Friday, 18th October 2024

Chikkaballapur News: ಪರಂಪರೆ ಉಳಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ

ತಳಮಟ್ಟದ ಕೃಷಿ ಆವಿಷ್ಕಾರ ಮತ್ತು ಸಂರಕ್ಷಣಾ ಪುರಸ್ಕಾರ ಸಮಾರಂಭ

ಚಿಕ್ಕಬಳ್ಳಾಪುರ: ಸಾಂಪ್ರದಾಯಿಕ ಕೃಷಿ ಪದ್ದತಿ ಜೀವವಿಧಾನದಂತಹ ಪರಂಪರೆ ಉಳಿಸದಿದ್ದರೆ ದೇಶಕ್ಕೆ ಉಳಿಗಾಲ ವಿಲ್ಲ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಆವಿಷ್ಕಾರ ಮತ್ತು ಸಂರಕ್ಷಣಾ ಪೀಠವು ಕೊಡಮಾಡಿದ ಪುರಸ್ಕಾರಗಳನ್ನು ಇಬ್ಬರು ಉದಯೋನ್ಮುಖ ಕೃಷಿ ಸಂಶೋಧನಾ ರೈತರಿಗೆ ವಿತರಿಸಿ ಮಾತನಾಡಿದರು.  

ಇಂದು ಯಾವುದೇ ಕ್ಷೇತ್ರದಲ್ಲಿ ನವೋದ್ಯಮವನ್ನು ಆರಂಭಿಸುವಾಗ ಲಾಭ ನಷ್ಟಗಳ ವಿಚಾರವನ್ನು ಪರಿಗಣಿಸು ತ್ತಾರೆ ವಿನಹ ಅವುಗಳಿಂದ ದೇಶಕ್ಕಾಗುವ ಪ್ರಯೋಜನದ ಬಗ್ಗೆ ಗಮನ ಹರಿಸುವುದಿಲ್ಲ. ದೇಶದ ಸಂಸ್ಕೃತಿ ಮತ್ತು ಜೀವನ ಗ್ರಾಮೀಣ ಪ್ರದೇಶದಲ್ಲಿ ಇದೆ. ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಸಂರಕ್ಷಿಸಿದರೆ ದೇಶ ಉಳಿಯುತ್ತದೆ. ಹಾಗಾಗಿ ಸ್ವಾವಲಂಬನೆಯ ಪಾಠ ಗ್ರಾಮದಿಂದಲೇ ಆಗಬೇಕು ಎಂದು ರಾಷ್ಟçಪಿತ ಕರೆ ಕೊಟ್ಟಿರುವುದು ಸರ್ವ ಕಾಲಕ್ಕೂ ಸಲ್ಲುವ ಚಿಂತನೆಯಾಗಿದೆ ಎಂದರು.

ನಾವು ಮಾಡುವ ಯಾವುದೇ ಕರ್ತವ್ಯಗಳು ಎಲ್ಲರಿಗೂ ಅಗತ್ಯವಾಗಿ ಸಲ್ಲುವ  ಕಾರ್ಯಗಳಾಗಬೇಕು. ಭಾರತವು ಕೃಷಿ ಪ್ರಧಾನ ದೇಶ. ಕೃಷಿ ಇಲ್ಲಿನ ಪ್ರಮುಖ ಉದ್ಯಮ. ಆದರೆ ಕೃಷಿ ಕ್ಷೇತ್ರದ ಅನುಪಾತವು ೧:೩:೫ ರ ಅನುಪಾತದಲ್ಲಿದೆ. ಭಾರತವು ನಾನಾ ರೀತಿಯ ಆಚಾರ ವಿಚಾರಗಳಿಂದ ಒಂದಾಗಿ  ವಿಶಿಷ್ಟ ಸಂಸ್ಕೃತಿಯನ್ನು ರೂಡಿಸಿಕೊಂಡ ದೇಶ. ಅದೇ ರೀತಿ ಇಲ್ಲಿನ ಕೃಷಿ ಸಂಸ್ಕೃತಿಯು ಕೂಡ ವೈವಿಧ್ಯತೆಯಿಂದ ಕೂಡಿದೆ. ಭಾರತದ ಸಂಸ್ಕೃತಿಯ ಸಂರಕ್ಷಣೆಯ ಜೊತೆಗೆ ವೈವಿದ್ಯತೆಯಿಂದ ಕೂಡಿದ ಕೃಷಿ ಸಂಸ್ಕೃತಿಯನ್ನು ಉಳಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.

