Saturday, 7th September 2024

ಮಂದಿರ, ಆಚಾರ್ಯರು ಮತ್ತು ಕಾಂಗ್ರೆಸ್

ವರ್ತಮಾನ

maapala@gmail.com

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳ ಪೈಕಿ ಎರಡು ವಿರೋಧ ವ್ಯಕ್ತಪಡಿಸಿರುವುದು ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದೆ. ಅಯೋಧ್ಯೆ ವಿಚಾರದಲ್ಲಿ ರಾಮಭಕ್ತರ ಆಕ್ರೋಶಕ್ಕೆ ತುತ್ತಾಗಿರುವ ಕಾಂಗ್ರೆಸ್ ಇದರ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. ಆದರೆ…

ಬಿಜೆಪಿಯು ೧೯೯೯ರ ಲೋಕಸಭೆ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣದ ಪ್ರಸ್ತಾಪ ಇತ್ತಾದರೂ ಬಹುಮತ
ಬಾರದ ಕಾರಣ ಎನ್‌ಡಿಎನಲ್ಲಿ ಯಾವುದೇ ಸಮಸ್ಯೆ ಯಾಗಬಾರದು ಎಂಬ ಕಾರಣಕ್ಕೆ ಸರಕಾರ ಆ ವಿಚಾರ ಕೈಬಿಟ್ಟಿತ್ತು. ಇದನ್ನು ಸ್ವತಃ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ೨೦೦೩ ರಲ್ಲಿ ರಾಮಜನ್ಮಭೂಮಿ ನ್ಯಾಸ್‌ನ ಅಧ್ಯಕ್ಷ ಪರಮಹಂಸ ರಾಮಚಂದ್ರ ದಾಸ್ ನಿಧನರಾದಾಗ ಪ್ರಧಾನಿಯಾಗಿದ್ದ ವಾಜಪೇಯಿ ಮತ್ತು ಉಪ ಪ್ರಧಾನಿಯಾಗಿದ್ದ ಲಾಲ್‌ಕೃಷ್ಣ ಆಡ್ವಾಣಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ತೆರಳಿದ್ದರು.

ಈ ವೇಳೆ ಅಟಲ್‌ಜಿ, ‘ಬಹುಮತ ಸಿಗದ ಕಾರಣ ನಮಗೆ ಮಂದಿರ ನಿರ್ಮಾಣ ಸಾಧ್ಯವಾಗಲಿಲ್ಲ. ಆದರೆ, ಮುಂದೊಂದು ದಿನ ಬರುವ ನಮ್ಮ ಪಕ್ಷದ ಪ್ರಧಾನಿ
ಮಂದಿರ ನಿರ್ಮಾಣವನ್ನು ಪೂರ್ಣಗೊಳಿಸುತ್ತಾರೆ’ ಎಂದಿದ್ದರು. ಇದೀಗ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಜ.೨೨ರಂದು ರಾಮಮಂದಿರ
ಉದ್ಘಾಟನೆ ಮತ್ತು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಆದರೆ, ಈ ಉದ್ಘಾಟನೆ ಎರಡು ಕಾರಣಗಳಿಗೆ ವಿವಾದ ಸೃಷ್ಟಿಸಿದೆ. ಮೊದಲನೆಯದು ಎಂದಿನಂತೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ರಾಜಕೀಯ ಕಾರಣಗಳಿಗಾಗಿ ವಿರೋಧ ವ್ಯಕ್ತಪಡಿಸುತ್ತಿವೆ.

ಎರಡನೆಯದು ಮಂದಿರ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಅದನ್ನು ಉದ್ಘಾಟಿಸುವ ಮೂಲಕ ಧರ್ಮಶಾಸ್ತ್ರದ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ಶಂಕರಾಚಾರ್ಯ ಪೀಠದ ಇಬ್ಬರು ಸ್ವಾಮೀಜಿಗಳು (ಬದರೀನಾಥ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ಈ ಆಕ್ಷೇಪಣೆಗಳನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ‘ಇಂಡಿಯ’ ಮೈತ್ರಿಕೂಟದ ಪಕ್ಷಗಳು, ಶಂಕರಾಚಾರ್ಯ ಪೀಠದ ಎಲ್ಲಾ ನಾಲ್ವರು ಸ್ವಾಮೀಜಿಗಳು ಮಂದಿರ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ಹಬ್ಬಿಸಿ, ಶಂಕರಾಚಾರ್ಯರ ಅನುಯಾಯಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸುತ್ತಿವೆ.

