Saturday, 7th September 2024

ಕಡಲ ತೀರಕ್ಕೆ ಹೊರಟಿತು ಒಂದು ಶ್ವೇತ ನದಿ !

ಶಶಾಂಕಣ

shashidhara.halady@gmail.com

ಮಾರ್ಚ್ ೫ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ದಿನ. ಮಹಾತ್ಮಾಗಾಂಧಿ ಮತ್ತು ಅಂದಿನ ವೈಸ್‌ರಾಯ್ ಇರ‍್ವಿನ್ ನಡುವೆ ಆ ದಿನ ಒಂದು ಒಪ್ಪಂದ ನಡೆಯಿತು ಮತ್ತು ಇದು ಕಾಂಗ್ರೆಸ್ ಮತ್ತು ಬ್ರಿಟಿಷ್ ರಾಜ್ ನಡುವೆ ನಡೆದ ಪ್ರಮುಖ ಒಪ್ಪಂದಗಳಲ್ಲಿ ಒಂದು. ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿ, ಒಂದು ವರ್ಷದ ನಂತರ ಸಹಿಹಾಕಲ್ಪಟ್ಟ ಈ ಒಪ್ಪಂದವು ಬಹು ಪ್ರಚಾರಕ್ಕೆ ಒಳಪಟ್ಟದ್ದು ನಿಜ.

ಆದರೆ, ವಿಶೇಷ ಮತ್ತು ದುರಂತವೆಂದರೆ, ಅದಕ್ಕೂ ಹಿಂದೆ ಒಂದು ವರ್ಷ ನಡೆದ ಉಪ್ಪಿನ ಸತ್ಯಾಗ್ರಹದ ಪ್ರಮುಖ ಬೇಡಿಕೆಯಾದ, ಉಪ್ಪಿನ ಮೇಲೆ ತೆರಿಗೆ ತೆಗೆದು ಹಾಕುವ ಬೇಡಿಕೆಯನ್ನು ಬ್ರಿಟಿಷರು ಒಪ್ಪಿಕೊಳ್ಳಲಿಲ್ಲ ಮತ್ತು ಆ ತೆರಿಗೆ ನಂತರ ಸುಮಾರು ಒಂದೂವರೆ ದಶಕದ ತನಕವೂ ಮುಂದುವರಿಯಿತು! ಉಪ್ಪಿನ ಸತ್ಯಾಗ್ರಹವು ಪಡೆದ ಪ್ರಚಾರಕ್ಕೆ ಹೋಲಿಸಿದರೆ, ೫.೩.೧೯೩೧ರಂದು ನಡೆದ ಒಪ್ಪಂದವು ತುಸು ಸಪ್ಪೆ ಎಂದೇ ಹೇಳಬೇಕು. ಮೂಲ ವಿದ್ಯಮಾನ ಆರಂಭಗೊಂಡದ್ದು ೧೨.೩.೧೯೩೦ರಂದು. ಅಂದು ಆರಂಭಗೊಂಡ ಉಪ್ಪಿನ ಸತ್ಯಾಗ್ರಹವು ೬.೪.೧೯೩೦ರ ತನಕ ಮುಂದುವರಿಯಿತು.

ಸಂಪೂರ್ಣ  ಹಿಂಸೆಯ ತತ್ವದಲ್ಲಿ ಈ ಒಂದು ಹೋರಾಟವನ್ನು ರೂಪಿಸದವರು, ನಾಯಕತ್ವ ವಹಿಸಿದವರು, ಮುನ್ನಡೆಸಿದವರು ಮಹಾತ್ಮಾ ಗಾಂಧಿ ಯವರು. ಉಪ್ಪಿನ ಮೇಲಿನ ತೆರಿಗೆಯನ್ನು ತೆಗೆಯಬೇಕು ಎಂದು ಬ್ರಿಟಿಷ ರನ್ನು ಒತ್ತಾಯಿಸುವುದರ ಜತೆಯಲ್ಲೇ, ಅಸಹಕಾರ ಮತ್ತು ಕರ ನಿರಾಕರಣೆಯೂ ಈ ಹೋರಾಟದ ಭಾಗವಾಗಿತ್ತು. ಜತೆಗೆ, ೩೮೭ ಕಿ.ಮೀ. ಪಾದಯಾತ್ರೆ ಈ ಸತ್ಯಾಗ್ರಹದ ಪ್ರಮುಖ ಮತ್ತು ಎಲ್ಲರ ಗಮನ ಸೆಳೆದ ಭಾಗ. ಗಾಂಧೀಜಿಯ ವರು ವಾಸವಿದ್ದ ಸಾಬರಮತಿ ಆಶ್ರಮದಿಂದ, ದಂಡಿ ಅಥವಾ ನವಸಾರಿ ಎಂಬಲ್ಲಿಗೆ ನಡೆದು ಸಾಗುವುದು ಮತ್ತು ದಾರಿಯುದ್ದಕ್ಕೂ ಜನರನ್ನು ಒಗ್ಗೂಡಿಸುವುದು ಈ ಯಾತ್ರೆಯ ಮುಖ್ಯ ಭಾಗ.