ಕಡಿಮೆ ಬಂಡವಾಳದಲ್ಲಿ ಎಲ್ಲರಿಗೂ ಎಲ್ಲ ಕಾಲಕ್ಕೂ ಸಲ್ಲುವ ನವ ಆವಿಷ್ಕಾರಗಳು ಇಂದು ನಮಗೆ ಬೇಕಾಗಿವೆ. ಕೃಷಿಯು ಭಾರತದ ಪುರಾತನ ಪರಂಪರೆ. ಅದನ್ನು ಉಳಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದರು.

2022 ರಲ್ಲಿ ವಿಶ್ವವಿದ್ಯಾಲಯದ ಅಧೀನದಲ್ಲಿ ಸ್ಥಾಪಿತಗೊಂಡ ಆವಿಷ್ಕಾರ ಮತ್ತು ಸಂರಕ್ಷಣಾ  ವಿಭಾಗವು ನವೋ ದ್ಯಮಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದ್ದು ಆ ಮೂಲಕ ಉದ್ಯೋಗಾವಕಾಶಗಳ ಸೃಷ್ಟಿ, ಸಮಾಜ ದಲ್ಲಿ ಅವಗಣೆನೆಗೆ ಒಳಗಾಗಿರುವ  ಕ್ಷೇತ್ರವನ್ನು ಸುಧಾರಿಸುವ ಧ್ಯೇಯದೊಂದಿಗೆ ಈ ಪೀಠವು ಸ್ಥಾಪನೆ ಗೊಂಡಿತ್ತು

ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ  ೮೮ ಪ್ರಕಾರಗಳು ಈ ಬಾರಿ ಪರಿಶೀಲನೆಗೆ ಬಂದಿದ್ದು ಅಂತಿಮವಾಗಿ ಎರಡು ಪ್ರಕಾರಗಳು  ಅಧಿಕ ಬಂಡವಾಳವಿಲ್ಲದೆ ಸಮಾಜ ಸ್ನೇಹಿ  ಅಂಶಗಳನ್ನು ಹೊಂದಿರುವ ಕಾರಣ ಪುರಸ್ಕಾರಕ್ಕೆ ಭಾಜನವಾದವು.

“ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ  ಬೆಳಂಜದ ರೈತ ಅನಿಲ್ ಬೆಳಂಜಾ ಅವರಿಗೆ ಪುರಸ್ಕಾರ”

೮೫ ದೇಶಗಳಿಂದ ೮೦೦ ಬಗೆಯ ವಿದೇಶಿ ಹಣ್ಣುಗಳ ತಳಿಗಳನ್ನು ತಮ್ಮ ತೋಟದಲ್ಲಿ ಸಂಸ್ಕರಿಸಿ ವಿದೇಶಿ ಹಣ್ಣುಗಳ ಪರಿಚಯವನ್ನು ಭಾರತಕ್ಕೆ ಮಾಡಿದ್ದಾರೆ. ಹೊರದೇಶಗಳಿಂದ  ಹಣ್ಣುಗಳನ್ನು ಆಮದು ಮಾಡುವುದರ ಬದಲು ನಮ್ಮ ದೇಶದಲ್ಲಿ ನಾವು ಬೆಳೆದು ದೇಶದ ಆರ್ಥಿಕತೆಯನ್ನು ಉತ್ತೇಜಿಸುವುದರ ಜೊತೆಗೆ ದೇಶದ ರೈತರಿಗೆ ಪರ್ಯಾಯ ಬೆಳೆ ಮತ್ತು ಅದರಿಂದ ಜೀವನ ಮಟ್ಟದ ಸುಧಾರಣೆ ಮಾಡುವ ವಿಧಾನವನ್ನು ಇವರು ಆವಿಷ್ಕರಿಸಿದ್ದು ಫಲ ಕಂಡಿದೆ. ಇದನ್ನು ಗಮನಿಸಿದ ವಿಶ್ವವಿದ್ಯಾಲಯದ ಪೀಠವು  ಪುರಸ್ಕಾರ ನೀಡಿ ಗೌರವಿಸಿದೆ.

