Saturday, 27th July 2024

ವಸುಂಧರಾ ರಾಜೆ ಜಯಭೇರಿ, ಮುಖ್ಯಮಂತ್ರಿ ಗೆಹ್ಲೋಟ್ ಅದ್ಧೂರಿ ಜಯ

ರಾಜಸ್ಥಾನ: ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್, ಬಿಜೆಪಿ ಅಭ್ಯರ್ಥಿ ಮಹೇಂದ್ರ ಸಿಂಗ್​ ರಾಠೋಡ್ ​ ವಿರುದ್ಧ 18,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅದ್ಧೂರಿ ಜಯಗಳಿಸಿದ್ದಾರೆ.

ಝಾಲರ್​ಪಾಠನ್​​ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮ್​ ಲಾಲ್​ ಚೌಹಾಣ್​ ವಿರುದ್ಧ 48,489 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ.

ಕಾಂಗ್ರೆಸ್​ ಹಿರಿಯ ನಾಯಕ ಸಚಿನ್​ ಪೈಲಟ್​ ಟೋಂಕ್​ ಕ್ಷೇತ್ರದಲ್ಲಿ ಜಯ ಗಳಿಸಿದ್ದು, ಬಿಜೆಪಿ ನಾಯಕ ರಾಜ್ಯವರ್ಧನ್​ ರಾಥೋಡ್​ ಝೋತ್​ವಾರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

ಕೋಡಂಗಲ್​ ಕ್ಷೇತ್ರದಲ್ಲಿ ಬಿಆರ್​ಎಸ್​ ಅಭ್ಯರ್ಥಿ ಪಟ್ನಾಮ್​ ನರೇಂದ್ರ ರೆಡ್ಡಿ ಜೊತೆಗೆ ನೇರ ಹಣಾಹಣಿಯೊಂದಿಗೆ ಸ್ಪರ್ಧಿಸಿರುವ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಎ. ರೇವಂತ್​​ ರೆಡ್ಡಿ ಭರ್ಜರಿ ಜಯಗಳಿಸಿದ್ದಾರೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಹಾಗೂ ಬಿಆರ್​ಎಸ್​ ನಾಯಕ ಕೆ.ಚಂದ್ರಶೇಖರ್​ ರಾವ್​ ಕಾಮರೆಡ್ಡಿ ಕ್ಷೇತ್ರದಲ್ಲಿ ಇದೀಗ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ ನಾಯಕ ರೇವಂತ್​ ರೆಡ್ಡಿ ಈಗ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದೇ ವೇಳೆ ಮತ್ತೊಂದು ಕ್ಷೇತ್ರ ಗಜ್ವಾಲ್​ನಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಕೆಸಿಆರ್, ಆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮುಖ್ಯಮಂತ್ರಿ ಕೆಸಿಆರ್​ ಪುತ್ರ ಕೆ ಟಿ ರಾಮರಾವ್​ ಸಿರ್ಸಿಲಾ ಕ್ಷೇತ್ರದಲ್ಲಿ ಜಯ ಗಳಿಸಿದ್ದರೆ, ಕಾಂಗ್ರೆಸ್​ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಮಧಿರ ಕ್ಷೇತ್ರದಲ್ಲಿ ವಿಜಯಭೇರಿ ಬಾರಿಸಿದ್ದಾರೆ. ಹುಝೂರ್​ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ಉತ್ತಮ್​ ಕುಮಾರ್​ ರೆಡ್ಡಿ ವಿಜಯ ಸಾಧಿಸಿದ್ದಾರೆ.

ಬಿಜೆಪಿ ಪ್ರಮುಖ ನಾಯಕ ಬಂಡಿ ಸಂಜಯ್ ಅವರು​ ಕರೀಂನಗರ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಸಿದ್ದಿಪೇಟ್​ ಕ್ಷೇತ್ರದಲ್ಲಿ ಬಿಆರ್​ಎಸ್​ನ ಹರೀಶ್​ ರಾವ್​ ಮುನ್ನಡೆ ಪಡೆದುಕೊಂಡಿದ್ದಾರೆ. ಹುಝೂರಾಬಾದ್​ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಈಟಲ ರಾಜೇಂದರ್​ ಹಿನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಸ್ಪರ್ಧಿಸಿರುವ ಗಜ್ವಾಲ್​ ಕ್ಷೇತ್ರದಲ್ಲಿಯೂ ಹಿನ್ನಡೆ ಸಾಧಿಸಿದ್ದಾರೆ. ಜುಬ್ಲಿಹಿಲ್ಸ್​ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಹಾಗೂ ಮಾಜಿ ಕ್ರಿಕೆಟಿಗ ಮಹಮ್ಮದ್​ ಅಜರುದ್ದೀನ್​​​​​ ​ಈಗ ಹಿನ್ನಡೆ ಸಾಧಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಮಾಮಾ ಎಂದೇ ಪ್ರಸಿದ್ಧಿಯಾಗಿರುವ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ತಮ್ಮ ಭದ್ರಕೋಟೆ​ ಬುಧಾನಿ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಬಾಲಿವುಡ್​ ನಟ ವಿಕ್ರಮ್​ ಮಸ್ತಲ್​ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿ ಮಿರ್ಚಿ ಬಾಬಾ ಎಂದೇ ಖ್ಯಾತ ವೈರಾಗ್ಯಾನಂದ್​ ವಿರುದ್ಧ ಭರ್ಜರಿ ಗೆಲವು ಸಾಧಿಸಿದ್ದಾರೆ.

ಇಂದೋರ್​ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಕೈಲಾಶ್​ ವಿಜಯ್​ ವರ್ಗೀಯಾ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಚಿಂದ್ವಾರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

ಛತ್ತೀಸ್​ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್​​ ಪಾಠನ್​​ ಕ್ಷೇತ್ರದಲ್ಲಿ, ಪ್ರತಿಸ್ಪರ್ಧಿಗಿಂತ ಮತ್ತೆ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಮಾಜಿ ಸಿಎಂ ಹಾಗೂ ಬಿಜೆಪಿ ನೇತಾರ ರಮಣ್​ ಸಿಂಗ್ ರಾಜನಂದಗಾಂವ್​ ಕ್ಷೇತ್ರದಲ್ಲಿ​ ಪ್ರತಿಸ್ಪರ್ಧಿಗಿಂತ ಮುನ್ನಡೆ ಸಾಧಿಸಿದ್ದಾರೆ. ಉಪಮುಖ್ಯಮಂತ್ರಿ ಟಿ.ಎಸ್.​ ಸಿಂಘ್​​ ದೇವ್​ ಅಂಬಿಕಾಪುರ ಕ್ಷೇತ್ರದಲ್ಲಿ ಹಿನ್ನಡೆ ಕಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!