ಗುಜರಾತ್‌ನಲ್ಲಿದ್ದ ಧರಾಸನಾ ಉಪ್ಪಿನ ಕಾರ್ಖಾನೆಗಳಿರುವ ಜಾಗದ ತನಕ ಸಾಗಿ, ಸತ್ಯಾಗ್ರಹವನ್ನು ನಿಲ್ಲಿಸುವುದು ಎಂದು ಗಾಂಧೀಜಿಯವರ ಮೊದಲ ಯೋಚನೆ; ಆದರೆ ಕೊನೆಯಲ್ಲಿ ಅವರನ್ನು ಬಂಧಿಸಿದ್ದರಿಂದ, ಕಾಂಗ್ರೆಸ್ನ ಇತರ ಕಾರ್ಯಕರ್ತರು ಆ ಯಾತ್ರೆಯನ್ನು ಮುಂದುವರಿಸಿದರು. ಈ ಸತ್ಯಾಗ್ರಹದ ಸಮಯ ದಲ್ಲಿ ಸುಮಾರು ೬೦,೦೦೦ ಜನರನ್ನು ಬ್ರಿಟಿಷ್ ಆಡಳಿತ ಬಂಧಿಸಿತು, ಅಲ್ಲಲ್ಲಿ ಕೆಲವು ಕಾರ್ಯಕರ್ತರು ಮೃತಪಟ್ಟರು. ಬ್ರಿಟಿಷರ ವಿರುದ್ಧ ನಮ್ಮ ದೇಶದ ಹೋರಾಟದ ವಿವರಗಳು ಜಗತ್ತಿಗೆ ಪ್ರಚುರಗೊಳ್ಳುವಲ್ಲಿ ಈ ಸತ್ಯಾಗ್ರಹದ ಪಾತ್ರ ಹಿರಿದು. ಕಾಂಗ್ರೆಸ್ ಪಕ್ಷವು ಪೂರ್ಣ ಸ್ವರಾಜ್ಯಕ್ಕೆ ಕರೆ ನೀಡಿದ್ದು ೨೬.೧.೧೯೩೦ರಂದು; ಅಲ್ಲಿಯ ತನಕ ಡೊಮಿನಿಯನ್ ಸ್ಥಾನ ಅಂದರೆ ಬ್ರಿಟಿಷರ ಅಧೀನ ರಾಷ್ಟ್ರವಾಗಿ ಮುಂದುವರಿಯುವುದೇ ಹೋರಾಟದ ಉದ್ದೇಶವಾಗಿತ್ತು.

ಪೂರ್ಣ ಸ್ವರಾಜ್ಯಕ್ಕೆ ಕರೆ ನೀಡಿದ ನಂತರ, ಆ ನಿಟ್ಟಿನಲ್ಲಿ ಹೋರಾಟ ಮುಂದುವರಿಸಲು ಗಾಂಧೀಜಿಯವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಜವಾಬ್ದಾರಿಯನ್ನು ನೀಡಿದು. ಅಸಹಕಾರ ಚಳವಳಿಯನ್ನು ಸೂಚಿಸಿದ ಗಾಂಧೀಜಿಯವರ ಸಲಹೆಯನ್ನುಕಾಂಗ್ರೆಸ್ ಒಪ್ಪಿ, ಆ ಕುರಿತು ಯೋಚನೆ ಮುಂದುವರಿದಾಗ, ಉಪ್ಪಿನ ಮೇಲಿನ ತೆರಿಗೆಯ ವಿರುದ್ಧ ಹೋರಾಟವನ್ನು ಮುಂದುವರಿಸಿದರೆ, ಭಾರತದ ಜನಸಾಮಾನ್ಯರ ಬೆಂಬಲ  ಪಡೆಯಬಹುದು ಎಂಬ ಯೋಚನೆ ಗಾಂಧೀಜಿಯವರದ್ದು.