ಕೃಷಿ ಕ್ಷೇತ್ರದಲ್ಲಿ ಹೊಸ ರೀತಿಯ ಜೈವಿಕ ಗೊಬ್ಬರ ಜೀವಾಮೃತದ ಆವಿಷ್ಕಾರ ಮತ್ತು ಸುಲಭ ಬೆಲೆಯಲ್ಲಿ ಖರೀದಿಸ ಬಹುದಾದ ಕೃಷಿ ಯಂತ್ರಗಳ ಸಂಶೋಧನೆಗಾಗಿ ಕಲ್ಬುರ್ಗಿ ಜಿಲ್ಲೆಯ ಶರಣಬಸಪ್ಪ ಪಿ ಪಾಟೀಲ್ ಆವಿಷ್ಕಾರ ಮತ್ತು ಸಂಶೋಧನ  ಪಾರಿತೋಷಕವನ್ನು ಪಡೆದರು.

ಪುರಸ್ಕಾರವನ್ನು ಪಡೆದ ಇಬ್ಬರು ರೈತ ಸಂಶೋಧಕರು ತಮ್ಮ ಕೃತಜ್ಞತಾ ಭಾಷಣದಲ್ಲಿ ತಾವು ಪರಸ್ಪರ ಸಹಾಯ ಸಹಕಾರ ನೀಡುವುದಲ್ಲದೆ ಕೃಷಿ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವುದಕ್ಕೆ ಹಾಗೂ ರೈತ ಸಮುದಾಯಕ್ಕೆ ನೆರವಾ ಗುವ ಸಲುವಾಗಿ  ಶ್ರಮಿಸುದಾಗಿ ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಆತಿಥ್ಯ ಉಪನ್ಯಾಸ ನೀಡಿದ ಅಸ್ಸಾಂ ವಿಧಾನಸಭಾ ಅಧ್ಯಕ್ಷ ರಾದ ಶ್ರೀ ವಿಶ್ವಜಿತ್ ಡೈಮ್ರಿ ಅವರು ಪ್ರಸ್ತುತ ನಡೆಯುತ್ತಿರುವ ದುರ್ಗಾ ಪೂಜೆಯ ಮಹತ್ವ, ಶಕ್ತಿ ಸ್ವರೂಪಿನಿಯರಾಗಿ ಅವತರಿಸಿದ ನವದುರ್ಗೆಯರ ಧಾರ್ಮಿಕ ಹಿನ್ನೆಲೆ, ಅಸ್ಸಾಂನಲ್ಲಿ ಮಾತೃ ಪ್ರಧಾನ ಕುಟುಂಬದ  ಹಿಂದಿರುವ ದಂತ ಕಥೆ, ದುಷ್ಟಸಂಹಾರ ಮತ್ತು ಶಿಷ್ಟ ರಕ್ಷಣೆಯ ಹಿಂದಿರುವ ಸಾಂಸ್ಕೃತಿಕ ಪರಂಪರೆಯ ಪರಿಕಲ್ಪನೆ ಮುಂತಾದವು ಗಳನ್ನು ಪೌರಾಣಿಕ ಕಥೆಗಳ ಮೂಲಕ ಸವಿಸ್ತಾರವಾಗಿ ವಿವರಿಸಿದರು.

ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಆವಿಷ್ಕಾರ ಮತ್ತು ಸಂರಕ್ಷಣೆ ವಿಭಾಗದ ನಿರ್ದೇಶಕರಾದ ಬೆಂಗಳೂರಿನ ಡಿ ಆರ್ ಡಿ ಓ ಸಂಸ್ಥೆಯ  ಪೂರ್ವ ವಿಜ್ಞಾನಿಗಳಾದ  ಶ್ರೀ ಕೆ ವಾಸುದೇವ್ ಅವರು ಆವಿಷ್ಕಾರ ಮತ್ತು ಸಂರಕ್ಷಣಾ  ಪ್ರಶಸ್ತಿಗೆ ಅರ್ಹರನ್ನು ಗುರುತಿಸುವ ವಿಧಾನ ಮತ್ತು ಅದಕ್ಕೆ ಇರುವ ಮಾನದಂಡಗಳನ್ನು ತಿಳಿಸಿ ಪುರಸ್ಕೃತರ ವಿವರಗಳನ್ನು ನೀಡಿದರು.

ಶ್ರೀ ಸತ್ಯಸಾಯಿ ಮಾನವ ಅಭ್ಯುದಯ  ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ಬಿ ಎನ್ ನರಸಿಂಹಮೂರ್ತಿ ಯವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಅ.4ರಂದು ಪಿಡಿಒ ಸೇರಿ ವಿವಿಧ ವೃಂದದ ನೌಕರರಿಂದ ಅನಿರ್ಧಿಷ್ಟಾವಧಿ ಧರಣಿ