆದರೆ, ಕಾರಂತರಿಗೆ ನಿಶ್ಚಿತ ಆದಾಯ ಮೂಲವಿರಲಿಲ್ಲ. ಅವರ ಹಿರಿಯರು ಕುಂದಾಪುರದ ಕೋಟದಲ್ಲಿ ಶ್ರೀಮಂತರಾಗಿದ್ದರೂ, ಕಾರಂತರ ಅಜ್ಜನವರು ‘ರಸವಿದ್ಯೆ’ಯ ಮೋಹಕ್ಕೆ ಬಿದ್ದು, ತಾಮ್ರವನ್ನು ಚಿನ್ನ ಮಾಡಲೆಂದು ಸಾಕಷ್ಟು ಆಸ್ತಿಯನ್ನು ಕರಗಿಸಿದ್ದರಿಂದಾಗಿ, ಕಾರಂತರ ತಂದೆಯ ಕಾಲಕ್ಕೆ ಬಡವರಾಗಿದ್ದರು ಎಂಬ ವಿವರ ಈ ಪುಸ್ತಕದಲ್ಲಿ ಲಭ್ಯ.

ತಮ್ಮ ಸಹೋದರರಂತೆ, ಕೆಲವು ಸಹಪಾಠಿಗಳಂತೆ ಕಾರಂತರು ಹೈಸ್ಕೂಲು ಶಿಕ್ಷಣಕ್ಕೆ ಸೇರಿಕೊಂಡರೂ, ಅದರಲ್ಲಿ ಸ್ವಾರಸ್ಯ ವನ್ನು ಕಾಣದೇ ಪಠ್ಯ ಕ್ರಮವನ್ನು ತೊರೆದು, ಬ್ರಿಟಿಷರ ವಿರುದ್ಧ ಹೋರಾಟದ ಹಾದಿ ಹಿಡಿದರು. ಅದಕ್ಕೆ ಗಾಂಧೀಜಿ ಯವರೇ ಸೂರ್ತಿ; ಆದರೆ ಗಾಂಧೀಜಿಯವರೊಂದಿಗೆ ಪತ್ರವ್ಯವಹಾರ ನಡೆಸಿ, ಭ್ರಮನಿರಸನಗೊಂಡ ನಂತರ, ತಮ್ಮದೇ ಹಾದಿ ಹಿಡಿದರು.

ಕಾರಂತರನ್ನು ಹತ್ತಿರದಿಂದ ನೋಡಿದ ಕೆ.ಉಲ್ಲಾಸ ಕಾರಂತರು, ತಮ್ಮ ಇಲ್ಲಿನ ಬರಹಗಳಲ್ಲಿ ಕಾರಂತರ ಕುರಿತು ಹಲವು ಒಳನೋಟಗಳನ್ನು ನೀಡಿರುವುದು ವಿಶೇಷ. ಇದುವರೆಗೆ ನಾವು ಅರಿಯದ ಕಾರಂತರ ಕೆಲವು ಮುಖಗಳನ್ನು, ‘ಹುಚ್ಚು’
ಗಳನ್ನು, ಅವತಾರಗಳನ್ನು ಇಲ್ಲಿನ ಬರಹಗಳಲ್ಲಿ ಗುರುತಿಸಲು ಸಾಧ್ಯ. ಪರಿಸರ ರಕ್ಷಣೆಯ ಕುರಿತು ಕಾರಂತರು ಹೋರಾಡಿದ್ದು, ಕೈಗಾ ಅಣು ಸ್ಥಾವರ ವಿರೋಧಿ ಹೋರಾಟದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು, ಹೋರಾಟದ ಜಾಥಾದಲ್ಲಿ
ಪಾಲ್ಗೊಂಡದ್ದು, ವಿವಿಧ ಪ್ರದೇಶಗಳಲ್ಲಿ ಭಾಷಣ ಮಾಡಿದ್ದು, ಪರಿಸರ ಉಳಿಸುವ ಪ್ರಾಮುಖ್ಯತೆ ಯನ್ನು ಸರಕಾರಕ್ಕೆ, ಜನರಿಗೆ ತಿಳಿಸಲು, ತಾವೇ ಉತ್ತರ ಕನ್ನಡದಲ್ಲಿ ಚುನಾವಣೆಗೆ ನಿಂತದ್ದು ಮೊದಲಾದವೆಲ್ಲವೂ ಸಾಕಷ್ಟು ಪ್ರಸಿದ್ಧ.

