Saturday, 7th September 2024

18ನೇ ಶಸ್ತ್ರಚಿಕಿತ್ಸೆಯಲ್ಲಿ ಜನಿಸಿದ ಗಂಡುಮಗು !

ಶಶಾಂಕಣ

shashidhara.halady@gmail.com

ಈ ಪುಸ್ತಕದಲ್ಲಿರುವ ಒಂದೆರಡು ಕಥನಗಳನ್ನು ಓದಿದ ಓದುಗರು ಬೆರಗಾಗಬಹುದು, ವಿಸ್ಮಯ ಪಡಬಹುದು, ಹೀಗೂ ಸಾಧ್ಯವೆ ಎಂದು ಮೂಗಿನ
ಮೇಲೆ ಬೆರಳಿಡಬಹುದು. ದೀರ್ಘಕಾಲದ ಆಧುನಿಕ ಚಿಕಿತ್ಸೆಯಿಂದ ಫಲಿತಾಂಶ ಸಾಧ್ಯವಿಲ್ಲ ಎಂದು ಕೈಚೆಲ್ಲಿದ ಪ್ರಕರಣವೊಂದರಲ್ಲಿ, ಯಶಸ್ಸನ್ನು ಸಾಧಿಸಿದ ಸೂಕ್ಷ್ಮ ವಿವರಗಳನ್ನೊಳಗೊಂಡ ಒಂದು ಲೇಖನವಂತೂ, ಓದುಗರನ್ನು ಅಚ್ಚರಿಯ ಕಡಲಲ್ಲಿ ನೂಕ ಬಹುದು. ಈಗಾಗಲೇ ಹದಿನೇಳು ಶಸಚಿಕಿತ್ಸೆಗೆ ಒಳಗಾದ ಒಬ್ಬ ಮಹಿಳೆಯು, ಅದಾಗಲೇ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರೂ, ಇನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆಧುನಿಕ ವೈದ್ಯರು ಹೇಳಿದ ನಂತರ, ಕೊನೆಯದಾಗಿ ಪ್ರಯತ್ನಿಸೋಣ ಎಂದು ಹೋಮಿಯೋಪತಿ ಚಿಕಿತ್ಸೆ ಪಡೆದು, ಒಂದೂವರೆ ವರ್ಷದಲ್ಲಿ ಆ ಚಿಕಿತ್ಸೆ ಯಶಸ್ಸು ಹೊಂದಿದ್ದನ್ನು ಹೇಗೆ ತಾನೆ ಬೇರೆ ರೀತಿಯಲ್ಲಿ ವಿವರಿಸಲು ಸಾಧ್ಯ!

‘ಪವಾಡ’ ಎಂದು ಹೇಳಿಬಿಡಬಹುದು, ಆದರೆ ಇಂದಿನ ಇಪ್ಪತ್ತೊಂದನೆಯ ಶತಮಾನದ ಆಧುನಿಕ ಯುಗದಲ್ಲಿ ‘ಪವಾಡ’ ಎಂಬ ಪದ ಹಿನ್ನೆಲೆಗೆ ಸರಿದಿದೆ; ಬದಲಾಗಿ ಇದು ಅತ್ಯಂತ ವಿಸ್ಮಯ ಗೊಳಿಸುವ ವಿದ್ಯಮಾನ ಎಂದು ಸರಳವಾಗಿ ಹೇಳಲೂ ಬಹುದು. ಇಂತಹ ಅಪರೂಪದ ಚಿಕಿತ್ಸೆ ನೀಡಿದವರು ಡಾ. ಬಿ.ಟಿ. ರುದ್ರೇಶ್ ಅವರು. ಈ ಒಂದು ಪ್ರಕರಣ ಮತ್ತು ಇಂತಹ ಹಲವು ಪ್ರಕರಣಗಳನ್ನು ಹೊಂದಿರುವ ‘ಅಶ್ವಿನಿ ಸ್ಪರ್ಶ’ ಪುಸ್ತಕವನ್ನು ಓದುವ ಅನುಭವವೇ ವಿಶಿಷ್ಟ, ವಿಭಿನ್ನ, ಅನನ್ಯ.