ಜನಸಾಮಾನ್ಯರು, ಬಡವರು ಅಗತ್ಯವಾಗಿ ಸೇವಿಸುತ್ತಿದ್ದ ಉಪ್ಪಿನ ಮೇಲೆ ಅಧಿಕ ತೆರಿಗೆಯನ್ನು ವಿಧಿಸಿ, ಬ್ರಿಟಿಷರು ಅಪಾರ ಧನ ಸಂಗ್ರಹ ಮಾಡುತ್ತಿದ್ದರು. ಅದರಲ್ಲೂ ಮುಖ್ಯವಾಗಿ, ಬಿಸಿಲಿನ ಬೇಗೆ ಜಾಸ್ತಿಯಾಗಿರುವ ನಮ್ಮ ದೇಶದಲ್ಲಿ ನಿರ್ಜಲೀಕರಣವನ್ನು ತಡೆಯಲು ಎಲ್ಲರೂ ಉಪ್ಪನ್ನು ತಕ್ಕ ಪ್ರಮಾಣ ದಲ್ಲಿ ನಿರಂತರವಾಗಿ ಸೇವಿಸಬೇಕು; ಅದರ ಮೇಲೆ ತೆರಿಗೆ ವಿಧಿಸಿ, ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಉಪ್ಪನ್ನು ಸಾಗಿಸುವಾಗ ಅಧಿಕ ಮೊತ್ತದ ತೆರಿಗೆಯನ್ನು ಬ್ರಿಟಿಷರು ಸಂಗ್ರಹಿಸುತ್ತಿದ್ದರು. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಬ್ರಿಟಿಷರು ಭಾರತದಿಂದ ಸಂಗ್ರಹಿಸುತ್ತಿದ್ದ
ಧನದಲ್ಲಿ, ಶೇ. ೧೦ರಷ್ಟು ಉಪ್ಪಿನ ತೆರಿಗೆಯಿಮದಲೇ ಬರುತ್ತಿತ್ತು! ಈ ಉಪ್ಪಿನ ತೆರಿಗೆಗೆ ಕ್ರೂರ, ಅದ್ಭುತ, ದೀರ್ಘ ಇತಿಹಾಸವಿದೆ.

ನಮ್ಮ ದೇಶದ ಭಾಗಗಳನ್ನು ಒಂದೊಂದಾಗಿ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು, ಮೊದಮೊದಲು ನಡೆಸಿದ ಲೂಟಿಗಳಲ್ಲಿ ಈ ಉಪ್ಪಿನ ಮೇಲಿನ ತೆರಿಗೆಯೂ ಒಂದು. ರಾಬರ್ಟ್ ಕ್ಲೈವ್‌ನು ಬಂಗಾಳದಲ್ಲಿ ಅಽಕ ಪ್ರಮಾಣದ ಉಪ್ಪಿನ ತೆರಿಗೆ ಯನ್ನು ಸಂಗ್ರಹಿಸಿ, ಅದರ ದೊಡ್ಡ ಭಾಗವನ್ನು ಇಂಗ್ಲೆಂಡಿನ ಅಧಿಕಾರ ಶಾಹಿಗೆ ನೀಡಿ, ಅವರನ್ನು ಸಂಪ್ರೀತ ಗೊಳಿಸುತ್ತಿದ್ದ. ಹಣ ಪಡೆದ ಬ್ರಿಟಿಷ್ ಅಧಿಕಾರ ಶಾಹಿಯು, ಈಸ್ಟ್ ಇಂಡಿಯಾ ಕಂಪೆನಿಯ ಈ ರಿತಿಯ ಕ್ರೂರ ಪದ್ಧತಿಗಳಿಗೆ ಮೌನ ಸಮ್ಮಿತಿ ಮತ್ತು ಬಹಿರಂಗ ಸಮ್ಮತಿಯನ್ನೂ ನೀಡುತ್ತಿತ್ತು.

ಜತೆಗೆ, ಉಪ್ಪಿನ ಮೇಲಿನ ತೆರಿಗೆಯು ಅವರ ಆದಾಯದ ಪ್ರಮುಖ ಸೆಲೆಯಾಗಿದ್ದರಿಂದಲೇ, ೧೮೫೭ರ ನಂತರವೂ, ಅಂದರೆ ಬ್ರಿಟನ್ ರಾಣಿಯ ಆಧಿಪತ್ಯದ ನಂತರವೂ, ಉಪ್ಪಿನ ತೆರಿಗೆ ಮುಂದುವರಿಯಿತು. ಸಮುದ್ರ ತೀರದ ಪ್ರಾಂತ್ಯ ಮತ್ತು ರಾಜ್ಯಗಳಿಂದ ಉಪ್ಪನ್ನು ಸಲೀಸಾಗಿ ಒಳನಾಡಿಗೆ ಸಾಗಿಸದೇ ಇರು ವಂತೆ ತಡೆಯಲು, ೨೫೦೦ ಕಿ.ಮೀ. ಉದ್ದದ ಮುಳ್ಳು ಬೇಲಿಯನ್ನು ನಿರ್ಮಿಸಿ, ಅದನ್ನು ಕಾಯಲು ೧೨,೦೦೦ಕ್ಕೂ ಅಧಿಕ ಸಿಬ್ಬಂದಿ ನೇಮಿಸಿ, ನಿರ್ದಾಕ್ಷಿಣ್ಯ ವಾಗಿ ತೆರಿಗೆ ಸಂಗ್ರಹಿಸುತ್ತಿದ್ದರು!

