Sunday, 8th September 2024

ಶಾಲಾರಂಭ ಮಕ್ಕಳ ಜೀವನಕ್ಕೆ ಶುಭಸೂಚನೆ

ಕರೋನಾ ಮಹಾಮಾರಿಯ ಕಾರಣದಿಂದ ಕಳೆದೆರಡು ವರ್ಷಗಳಿಂದ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ತಡವಾಗಿ ಯಾದರೂ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿರುವುದು ಶುಭ ಸೂಚನೆ. ಈ ಹಿಂದೆ ಆನ್ ಲೈನ್ ತರಗತಿಗಳು ನಡೆಯು ತ್ತಿದ್ದರೂ, ವಿದ್ಯಾರ್ಥಿಗಳು ಅದನ್ನು ಅನುಸರಿಸುವುದರ ಕುರಿತು ಹಲವು ಅನುಮಾನಗಳು ಇದ್ದವು.

ಕರೋನಾ ಕಾರಣದಿಂದ ಸಾವು ಸಂಭವಿಸುತ್ತಿದ್ದರೂ, ಅದು ಶೇ. 1 ರ ಆಸುಪಾಸಿನಲ್ಲಿ ಇರುತ್ತಿತ್ತು. ಆದರೆ ಇದನ್ನು ದೃಶ್ಯ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿ, ಕೋಟ್ಯಂತರ ಮಂದಿ ಸಾಯುತ್ತಿದ್ದಾರೆ ಎಂದು ಬೊಂಬಡಾ ಹೊಡೆಯುತ್ತಿದ್ದರು. ಇದು ಜನತೆಯಲ್ಲಿ ಭಯ ಹಾಗೂ ಆತಂಕವನ್ನು ಉಂಟು ಮಾಡುತ್ತಿತ್ತು. ಅಡ್ಡಿ ಇಲ್ಲ… ಕಡೆಗೂ ಸರಕಾರ ಶಾಲಾ-ಕಾಲೇಜುಗಳನ್ನು ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಿದೆ. ಮಕ್ಕಳ ಕಲಿಕೆಯು ಈ ಮೂಲಕ ಆರಂಭವಾಗುತ್ತಿದೆ.

ಇದು ಆಶಾದಾಯಕ ಬೆಳವಣಿಗೆ. ಶಾಲೆಗಳಿಲ್ಲದೆ ಮಕ್ಕಳಿಗೆ ಆಟ-ಪಾಠಗಳಿಲ್ಲದೆ ಬೋರು ಬಂದುಬಿಟ್ಟಿತ್ತು. ಯಾವಾಗ ಶಾಲೆ ಆರಂಭವಾಗುತ್ತದೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಇದರಿಂದ ಶಾಲಾ ಮಕ್ಕಳು ತಮ್ಮ ಸಹಪಾಠಿಗಳನ್ನು ಭೇಟಿ ಮಾಡುವ ಸಮಯ ಬಂದಿತು. ಸರಕಾರವು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರು ವುದು ಗಮನಾರ್ಹ ಸಂಗತಿ. ಆದ್ದರಿಂದ ಕರೋನಾ ರೋಗವು ಮಕ್ಕಳಲ್ಲಿ ಕಾಣಿಸಿ ಕೊಳ್ಳುವ ಸಾಧ್ಯತೆ ವಿರಳ.

