MSP Hike: ರೈತರಿಗೆ ಗುಡ್ನ್ಯೂಸ್; ಭತ್ತ, ರಾಗಿ ಸೇರಿ 14 ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
ಕೇಂದ್ರ ಸಚಿವ ಸಂಪುಟ ಸಭೆ ಭತ್ತ, ರಾಗಿ ಸೇರಿ ಖಾರಿಫ್ ಋತುವಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಭತ್ತ, ರಾಗಿ ಜತೆಗೆ ಜೋಳ, ಕಡಲೆ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಹತ್ತಿ ಸೇರಿದಂತೆ 14 ಖಾರಿಫ್ ಬೆಳೆಗಾರರಿಗೆ ಅನುಕೂಲವಾಗಲಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಭತ್ತ, ರಾಗಿ ಸೇರಿ ಖಾರಿಫ್ ಋತುವಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (Minimum Support Prices-MSP)ಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. ಆ ಮೂಲಕ ಕೇಂದ್ರ ಸರ್ಕಾರ ಕೃಷಿಕರ ನೆರವಿಗೆ ಧಾವಿಸಿದೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ಒದಗಿಸುವ ಗುರಿಯನ್ನು ಇದು ಹೊಂದಿದೆ ಎಂದು ಕೇಂದ್ರ ತಿಳಿಸಿದೆ. ಈ ನಿರ್ಧಾರದಿಂದ ಭತ್ತ, ರಾಗಿ ಜತೆಗೆ ಜೋಳ, ಕಡಲೆ, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಹತ್ತಿ ಸೇರಿದಂತೆ 14 ಖಾರಿಫ್ ಬೆಳೆಗಾರರಿಗೆ ಅನುಕೂಲವಾಗಲಿದೆ.
ಸರ್ಕಾರವು ರೈತರಿಂದ ಕನಿಷ್ಠ ಇಷ್ಟು ಬೆಲೆಗೆ ಬೆಳೆ ಖರೀದಿಸುತ್ತೇವೆ ಅಂತ ಗ್ಯಾರಂಟಿ ಕೊಡುವುದನ್ನು ಕನಿಷ್ಠ ಬೆಂಬಲ ಬೆಲೆ ಎನ್ನಲಾಗುತ್ತದೆ. ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿತ ಕಾಣುತ್ತವೆ. ಬೆಳೆ ಜಾಸ್ತಿ ಬಂದರೆ ಬೆಲೆ ಕಡಿಮೆಯಾಗುತ್ತದೆ. ಇದರಿಂದ ರೈತರಿಗಾಗುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ವಿವಿಧ ಬೆಳೆಗಳಿಗೆ ಪ್ರತಿ ವರ್ಷ ಇದನ್ನು ನಿಗದಿಪಡಿಸಲಾಗುತ್ತದೆ.
#CabinetDecisions
— Vishnu Vardhan Reddy (@SVishnuReddy) May 28, 2025
The #Modi govt approves MSP for 14 Kharif crops for 2025-26.
* Biggest MSP rise: Niger seed +₹820/quintal, Ragi +₹596, Cotton +₹589, Sesamum +₹579.
* Farmers to gain up to 63% profit over costs, top in Bajra, Maize, Tur & Urad.
* Since 2014, ₹16.35 lakh… pic.twitter.com/wx8EipG4A9
ಈ ಸುದ್ದಿಯನ್ನೂ ಓದಿ: PM Kisan Scheme: ಜೂನ್ನಲ್ಲಿ ಪಿಎಂ ಕಿಸಾನ್ ಸಮ್ಮಾನ್ 19ನೇ ಕಂತು ಬಿಡುಗಡೆ? ಅರ್ಜಿ ಸಲ್ಲಿಕೆ ಹೇಗೆ?
ಯಾವುದಕ್ಕೆ ಎಷ್ಟು ಬೆಲೆ?