ನಮ್ಮ ದೇಶದಲ್ಲಿ ಉಪ್ಪಿನ ಮೇಲೆ ಅಧಿಕ ತೆರಿಗೆ ಸಂಗ್ರಹವನ್ನು ಕಾನೂನುಬದ್ಧಗೊಳಿಸಲು, ಬ್ರಿಟಿಷ್ ಸರಕಾರವು ‘ಉಪ್ಪಿನ ಅಽನಿಯಮ ೧೮೮೨’ನ್ನು
ಜಾರಿಗೆ ತಂದಿತ್ತು! ಬ್ರಿಟಿಷ್ ರಾಜ್ ಆಡಳಿತದ ಉದ್ದಕ್ಕೂ, ನಮ್ಮ ದೇಶದಿಂದ ಪಡೆದ ಒಟ್ಟು ಆದಾಯದ ಶೇ.೮.೨ರಷ್ಟು ಉಪ್ಪಿನ ತೆರಿಗೆಯಿಂದ ಬಂದಿತ್ತು. ಉಪ್ಪಿನ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಎಂದು ಕಾಲದಿಂದ ಕಾಲಕ್ಕೆ ನಮ್ಮ ದೇಶದ ಹೋರಾಟಗಾರರು, ಜನನಾಯಕರು ಬ್ರಿಟಿಷರನ್ನು
ಬೇಡಿಕೊಳ್ಳುತ್ತಿದ್ದರು, ಸಣ್ಣ ಮಟ್ಟದ ಹೋರಾಟಕ್ಕೂ ಇಳಿದಿದ್ದರು; ಆದರೆ, ಪ್ರಮುಖ ಆದಾಯವಾಗಿದ್ದ ಈ ತೆರಿಗೆಯನ್ನು ಕಡಿಮೆ ಮಾಡುವುದಿರಲಿ, ಆ
ಕುರಿತು ಸಣ್ಣ ರಿಯಾಯತಿಯನ್ನೂ ಬ್ರಿಟಿಷರು ತೋರಲಿಲ್ಲ!

ಇವೆಲ್ಲಾ ಅರಿವಿದ್ದ ಗಾಂಧೀಜಿಯವರು, ಅಸಹಕಾರ ಚಳವಳಿಯ ಪ್ರಮುಖ ಭಾಗವಾಗಿ, ಉಪ್ಪಿನ ತೆರಿಗೆ ಇಳಿಸುವಂತೆ ಬ್ರಿಟಿಷರನ್ನು ಒತ್ತಾಯಿಸಲು,
ತಮ್ಮ ಹೋರಾಟವನ್ನು ರೂಪಿಸಿದರು. ೧೯೩೦ರ ಮಾರ್ಚ್ ೧೨ರಿಂದ ಎಪ್ರಿಲ್ ೬ರ ತನಕ ನಡೆದ ಆ ಅಭೂತಪೂರ್ವ ೩೮೭ ಕಿ.ಮೀ. ಯಾತ್ರೆಯು,
ಕಾಂಗ್ರೆಸ್‌ನ ಹೋರಾಟದ ಉನ್ನತ ಕ್ಷಣಗಳಲ್ಲಿ ಒಂದು. ಈ ರೀತಿ ಒಂದು ಪಾದಯಾತ್ರೆಯನ್ನು ನಡೆಸುತ್ತೇವೆ, ಅದು ಸಂಪೂರ್ಣ ಅಹಿಂಸಾತ್ಮಕ ವಾಗಿರಲಿದೆ ಎಂದು ಗಾಂಧೀಜಿಯವರು ಫೆಬ್ರವರಿ ೫ ರಿಂದಲೇ ಹೇಳಿಕೆ ನೀಡತೊಡಗಿದರು. ಸಾಬರಮತಿ ಆಶ್ರಮದಲ್ಲಿ ಆಗಾಗ ಪತ್ರಿಕಾ ಪ್ರತಿನಿಽಗಳ
ಸಭೆಗಳನ್ನು ಕರೆದು, ತಾನೇಕೆ ಈ ರೀತಿ ಉಪ್ಪಿನ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ವಿವರಿಸುತ್ತಿದ್ದರು.

ಗಾಂಧೀಜಿಯವರ ಪ್ರಾರ್ಥನಾ ಸಭೆಗಳೇ ಅವರ ಪತ್ರಿಕಾಗೋಷ್ಟಿಗಳೂ ಆಗಿದ್ದವು. ‘ಜೀವನ್ಮರಣದ ಹೋರಾಟವೊಂದನ್ನು ನಾವು  ಕೈಗೆತ್ತಿಕೊಳ್ಳುತ್ತಿದ್ದೇವೆ. ಇದೊಂದು ಪವಿತ್ರ ಯುದ್ಧ; ಎಲ್ಲಾ ರೀತಿಯ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ’ ಎಂದು ಘೋಷಿಸಿದರು. ವಿಶೇಷವೆಂದರೆ, ಇವರ ಹೇಳಿಕೆಗಳನ್ನು ಕೇಳಿಸಿಕೊಳ್ಳಲು ಎಲ್ಲಾ ಪತ್ರಿಕಾ ಪ್ರತಿನಿಧಿಗಳಿಗೂ ಅವಕಾಶವಿತ್ತು; ಅಂದು ಸಂಪೂರ್ಣವಾಗಿ ಬ್ರಿಟಿಷರ ವಶದಲ್ಲಿದ್ದ ಪತ್ರಿಕಾ ರಂಗವು ಗಾಂಧೀಜಿಯವರ
ಹೇಳಿಕೆಗಳನ್ನು ದೊಡ್ಡದಾಗಿ ಪ್ರಕಟಿಸುತ್ತಿದ್ದವು.

