ಚಿತ್ರದುರ್ಗ: ದೇವರ ಹರಕೆಗೆಂದು 20 ಅಡಿವರೆಗೂ ತಲೆಗೂದಲು ಬಿಟ್ಟಿದ್ದ 103 ವರ್ಷದ ಶತಾಯುಷಿ ಜಡೆ ಪಾಲಯ್ಯ ನಿಧನ ರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಾದ ಪಾಲಯ್ಯ ಅವರು ವಯೋಸಹಜ ಆರೋಗ್ಯ ಸಮಸ್ಯೆ ಯಿಂದ ಮೃತಪಟ್ಟಿದ್ದಾರೆ. ಐದಾರು ಕೆ.ಜಿ. ತೂಕದ ತಲೆಗೂದಲನ್ನು ಹೊತ್ತುಕೊಂಡೇ ಬದುಕಿದ್ದ ಪಾಲಯ್ಯ ಜಿಲ್ಲೆಯಲ್ಲಿ “ಜಡೆ ಪಾಲಯ್ಯ” ಎಂದೇ ಪ್ರಸಿದ್ಧಿಯಾದವರು.
ಚಿತ್ರದುರ್ಗವಷ್ಟೇ ಅಲ್ಲದೇ ಆಂಧ್ರ ಪ್ರದೇಶದಲ್ಲೂ ತಮ್ಮ ಜಡೆಯಿಂದ ಹೆಸರು ಪಡೆದುಕೊಂಡಿದ್ದರು. ಪಾಲಯ್ಯ ಅವರು ಹುಟ್ಟಿದಾಗಿನಿಂದಲೂ ತಲೆಗೂದಲಿಗೆ ಕತ್ತರಿ ಹಾಕಿರಲಿಲ್ಲ. ಹಸು, ಹೋರಿಗಳನ್ನು ಸಾಕಿ ಸಲಹುತ್ತಿದ್ದ ಪಾಲಯ್ಯ, ತಮ್ಮ ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಹರಕೆಯ ಎತ್ತುಗಳಿಗೆ ಪಾಲಕನಾಗಿದ್ದರು. ಕೊನೆವರೆಗೂ ಗೋವು ಪಾಲಕರಾಗಿಯೇ ಜೀವನ ನಡೆಸಿಕೊಂಡು ಬಂದಿದ್ದ ಪಾಲಯ್ಯ ತಮ್ಮ 103ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.