ನಮ್ಮ ನಾಡಿನ ಹೆಸರಾಂತ ವೈದ್ಯರಾದ ಡಾ. ಬಿ.ಟಿ.ರುದ್ರೇಶ್ ಅವರು, ಜತೆಯಲ್ಲೇ ಉತ್ತಮ ಲೇಖಕರೂ ಹೌದು. ಈಗ ತಾನೆ ಅವರು ತಮ್ಮ ಹೊಸ ಪುಸ್ತಕ ‘ಅಶ್ವಿನಿ ಸ್ಪರ್ಷ’ವನ್ನು ಓದುಗರ ಕೈಗಿಟ್ಟದ್ದಾರೆ. ಈ ಪುಸ್ತಕದಲ್ಲಿ ಡಾ. ರುದ್ರೇಶ್ ಅವರು ಬರೆದಿರುವ ಕೆಲವು ಚಿಕಿತ್ಸೆಯ ವಿವರ ಗಳನ್ನು ಮತ್ತು ಫಲಿತಾಂಶವನ್ನು ಓದಿದಾಗ, ಅಚ್ಚರಿ ಪಡುವ ಸರದಿ ಓದುಗರದು. ಈಗಿನ ಆಧುನಿಕ ಯುಗದಲ್ಲಿ, ‘ಹೀಗೂ ಸಾಧ್ಯವೆ’ ಎಂಬಷ್ಟು ಬೆರಗು ಹುಟ್ಟಿಸುವ ಕಥನಗಳು ಈ ಪುಸ್ತಕದಲ್ಲಿವೆ. ತಮ್ಮ ಬಿಡುವಿಲ್ಲದ ವೈದ್ಯ ವೃತ್ತಿಯ ನಡುವೆಯೂ, ರುದ್ರೇಶ್ ಅವರ ಲೇಖನಿಯಿಂದ ಇಷ್ಟೊಂದು ಬರಹ ಗಳು ಮೂಡಿಬರುತ್ತಿವೆ ಎಂಬುದು ಸಹ ಮತ್ತೊಂದು ಬೆರಗು, ವಿಸ್ಮಯ!

ಇಷ್ಟು ಆಕರ್ಷಕವಾಗಿ ಓದಿಸಿಕೊಂಡು ಹೋಗುವ ಬರಹಗಳನ್ನು ರಚಿಸಲು ಅವರಿಗೆ ಸಮಯ ಹೇಗೆ ಸಿಗುತ್ತದೆ ಎಂಬುದು ಮತ್ತೊಂದು ಬೆರಗು.
ಯಶಸ್ವಿ ವ್ಯಕ್ತಿಯೊಬ್ಬರಿಗೆ ಸಮಯದ ಕೊರತೆ ಎಂಬುದು ಇರುವುದಿಲ್ಲ ಎಂಬುದಕ್ಕೆ ಡಾ.ಬಿ.ಟಿ.ರುದ್ರೇಶ್ ಬರೆದಿರುವ ಹೊಸ ಪುಸ್ತಕ ‘ಅಶ್ವಿನಿ
ಸ್ಪರ್ಶ’ವೇ ಸಾಕ್ಷಿ; ಜತೆಗೆ ಅವರ ಲೇಖನಿಯಿಂದ ಈಗಾಗಲೇ ಹೊರಬಂದಿರುವ ಹತ್ತಾರು ಪುಸ್ತಕಗಳೂ ಸಾಕ್ಷಿ.