ಜತೆಗೆ, ಅಮೆರಿಕ ಮತ್ತು ಯುರೋಪಿನ ಹಲವು ಪತ್ರಿಕಾ ಪ್ರತಿನಿಽಗಳು ಗಾಂಧೀಜಿಯವರನ್ನು ಭೇಟಿ ಮಾಡಲು ಬ್ರಿಟಿಷ್ ಸರಕಾರ ಅನುಮತಿ ನೀಡಿತ್ತು.
ಈಗ ಯೋಚಿಸಿದರೆ, ಈ ಅಹಿಂಸಾತ್ಮಕ ಹೋರಾಟಕ್ಕೆ ಪ್ರಚಾರ ನೀಡಿದರೆ, ತನ್ನ ನಿರಂತರ ಆಡಳಿತಕ್ಕೆ ಲಾಭವೇ ಹೊರತು ನಷ್ಟವಿಲ್ಲ ಎಂದು ಬ್ರಿಟಿಷ್
ಸರಕಾರ ಯೋಚಿಸಿತ್ತು ಎನಿಸುತ್ತದೆ, ಆದ್ದರಿಂದಲೇ ಗಾಂಧೀಜಿಯವರ ಪತ್ರಿಕಾ ಹೇಳಿಕೆ, ವಿದೇಶಿ ಪತ್ರಕರ್ತರ ಸಂದರ್ಶನ, ಯಾತ್ರೆಯ  ಚಲನ ಚಿತ್ರೀಕರಣಗಳಿಗೆ ಬ್ರಿಟಿಷ್ ಅಧಿಕಾರಶಾಹಿಯು ಅನುಮತಿ ಮತ್ತು ಅವಕಾಶ ನೀಡಿತ್ತು ಎನಿಸುತ್ತದೆ. ಈ ಯಾತ್ರೆಯ ಪ್ರಚಾರ ಹೇಗಿತ್ತೆಂದರೆ, ಪ್ರತಿ ದಿನ
ಯಾವ ಹಳ್ಳಿಯಲ್ಲಿ ತಂಡ ತಂಗುತ್ತದೆ ಎಂಬ ವಿವರವೂ ಸಹ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ದುಬಾರಿ ಕ್ಯಾಮೆರಾ ಗಳೊಂದಿಗೆ ವಿದೇಶಿ ಪತ್ರಕರ್ತರು ಸಾಬರಮತಿ ಮತ್ತು ದಂಡಿಯಲ್ಲಿ ಬೀಡುಬಿಟ್ಟಿದ್ದರು.

ಗಾಂಧೀಜಿಯವರು ತಮ್ಮ ಹೋರಾಟಕ್ಕೆ ಸಿದ್ಧವಾದ ಪರಿ ಸಹ ಅಪೂರ್ವದ್ದು. ಕಾಂಗ್ರೆಸ್ ವತಿಯಿಂದಲೇ ಈ ಯಾತ್ರೆ ನಡೆಯುತ್ತಿದ್ದರೂ, ಉಪ್ಪಿನ
ಸತ್ಯಾಗ್ರಹದ ನಾಯಕತ್ವ ವಹಿಸಿ, ಅದರಲ್ಲಿ ಪಾಲ್ಗೊಳ್ಳುವ ಪ್ರಮುಖರನ್ನು ಗಾಂಧೀಜಿವರೇ ಸ್ವತಃ ಆಯ್ಕೆ ಮಾಡಿದ್ದರು; ಮತ್ತು ಅವರಲ್ಲಿ ಹೆಚ್ಚಿನವರು ಆಶ್ರಮದವರು ಮತ್ತು ಅಹಿಂಸೆಯ ಸಿದ್ದಾಂತಗಳನ್ನು ಗಾಂಧೀಜಿಯವರಿಂದ ಸ್ವತಃ ಬೋಧಿಸಲ್ಪಟ್ಟವರು. ಈ ನಡುವೆ ೨.೩.೧೯೩೦ರಂದು ಅಂದಿನ ವೈಸ್
ರಾಯ್ ಇರ‍್ವಿನ್‌ಗೆ ಪತ್ರ ಬರೆದು, ತಾನು ಈ ರೀತಿ ಹೋರಾಟ ಆರಂಭಿಸಲಿದ್ದೇನೆ, ಇದನ್ನು ನಿಲ್ಲಿಸಬೇಕಾದರೆ, ೧೧ ಬೇಡಿಕೆಗಳಿವೆ ಮತ್ತು ಅದರಲ್ಲಿ ಉಪ್ಪಿನ
ಮೇಲಿನ ತೆರಿಗೆಯನ್ನು ತೆಗೆಯುವುದೂ ಒಂದು ಎಂದು ಗಾಂಧೀಜಿ ಹೇಳಿದ್ದರು. ಆದರೆ ಈ ಅಹಿಂಸಾತ್ಮಕ ಹೋರಾಟದ ಕುರಿತು, ಅದರ ಬೇಡಿಕೆಗಳ ಕುರಿತು ಇರ‍್ವಿನ್‌ನು ಮೌನವಾಗಿದ್ದನು, ಮಾತ್ರವಲ್ಲ ಈ ಕುರಿತು ಚರ್ಚಿಸಲು ಗಾಂಧೀಜಿಯವರ ಜತೆ ಮಾತನಾಡಲು ಸಹ ನಿರಾಕರಿಸಿದನು.