ಇದಕ್ಕೆ ಕಾರಣ ಶಂಕರಾಚಾರ್ಯ ಪೀಠದ ಬದರೀನಾಥ ಜ್ಯೋತಿ ರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಗಳು, ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕೂ ಪೀಠ ಗಳ ಸ್ವಾಮೀಜಿಗಳಿಂದ ರಾಮಮಂದಿರ ಉದ್ಘಾಟನೆಗೆ ವಿರೋಧವಿದೆ ಎಂದು ಹೇಳಿರುವುದು. ಆದರೆ, ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ
ಶಾರದಾ ಪೀಠ ಮತ್ತು ದ್ವಾರಕಾ ಶಾರದಾ ಪೀಠದ ಸ್ವಾಮೀಜಿಗಳು ಈ ವಿವಾದದಿಂದ ದೂರ ಉಳಿದಿದ್ದಾರೆ. ತಮ್ಮ ಮಠದ ಹೆಸರಲ್ಲಿ ಸುಳ್ಳು ಸುದ್ದಿ ಪ್ರಕಟಿಸ
ಲಾಗುತ್ತಿದೆ ಎಂದು ಮಠ ಅಽಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಅದರಲ್ಲೂ ಶೃಂಗೇರಿ ಪೀಠ ಮಾಧ್ಯಮ ಪ್ರಕಟಣೆ ನೀಡಿ, ಕೆಲವು ಸಾಮಾಜಿಕ ಮಾಧ್ಯಮಗಳು
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಶ್ರೀಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಭಾವನೆಗಳನ್ನು ಮೂಡಿಸುವ ಪೋಸ್ಟ್‌ಗಳನ್ನು ಹಾಕುತ್ತಿವೆ; ಆದರೆ, ಶೃಂಗೇರಿ ಶಂಕರಾಚಾರ್ಯರು ಅಂಥ ಯಾವುದೇ ಸಂದೇಶ ನೀಡಿಲ್ಲ.

ಇಂಥ ಅಪಪ್ರಚಾರಗಳನ್ನು ನಿರ್ಲಕ್ಷಿಸಬೇಕು ಎಂದು ಕೋರಿದೆ. ಅಲ್ಲದೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದೀಪಾವಳಿ ಸಂದರ್ಭದಲ್ಲಿ ಶಾರದಾಪೀಠ ಯೂಟ್ಯೂಬ್ ಚಾನಲ್‌ನಲ್ಲಿ ಶೃಂಗೇರಿ ಜಗದ್ಗುರುಗಳ ಸಂದೇಶ ವನ್ನು ಪ್ರಕಟಿಸಿದ್ದು, ಅಯೋಧ್ಯೆಯಲ್ಲಿ ಮುಂಬರುವ ಪ್ರಾಣಪ್ರತಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು
ಆಸ್ತಿಕರು ರಾಮ ತಾರಕ ಮಂತ್ರ ಪಠಣದಲ್ಲಿ ತೊಡಗಿರುವುದನ್ನು ಬಿತ್ತರಿಸಲಾಗಿದೆ ಎಂದು ತಿಳಿಸುವುದರ ಜತೆಗೆ ಪರಮ ಪವಿತ್ರವಾದ ಮತ್ತು ಅಪರೂಪದ ಈ
ಪ್ರಾಣ ಪ್ರತಿಷ್ಠೆಯಲ್ಲಿ ಪ್ರತಿಯೊಬ್ಬ ಆಸ್ತಿಕರೂ ಭಾಗ ವಹಿಸಬೇಕು ಮತ್ತು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶೃಂಗೇರಿ ಶಂಕರಾಚಾರ್ಯರು ಅನುಗ್ರಹಿಸಿ
ದ್ದಾರೆ ಎಂದು ಹೇಳಿದೆ.