ಕಳೆದ ವಾರ ಬಿಡುಗಡೆಗೊಂಡು, ಈಗಾಗಲೇ ಹಲವು ಜನರ ಕೈ ಸೇರಿ, ಮನ ಗೆದ್ದಿರುವ ‘ಅಶ್ವಿನಿ ಸ್ಪರ್ಶ’ ಪುಸ್ತಕದಲ್ಲಿ ಎರಡು ಭಾಗಗಳಿವೆ.
ಮೊದಲನೆಯ ಭಾಗದಲ್ಲಿ, ಡಾ. ಬಿ.ಟಿ.ರುದ್ರೇಶ್ ಅವರೇ ಬರೆದಿರುವ, ಸ್ವಾನುಭವದ ವೈದ್ಯಕೀಯ ಪ್ರಕರಣಗಳು, ವೈದ್ಯ ವಿಜ್ಞಾನದ ಕುರಿತ
ಲೇಖನಗಳು, ಹೋಮಿಯೋಪತಿಯ ವೈಶಿಷ್ಟ್ಯ ವನ್ನು ಪೂಚಯಿಸುವ ಬರಹಗಳಿವೆ. ಎರಡನೆಯ ಭಾಗದಲ್ಲಿ, ಡಾ. ಬಿ.ಟಿ.ರುದ್ರೇಶ್ ಅವರ ಯಶಸ್ವಿ
ಚಿಕಿತ್ಸೆಯ ಕುರಿತು, ಅವರ ಪುಸ್ತಕಗಳ ಕುರಿತು, ಅವರ ಬದುಕಿನ ಕುರಿತು ಇತರ ಲೇಖಕರು ಬರೆದಿರುವ ಬರಹಗಳಿವೆ. ಈ ಪುಸ್ತಕದ
ಮೊದಲನೆಯ ಭಾಗವು ಬಹು ಸ್ವಾರಸ್ಯಕರ, ಸಂಗ್ರಹಯೋಗ್ಯ ಮತ್ತು ಜನಸಾಮಾನ್ಯರು ಮತ್ತೆ ಮತ್ತೆ ಓದಿ, ಮನನ ಮಾಡಿಕೊಳ್ಳುವಂತಹ
ಬರಹಗಳನ್ನೊಂಡಿದ್ದು, ಗಮನ ಸೆಳೆಯುತ್ತದೆ.

ಇಲ್ಲಿರುವ ಕೆಲವು ಬರಹಗಳಲ್ಲಿ, ‘ಪವಾಡ’ದ ರೀತಿ ರೋಗಿಗಳು ಗುಣಮುಖರಾದ ಕಥನಗಳೂ ಇವೆ ಮತ್ತು ಇವೆಲ್ಲವೂ ಡಾ. ರುದ್ರೇಶ್ ಅವರ
ಅನುಭವದಲ್ಲಿ ದಾಖಲಾದ ಯಶಸ್ವಿ ಕಥನಗಳು. (ಇಲ್ಲಿ ‘ಪವಾಡ’ ಎಂಬ ಪದವನ್ನು ಎಚ್ಚರಿಕೆಯಿಂದ ಬಳಸಿರುವೆ.) ಅದರಲ್ಲಿ ಒಂದು ಹೀಗಿದೆ.
ಡಾ. ಬಿ.ಟಿ. ರುದ್ರೇಶ್ ಅವರು ಇದುವರೆಗೆ ಸುಮಾರು 20ಲಕ್ಷಕ್ಕೂ ಹೆಚ್ಚಿನ ರೋಗಿಗಳ ತಪಾಸಣೆ ಮಾಡಿದ್ದಾರೆ. ಅವುಗಳ ಪೈಕಿ, ಸುಮಾರು
೩,೦೦೦ ದಂಪತಿ ಸಂತಾನಭಾಗ್ಯ ಪಡೆದ ಚಿಕಿತ್ಸೆಯೂ ಸೇರಿದೆ. ಸಾವಿರಾರು ದಂಪತಿ ಇವರ ಬಳಿ ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆ ಪಡೆದು,
ಮಗುವನ್ನು ಪಡೆದ ಸುದ್ದಿಯು ಎಲ್ಲೆಡೆ ಪ್ರಚುರ ಗೊಂಡು, ಡಾ. ಬಿ.ಟಿ.ರುದ್ರೇಶ್ ಅವರಿಗೆ ಹೆಸರು ತಂದು ಕೊಟ್ಟ ದಿನಗಳವು.