೭೮ ಆಯ್ದ ಸತ್ಯಾಗ್ರಹಿಗಳೊಂದಿಗೆ ೧೨.೩.೧೯೩೦ ರಂದು ಗಾಂಧೀಜಿಯವರು ಸಾಬರಮತಿಯಿಂದ ಹೊರಟರು; ಖಾದಿ ಧರಿಸಿದ್ದ ಸಾವಿರಾರು ಅನು
ಯಾಯಿಗಳು ಅವರ ಹಿಂದೆ ಸಾಲಾಗಿ ನಡೆದರು. ವಿದೇಶಿ ಪತ್ರಿಕೆಗಳು ಇವರ ಯಾತ್ರೆಯನ್ನು ‘ಒಂದು ಶ್ವೇತ ನದಿ ಹರಿದಂತೆ ಇತ್ತು’ ಎಂದು ವರ್ಣಿಸಿದವು.
ಸಾಬರಮತಿ ಆಶ್ರಮದಲ್ಲಿ ಈ ಯಾತ್ರೆಯನ್ನು ನೊಡಲು ಸುಮಾರು ೧,೦೦,೦೦೦ ಲಕ್ಷ ಜನ ಸೇರಿದ್ದರೆಂದು, ಬ್ರಿಟಿಷರ ಸಮ್ಮತಿಯ ಮೇರೆಗೆ ಮುದ್ರಣಗೊಳ್ಳುತ್ತಿದ್ದ ‘ದ ಸ್ಟೇಟ್ಸ್‌ಮನ್’ ಪತ್ರಿಕೆ ಬರೆದಿತ್ತು. ಇದಕ್ಕಿಂತ ಹೆಚ್ಚು ಜನರು ಸೇರಿದ್ದರೆಂದು ವಿದೇಶಿ ಪತ್ರಿಕೆಗಳು ಬರೆದಿದ್ದವು. ಮೊದಲ ದಿನ ೨೧
ಕಿ.ಮೀ. ನಡೆದು ಹಳ್ಳಿಯೊಂದರಲ್ಲಿ ತಂಗಿದರು; ಅಲ್ಲಿ ನೆರೆದಿದ್ದ ೪,೦೦೦ ಜನರನ್ನುದ್ದೇಶಿಸಿ ಗಾಂಧೀಜಿ ಭಾಷಣ ಮಾಡಿ, ಉಪ್ಪಿನ ಮೇಲಿನ ತೆರಿಗೆ ಎಷ್ಟು
ಕ್ರೂರ ಎಂಬುದನ್ನು ವಿವರಿಸುತ್ತಲೇ, ಪೂರ್ಣ ಸ್ವರಾಜ್ಯಕ್ಕಾಗೆ ನಡೆಯುತ್ತಿರುವ ಅಹಿಂಸಾತ್ಮಕ ಹೋರಾಟ ಇದು ಎಂದು ಹೇಳಿದರು.

ಮುಂದುವರಿದ ಯಾತ್ರೆಗೆ ಇನ್ನಷ್ಟು ಜನ ಸೇರಿದರು; ಕೊನೆ ಕೊನೆಗೆ ಯಾತ್ರೆಯು ಮೂರು ಕಿ.ಮೀ. ಉದ್ದವಿತ್ತು. ಈ ಯಾತ್ರೆಗೆ ‘ನ್ಯೂಯಾಕ್ ಟೈಮ್ಸ್’ ನೀಡಿದ ಬೆಂಬಲ ವಿಶೇಷವಾದದ್ದು; ಗುಜರಾತ್‌ನ ಹಳ್ಳಿಗಳಲ್ಲಿ ಜನರು ನಡೆಸುತ್ತಿದ್ದ ಅಹಿಂಸಾತ್ಮಕ ಹೋರಾಟಕ್ಕೆ ದೂರದ ಅಮೆರಿಕದಿಂದ ಹೊರಬರುವ ಆ ಪತ್ರಿಕೆ ಕವರೇಜ್ ನೀಡಿತ್ತು! ಎಪ್ರಿಲ್ ೬ ಮತ್ತು ೭ ರಂದು ಎರಡು ಪುಟಗಳ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ‘ಟೈಮ್’ ಪತ್ರಿಕೆಯು ವಿಶೇಷ ಕವರೇಜ್ ನೀಡಿತು ಮತ್ತು ನಂತರ, ಆ ‘ವರ್ಷದ ವ್ಯಕ್ತಿ’ಯಾಗಿ ಗಾಂಧೀಜಿಯವರನ್ನು ಆಯ್ಕೆ ಮಾಡಿತ್ತು.