ಆದರೆ, ಶೃಂಗೇರಿ ಮತ್ತು ದ್ವಾರಕಾ ಪೀಠದ ಶಂಕರಾಚಾರ್ಯರು ಸ್ಪಷ್ಟನೆಗಳನ್ನು ನೀಡಿದ್ದರೂ ಅವರ ಹೆಸರಿನಲ್ಲಿ ಸುಳ್ಳು ಮಾಹಿತಿಗಳನ್ನು ಹರಡುತ್ತಿರುವುದು, ಕಾಂಗ್ರೆಸ್ ರಾಜಕೀಯವಾಗಿ ಇದರ ಲಾಭ ಪಡೆದುಕೊಳ್ಳುತ್ತಿರುವುದು ಮುಂದುವರಿದಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಶಂಕರಾಚಾರ್ಯರ ನಾಲ್ಕೂ ಪೀಠಗಳಿಂದ ಮಂದಿರ ಉದ್ಘಾಟನೆಗೆ ವಿರೋಧವಿದೆ ಎಂದು ಹೇಳಿರುವ ಬದರೀನಾಥ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಮರಾಜ್ಯ ಪರಿಷತ್ತಿನ ಅಭ್ಯರ್ಥಿಯನ್ನು ಬೆಂಬಲಿಸಿದ್ದರು ಮತ್ತು ಉಮೇದುವಾರಿಕೆ ತಿರಸ್ಕೃತ
ಗೊಂಡಾಗ ಧರಣಿ ನಡೆಸಿದ್ದರು.

ನಂತರದಲ್ಲೂ ಪ್ರಧಾನಿ ಮೋದಿ ವಿರುದ್ಧ ಇವರು ಹೇಳಿಕೆಗಳನ್ನು ನೀಡಿದ್ದರು. ಹಾಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ರಾಮಮಂದಿರ ಉದ್ಘಾಟನೆಗೆ ಅವರು ವಿರೋಧ ವ್ಯಕ್ತಪಡಿಸುವುದು ಸಹಜವೇ ಆಗಿದೆ. ಅಷ್ಟಕ್ಕೂ ಶಂಕರಾಚಾರ್ಯ ಪೀಠದ ಇಬ್ಬರು ಸ್ವಾಮೀಜಿಗಳು ರಾಮಮಂದಿರ ಉದ್ಘಾಟನೆಗೆ ಆಕ್ಷೇಪಿಸಿರುವುದು ಧಾರ್ಮಿಕ ಕಾರಣಕ್ಕೆ. ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ಗರ್ಭಗೃಹದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದು ನಿಯಮಗಳಿಗೆ ವಿರುದ್ಧ. ಧರ್ಮಪಾಲನೆ ಆಗುವಂತೆ ನೋಡಿಕೊಳ್ಳೋದೇ ಶಂಕರಾಚಾರ್ಯರ ಕರ್ತವ್ಯ. ಆದರೆ, ಮಂದಿರ
ಉದ್ಘಾಟನೆ ವೇಳೆ ಸನಾತನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.

ಹೀಗಾಗಿ ತಾವು ಮೌನವಾಗಿ ಇರುವುದಕ್ಕೆ ಸಾಧ್ಯವಾಗುತ್ತಿಲ್ಲ. ತಾವು ಮೋದಿ ವಿರೋಧಿ ಅಲ್ಲ. ಜತೆಗೆ ಧರ್ಮಶಾಸ್ತ್ರದ ವಿರುದ್ಧವೂ ನಡೆದುಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಅವರು ಗರ್ಭಗೃಹ ಪ್ರವೇಶ ಮಾಡಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ರಾಜಕೀಯ ದೃಷ್ಟಿಕೋನ ಹೊಂದಿದೆ. ಇದುವೇ ತಾವು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ಕಾರಣ ಎಂದಿದ್ದಾರೆ. ಈ ಮಧ್ಯೆ ರಾಮಮಂದಿರ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿ, ಆಹ್ವಾನ ತಿರಸ್ಕರಿಸಿರುವ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ, ಅಯೋಧ್ಯೆಯಲ್ಲಿ ಉದ್ಘಾಟನೆಯಾಗು ತ್ತಿರುವ ರಾಮಮಂದಿರ ಅಪೂರ್ಣ.

ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ರಾಜಕೀಯ ಯೋಜನೆ. ಹೀಗಾಗಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ. ಇದಕ್ಕೆ ದೇಶಾದ್ಯಂತ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್‌ನ ಈ ನಿರ್ಧಾರ ನಿರೀಕ್ಷಿತವೇ ಆಗಿತ್ತು. ಏಕೆಂದರೆ, ಮೊದಲಿನಿಂದಲೂ ರಾಮಮಂದಿರ ವಿವಾದದಲ್ಲಿ ಬಾಬರಿ ಮಸೀದಿ ಪರ ನಿಂತಿದ್ದ ಕಾಂಗ್ರೆಸ್, ಶ್ರೀರಾಮ ಕಾಲ್ಪನಿಕ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿತ್ತು. ಆದರೂ ಈ ಬಾರಿ ಕಾಂಗ್ರೆಸ್ ನಾಯಕರು ಸ್ವಲ್ಪ ಎಚ್ಚರಿಕೆಯಿಂದ ಇದ್ದಾರೆ. ‘ನಾವು ರಾಮ ಅಥವಾ ರಾಮಮಂದಿರ ವಿರೋಽಗಳಲ್ಲ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ರಾಜಕೀಯ ಯೋಜನೆ
ಯಾಗಿರುವುದರಿಂದ ನಮ್ಮ ವಿರೋಧವಿದೆ. ಮುಂದೊಂದು ದಿನ ಅಲ್ಲಿಗೆ ತೆರಳಿ ರಾಮನ ದರ್ಶನ ಪಡೆಯುತ್ತೇವೆ’ ಎನ್ನುತ್ತಿದ್ದಾರೆ. ಏಕೆಂದರೆ, ಕೋಟ್ಯಂತರ ಭಕ್ತರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸುತ್ತಿರುವ ರಾಮ ಮಂದಿರವನ್ನು ಸಾರಾಸಗಟಾಗಿ ವಿರೋಧಿಸಿದರೆ ರಾಜಕೀಯವಾಗಿ ಪಕ್ಷಕ್ಕೆ ಇನ್ನಷ್ಟು ದೊಡ್ಡ ಅಪಾಯ ಕಾದಿದೆ ಎಂಬುದು ನಾಯಕರಿಗೂ ಗೊತ್ತು.

ಕಾಂಗ್ರೆಸ್‌ನ ಈ ವಿರೋಧದ ನಡುವೆ ಇಲ್ಲೊಂದು ಪ್ರಮುಖ ರಾಜಕೀಯ ವಿಷಯವನ್ನು ಪ್ರಸ್ತಾಪಿಸಲೇ ಬೇಕು. ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ
ಬಿಜೆಪಿ ಈ ಬಾರಿ ೫೪೩ರಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನ ಗಳನ್ನು ಗೆಲ್ಲುವ ಉದ್ದೇಶದೊಂದಿಗೆ ತಯಾರಿ ನಡೆಸಿದೆ. ಅದಕ್ಕಾಗ ಗೆಲ್ಲುವ ಸಾಮರ್ಥ್ಯ ಇಲ್ಲದಿ
ರುವ ಕಡೆ ಬೇರೆ ಪಕ್ಷದವರನ್ನು ಸೇರ್ಪಡೆ ಮಾಡಿಕೊಳ್ಳುವ ಉದ್ದೇಶದಿಂದ ಸಮಿತಿ ರಚಿಸುವ ಮೂಲಕ ಚುನಾವಣೆಗೆ ಮುನ್ನವೇ ಆಪರೇಷನ್ ಕಮಲಕ್ಕೆ
ಮುಂದಾಗಿದೆ. ಮತ್ತೊಂದೆಡೆ ಇತಿಹಾಸದಲ್ಲೇ ಯಾವತ್ತೂ ೪೦೦ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸದ ಪ್ರತಿಪಕ್ಷ ಕಾಂಗ್ರೆಸ್ ಈ ಬಾರಿ ಕೇವಲ ೨೫೫
ಸ್ಥಾನಗಳಲ್ಲಿ ಸ್ಪಽಸಲು ಸಿದ್ಧತೆ ಮಾಡಿಕೊಂಡಿದೆ. ‘ಇಂಡಿಯ’ ಮೈತ್ರಿಕೂಟದ ಪಕ್ಷಗಳಿಗೆ ಹೆಚ್ಚು ಸ್ಥಾನ ಗಳನ್ನು ಬಿಟ್ಟುಕೊಡಲು ನಿರ್ಧರಿಸಿದೆ.