ಇವರ ಯಶಸ್ಸಿನ ಕಥನವನ್ನು ಕೇಳಿ, 37 ವರ್ಷ ವಯಸ್ಸಿನ ಮಹಿಳೆ ಇವರ ಬಳಿ ಚಿಕಿತ್ಸೆ ಪಡೆಯಲು ಬಂದಿದ್ದರು. ಅವರಿಗೆ ಬೇರೆ ಬೇರೆ ಕಾರಣ ಗಳಿಗಾಗಿ ಈಗಾಗಲೇ ಹದಿನೇಳು ಶಸ ಚಿಕಿತ್ಸೆಗೊಳಗಾಗಿದ್ದವು! ಅವರ ಕುಟುಂಬದಲ್ಲೇ ಹಲವು ವೈದ್ಯರಿದ್ದರು. ಅವರು ಹಲವು ಕಡೆ ಚಿಕಿತ್ಸೆ ಪಡೆದಿದ್ದರೂ ಮಕ್ಕಳಾಗಿರಲಿಲ್ಲ. ಕೊನೆಗೆ, ಡಾ. ರುದ್ರೇಶ್ ಅವರ ಬಳಿ ಬಂದರು. ‘ಯಾವುದು ಕಾಯಿಲೆಗೆ ಕಾರಣವಾಗಿರುತ್ತದೋ ಅದನ್ನೇ ಔಷಧವಾಗಿ ಬಳಸುವುದು ಹೋಮಿಯೋ ಪತಿಯ ಮೂಲತತ್ತ್ವ.’ (ಪುಟ 43.) ಡಾ. ಬಿ.ಟಿ.ರುದ್ರೇಶ್ ಅವರು ಆ ಸವಿವರವಾದ ಲೇಖನದಲ್ಲಿ, ಆ ಮಹಿಳೆಗೆ ತಾನು ಯಾವ ಚಿಕಿತ್ಸೆ ನೀಡಿದೆ ಎಂಬುದನ್ನೂ ವಿವರಿಸಿದ್ದಾರೆ.

ಇವರು ಚಿಕಿತ್ಸೆ ಆರಂಭಿಸಿ ಸುಮಾರು ಒಂದೂವರೆ ವರ್ಷದ ನಂತರ ಆ ಮಹಿಳೆ ಗರ್ಭವತಿಯಾದರು. ನಂತರ ತಮ್ಮ ಜೀವನದ ಹದಿನೆಂಟನೆಯ ಶಸಚಿಕಿತ್ಸೆಗೆ ಒಳಗಾಗಿ, ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದರು! ಈ ಲೇಖನ ಓದಿದಾಗ ಬೆರಗಾಗದೇ ಇರಲು ಹೇಗೆ ತಾನೆ ಸಾಧ್ಯ? ಇದನ್ನು ‘ಪವಾಡ ಸದೃಶ’ ಎಂದು ಖಂಡಿತವಾಗಿಯೂ ಕರೆಯಬಹುದು!

‘ಅಶ್ವಿನಿ ಸ್ಪರ್ಶ’ ಪುಸ್ತಕ ಓದುತ್ತಾ ಹೋದಂತೆ, ಡಾ. ಬಿ.ಟಿ.ರುದ್ರೇಶ್ ಅವರ ಬರೆಯುವ ಶೈಲಿಯ ಕುರಿತು ಸಹ ಅಭಿಮಾನ ಮೂಡುತ್ತದೆ. ಸಾಮಾನ್ಯ ಓದುಗರು ಸುಲಲಿತವಾಗಿ ಓದುವಂತೆ ಬರೆಯುವ ಶೈಲಿ ಅವರಿಗೆ ಕರಗತವಾಗಿದೆ. ಈಗಾಗಲೇ, ಕೋವಿಡ್ 19 ಕುರಿತು ಬೇರೆ ಬೇರೆ ಲೇಖಕರು
ಸಾಕಷ್ಟು ಬರಹಗಳನ್ನು ಬರೆದಿದ್ದರೂ, ಡಾ. ಬಿ.ಟಿ.ರುದ್ರೇಶ್ ಅವರ ಇಲ್ಲಿನ ಒಂದು ಬರಹ ಇನ್ನಷ್ಟು ಕುತೂಹಲಕಾರಿಯಾಗಿ ಓದಿಸಿಕೊಂಡು
ಹೋಗುತ್ತದೆ. ಇದು ಅವರ ಕಥನಕೌಶಲಕ್ಕೆ ಒಂದು ಉದಾಹರಣೆ. ಈ ಲೇಖನದಲ್ಲಿ, ಡಾ. ರುದ್ರೇಶ್ ಅವರು, ಕೋವಿಡ್ 19 ಸೋಂಕಿಗೆ
ಒಳಗಾದವರನ್ನು ಹೋಮಿಯೋಪತಿ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿಸಬಹುದು ಎಂದು ಉದಾಹರಣೆ ಸಹಿತ ಬರೆದಿದ್ದಾರೆ.

