ಬೀದರ್: ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಆಶ್ರಯದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಪರಿಸರದಲ್ಲಿ ಎರಡು ದಿನಗಳ 41ನೇ ಶರಣ ಕಮ್ಮಟ- ಅನುಭವಮಂಟಪ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕೋವಿಡ್ ಸೋಂಕು ಹಿನ್ನಲೆಯಲ್ಲಿ ಉತ್ಸವವನ್ನು ಸಂಪೂರ್ಣ ಅಂತರ್ಜಾಲದ ಮೂಲಕ ನೆರವೇರಿಸಲಾಯಿತು. ಉದ್ಘಾಟನೆ ಮತ್ತು ಸಾನಿಧ್ಯ ವಹಿಸಿದ್ದ ಗಣ್ಯರು ಮತ್ತು ಪೂಜ್ಯರು ಅಂತರ್ಜಾಲದ ಮೂಲಕವೇ ವಿಡಿಯೋ ಸಂದೇಶ ನೀಡಿದರು. ಸಾನಿಧ್ಯ ವಹಿಸಿದ್ದ ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ಸ್ವಾವಲಂಬಿ ದೇಶ, ಆತ್ಮನಿರ್ಭರ ಭಾರತಕ್ಕೆ ಶರಣರ ಕಾಯಕವೇ ಕೈಲಾಸ ಸಿದ್ಧಾಂತ ಅವಶ್ಯವಾಗಿದೆ. ಯುವಕರು ವಚನಗಳ ಅಧ್ಯಯನ ಮಾಡಿ ಶರಣರು ಪ್ರತಿಪಾದಿಸಿದ ತತ್ವಗಳನ್ನು ನಿಜಾಚರಣೆಯಲ್ಲಿ ತರುವ ಮೂಲಕ ಸ್ವಾವಲಂಬಿ ಆಗಬೇಕು. ಯುವಕರಲ್ಲಿ ಹೊಸ ಹುರುಪು ಬರಲು ವಚನ ಸಾಹಿತ್ಯ ಅವಶ್ಯ ವಾಗಿದೆ ಎಂದರು.
ಧಾರವಾಢ ಮುರಘಾ ಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಮುರಘಾ ಮಠದ ಮಹಾಂತಪ್ಪಗಳ ಪ್ರೇರಣೆಯ ನುಡಿ ಕೇಳಿ ಬಸವಕಲ್ಯಾಣದಲ್ಲಿ ಅನುಭವಮಂಟಪ ನಿರ್ಮಾಣ ಕಾರ್ಯ ನಡೆದು 1982 ರಲ್ಲಿ ಪೂರ್ಣಗೊಳಿಸಿದ ಕೀರ್ತಿ ಲಿಂ. ಚನ್ನ ಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅಂದಿನಿಂದ ಎಲ್ಲ ವಿಧಾಯಕ ಕಾರ್ಯಗಳು ನಿರಂತರವಾಗಿ ನಡೆಯಲು ಇಂದಿನ ಭಾಲ್ಕಿ ಹಿರೇಮಠದ ಹಿರಿಯ ಮತ್ತು ಕಿರಿಯ ಪಟ್ಟದ್ದೇವರಿಗೆ ಸಲ್ಲುತ್ತದೆ. ಶರಣರ ಬದುಕು ಬರಹದಂತೆ ನಮ್ಮೆಲ್ಲರ ಜೀವನ ಪರಿವರ್ತನೆ ಗೊಳ್ಳಲಿ ಎಂದರು.