೨೦೧೪ರಲ್ಲಿ ೪೪, ೨೦೧೯ರಲ್ಲಿ ೫೨ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಶತಕ ದಾಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಹೀಗಾಗಿ ಮಿತ್ರಪಕ್ಷಗಳನ್ನು ಸಮಾಧಾನಪಡಿಸಿ, ಅವರ ಬೆಂಬಲ ಪಡೆದು ಸೀಟುಗಳನ್ನು ಹೆಚ್ಚಿಸಿ ಕೊಳ್ಳಲು ಮುಂದಾಗಿದೆ. ಹೀಗಿರುವಾಗ ಬಿಜೆಪಿಯ ರಾಮಮಂದಿರ ಎಂದೇ ಹೇಳಲಾಗು ತ್ತಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡರೆ ಅಲ್ಪಸಂಖ್ಯಾತರು ವಿರೋಧಿಸುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿ ಕೊಂಡಿರುವ ಕೆಲ ಮಿತ್ರಪಕ್ಷಗಳು ದೂರ ಸರಿಯುವ ಆತಂಕವಿದೆ. ಹಾಗೆಂದು ಈ ಹಿಂದಿನಂತೆ ಶ್ರೀರಾಮನನ್ನು ಸಾರಾಸಗಟಾಗಿ ತಿರಸ್ಕರಿಸಿದರೆ ಹಿಂದೂ ಮತಗಳು ಮತ್ತಷ್ಟು ದೂರ ಸರಿಯುವ ಆತಂಕವಿದೆ.

ಏಕೆಂದರೆ, ರಾಮಮಂದಿರ ಹೆಸರಿನಲ್ಲಿ ಬಿಜೆಪಿ ಈಗಾಗಲೇ ಭಾವನಾತ್ಮಕ ರಾಜಕೀಯದಾಟ ಆರಂಭಿಸಿದೆ. ರಾಮಮಂದಿರ ಉದ್ಘಾಟನೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳದಿರುವುದನ್ನೇ ಮುಂದಿಟ್ಟುಕೊಂಡು ಆ ಪಕ್ಷ ಶ್ರೀರಾಮ ವಿರೋಧಿ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಿದೆ. ದೇಶಾದ್ಯಂತ ಬಿಜೆಪಿ ಈ ಪ್ರಕ್ರಿಯೆ ಆರಂಭಿಸಿದ್ದು, ಅದಕ್ಕೆ ಜನಬೆಂಬಲವೂ ವ್ಯಕ್ತವಾಗುತ್ತಿದೆ. ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡರೆ ಏನಾಗುತ್ತದೆ ಎಂಬುದು ೨೦೧೪ ಮತ್ತು ೨೦೧೯ರ ಲೋಕಸಭೆ ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ.