ʼʼ2025-26ರ ಮಾರುಕಟ್ಟೆ ಋತುವಿನಲ್ಲಿ ಎ ಗ್ರೇಡ್ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 69 ರೂ. ಹೆಚ್ಚಿಸಲಾಗಿದ್ದು, ಕ್ವಿಂಟಾಲ್ಗೆ 2,389 ರೂ.ಗೆ ತಲುಪಿದೆ. ಇನ್ನು ರಾಗಿಗೆ ಎಂಎಸ್ಪಿ 596 ರೂ. ಹೆಚ್ಚಾಗಿದೆʼʼ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕಡಲೆಕಾಯಿಯ ಎಂಎಸ್ಪಿ ಅನ್ನು ಪ್ರತಿ ಕ್ವಿಂಟಾಲ್ ಶೇ. 7.1ರಷ್ಟು ಹೆಚ್ಚಿಸಿದ್ದು, 7,263 ರೂ.ಗೆ ತಲುಪಿದ್ದರೆ, ಸೋಯಾಬೀನ್ (ಹಳದಿ) ಅನ್ನು ಶೇ. 8.9ರಷ್ಟು ಏರಿಸಿದ್ದು, 5,328 ರೂ. ಗಟಿ ದಾಟಿದೆ. ತೊಗರಿಗೆ ಶೇ. 6ರಷ್ಟು ವೃದ್ಧಿಸಿದ್ದು, ಕ್ವಿಂಟಾಲ್ಗೆ 8,000 ರೂ. ಆಗಿದೆ. ಉದ್ದಿನ ಬೇಳೆ ಕ್ವಿಂಟಾಲ್ಗೆ 7,800 ರೂ. ತಲುಪಿದ್ದು, ಇದಕ್ಕೆ ಶೇ. 5.4ರಷ್ಟು ಹೆಚ್ಚಾಗಿದೆ.
ಈ ಪೈಕಿ ರಾಗಿಗೆ ಅತಿ ಹೆಚ್ಚು ಶೇಕಡವಾರು ಕನಿಷ್ಠ ಬೆಂಬಲ ಬೆಲೆ ಸಿಕ್ಕಿದೆ. ಇದರ ಎಂಎಸ್ಪಿಯನ್ನು ಶೇ. 14ರಷ್ಟು ಹೆಚ್ಚಿಸಲಾಗಿದ್ದು, ಕ್ವಿಂಟಾಲ್ಗೆ 4,886 ರೂ. ತಲುಪಿದೆ. ಕಳೆದ ಸೀಸನ್ನಲ್ಲಿ ಶೇ. 11.5ರಷ್ಟು ಹೆಚ್ಚಿಸಲಾಗಿತ್ತು. ಸೂರ್ಯಕಾಂತಿ ಬೀಜದ ಎಂಎಸ್ಪಿ ಶೇ. 6.1ರಷ್ಟು ಹೆಚ್ಚಿಸಲಾಗಿದ್ದು, ಪ್ರತಿ ಕ್ವಿಂಟಾಲ್ಗೆ 7,721 ರೂ.ಗೆ ತಲುಪಿದೆ. ಎಳ್ಳು ಬೀಜಕ್ಕೆ ಶೇ. 6.2ರಷ್ಟು ಹೆಚ್ಚಿಸಲಾಗಿದ್ದು, 9,846 ರೂ.ಗೆ, ನೈಗರ್ ಬೀಜಕ್ಕೆ ಶೇ. 9.4 ರಷ್ಟು ಹೆಚ್ಚಿಸಲಾಗಿದ್ದು, 9,537 ರೂ.ಗೆ ತಲುಪಿದೆ. ವಾಣಿಜ್ಯ ಬೆಳೆಗಳಲ್ಲಿ ಹತ್ತಿಯ ಎಂಎಸ್ಪಿ ಅನ್ನು ಶೇ. 8.3ರಷ್ಟು ಹೆಚ್ಚಿಸಲಾಗಿದ್ದು 7,710 ರೂ. ಮತ್ತು 8,110 ರೂ.ಗೆ ತಲುಪಿದೆ.
ಈ ಬಾರಿಯ 2.07 ಲಕ್ಷ ಕೋಟಿ ರೂ. ಎಂಎಸ್ಪಿ ನಿಧಿ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.