ಆದರೆ, ಪರಿಸರವಾದದ ಕುರಿತು ಕಾರಂತರು ವಿಭಿನ್ನ ಕಾಲಘಟ್ಟಗಳಲ್ಲಿ ಎರಡು ರೀತಿಯ ನಿಲುವು ತಳೆದದ್ದನ್ನು ಕೆ. ಉಲ್ಲಾಸ
ಕಾರಂತರು ಗುರುತಿಸಿ, ಇಲ್ಲಿ ದಾಖಲಿಸಿದ್ದಾರೆ. ಮೊದಲಿನಿಂದಲೂ ಕಾರಂತರಿಗೆ ಕೈಗಾರಿಕೆಗಳ ಕುರಿತು ಒಲವು, ಕೈಗಾರಿಕೆ ಗಳಿಂದ ದೇಶದ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿದಿದ್ದವರು ಅವರು; ದೊಡ್ಡ ಕೈಗಾರಿಕೆಗಳ ವಿರುದ್ಧ ಮತ್ತು ಗುಡಿ ಕೈಗಾರಿಕೆಗಳಿಗೆ ಅತಿಯಾದ ಪ್ರಾಮುಖ್ಯತೆ ನೀಡಬೇಕೆಂಬ ಮಹಾತ್ಮಾ ಗಾಂಧೀಜಿಯವರ ನಿಲುವನ್ನು ಕಾರಂತರು ಒಪ್ಪುತ್ತಿರಲಿಲ್ಲ.

1955ರ ಸಮಯದಲ್ಲಿ ಪ್ರಕಟಗೊಂಡ ‘ವಿಜ್ಞಾನ ಪ್ರಪಂಚ’ದಲ್ಲಿ ಅಣು ವಿದ್ಯುತ್‌ನಿಂದ ದೊರೆಯುವ ಲಾಭಗದ ಕುರಿತು
ಬರೆದಿದ್ದರು. ಆದರೆ, 1980ರ ದಶಕದಲ್ಲಿ ಕೈಗಾಅಣುವಿದ್ಯುತ್ ಯೋಜನೆಯನ್ನು ಬಲವಾಗಿ ವಿರೋಧಿಸಿದವರಲ್ಲಿ ಕಾರಂತರು ಪ್ರಮುಖರು. ಈ ವೈರುಧ್ಯವನ್ನು ಕೆ. ಉಲ್ಲಾಸ ಕಾರಂತರು ಇಲ್ಲಿ ದಾಖಲಿಸಿದ್ದು, ಶಿವರಾಮ ಕಾರಂತರ ನಿಲುವಿನಲ್ಲಾದ ಬದಲಾವಣೆಯನ್ನು ಗುರುತಿಸಿದ್ದಾರೆ. ಉತ್ತರ ಕನ್ನಡದಿಂದ ಚುನಾವಣೆಗೆ ಕಾರಂತರು ಸ್ಪರ್ಧಿಸಿದ್ದರೂ, ಚುನಾವಣಾ ಪ್ರಚಾರದ ಸಮಯದಲ್ಲಿ ಅಮೆರಿಕಕ್ಕೆ ಹೋಗಿದ್ದರಿಂದ, ಅವರ ಪ್ರಚಾರವು ಅಬ್ಬರವನ್ನು ಕಳೆದುಕೊಂಡಿದ್ದು ನಿಜ; ಆದರೆ ಇದರಿಂದ ನಷ್ಟಕ್ಕೆ ಒಳಗಾದವರು ಅನಂತ್‌ನಾಗ್!

