ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನವರಿ 16 ರಂದು 8 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಕ್ಕೆ ಉದ್ಘಾಟನೆ ನೀಡಲಾಗುತ್ತಿದೆ. ಈ ಸಂಬಂಧ ಇಂದು ಸಿ.ವಿ.ರಾಮನ್ ನಗರ ಸಾರ್ವಜನಿಕ ಆಸ್ಪತ್ರೆಗೆ ಮಾನ್ಯ ಆಯುಕ್ತರು ಎನ್.ಮಂಜುನಾಥ್ ಪ್ರಸಾದ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪೂರ್ವ ವಲಯ ಜಂಟಿ ಆಯುಕ್ತರು ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ, ಪೂರ್ವ ವಲಯ ಆರೋಗ್ಯಾ ಧಿಕಾರಿ ಡಾ. ಸಿದ್ದಪ್ಪಾಜಿ, ಆಸ್ಪತ್ರೆ ವೈದ್ಯರು/ಸಿಬ್ಬಂದಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಬಿಎಂಪಿ ವ್ಯಾಪ್ತಿಯ ಸಿ.ವಿ.ರಾಮನ್ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಳೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಲಸಿಕೆ ನೀಡುವ ವೇಳೆ ಮಾಡಿಕೊಂಡಿರುವ ಸಿದ್ದತೆಗಳನ್ನು ಆಯುಕ್ತರು ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಪ್ರಧಾನಮಂತ್ರಿಗಳು ನಾಳೆ 10.30ಕ್ಕೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅದೇ ವೇಳೆ ಬಿಬಿಎಂಪಿ ವ್ಯಾಪ್ತಿಯ 8 ಕೇಂದ್ರ(ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ನಗರ ಜಿ.ಹೆಚ್, ಜಯನಗರ ಜಿ.ಹೆಚ್, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಮಲ್ಲ ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಹಾಗೂ ಯಲಹಂಕ ಸಾರ್ವಜನಿಕ ಆಸ್ಪತ್ರೆ)ಗಳಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿಯೊಂದು ಕೇಂದ್ರದಲ್ಲೂ 100 ಮಂದಿಗೆ ಲಸಿಕೆ ನೀಡಲಾಗುವುದು. ಈಗಾಗಲೇ 1,05,000 ಕೋವಿಶೀಲ್ಡ್ ವ್ಯಾಕ್ಸಿನ್ ಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿದೆ. ಇಂದು ವ್ಯಾಕ್ಸಿನ್ ಗಳನ್ನು ಕೋಲ್ಡ್ ಚೈನ್ ಪಾಯಿಂಟ್ ಗಳಿಗೆ ಕಳುಹಿಸಲಾಗುತ್ತದೆ. ನಾಳೆ ಬೆಳಗ್ಗೆ ಲಸಿಕೆ ನೀಡುವ 8 ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂದರು.
ಒಂದು ಕೇಂದ್ರದಲ್ಲಿ ಏನೆಲ್ಲಾ ಸೌಲಭ್ಯಗಳಿರಲಿವೆ ಎಂಬುದನ್ನು ನೋಡಲು ಇಂದು ಸಿ.ವಿ.ರಾಮನ್ ನಗರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾ ಯಿತು. ಲಸಿಕೆ ಪಡೆಯುವ ಫಲಾನುಭವಿಗಳು ಲಸಿಕೆ ನೀಡುವ ಕೇಂದ್ರಕ್ಕೆ ಬಂದಾಗ ಮೊದಲಿಗೆ ಕೈಗಳಿಗೆ ಸ್ಯಾನಿಟೈಸರ್ ಹಾಕಲಾಗುತ್ತದೆ. ಆ ಬಳಿಕ ಥರ್ಮಲ್ ಸ್ಕ್ಯಾನ್ ಹಾಗೂ ಪಲ್ಸ್ ಆಕ್ಸಿಮೀಟರ್ ಮೂಲಕ ತಪಾಸಣೆ ನಡೆಸ ಲಾಗುತ್ತದೆ.
ನಂತರ ಕಾಯುವ ಕೊಠಡಿಗೆ ಬರಲಿದ್ದಾರೆ. ಲಸಿಕೆ ಪಡೆಯುವವರ ಮಾಹಿತಿ ಯನ್ನು ಕೋವಿನ್ ಪೋರ್ಟಲ್ ನಲ್ಲಿ ದಾಖಲಿಸ ಲಾಗಿದ್ದು, ಲ್ಯಾಪ್ ಟಾಪ್/ಕಂಪ್ಯೂಟರ್ ನಲ್ಲಿ ಲಸಿಕೆ ಪಡೆಯುವ ಫಲಾನುಭವಿಯ ವಿವರಗಳನ್ನು ಸಿಬ್ಬಂದಿ ಪರಿಶೀಲನೆ ನಡೆಸಿ ಅವರೇ ಎಂದು ಖಾತರಿಯಾದ ಬಳಿಕ ಮೊಬೈಲ್ ಸಂಖ್ಯೆ ನಮೂದಿಸಿ, ಮೊಬೈಲ್ ಸಂಖ್ಯೆಗೆ ಬರುವ ಒ.ಟಿ.ಪಿ ಯನ್ನು ಪೋರ್ಟಲ್ ನಲ್ಲಿ ನಮೂದಿಸಿಕೊಂಡು ಲಸಿಕೆ ನೀಡುವ ಕೊಠಡಿಗೆ ಕಳುಹಿಸಲಿದ್ದಾರೆ.