ಶಾಲೆಗಳಲ್ಲಿ ಶಿಕ್ಷಕ ವೃಂದವು ಮಕ್ಕಳಿಗೆ ಹೂ, ಹಣ್ಣು ಮತ್ತು ಸಿಹಿ ಕೊಟ್ಟು ಸ್ವಾಗತ ಕೋರಿರುವುದು ಮಾಧ್ಯಮಗಳಲ್ಲಿ ವರದಿ ಯಾಗಿದೆ. ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ. ಅಲ್ಲದೆ ಮಕ್ಕಳು ಪಠ್ಯವನ್ನು ಶಾಲಾ ವಾತಾವರಣದಲ್ಲಿ  ಕಲಿಯು ವುದು ಅನುಕೂಲಕರ ಮತ್ತು ಅರ್ಥೈಸಿಕೊಳ್ಳುವುದು ಸುಲಭ. ಹಾಗೆ ನೋಡಿದರೆ ನಮ್ಮಲ್ಲಿ ವಿದ್ಯೆಗಿಂತ ಇತರ ವಿಚಾರಗಳಿಗೆ  ತುಂಬಾ ಮಹತ್ವ ಕೊಟ್ಟಂತೆ ಕಾಣುತ್ತದೆ. ಒಂದು ಮಾತಿದೆ. ಮೊದಲ ಪ್ರಾಶಸ್ತ್ಯ ಊಟಕ್ಕೆ. ನಂತರ ಬಟ್ಟೆಗೆ, ಉಳಿದರೆ ಆರೋಗ್ಯದ
ಕಡೆ ವಿಚಾರ. ಇನ್ನೂ ಉಳಿದರೆ ವಿದ್ಯೆಗೆ ಗಮನಹರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳು ತುಂಬಾ ತಡವಾಗಿಯಾದರೂ ಆರಂಭ ವಾಗಿದ್ದು ಸಂತಸದ ಸಂಗತಿ.
-ಅದಿತಿ ಎಚ್. ಎ. ಮೈಸೂರು

ನಮ್ಮ ದೇಶ ಡ್ರಗ್ಸ್ ಮುಕ್ತವಾಗಲಿ

ನಮಗೆ ಆಗಾಗ ಹರಿದಾಡುವ ಸುದ್ದಿ ಎಂದರೆ ಡ್ರಗ್ಸ್‌ನ ವಿಚಾರ. ಈ ವಿಚಾರ ಮೊನ್ನೆ ಕನ್ನಡ ಸಿನಿಮಾ ನಟ ನಟಿಯರಿಂದ ಹಿಡಿದು ಹಾಲಿವುಡ್‌ವರೆಗೂ ಪ್ರಚಲಿತದಲ್ಲಿರುತ್ತದೆ. ಶಾರುಖ್ ಖಾನ್‌ನ ಮಗನೂ ಸಹ ಈ ರೇವ್ ಪಾರ್ಟಿಗಳಿಗೆ ಹೋಗಿ ಡ್ರಗ್ಸ್ ಸೇವಿಸುವಾಗ ಎನ್ ಸಿಬಿಯವರು ಅರೆಸ್ಟ್ ಮಾಡಿದ್ದು ಗೊತ್ತೇ ಇದೇ. ನಮ್ಮ ದೇಶದಲ್ಲಿ ಎನ್‌ಸಿಬಿ. ಪೊಲೀಸರು ಎಲ್ಲಾ ಎಚ್ಚರಿಕೆಯಿಂದಿದ್ದರೂ ಈ ಡ್ರಗ್ ಸಪ್ಲೈ ನಿಲ್ಲುತ್ತಿಲ್ಲ.

ಹಾಗೆಯೇ ಗಾಂಜಾನೂ ಸಹ ಇದಕ್ಕೆಲ್ಲ ಎಥೇಚ್ಚವಾಗಿ ನಮ್ಮ ದೇಶದ ಯುವಕರು ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಸರಿಯಾದ ಕಡಿವಾಣ ಹಾಕಬೇಕು ಇಲ್ಲವಾದರೆ ನಮ್ಮ ದೇಶದ ಭವಿಷ್ಯವಾಗಬೇಕಾದ ಯುವಕರು ಡ್ರಗ್ಸ್ ನಶೆಯಲ್ಲಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದು ನಿಜ.

-ಮಹೇಶ ಗೌಡ ಮಂಡ್ಯ

ಇಂಗ್ಲೀಷ್ ಕಾಲದಲ್ಲಿ ಕನ್ನಡದ ಅಭಿಮಾನ

ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದಲೋ ಏನೋ ಕನ್ನಡದ ಮೇಲೆ ಅತಿಯಾದ ಅಭಿಮಾನ. ಹೊಟ್ಟೆಪಾಡಿಗಾಗಿ ಬೆಂದ ಕಾಳೂರನ್ನು ಸೇರಿ ಇಲ್ಲಿನ ಕಂಗ್ಲೀಷ್ ವಾತಾವರಣದಲ್ಲಿ ಬೆರೆತರೂ ಸಂದರ್ಭ ಸಿಕ್ಕಲ್ಲ ನನ್ನ ಕನ್ನಡ ಅಭಿಮಾನ ಉಕ್ಕುತ್ತಿರುತ್ತದೆ.

