ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯೋಜನಾ ವಿಭಾಗದ ಕೈಗೆತ್ತಿಕೊಂಡಿರುವ ಶಿವಾನಂದ ವೃತ್ತ ಮೇಲು ಸೇತುವೆ ಕಾಮಗಾರಿಯನ್ನು ಆಡಳಿತಗಾರರು ಶ್ರೀ ಗೌರವ್ ಗುಪ್ತಾ ತಪಾಸಣೆ ನಡೆಸಿದರು.
ಈ ವೇಳೆ ಜಂಟಿ ಆಯುಕ್ತರುಗಳಾದ ಪಲ್ಲವಿ, ಶಿವಸ್ವಾಮಿ, ಉಪ ಆಯುಕ್ತರು (ಭೂಸ್ವಾಧೀನ) ಹರೀಶ್ ನಾಯ್ಕ್, ಯೋಜನಾ ವಿಭಾಗದ ಮುಖ್ಯ ಅಭಿಯಂತರರು ರಮೇಶ್, ಅಧೀಕ್ಷಕ ಅಭಿಯಂತರರು ಲೋಕೇಶ್, ಉಪ ಅರಣ್ಯ ಸಂರಕ್ಷಕರಾದ ರಂಗನಾಥ ಸ್ವಾಮಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಾನಂದ ವೃತ್ತದ ಬಳಿ ಕೈಗೆತ್ತಿಕೊಂಡಿರುವ ಮೇಲುಸೇತುವೆ ಕಾಮಗಾರಿಯು ಕಾರಣಾಂತರಗಳಿಂದ ತಡವಾಗುತ್ತಿದೆ. ಇದೀಗ ಭೂಸ್ವಾಧೀನ, ಜಲಮಂಡಳಿ ನೀರಿನ ಕೊಳವೆ ಸ್ಥಳಾಂತರ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಕೂಡಲೆ ಇತ್ಯರ್ಥಪಡಿಸಿ ಕೊಂಡು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆಡಳಿಗಾರರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿವಾನಂದ ವೃತ್ತದ ಬಳಿ 493 ಮೀಟರ್ ಉದ್ದದ ಮೇಲುಸೇತುವೆಯನ್ನು ಕೈಗೆತ್ತಿಕೊಂಡಿದ್ದು, ಅದಕ್ಕೆ 16 ಪಿಲ್ಲರ್ ಗಳು ಬರಲ್ಲಿದ್ದು, ಅದರಲ್ಲಿ ಈಗಾಗಲೇ 9 ಪಿಲ್ಲರ್ ಗಳ ಕಾಮಗಾರಿ ಪೂರ್ಣಗೊಂಡಿದ್ದು, 6 ಪಿಲ್ಲರ್ಗಳ ಕಾಮಗಾರಿ ಪ್ರಗತಿಯಲ್ಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಜಲಮಂಡಳಿ ಯಿಂದ 450 ಎಂ.ಎಂನ ನೀರಿನ ಪೈಪ್ ಲೈನ್ ಅನ್ನು ಈಗಾಗಲೇ ಬೇರೆಡೆ ಸ್ಥಳಾಂತರಿಸಿದ್ದು, ಅದರಡಿ 700 ಎಂ.ಎಂನ ನೀರಿನ ಪೈಪ್ ಲೈನ್ ಇರುವುದರಿಂದ ಒಂದು ಪಿಲ್ಲರ್ ಕಾಮಗಾರಿ ಬಾಕಿಯಿದೆ.
ಈ ಪೈಕಿ 7 ದಿನಗಳ ಕಾಲ ಸಂಚಾರಿ ಪೊಲೀಸ್ ಇಲಾಖೆಯಿಂದ ಮಾರ್ಗ ಬದಲಾವಣೆಗೆ ಅನುಮತಿ ಪಡೆದು ತ್ವರಿತವಾಗಿ ನೀರಿನ ಪೈಪ್ ಲೈನ್ ಬೇರೆಡೆ ಸ್ಥಳಾಂತರಿಸಿ ಪಿಲ್ಲರ್ ಕಾಮಗಾರಿ ಪೂರ್ಣಗೊಳಿಸುವಂತೆ ಆಡಳಿತಗಾರರು ಅಧಿಕಾರಿಗಳಿಗೆ ಸೂಚನೆ ನೀಡಿ ದರು.
ಶಿವಾನಂದ ರೈಲ್ವೆ ಹಳಿ ಬಳಿ ಸುಮಾರು 579 ಚದರ ಮೀಟರ್ ರಸ್ತೆ ಅಗಲೀಕರಣ(ಭೂಸ್ವಾಧೀನ) ಪ್ರಕ್ರಿಯೆ ಇದ್ದು, 7 ಆಸ್ತಿಗಳು ಬರಲಿವೆ. ಈ ಸಂಬಂಧ ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಿ ಕೂಡಲೆ ರಸ್ತೆ ಅಗಲೀಕರಣ ಮಾಡುವಂತೆ ಆಡಳಿತಗಾರರು ಸೂಚನೆ ನೀಡಿದರು.
ಇನ್ನು ಮೇಲುಸೇತುವೆ ಕಾಮಗಾರಿ ಮಾರ್ಗದಲ್ಲಿ ಬರುವ ಕೆಲ ಮರಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕಿದ್ದು, ಈ ಪೈಕಿ ಈಗಾ ಗಲೇ ಟ್ರೀ ಕಮಿಟಿ ಜೊತೆ ಮರಗಳನ್ನು ಸ್ಥಳಾಂತರಿಸುವ ಬಗ್ಗೆ ಸಭೆ ನಡೆಸಿ ಅನುಮತಿ ಪಡೆಯಲಾಗಿದೆ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು. ಅದಕ್ಕೆ ಆಡಳಿತಗಾರರು ಪ್ರತಿಕ್ರಿಯಿಸಿ, ಕೂಡಲೆ ಮರ ಸ್ಥಳಾಂತರ ಮಾಡುವ ಕೆಲಸ ಕೈಗೊಳ್ಳು ವಂತೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಾನಂದ ವೃತ್ತದ ಮೇಲುಸೇತುವೆ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಓಡಾಟಕ್ಕೆ ಅನುವು ಮಾಡಲು ಸೂಚಿಸಲಾಯಿತು. ಜೊತೆಗೆ ಶಿವಾನಂದ ವೃತ್ತದ ಬಳಿಯ ರೈಲ್ವೆ ಹಳಿ ಬಳಿ ಸುಗಮ ವಾಹನ ಸಂಚಾರಕ್ಕೆ ಹೆಚ್ಚುವರಿ ಬಾಕ್ಸ್ ಅಳವಡಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳುವಂತೆ ಆಡಳಿತಗಾರರು ಸೂಚನೆ ನೀಡಿದರು.