ಲಸಿಕೆ ನೀಡಿದ ಬಳಿಕ ಪರಿವೀಕ್ಷಣಾ ಕೊಠಡಿಯಲ್ಲಿ ಅರ್ಧ ಗಂಟೆ ವಿಶ್ರಾಂತಿ ಪಡೆಯಬೇಕು. ಈ ವೇಳೆ ಲಸಿಕೆ ನೀಡಿದವರಿಗೆ ಏನಾದರು ಆರೋಗ್ಯ ಸಮಸ್ಯೆಯಾದರೆ ಪರಿವೀಕ್ಷಣಾ ಕೊಠಡಿಯಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದರೆ ಕೂಡಲೆ ಕೇಂದ್ರಕ್ಕೆ ಲಿಂಕ್ ಮಾಡಿರುವ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಲಾಗುತ್ತದೆ ಎಂದರು.
ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ 300 ಮಂದಿ ಫಾಲಾನುಭವಿಗಳಿದ್ದು, ನಾಳೆ 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಜನವರಿ 18 ರಂದು 100 ಮಂದಿ, ಜನವರಿ 19ರಂದು 100 ಮಂದಿಗೆ ಲಸಿಕೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜನವರಿ 18 ರಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ 760 ಕೇಂದ್ರಗಳಲ್ಲಿಯೂ ಲಸಿಕೆ ನೀಡಲಾಗುತ್ತದೆ. ಅದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿ ಕೊಳ್ಳಲಾಗಿದ್ದು, ಆಯಾ ವಲಯ ಜಂಟಿ ಆಯುಕ್ತರು ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.
ಇಂದು ಬೆಳಗ್ಗೆ ಮಾನ್ಯ ಮುಖ್ಯಕಾರ್ಯದರ್ಶಿಗಳ ಜೊತೆ ನಡೆದ ಸಭೆಯಲ್ಲಿ ಜನವರಿ 24ರ ವೇಳೆಗೆ 2ನೇ ಹಂತದಲ್ಲಿ ಲಸಿಕೆ ಪಡೆಯುವ ಫಲಾನುಭವಿಗಳು ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ನೋಂದಣಿ ಆದ ಬಳಿಕ ಲಸಿಕೆ ನೀಡುವ ದಿನ ಖಾತರಿಪಡಿಸ ಲಿದ್ದಾರೆ. ಅದರಂತೆ 2ನೇ ಹಂತದಲ್ಲಿ ಪಾಲಿಕೆಯ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಜಲಮಂಡಳಿ ಸಿಬ್ಬಂದಿ ಸೇರಿದಂತೆ ಪ್ರಂಟ್ ಲೈನ್ ವರ್ಕರ್ಸ್ ಗಳಿಗೆ ಲಸಿಕೆ ನೀಡಲಾಗು ತ್ತದೆ ಎಂದರು.
ಲಸಿಕೆ ಪಡೆಯುವ ಫಲಾನುಭವಿಗಳಿಗೆ ಒ.ಟಿ.ಪಿ ಬರುವ ವೇಳೆ ನೆಟ್ ವರ್ಕ್ ಸಮಸ್ಯೆ ಆಗದಂತೆ ಎಲ್ಲಾ ಕೇಂದ್ರಗಳಲ್ಲಿಯೂ ಎರಡು/ಮೂರು ಇಂಟರ್ ನೆಟ್ ಕನೆಕ್ಷನ್ ತೆಗೆದುಕೊಂಡಿದ್ದು, ನೆಟ್ ವರ್ಕ್ ಸಮಸ್ಯೆ ಆಗದಂತೆ ಸೂಕ್ತ ಕ್ರಮವಹಿಸಲಾಗಿದೆ. ಅದಲ್ಲದೆ ಎಲ್ಲಾದರೂ ನೆಟ್ ವರ್ಕ್ ಸಮಸ್ಯೆಯಾದರೆ ಫಲಾನುಭವಿಗಳು ಕೋವಿನ್ ಪೋರ್ಟಲ್ನಲ್ಲಿ ದಾಖಲಿಸಿರುವ ಗುರುತಿನ ಚೀಟಿ ಪರಿಶೀಲನೆ ನಡೆಸಿ ಆಫ್ ಲೈನ್ ಮೂಲಕ ದಾಖಲು ಮಾಡಿಕೊಂಡು ಲಸಿಕೆ ನೀಡಲಾಗುತ್ತದೆ. ತದನಂತರ ಆನ್ ಲೈನ್ ನಲ್ಲಿ ದಾಖಲು ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎಂದು ಹೇಳಿದರು.