ಜನತಾಪಕ್ಷದಿಂದ ಸ್ಪರ್ಧಿಸಿದ್ದ ಅನಂತ್ ನಾಗ್ ಅವರಿಗೆ ಬೀಳಬೇಕಾಗಿದ್ದ ಕೆಲವು ಸಾವಿರ ಮತಗಳನ್ನು ಕಾರಂತರು (ಪಕ್ಷೇತರರು) ಸೆಳೆದದ್ದರಿಂದಾಗಿ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರು. ಶಿವರಾಮ ಕಾರಂತರು ತಮ್ಮ ಸಂಪರ್ಕಕ್ಕೆ ಬರುವ
ಜನರನ್ನು ಸರಿಯಾಗಿ ಅಳೆಯುವಲ್ಲಿ ಪರಿಣಿತರಲ್ಲ ಎಂದು ಈ ಪುಸ್ತಕದಲ್ಲಿ ದಾಖಲಿಸಿರುವ ಉಲ್ಲಾಸ ಕಾರಂತರು, ಕಾರಂತರ ಈ ಸ್ವಭಾವವನ್ನು ಹಲವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದಿದ್ದಾರೆ. (ಪುಟ 140) ಪರಿಸರವಾದದಲ್ಲೂ ಕಾರಂತ ರನ್ನು ಈ ರೀತಿಯ ಕೆಲವು ಹೋರಾಟಗಳಿಗೆ ಕೆಲವರು ಸೆಳೆದಿರಬಹುದು ಎಂದು ಇಲ್ಲಿ ಹೇಳಲಾಗಿದೆ.

‘ಗ್ರೋಯಿಂಗ್ ಅಪ್ ಕಾರಂತ’ದಲ್ಲಿ ದಾಖಲೆಗೊಂಡ ಹಲವು ವಿಚಾರಗಳಲ್ಲಿ ಕಾರಂತರು ಮತ್ತು ಲೀಲಾ ಕಾರಂತರ ಬಾಂಧವ್ಯ ಮತ್ತು ಮಕ್ಕಳೊಂದಿಗೆ ತಾಯಿಯ ಒಡನಾಟಗಳು ಮುಖ್ಯ ಎನಿಸುತ್ತವೆ. ಯುವ ಲೇಖಕರಾಗಿದ್ದ, ನೃತ್ಯ ಕಲಾವಿದರಾಗಿದ್ದ, ಅದಾಗಲೇ ನಾನಾ ರೀತಿಯ ಉತ್ತಮ ‘ಹುಚ್ಚು’ಗಳಿಗೆ ಒಳಗಾಗಿದ್ದ ಕಾರಂತರನ್ನು ಮದುವೆಯಾಗಲು ಬಯಸಿ ಬಂದವರು ಲೀಲಾ ಅವರು. ಆ ಕಾಲದಲ್ಲಿ ಅವರದ್ದು ಅಂತರ್ಜಾತೀಯ ವಿವಾಹ; ಎಲ್ಲೆಡೆ ಸುದ್ದಿ ಮಾಡಿದ್ದ ಆ ವಿವಾಹದಿಂದಾಗಿ, ಕಾರಂತರು ಖ್ಯಾತರೂ ಆದರು ಮತ್ತು ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಸುದ್ದಿಯೂ ಆದರು. ಆದರೆ, ಅವರ ದಾಂಪತ್ಯವು ಕೊನೆ ಕೊನೆಗೆ ಅಷ್ಟೊಂದು ಸುಖಮಯವಾಗಿರಲಿಲ್ಲ ಎಂಬುದನ್ನು ಮಕ್ಕಳು ಈ ಪುಸ್ತಕದಲ್ಲಿ ದಾಖಲಿಸು ತ್ತಾರೆ. ಮಾನಸಿಕ ಸ್ಥಿತಿಯ ಏರುಪೇರುಗಳಿಗೆ ಸಿಲುಕಿಕೊಳ್ಳುತ್ತಿದ್ದ ಲೀಲಾ ಕಾರಂತರಿಂದಾಗಿ, ಕಾರಂತರೂ ಒತ್ತಡಗಳಿಗೆ ಸಿಲುಕಿದ್ದರು ಎಂದು ಅವರ ಮಕ್ಕಳು ಇಲ್ಲಿ ದಾಖಲಿಸಿ, ವಸ್ತು ಸ್ಥಿತಿಯನ್ನು ಬಿಡಿಸಿಟ್ಟಿದ್ದು ಗಮನಾರ್ಹ.