ಅವರು ನೀಡುವ ವಿವರಗಳು ರೋಚಕವಾಗಿಯೂ, ವಿಸ್ಮಯಗೊಳಿಸುವಂತೆಯೂ ಇವೆ. ‘ಐವತ್ತೈದು ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು
ತಗುಲಿದೆ. ಮಗಳು ಸ್ವೀಡನ್‌ನಲ್ಲಿದ್ದಾಳೆ. ಬೆಂಗಳೂರು ನಗರದ ಪ್ರಸಿದ್ಧ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ
ಶ್ವಾಸಕೋಶಗಳು ನಿಷ್ಕ್ರಿಯಗೊಂಡವು. ಐಸಿಯು ಗೆ ಹಾಕಿ, ವೆಂಟಿಲೇಟರ್ ಮೇಲೆಯೇ 51 ದಿನಗಳು ಕಳೆದರೂ ವೆಂಟಿಲೇಟರ್ ತೆಗೆಯಲಿಲ್ಲ. ಕೊನೆಗೆ ಅಲ್ಲಿನ ವೈದ್ಯರು ಕೈಚೆಲ್ಲಿದರು. ಎಲ್ಲ ತರಹದ ಚಿಕಿತ್ಸೆಗಳು ಮುಗಿದ ನಂತರ, ನನ್ನ ಸ್ನೇಹಿತರೊಬ್ಬರು ಹೋಮಿಯೋಪತಿ ವೈದ್ಯರೊಬ್ಬ ರಿದ್ದಾರೆ ಅವರಲ್ಲಿ ಚಿಕಿತ್ಸೆ ಮಾಡಿಸಬಹುದಾ? ಎಂದು ಕೇಳಿದರು. ಅದಕ್ಕೆ ಅವರು ಸಮ್ಮತಿಸಿದರು.

ಆಗ ನಾನು ವೈದ್ಯರ ಅನುಮತಿ ಅಗತ್ಯ ಎಂದೆ. ಅದಕ್ಕವರು ನಾವೀಗಾಗಲೇ ಕೈಬಿಟ್ಟಿದ್ದೇವೆ, ಲಂಗ್ಸ್ -ಬ್ರೋಸಿಸ್ ಆಗಿದೆ (ನಾರು ನಾರಿನಂತೆ
ಬೆಳೆಯುವುದು). ದೇವರು, ಹರಕೆ ಸೇರಿದಂತೆ ನೀವು ಯಾವುದೇ ಚಿಕಿತ್ಸೆ ಮಾಡಿಸಬಹುದು ಎಂದಿದ್ದರು. ನಾನು ಪ್ರಯತ್ನಿಸಿ ವಿ-ಲವಾದರೆ
ನನಗೂ ನನ್ನ ಹೋಮಿಯೋಪತಿ ಪದ್ಧತಿಗೂ ಕೆಟ್ಟ ಹೆಸರು ಬರುತ್ತದೆ. ಯಶಸ್ವಿಯಾದರೆ ರೋಗಿ ಮತ್ತು ಅವರ ಬಳಗದವರು, ಮಿಗಿಲಾಗಿ ಆ
ಆಸ್ಪತ್ರೆಯವರು ಅದರ ಫಲಿತವನ್ನು ನನಗೆ ಕೊಡುವರೆಂಬ ನಂಬಿಕೆ ಇರಲಿಲ್ಲ. ಆದರೂ ಇವೆಲ್ಲ ಲೆಕ್ಕಾಚಾರದ ಹೊರತಾಗಿ ವೈದ್ಯನ
ಜವಾಬ್ದಾರಿಯನ್ನರಿತು ಚಿಕಿತ್ಸೆ ಆರಂಭಿಸಿದೆ.