ದಂಡಿಯ ಸಮುದ್ರತೀರಕ್ಕೆ ಎಪ್ರಿಲ್ ೫ ರಂದು ಆಗಮಿಸಿದ ಗಾಂಧೀಜಿವರು, ಅಲ್ಲಿನ ನೆಲದಲ್ಲಿ ತಯಾರಿಸಿದ್ದ ಒಂದು ಮುಷ್ಟಿ ಉಪ್ಪನ್ನು ಕೈಗೆತ್ತಿ ಕೊಂಡರು; ಆಗ ಅಲ್ಲಿ ನೆರೆದಿದ್ದ ಛಾಯಾಚಿತ್ರಗ್ರಾಹಕರು ತೆಗೆದ ಚಿತ್ರ ಸಾಕಷ್ಟು ಪ್ರಸಿದ್ಧ. ಕೈಯಲ್ಲಿ ಉಪ್ಪನ್ನು ಹಿಡಿದ ಗಾಂಧೀಜಿವರು ‘ಇದರ ಮೂಲಕ ನಾನು ಈಗ ಬ್ರಿಟಷ್ ಸಾಮ್ರಾಜ್ಯದ ತಳಪಾಯವನ್ನೇ ಅಲುಗಾಡಿಸುತ್ತಿದ್ದೇನೆ’ ಎಂದು ಘೋಷಿಸಿದರು. ಈ ಹೇಳಿಕೆ ಸಹ ವಿಶ್ವಪ್ರಸಿದ್ಧ; ಆದರೆ, ಈಗ ಗಮನಿಸಿದರೆ, ಬ್ರಿಟಿಷರು ನಮ್ಮ ದೇಶವನ್ನು ತೊರೆಯಲು ಮುಂದಿನ ೧೭ ವರ್ಷ ಕಾಯಬೇಕಾಯಿತು!

ದಂಡಿಯ ಸಮುದ್ರ ತೀರದಲ್ಲಿ ಉಪ್ಪು ನೀರನ್ನು ಕುದಿಸಿ ಉಪ್ಪನ್ನು ತಯಾರಿಸಿದ ಗಾಂದೀಜಿಯವರ ಕಾರ್ಯವನ್ನು, ದೇಶದುದ್ದಗಲಕ್ಕೂ ಹಳ್ಳಿ ಹಳ್ಳಿಗಳ
ಜನರು ಮಾಡಿದರು, ಅನಧಿಕೃತವಾಗಿ ಉಪ್ಪು ತಯಾರಿಸಿದರು. ನಮ್ಮ ರಾಜ್ಯದ ಅಂಕೋಲೆ, ಕುಂದಾಪುರ ಮೊದಲಾದ ಕಡೆಯೂ ಉಪ್ಪನ್ನು ತಯಾರಿಸಿ, ಜನರು ಪೊಲೀಸರ ಏಟು ತಿಂದರು,ಬಂಧನಕ್ಕೆ ಒಳಗಾದರು. ದಂಡಿಯಲ್ಲಿ ಒಂದು ತಾತ್ಕಾಲಿಕ ಆಶ್ರಮ ನಿರ್ಮಿಸಿಕೊಂಡು ಅಲ್ಲೇ ವಾಸಿಸುತ್ತಿದ್ದ ಗಾಂಧೀಜಿಯವರು, ಹೋರಟ ಮುಂದುವರಿಸಿದರು. ಅಲ್ಲಿಂದ ೪೦ ಕಿಮೀ ದೂರದಲ್ಲಿದ್ದ ಧರಾಸನಾ ಉಪ್ಪಿನ ಕಾರ್ಖಾನೆಗೆ ದಾಳಿ ಇಡುತ್ತೇನೆ ಎಂದು ವೈಸ್‌ರಾಯ್ ಇರ‍್ವಿನ್‌ಗೆ ಪತ್ರ ಬರೆದರು; ಆಗ ಕಾರ್ಯಪ್ರವೃತ್ತವಾದ ಪೊಲೀಸರು, ೪.೫.೧೯೩೦ರಂದು ಗಾಂಧಿಯವರನ್ನು ಬಂಧಿಸಿದರು. ಉಪ್ಪಿನ ಕಾರ್ಖಾನೆಗೆ ಲಗ್ಗೆಯಿಟ್ಟ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಲಾಠಿಯಿಂದ ಬಡಿದರು; ತಲೆ ಒಡೆದರು, ಹೊಟ್ಟೆ ಮತ್ತು ವೃಷಣಗಳಿಗೆ ತುಳಿದರು; ಕನಿಷ್ಠ ಇಬ್ಬರು ಮೃತಪಟ್ಟರು.