ಕಾರಂತರ ಸಾಹಿತ್ಯವನ್ನು ಓದಿಕೊಂಡವರು, ಕಾರಂತರ ಅಭಿ ಮಾನಿಗಳು, ಅವರನ್ನು ಬೇರೊಂದೇ ಉನ್ನತ ಸ್ಥಾನದಲ್ಲಿರಿ ಸಿದ್ದು, ಈ ಪುಸ್ತಕದ ಕೆಲವು ವಿವರಗಳನ್ನು ಓದಿದಾಗ, ಸಣ್ಣ ಗೊಂದಲಕ್ಕೆ ಒಳಗಾದರೆ ಅಚ್ಚರಿಯಿಲ್ಲ. ಕಾರಂತರ ಕೃತಿಗಳನ್ನು ಟೈಪ್ ಮಾಡಲು, ಕಾರಂತರು ಡಿಕ್ಟೇಟ್ ಮಾಡಿದ್ದನ್ನು ಬರೆದುಕೊಂಡು ಪ್ರಕಟಣೆಗೆ ಸಿದ್ಧಗೊಳಿಸಲು ಇವರ ಕುಟುಂಬವನ್ನು
ಪ್ರವೇಶಿಸಿದ ಸಹಾಯಕಿಯು, ಲೀಲಾ ಕಾರಂತರ ಉದ್ವೇಗ, ಒತ್ತಡಗಳಿಗೂ ಕಾರಣರಾದರು ಎಂದು ಈ ಪುಸ್ತಕದಲ್ಲಿ ದಾಖಲಾ ಗಿದೆ. ಅವರ ಹೆಸರನ್ನು ಹೇಳದೇ, ಇನಿಷಿಯಲ್ ಮೂಲಕ ಮಾತ್ರ ಗುರುತಿಸಿದ ಆ ಸಹಾಯಕಿಯ ಕುರಿತು ಆರೆಂಟು
ಪುಟಗಳಲ್ಲಿ ಹರಡಿರುವ ನೇರ, ದಿಟ್ಟ ವಿಚಾರಗಳು ಕೆಲವು ಅಮಾಯಕ ಓದುಗರನ್ನು ಅಚ್ಚರಿಗೆ ಕೆಡವಲೂಬಹುದು.