ಥಯೋಸಯನಮಿನ್ ಮತ್ತು -ಸ್ಪರಸ್ ದ್ರವವನ್ನು ಪ್ರತಿ ಘಂಟೆಗೊಮ್ಮೆ ಅಂಗೈ ಮತ್ತು ತೊಡೆಯ ಮೇಲೆ ಸವರಲು ತಿಳಿಸಿದೆ. ಆಸ್ಪತ್ರೆಯ
ವೈದ್ಯರು, ರೋಗಿಯ ಬಳಗದವರ ಆಶ್ಚರ್ಯಕ್ಕೆ ಕಾರಣವಾದ ಸಂಗತಿಯೆಂದರೆ, ಮೂರು ದಿನಗಳ ನಂತರ ವೆಂಟಿಲೇಟರ್‌ನ್ನು ತೆಗೆಯಲಾಯಿತು.
ಎರಡು ದಿನ ಚಿಕಿತ್ಸೆಯಾದ ಮೇಲೆ ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಒಂಬತ್ತು ದಿನಗಳ ನಂತರ ರೋಗಿಯನ್ನು ಮನೆಗೆ
ಕಳಿಸ ಲಾಯಿತು.’ (ಪುಟ 73) ಈ ಪ್ಯಾರಾದಲ್ಲಿ ಡಾ. ಬಿ.ಟಿ.ರುದ್ರೇಶ್ ಅವರ ಕಥನ ಕೌಶಲವನ್ನು ಕಾಣುವುದರ ಜತೆಯಲ್ಲೇ, ಕ್ಲಪ್ತವಾಗಿ ಹೇಳಬೇ ಕಾದುದನ್ನು ಹೇಳುವ ರೀತಿ, ವಿನಯ, ನಿಖರತೆ ಎದ್ದು ಕಾಣುತ್ತದೆ. ಜತೆಗೆ, ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಗಮನಕ್ಕೆ ಬರುತ್ತದೆ.

ಡಾ. ಬಿ.ಟಿ.ರುದ್ರೇಶ್ ಅವರು ತಮ್ಮ ‘ಅದ್ಭುತ’ ಚಿಕಿತ್ಸೆಗೆ ಬಳಸಿದ ವಿಧಾನವನ್ನು ರಹಸ್ಯವಾಗಿಟ್ಟಿಲ್ಲ, ಬದಲಿಗೆ, ಇತರರಿಗೂ ಉಪಯೋಗಕ್ಕೆ ಬರಲೋ ಎಂಬಂತೆ, ಬಳಸಿದ ಔಷಧ, ಚಿಕಿತ್ಸೆಯ ವಿಧಾನ ಮೊದಲಾದವುಗಳನ್ನು ಬಹಿರಂಗಗೊಳಿಸಿದ್ದಾರೆ. ಹೋಮಿಯೋಪತಿಯನ್ನು ಅಧ್ಯಯನ ಮಾಡು ವವರಿಗೂ ಇದು ಉಪಯೋಗಕ್ಕೆ ಬರುವದರ ಜತೆ, ಜನಸಾಮಾನ್ಯರಿಗೂ ಈ ಚಿಕಿತ್ಸಾ ಪದ್ಧತಿಯ ಮೌಲ್ಯವನ್ನು, ಔನ್ನತ್ಯವನ್ನು ಪರಿಚಯಸುತ್ತದೆ. ಕೋವಿಡ್ ೧೯ ಸೋಂಕಿಗೆ ಒಳಗಾದ ರೋಗಿಯು, ನಮ್ಮ ಇಂದಿನ ಆಧುನಿಕ ಚಿಕಿತ್ಸೆಯ ನಂತರ, ವೆಂಟಿಲೇಟರ್‌ನಲ್ಲಿದ್ದುಕೊಂಡು, ಶ್ವಾಸಕೋಶಗಳು -ಬ್ರೋಸಿಸ್ ಸ್ಥಿತಿ ತಲುಪಿದ ನಂತರ, ಚಿಕಿತ್ಸೆ ಆರಂಭಿಸಿದ ಡಾ. ಬಿ.ಟಿ.ರುದ್ರೇಶ್ ಅವರು, ಆ ರೋಗಿಯನ್ನು ಗುಣಮುಖರನ್ನಾ ಗಿಸಿದ ಪರಿ ವಿಸ್ಮಯ ಹುಟ್ಟಿಸುತ್ತದೆ.