ಜನಜಂಗುಳಿ ಇರುವ ಮಾರುಕಟ್ಟೆಯಾಗಲಿ, ತರಕಾರಿ, ರದ್ದಿ ಪೇಪರ್ ನವನಾಗಲಿ ಕನ್ನಡದವರನ್ನೇ ಗುರುತಿಸಿ ಬೆಲೆ ಜಾಸ್ತಿ ಯಾದರೂ ಅವರೊಂದಿಗೆ ವ್ಯಾಪಾರ ಮಾಡುವುದು ನನ್ನ ಅಭಿಮಾನದ ಒಂದು ಪರಿ. ಎಷ್ಟೋ ಸಲ ಬೇಸ್ತುಬಿದ್ದು ನಗೆಪಾಟ ಲಾಗಿದ್ದು ಉಂಟು. ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಓದುತ್ತಿರುವ ಮಗಳ ಟೀಚರ್ ‘ಮೇಡಂ ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲೀಷ್ ಮಾತನಾಡಿ ’ ಎಂದಾಗ ‘ಮನೆಯಲ್ಲಿ ನಾವು ಮಾತೃಭಾಷೆಯಾದ ಕನ್ನಡವೊಂದನ್ನೇ ಮಾತನಾಡು ತ್ತೇವೆ, ಇಂಗ್ಲೀಷ್ ನಿಧಾನವಾಗಿ ಕಲಿಯಲಿ, ನಮಗೆ ಯಾವುದೇ ಕೀಳರಿಮೆ ಇಲ್ಲ’ ಎಂದು ಉತ್ತರಿಸಿ ಬಂದಿದ್ದೆ.

ಆದರೆ ನಿಜವಾದ ಸಮಸ್ಯೆ ಶುರುವಾಗಿದ್ದು ಮಕ್ಕಳಿಗೆ ‘ಕನ್ನಡ ಕಬ್ಬಿಣದ ಕಡಲೆ’ ಎಂದು ಅನಿಸಿದಾಗ. ಒತ್ತಕ್ಷರಗಳು, ಹಸ್ವಸ್ವರಗಳು, ದೀರ್ಘಸ್ವರಗಳು, ವ್ಯಾಕರಣಗಳೆಲ್ಲ ಕಿರಿಕಿರಿ ಅನ್ನಿಸತೊಡಗಿ ಇಂಗ್ಲೀಷ್ ತುಂಬಾ ಸುಲಭವಾದ ಭಾಷೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಇಂಗ್ಲಿಷ್ ಹಾಡುಗಳನ್ನು ಗುನುಗುವುದು, ಉಚ್ಛಾರವೂ ಯಾವುದೋ ಅನ್ಯ ದೇಶದ ಹುಟ್ಟಿ ಬೆಳೆದವರಂತೆ. ನನ್ನೊ
ಳಗಿನ ಕನ್ನಡಮ್ಮ ಜಾಗೃತಳಾಗಿ ಹೇಗಾದರೂ ಮಾಡಿ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತ್ಯಾದಾರಗಳು ಹುಟ್ಟುವಂತೆ ಮಾಡುವ ಕಾಯಕಕ್ಕೆ ಪ್ರೇರೇಪಿಸಿದಳು. ಮೊದಲಿನಿಂದಲೂ ಮಲಗುವಾಗ ಕಥೆ ಕೇಳಿಯೇ ನಿದ್ರಿಸುವ ಮಕ್ಕಳ ದಿನಚರಿ ನನ್ನ ಪ್ರಯತ್ನಕ್ಕೆ ಇಂಬು ಕೊಟ್ಟಿತು.ದಿನವೂ ಕನ್ನಡ ಕವಿಗಳ ಬಗ್ಗೆ ಹೇಳಿ ಅವರ ಕಥೆ ಕಾದಂಬರಿಗಳನ್ನು ಓದಿ ಹೇಳತೊಡಗಿದೆ.