ಬಹುಶಃ ಆ ಆರೆಂಟು ಪುಟಗಳ ನೇರವಾದ ನಿರೂಪಣೆಯನ್ನು, ಮಕ್ಕಳು ಗ್ರಹಿಸಿದ ಸತ್ಯದ ಇನ್ನೊಂದು ಮುಖ ಎಂದೇ ಓದುಗರು ಸ್ವೀಕರಿಸಬೇಕಾಗಿದೆ. ಆ ಸಹಾಯಕಿಯು ಕಾರಂತರ ಬರಹಗಳನ್ನು ಸಂಪಾದಿಸಿ, ಸಿದ್ಧಪಡಿಸಿ, ಪ್ರಕಟಿಸುವಲ್ಲಿ ಅಪಾರ ಶ್ರಮ ವಹಿಸಿದ್ದನ್ನು, ಕಾರಂತರ ಪ್ರಮುಖ ಕೃತಿಗಳು ಎಲ್ಲೆಡೆ ಲಭ್ಯವಾಗಲು ಸಹಕರಿಸಿದ್ದನ್ನು, ಆ ಮೂಲಕ ಕಾರಂತರು ಕನ್ನಡದ ಓದುಗರಿಗೆ ಸುಲಭವಾಗಿ ದಕ್ಕುವಂತಾಗಿದ್ದನ್ನು ಕನ್ನಡ ಸಾರಸ್ವರ ಲೋಕ ಗೌರವದಿಂದಲೇ ಗುರುತಿಸಿದೆ  ಎಂಬು ದನ್ನು ನಾವಿಲ್ಲಿ ಗಮನಿಸಬೇಕು.

ಇಡೀ ಪುಸ್ತಕದಲ್ಲಿ ಪ್ರಮುಖ ಮತ್ತು ಇಷ್ಟವಾಗುವ ಹಲವು ಭಾಗಗಳಿವೆ. ಅವುಗಳಲ್ಲಿ ಒಂದು ಕಾರಂತರ ‘ಬಾಲವನ’. ಪುತ್ತೂರು ಸನಿಹದ ಬಾಲವನದಲ್ಲೇ ಅವರ ಮಕ್ಕಳು ಜನಿಸಿದ್ದರಿಂದಾಗಿ, ಅಲ್ಲಿನ ಆಪ್ತ ಮತ್ತು ವಿಶಿಷ್ಟ ವಿವರಗಳು ಈ ಪುಸ್ತಕದಲ್ಲಿ
ದಾಖಲಾಗಿವೆ. ಕಾರಂತರ ಹಲವು ಒಡನಾಡಿಗಳು, ಕಾರಂತರ ಜೀವನದ ಮೇಲೆ ಪ್ರಭಾವ ಬೀರಿದ ಹಲವು ಪ್ರಮುಖ ವ್ಯಕ್ತಿಗಳ ಕುರಿತು ಬೇರೆಲ್ಲೂ ದೊರಕದ ಒಳನೋಟಗಳು ಇಲ್ಲಿವೆ. ಕಾರ್ನಾಡು ಸದಾಶಿವರಾವ್‌ರಂತಹ ಹಲವು ಸಾರಸ್ವತ ಪಂಗಡದ
ಪ್ರತಿಭಾವಂತರು ಕಾರಂತರ ಬದುಕನ್ನು ರೂಪಿಸುವಲ್ಲಿ ಬಹಳಷ್ಟು ಪ್ರಭಾವ ಬೀರಿದ್ದರು ಮತ್ತು ಕಾರಂತರಿಗೆ ಅವರೆಲ್ಲರೂ ಸಾಕಷ್ಟು ಸಹಾಯ ಮಾಡಿದ್ದರು ಎಂಬ ವಿಚಾರವು ಇಲ್ಲಿ ಅಭಿಮಾನದಿಂದ ದಾಖಲಾಗಿದೆ. ಬಾಲವನದ ಸುತ್ತ ಮುತ್ತ ಕಾಡು ಪ್ರದೇಶವಿದ್ದು, ಅಲ್ಲಿನ ಪ್ರಕೃತಿಯು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿತು ಮತ್ತು ಆ ಪ್ರಕೃತಿಯನ್ನು ನೋಡಲು, ಅಧ್ಯಯನ ಮಾಡಲು ಕಾರಂತರು ತಮ್ಮ ಮಕ್ಕಳಿಗೆ ಅದೆಷ್ಟು ಸ್ವಾತಂತ್ರ್ಯ ನೀಡಿದ್ದರು ಎಂದು ಮಕ್ಕಳು ಬರೆದಿಕೊಂಡಿರುವುದು ಕುತೂಹಲ ಕಾರಿ.