‘ಅಶ್ವಿನಿ ಸ್ಪರ್ಶ’ ಪುಸ್ತಕದಲ್ಲಿ ಕೋವಿಡ್ ಮತ್ತು ಕರೋನಾದ ಕುರಿತು ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕುರಿತು ಡಾ. ರುದ್ರೇಶ್
ಸಾಕಷ್ಟು ಚರ್ಚೆ ನಡೆಸಿದ್ದಾರೆ. ದುಬಾರಿ ಚಿಕಿತ್ಸಾಪದ್ಧತಿಗಿಂತಲೂ, ಎಲ್ಲರಿಗೂ ಸುಲಭವಾಗಿ ದೊರೆಯುವ ಚಿಕಿತ್ಸೆಗೆ ಪ್ರಾಶಸ್ತ್ಯ ನೀಡಬೇಕು ಎಂಬ
ವಿಚಾರವನ್ನು ಇಲ್ಲೂ ಒತ್ತಿ ಹೇಳಿದ್ದಾರೆ. ಜತೆಯಲ್ಲೇ, ಹೋಮಿಯೋಪತಿ ಚಿಕಿತ್ಸೆಯ ಕುರಿತು ಸಾಕಷ್ಟು ವಿವರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ‘ಒಂದೇ ರೀತಿಯ ಕಾಯಿಲೆ ಬೇರೆ ಬೇರೆ ವ್ಯಕ್ತಿಗಳಲ್ಲಿ ವಿಭಿನ್ನ ಕಾರಣಗಳಿಂದ ಉಂಟಾಗಿರುತ್ತದೆ. ಪರಾವಲಂಬಿ ಜೀವಿಗಳಾದ ವೈರಾಣು ಮತ್ತು ಬ್ಯಾಕ್ಟೀರಿಯಾಗಳ ನಾಶದಿಂದ ರೋಗ ಮೂಲೋತ್ಪಾಟನೆಯಾಗುತ್ತದೆ ಎಂಬುದನ್ನು ಹೋಮಿಯೋಪತಿ ನಂಬುವುದಿಲ್ಲ.

ಯಶಸ್ವಿ ಹೋಮಿಯೋಪತಿ ವೈದ್ಯ, ರೋಗಿಯ ಪರಿಸ್ಥಿತಿ ಅಧ್ಯಯನ ಮಾಡಿ ರೂಪಿಸಿದ ಔಷಧ ಸಂಯೋಜನೆ ಗುಣಮುಖವಾಗುವುದಕ್ಕೆ
ನೆರವಾ ಗುತ್ತದೆಯೇ ಹೊರತು ಒಂದೇ ರೀತಿಯ ಔಷಧ ಗುಣಮುಖವಾಗುವುದನ್ನು ಖಾತರಿಪಡಿಸುವುದಿಲ್ಲ. ಒಂದು ಔಷಧ ಎಲ್ಲ ರೀತಿಯ ವ್ಯಕ್ತಿಗಳ ಮೇಲೆ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ರೋಗಿಯ ಒಟ್ಟು ವ್ಯಕ್ತಿತ್ವ ಆಧರಿಸಿ ರೂಪಿಸಿದ ಔಷಧ ಸಂಯೋಜನೆ ಮಾತ್ರ ಆತನನ್ನು ಗುಣಪಡಿಸಬಲ್ಲದು.’ (ಪುಟ 23) ಈ ರೀತಿಯ ಹಲವು ಬರಹಗಳನ್ನು ಒಳಗೊಂಡಿರುವ ‘ಅಶ್ವಿನಿ ಸ್ಪರ್ಶ’ ಪುಸ್ತಕವು, ಒಬ್ಬ ಸಾಮಾನ್ಯ ಓದುಗನಿಗೂ (ಲೇ ಮ್ಯಾನ್) ಕುತೂಹಲಕಾರಿ ಓದು ಆಗಬಲ್ಲದು.

