Spying for Pakistan: ಯೂಟ್ಯೂಬರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್..... 8 ಪಾಕ್ ಬೇಹುಗಾರರ ಬಂಧನ; ಉಂಡ ಮನೆಗೆ ದ್ರೋಹ ಬಗೆದವರಿವರು
ಪಹಲ್ಗಾಮ್ ದಾಳಿಯ ಬಳಿಕ ಎನ್ಐಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದವರನ್ನು ಈಗಾಗಲೇ ಬಂಧಿಸಲಾಗಿದೆ. ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂರು ರಾಜ್ಯಗಳಿಂದ ಕನಿಷ್ಠ ಎಂಟು ಜನರನ್ನು ಭಾರತೀಯ ಅಧಿಕಾರಿಗಳು ಬಂಧಿಸಿದ್ದಾರೆ.


ನವದೆಹಲಿ: ಪಹಲ್ಗಾಮ್ ದಾಳಿಯ ಬಳಿಕ ಎನ್ಐಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದವರನ್ನು ಈಗಾಗಲೇ ಬಂಧಿಸಲಾಗಿದೆ. ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂರು ರಾಜ್ಯಗಳಿಂದ ಕನಿಷ್ಠ ಎಂಟು ಜನರನ್ನು ಭಾರತೀಯ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಂಧನಗಳಲ್ಲಿ ಕನಿಷ್ಠ ನಾಲ್ಕು ಹರ್ಯಾಣದಲ್ಲಿ, ಮೂರು ಪಂಜಾಬ್ನಲ್ಲಿ ಮತ್ತು ಒಬ್ಬರನ್ನು ಉತ್ತರ ಪ್ರದೇಶದಲ್ಲಿ ಮಾಡಲಾಗಿದೆ. ಬಂಧಿಸಲಾದ 8 ಬೇಹುಗಾರರ ವಿವರ ಇಲ್ಲಿದೆ.
ಜ್ಯೋತಿ ಮಲ್ಹೋತ್ರಾ
ಟ್ರಾವೆಲ್ ವಿತ್ ಜೆಒ' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಟ್ರಾವೆಲ್ ವ್ಲೋಗರ್ ಜ್ಯೋತಿ ಮಲ್ಹೋತ್ರಾ ಹರಿಯಾಣದ ಹಿಸಾರ್ ಮೂಲದವಳು. ಭಾರತೀಯ ಮಿಲಿಟರಿ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ. ಆಕೆ ಪಾಕಿಸ್ತಾನದ ಹೈ ಕಮೀಷನರ್ ದಾನಿಷ್ ಜೊತೆ ಹಲವು ಬಾರಿ ಕಾಣಿಸಿಕೊಂಡಿದ್ದಳು. ಕನಿಷ್ಠ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ದೇವೇಂದ್ರ ಸಿಂಗ್
25 ವರ್ಷದ ದೇವೇಂದ್ರ ಸಿಂಗ್ ಧಿಲ್ಲೋನ್, ಪಟಿಯಾಲಾದ ಖಾಲ್ಸಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ವಿದ್ಯಾರ್ಥಿ. ಮೇ 12 ರಂದು, ಫೇಸ್ಬುಕ್ನಲ್ಲಿ ಪಿಸ್ತೂಲ್ ಮತ್ತು ಬಂದೂಕುಗಳ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ಹರಿಯಾಣದ ಕೈಥಾಲ್ನಲ್ಲಿ ಆತನನ್ನು ಬಂಧಿಸಲಾಗಿದೆ. ವಿಚಾರಣೆಯಲ್ಲಿ ಆತ ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಈತ ಪಟಿಯಾಲದ ಮಿಲಿಟರಿ ಕಂಟೋನ್ಮೆಂಟ್ನ ಚಿತ್ರಗಳನ್ನು ಒಳಗೊಂಡಂತೆ ಹಲವು ಫೋಟೋಗಳನ್ನು ಐಎಸ್ಐ) ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದ ಎಂದು ತಿಳಿದು ಬಂದಿದೆ.