ಮತ್ತೊಂದೆಡೆ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ ೧೧ ದಿನಗಳ ಉಪವಾಸ ವ್ರತ ಆರಂಭಿಸಿ ಶ್ರೀರಾಮ ಭಕ್ತರ ಭಾವನೆ ಗಳನ್ನು ಕೆರಳಿಸಿ ದ್ದಾರೆ. ಪ್ರಧಾನಿಯವರ ಈ ನಿರ್ಧಾರ ಖಂಡಿತ ವಾಗಿಯೂ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹಾಗೇನಾದರೂ ಆದರೆ, ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿ ಹೆಚ್ಚು ಸ್ಥಾನ ಗೆಲ್ಲುವ ಕಾಂಗ್ರೆಸ್‌ನ ಯೋಜನೆಯೂ ವಿಫಲವಾಗಬಹುದು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಇಬ್ಬರು ಶಂಕರಾಚಾರ್ಯ ಪೀಠಾಧಿಪತಿಗಳು ಶ್ರೀರಾಮಮಂದಿರ ಉದ್ಘಾಟನೆ ವಿರೋಽಸುತ್ತಿರುವುದನ್ನು ಮುಂದಿಟ್ಟುಕೊಂಡು ಉದ್ಘಾಟನೆಯಲ್ಲಿ ಪಾಲ್ಗೊಳ್ಳದೇ ಇರುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಅದಕ್ಕಾಗಿ ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕೂ ಪೀಠಗಳ ಪೀಠಾಧಿಪತಿಗಳು ರಾಮಮಂದಿರ ಉದ್ಘಾಟನೆಯನ್ನು ವಿರೋಧಿಸುತ್ತಿ ದ್ದಾರೆ ಎಂಬ ಸುಳ್ಳು ಸುದ್ದಿಯನ್ನೇ ಮುಂದಿಟ್ಟು ಕೊಡು ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ.

ಶಂಕರಾಚಾರ್ಯ ಪೀಠದ ಶ್ರೀಗಳು ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಾದರೆ ತಾವೂ ಪಾಲ್ಗೊಳ್ಳಲು ಸಿದ್ಧ ಎಂದು ಹೇಳುತ್ತಿದ್ದಾರೆ. ಇದು ಶಂಕರಾಚಾರ್ಯ ಪೀಠದ ಭಕ್ತರನ್ನು ಸೆಳೆಯುವ ಪ್ರಯತ್ನ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ರಾಮಮಂದಿರ ಉದ್ಘಾಟನೆಗೆ ಆಕ್ಷೇಪಿಸಿರುವ ಬದರೀನಾಥ ಜ್ಯೋತಿರ್ಮಠದ
ಅವಿಮುಕ್ತೇಶ್ವ ರಾನಂದ ಸರಸ್ವತಿ ಮತ್ತು ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಉತ್ತರ ಭಾರತದಲ್ಲಿ ಸಾಕಷ್ಟು ಭಕ್ತಾದಿಗಳನ್ನು ಹೊಂದಿದ್ದಾರೆ. ಅವರ ಹೆಸರು ಹೇಳಿದರೆ ಚುನಾವಣೆಯಲ್ಲಿ ಲಾಭ ವಾಗಬಹುದು ಎಂಬುದು ಕಾಂಗ್ರೆಸ್‌ನ ಯೋಚನೆ. ಜನರ ಭಾವನೆಗಳನ್ನು ಮತಗಳಾಗಿ ಪರಿವರ್ತಿಸಿ ಕೊಳ್ಳುವಲ್ಲಿ ಎತ್ತಿದ ಕೈ ಆಗಿರುವ ಬಿಜೆಪಿ ಮುಂದೆ ಕಾಂಗ್ರೆಸ್‌ನ ಈ ಪ್ರಯತ್ನ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕು.

ಲಾಸ್ಟ್ ಸಿಪ್: ರಾಮಮಂದಿರದಲ್ಲಿ ಕಳೆದು ಕೊಳ್ಳುವ ಮತ ಶಂಕರಾಚಾರ್ಯ ಪೀಠದಿಂದಲಾದರೂ ಬರುತ್ತದೆಯೇ ಎಂಬುದು ಈಗಿನ ರಾಜಕೀಯ ಲೆಕ್ಕಾಚಾರ.

Leave a Reply

Your email address will not be published. Required fields are marked *

error: Content is protected !!