ಇಲ್ಲಿ ಡಾ. ಬಿ.ಟಿ.ರುದ್ರೇಶ್ ಅವರ ಬದುಕಿನ ಮತ್ತು ಕ್ಲಿನಿಕ್ ಕುರಿತು ಹೆಚ್ಚಿನ ವಿವರಗಳು ಇಲ್ಲದೇ ಇದ್ದರೂ, ಹಳ್ಳಿಗಾಡಿನಿಂದ ಬಂದ ಯುವಕನೊಬ್ಬ,
ಹೋಮಿಯೋಪತಿ ಕಲಿತು, ಕಷ್ಟಪಟ್ಟು ಕರಗತಮಾಡಿಕೊಂಡು, ಅಸಾಧಾರಣ ಯಶಸ್ಸು ಸಾಧಿಸಿದ ಹಾದಿಯ ಹೊಳಹುಗಳು ಇವೆ. ಹೋಮಿಯೋಪತಿ ಚಿಕಿತ್ಸೆಯು ನಮ್ಮ ನಾಡಿನಲ್ಲಿ ಹೆಚ್ಚು ಜನಪ್ರಿಯತೆ ಪಡೆಯದೇ ಇದ್ದ ದಿನಗಳಲ್ಲಿ, ಅಲ್ಲಲ್ಲಿ ಅವಗಣನೆಗೂ ಒಳಗಾಗುತ್ತಿದ್ದ ದಿನಗಳಲ್ಲಿ
ಡಾ. ಬಿ.ಟಿ.ರುದ್ರೇಶ್ ತಮ್ಮ ಚಿಕಿತ್ಸಾ ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆದರು. ಅಲ್ಲಿ ಅವರು ಗಳಿಸಿದ ಯಶಸ್ಸು ಒಂದು ಇತಿಹಾಸ. ಆದರೆ, ಆರಂಭದ ವಿನಯವನ್ನು ಅವರು ಈಗಲೂ ಉಳಿಸಿಕೊಂಡಿದ್ದಾರೆ. ಇಂದಿಗೂ ಅಲ್ಲಿ ತಪಾಸಣಾ ಶುಲ್ಕ ಮತ್ತು ಔಷಧಗಳ ವೆಚ್ಚ ಸೇರಿದರೆ, ಕೆಲವು
ನೂರುಗಳನ್ನು ಮೀರುವುದಿಲ್ಲ! ಜತೆಗೆ, ತಾವು ಗಳಿಸಿದ ಬಹುಭಾಗವನ್ನು ‘ಹೋಮಿಯೋ ಭವನ’ಕ್ಕೆ ಕೊಡುಗೆಯಾಗಿ ನೀಡಿದ ಹಿರಿಮೆ ಡಾ.
ಬಿ.ಟಿ.ರುದ್ರೇಶ್ ಅವರದು. ಹೋಮಿಯೋಪತಿ ಮಂಡಳಿಯ ಅಧ್ಯಕ್ಷರಾಗಿರುವ ಡಾ. ರುದ್ರೇಶ್ ಅವರು, ಅಲ್ಲಿ ತಮಗೆ ದೊರೆತ ವೇತವನ್ನು
ಹೋಮಿಯೋ ಭವನ ನಿರ್ಮಾಣಕ್ಕೆ ನೀಡಿದ್ದಾರೆ!

ಸಮಾಜದ ಕೆಲವು ವರ್ಗದ ಜನರಿಗೆ ಮತ್ತು ತಮ್ಮ ಹುಟ್ಟೂರಿನಿಂದ ಚಿಕಿತ್ಸೆ ಅರಸಿ ಬಂದವರಿಂದ ಅವರು ತಪಾಸಣಾ ಶುಲ್ಕ ಪಡೆಯುವುದಿಲ್ಲ.
ಇಂತಹ ಹಲವು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುವ ಇವರ ಗುರಿ ಎಂದರೆ, ಹೋಮಿಯೋಪತಿ ಚಿಕಿತ್ಸೆಯು ಎಲ್ಲರಿಗೂ
ದೊರಕುವಂತೆ ಮಾಡುವುದು. ಪ್ರತಿ ತಾಲೂಕಿನಲ್ಲೂ ಹೋಮಿಯೋ ಭವನಗಳ ನಿರ್ಮಾಣವಾಗಬೇಕು ಎಂಬುದು ಡಾ. ಬಿ.ಟಿ.ರುದ್ರೇಶ್ ಅವರ ಕನಸು.

ಡಾ. ಬಿ.ಟಿ.ರುದ್ರೇಶ್ ಅವರು ಚಿಕಿತ್ಸೆಯ ಜತೆಯಲ್ಲೇ, ಇನ್ನೂ ಬರೆಯುತ್ತಿದ್ದಾರೆ ಎಂಬುದೇ ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ‘ಅಶ್ವಿನಿ
ಸ್ಪರ್ಶ’ ದಂತಹ ಇನ್ನಷ್ಟು ಪುಸ್ತಕಗಳನ್ನು ಅವರು ಹೊರತರುವರು ಎಂಬುದರಲ್ಲಿ ಸಂಶಯವಿಲ್ಲ. ಆ ಮೂಲಕ, ಹೋಮಿಯೋಪತಿಯು ನಮ್ಮ ನಾಡಿನ
ಜನಸಾಮಾನ್ಯರನ್ನು, ತಳವರ್ಗದ ಜನರನ್ನು ಆರೋಗ್ಯವಂತರನ್ನಾಗಿಸುವ ಅವರ ಪ್ರಯತ್ನ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಆಶಿಸೋಣ.

 
Read E-Paper click here

error: Content is protected !!