ತುಮಕೂರು: ನಗರದ ಶ್ರೀ ಕೃಷ್ಣ ಚಿತ್ರಮಂದಿರಕ್ಕೆ ರಾಜಯೋಗ ಸಿನಿಮಾದ ನಟ ಧರ್ಮಣ್ಣ ಕಡೂರು, ನಟಿ ನಿರೀಕ್ಷಾರಾವ್, ನಿರ್ದೇಶಕ ಲಿಂಗರಾಜು ಸೇರಿದಂತೆ ಚಿತ್ರತಂಡ ಭೇಟಿ ನೀಡಿ ಸಿನಿಮಾ ವೀಕ್ಷಿಸಿತು.
ನಂತರ ಮಾತನಾಡಿದ ನಟ ಧರ್ಮಣ್ಣ ಕಡೂರು, ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಕುಳಿತು ನೋಡುವ ಸಿನಿಮಾ ಇದಾಗಿದೆ. ಕುಟುಂಬ ಸಮಸ್ಯೆ, ಜಂಜಾಟವನ್ನು ತಮಾಷೆಯಾಗಿ ಹೇಳುವ ಪ್ರಯತ್ನವನ್ನು ಈ ಸಿನಿಮಾದ ಮೂಲಕ ಮಾಡಲಾಗಿದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ನಾನು ದೊಡ್ಡ ದೊಡ್ಡ ಕಲಾವಿದರ ಜತೆ ಸುಮಾರು 32 ಚಿತ್ರಗಳಲ್ಲಿ ನಟಿಸಿದ್ದೇನೆ. ಈಗ ರಾಜಯೋಗ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ದ್ದೇನೆ. ಹಳ್ಳಿಯಲ್ಲಿ ಜಾಸ್ತಿ ಓದಿದ ಯುವಕರು ಏನಾದರೂ ಒಳ್ಳೆಯದನ್ನು ಹೇಳಿದರೆ ಅದನ್ನು ಜನ ಪಾಸಿಟಿವ್ ಆಗಿ ತಗೊಳ್ಳಲ್ಲ. ಬದಲಾಗಿ ಅವನು ತರ್ಲೆ ಎಂದು ಹೇಳಿ ತುಂಬಾ ಜನ ಕಾಲೆಳೆಯುತ್ತಾರೆ. ಮನೆಯಲ್ಲಿ ಕುಳಿತುಕೊಂಡರೆ ಯಾರಿಗೂ ರಾಜಯೋಗ ಬರಲ್ಲ, ಕೆಲಸ ಮಾಡೋರಿಗೆ ಮಾತ್ರ ರಾಜ ಯೋಗ ಬರುತ್ತದೆ ಎನ್ನುವುದು ಈ ಸಿನಿಮಾದ ಸಾರಾಂಶ ಎಂದರು.
ಚಿತ್ರದ ನಿರ್ಮಾಪಕ ಪ್ರಭು ಮಾತನಾಡಿ, ರಾಜಯೋಗ ಹಳ್ಳಿ ಸೊಗಡಿನ ಸಿನಿಮಾ ಆಗಿದೆ. ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಚಿತ್ರದಲ್ಲಿ ಹಿರಿಯ ಕಲಾವಿದರಾದ ನಾಗೇಂದ್ರ ಷಾ, ಅಪೂರ್ವ, ಖುಷಿ, ಉಮಾಹೆಬ್ಬಾರ್ ಸೇರಿದಂತೆ ನುರಿತ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಲಿಂಗರಾಜು, ರಾಜು ಅಶೋಕಕುಮಾರ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.