ಲಾಠಿಯಿಂದ ಬಡಿಯುತ್ತಿದ್ದ ಪೊಲೀಸರ ಎದುರು ಹೋಗಿ ನಿಲ್ಲುತ್ತಿದ್ದ ಸತ್ಯಾಗ್ರಹಿಗಳನ್ನು ಕಂಡಿ ವಿದೇಶಿ ಪತ್ರಕರ್ತರು ನಿಬ್ಬೆರಗಾದರು! ಇಂತಹ ಅಹಿಂಸೆ
ಹೇಗೆ ಸಾಧ್ಯ ಎಂದು ಅಚ್ಚರಿಗೊಳಗಾದರು; ಪೊಲೀಸರ ಈ ದಬ್ಬಾಳಿಕೆಯು ಅಮೆರಿಕ ಮತ್ತು ಯುರೋಪಿನ ಪತ್ರಿಕೆಗಳಲ್ಲಿ ವಿವರವಾಗಿ ವರದಿಯಾಯಿತು.
ಈ ಸತ್ಯಾಗ್ರಹದ ಪರಿಣಾಮವಾಗಿ, ೫.೩.೧೯೩೧ರಂದು, ಅಂದರೆ ಒಂದು ವರ್ಷದ ನಂತರ, ‘ಗಾಂಧಿ ಇರ‍್ವಿನ್ ಒಪ್ಪಂದ’ ಜಾರಿಗೆ ಬಂತು.

ಅದರ ಪ್ರಕಾರ ೯೦,೦೦೦ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಉಪ್ಪಿನ ಮೇಲಿನ ತೆರಿಗೆಯನ್ನು ತೆಗೆದುಹಾಕಬೇಕು ಎಂಬುದು
ಕಾಂಗ್ರೆಸ್ ಮತ್ತು ಗಾಂಧೀಜಿಯವರ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಅದು ಮಾತ್ರ ಜಾರಿಗೆ ಬರಲಿಲ್ಲ; ‘ಸಮುದ್ರ ತೀರದಲ್ಲಿರುವ ವ್ಯಕ್ತಿಗಳು
ಉಪ್ಪನ್ನು ಮುಕ್ತವಾಗಿ ತಯಾರಿಸಬಹುದು’ ಎಂದು ಸರಕಾರ ಅನುಮತಿ ನೀಡಿತೇ ಹೊರತು, ದೇಶದಾದ್ಯಂತ ಉಪ್ಪಿನ ಮೇಲಿನ ತೆರಿಗೆ ರದ್ದುಗೊಳ್ಳಲಿಲ್ಲ. ಮಾತ್ರವಲ್ಲ, ಆ ತೆರಿಗೆಯು ೧೭ ವರ್ಷ ಮುಂದುವರಿಯಿತು! ಕೊನೆಗೆ, ೬.೪.೧೯೪೬ರಂದು ಗಾಂಧೀಜಿಯವರ ಮನವಿಯ ಮೇರೆಗೆ ವೈಸ್‌ರಾಯ್ ಎಕ್ಸಿಕ್ಯುಟಿವ್ ಕೌನ್ಸಿಲ್‌ನ ಸದಸ್ಯ ರೋಲ್ಯಾಂಡ್ಸ್ ಎಂಬಾತ ಉಪ್ಪಿನ ತೆರಿಗೆ ರದ್ದುಗೊಳಿಸುವ ಆದೇಶ ನೀಡಿದ; ಆದರೆ ವೈಸ್ ರಾಯ್ ವಾವೆಲ್‌ನು ಅದನ್ನು ತಿರಸ್ಕರಿಸಿದ. ಆ ನಂತರ, ಜವಹರ್‌ಲಾಲ್ ನೆಹರೂ ಅವರು ಮುಖ್ಯಸ್ಥರಾಗಿದ್ದ ಮಧ್ಯಂತರ ಸರಕಾರ (ಇಂಟರಿಮ್ ಗವರ್ನಮೆಂಟ್ ಆಫ್ ಇಂಡಿಯಾ)ವು ಉಪ್ಪಿನ ಮೇಲಿನ ತೆರಿಗೆಯನ್ನು ೧೯೪೭ರಲ್ಲಿ ರದ್ದುಗೊಳಿಸಿತು.

೧೯೩೦ರಲ್ಲಿ ಸಾವಿರಾರು ಜನರು ಲಾಠಿ ಏಟು ತಿಂದ ಉಪ್ಪಿನ ಸತ್ಯಾಗ್ರಹದ ಫಲ ಉಣ್ಣಲು ೧೯೪೭ರ ತನಕ, ಅಂದರೆ ಬ್ರಿಟಿಷರು ನಮ್ಮ ದೇಶವನ್ನು
ತೊರೆಯುವ ವರ್ಷದ ತನಕ ಕಾಯಬೇಕಾದುದು ಒಂದು ಪುಟ್ಟ ದುರಂತವೇ ಸರಿ.

 
Read E-Paper click here

error: Content is protected !!