ನೌಮನ್ ಇಲಾಹಿ
ಹರಿಯಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ನೌಮನ್ ಇಲಾಹಿಯನ್ನು ಕೆಲವು ದಿನಗಳ ಹಿಂದೆ ಪಾಣಿಪತ್ನಲ್ಲಿ ಬಂಧಿಸಲಾಗಿತ್ತು. ಈತ ಪಾಕಿಸ್ತಾನದಲ್ಲಿ ಐಎಸ್ಐ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ಬೆಳಕಿಗೆ ಬಂದಿದೆ. ಸೋದರ ಮಾವನ ಖಾತೆಗೆ ಪಾಕಿಸ್ತಾನದಿಂದ ಹಣವನ್ನು ಸ್ವೀಕರಿಸುತ್ತಿದ್ದ ಎನ್ನುವುದು ತಿಳಿದು ಬಂದಿದೆ.
ಅರ್ಮಾನ್
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮೇ 16 ರಂದು ಹರಿಯಾಣದ ನುಹ್ನಲ್ಲಿ 23 ವರ್ಷದ ಅರ್ಮಾನ್ನನ್ನು ಬಂಧಿಸಲಾಯಿತು. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾದಾಗ ಆತ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಹಜಾದ್
ಉತ್ತರ ಪ್ರದೇಶದ ರಾಂಪುರದಲ್ಲಿರುವ ಉದ್ಯಮಿ ಶಹಜಾದ್ ಎಂಬಾತನನ್ನು ಬಂಧಿಸಲಾಗಿದೆ. ಮೊರಾದಾಬಾದ್ನಲ್ಲಿ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಬಂಧಿಸಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಆತ ರವಾನಿಸುತ್ತಿದ್ದ ಎಂದು ತಿಳಿದು ಬಂದಿದೆ. ಈತ ಹಲವು ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: YouTuber Jyoti Malhotra: ಬಗೆದಷ್ಟು ಬಯಲಾಗುತ್ತಿದೆ ದೇಶದ್ರೋಹಿಯ ಕತೆ; ಪಹಲ್ಗಾಮ್ ದಾಳಿಗೂ ಮುನ್ನ ಪಾಕಿಸ್ತಾನ, ಚೀನಾಕ್ಕೆ ತೆರಳಿದ್ದ ಜ್ಯೋತಿ ಮಲ್ಹೋತ್ರಾ
ಮೊಹಮ್ಮದ್ ಮುರ್ತಜಾ ಅಲಿ
ಜಲಂಧರ್ನಲ್ಲಿ ಗುಜರಾತ್ ಪೊಲೀಸರು ನಡೆಸಿದ ದಾಳಿಯ ಸಂದರ್ಭದಲ್ಲಿ ಮೊಹಮ್ಮದ್ ಮುರ್ತಾಜಾ ಅಲಿಯನ್ನು ಬಂಧಿಸಲಾಯಿತು. ಪಾಕಿಸ್ತಾನದ ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ನಿಖರ ಮಾಹಿತಿ ಮೇರೆಗೆ ಈತನ ಬಂಧನವಾಗಿದೆ. ಆತನ ಬಳಿ ನಾಲ್ಕು ಮೊಬೈಲ್ ಫೋನ್ಗಳು ಮತ್ತು ಮೂರು ಸಿಮ್ ಕಾರ್ಡ್ಗಳು ಪತ್ತೆಯಾಗಿವೆ. ಇದಲ್ಲದೆ, ಗಜಾಲಾ ಮತ್ತು ಯಾಮಿನ್ ಮೊಹಮ್ಮದ್ ಎಂದು ಗುರುತಿಸಲಾದ ಇನ್ನಿಬ್ಬರನ್ನು ಸಹ ಇದೇ ರೀತಿಯ ಆರೋಪಗಳ ಮೇಲೆ ಪಂಜಾಬ್ನಿಂದ ಬಂಧಿಸಲಾಗಿದೆ.