ಬಾಲವನದ ಪಕ್ಕದಲ್ಲೇ ಚಿರತೆ ಹಾದು ಹೋಗಿದ್ದನ್ನು ಸಹ ಮಕ್ಕಳು ನೋಡಿದ್ದರಂತೆ! ಪುಸ್ತಕ ಪ್ರಕಟಣೆಯಲ್ಲಿ, ನೃತ್ಯದಲ್ಲಿ, ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ, ಕೌಟುಂಬಿಕ ನಿರ್ಣಯ ತೆಗೆದುಕೊಳ್ಳುವಲ್ಲಿ ಕಾರಂತರು ದಿಟ್ಟ ನಿಲುವಿಗೆ ಸದಾ ಬದ್ಧರು; ಕುಟುಂಬ ಮತ್ತು ಸಂಸಾರದ ವಿಚಾರ ದಲ್ಲೂ ಇಂತಹದ್ದೇ ನಡೆ, ಅದೇ ಕಾಠಿಣ್ಯ. ಮಕ್ಕಳು ಬೇರೆ ಊರುಗಳಲ್ಲಿ ಓದುತ್ತಿರು ವಾಗ, ಅವರಲ್ಲಿ ಶಿಸ್ತು ಕಡಿಮೆ ಆಯಿತು ಎಂದು ಯಾರಾದರೂ ಹೇಳಿದರೆ, ತಕ್ಷಣ ಟೆಲಿಗ್ರಾಂ ಕಳಿಸಿ, ಮಕ್ಕಳನ್ನು ಕರೆಸಿ, ಬುದ್ಧಿ ಹೇಳುತ್ತಿದ್ದರಂತೆ. ನಂತರದ ವರ್ಷಗಳಲ್ಲಿ ಕಾರಂತರು ಪುತ್ತೂರು ತೊರೆದು, ಕೋಟ ಸನಿಹದ ಸಾಲಿಗ್ರಾಮಕ್ಕೆ ಬಂದರು; ಇಲ್ಲೇ ನಿಂತರು; ತಮ್ಮ ಕೊನೆಗಾಲವನ್ನು ಅಲ್ಲೇ ಕಳೆದರು.

ತಮ್ಮ ‘ತಾತ’ನ ಕುರಿತು ಮೂವರು ಮಕ್ಕಳು ಬರೆದಿರುವ ಈ ಪುಸ್ತಕವು ಹಲವು ಒಳನೋಟಗಳನ್ನು ಹೊಂದಿರುವ ವಿಶಿಷ್ಟ ಪುಸ್ತಕ. ’’That was my Tata: the perennially angry man who I feared, admired and loved, all at the same time’ ಎಂದು ಉಲ್ಲಾಸ ಕಾರಂತರು ಇಲ್ಲಿ ಬರೆದಿದ್ದಾರೆ. ಕಾರಂತರು ಆಗಿನ ಕಾಲದ ‘ಆಂಗ್ರಿ ಯಂಗ್ ಮ್ಯಾನ್!’ ಜತೆಗೆ, ಕೊನೆಯ ತನಕವೂ ಅವರು ತಮ್ಮ ಪ್ರಖರ ಸೃಜನಶೀಲತೆಯನ್ನು ಉಳಿಸಿಕೊಂಡಿದ್ದು, ಅದೇ ವೇಳೆಯಲ್ಲಿ ‘ಆಂಗ್ರಿ ಮ್ಯಾನ್’ ಮನೋಭಾವವನ್ನು ಕಳೆದುಕೊಳ್ಳಲೇ ಇಲ್ಲ! ಅದಕ್ಕೇ ತಾನೆ, ಅವರನ್ನು ಪ್ರೀತಿಯಿಂದ ‘ಖಾರಂತರು’ ಎಂದು ಒಮ್ಮೊಮ್ಮೆ ಕರೆಯುವುದು!

error: Content is protected !!