ಕ್ರಮೇಣವಾಗಿ ಇಬ್ಬರಿಗೂ ಆಸಕ್ತಿ ಮೊಳೆತು ಕನ್ನಡದ ಪುಸ್ತಕಗಳನ್ನು ಓದತೊಡಗಿದರು. ಊರಿಗೆ ಹೋಗುವಾಗ ದಾರಿಯಲ್ಲಿ ಕವಿಶೈಲಕ್ಕೆ ಭೇಟಿ ನೀಡುವ ಸದವಕಾಶ ಒದಗಿ ಬಂತು. ನನ್ನ ಪ್ರೀತಿಯ ತೇಜಸ್ವಿ, ಕುವೆಂಪುರವರ ಬಾಲ್ಯದ ಚಿತ್ರಗಳನ್ನು ಕಣ್ತುಂಬಿ ಕೊಳ್ಳುತ್ತಿದ್ದೆ.ಇದ್ದಕ್ಕಿದ್ದಂತೆ ಮಗಳು ಅಮ್ಮಾ, ನೋಡಲ್ಲಿ ನಾಯಿಗುತ್ತಿ!! ಎಂದು ಕಿರುಚಿ ಸಂಭ್ರಮಿಸುತ್ತಿದ್ದಳು.

ವರ್ಷದ ಹಿಂದೆ ನಾನು ಓದಿ ಹೇಳಿದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಪಾತ್ರವಾದ ಗುತ್ತಿ ತನ್ನ ನಾಯಿ ಹುಲಿಯ ನೊಂದಿಗೆ ಇರುವ ಪ್ರತಿಮೆಯನ್ನು ಅಲ್ಲಿ ಇರಿಸಲಾಗಿತ್ತು. ಮಗನಂತೂ ಹತ್ತಿರಕ್ಕೆ ಹೋಗಿ ನಾಯಿಯ ಮೂಗಿನಲ್ಲಿ ಇಂಬಳಗಳೇ ನಾದರೂ ಹೊಕ್ಕಿರಬಹುದೆಂದು ಪರೀಕ್ಷಿ ಸುತ್ತಿದ್ದ. ಇಬ್ಬರೂ ತಿಮ್ಮಿ, ಪೀಂಚಲು, ಐತ ಎಂದೆಲ್ಲ ಗುರುತಿಸಿ ಸಂಭ್ರಮಿಸುತ್ತಿದ್ದರು. ಒಂದು ಕ್ಷಣ ಕುವೆಂಪು, ತೇಜಸ್ವಿ ಯವರೂ ನನ್ನೊಂದಿಗೆ ನಕ್ಕಂತಾಗಿ ಹೃದಯದಲ್ಲಿ ಸಾರ್ಥಕ ಭಾವ ಮೂಡಿ ಬಂತು.

ಹೀಗೆ ಶುರುವಾದ ನಮ್ಮ ಕನ್ನಡಾಭಿಮಾನದ ಕಿರುಹೆಜ್ಜೆ ಈಗ ‘ಮಧ್ಯಘಟ್ಟ’ ವನ್ನು ದಾಟಿ ‘ಚೆನ್ನಭೈರಾದೇವಿ’ ಯೊಂದಿಗೆ ನಡೆಯು ತ್ತಿದೆ. ಮಕ್ಕಳು ಮುಂದಿನ ದಿನಗಳಲ್ಲಿ ಗೌರಿ ಜಿಂಕೆ ನಲಿದಾಡಿದ ಜಾಗ, ವಾಸು ಅಜ್ಜನ ಹಸೆಹಳ್ಳದ ಮನೆ, ಕತ್ತಲೆ ಕಾನನ್ನು ಸಂದರ್ಶಿಸುವ ಹುಮ್ಮಸ್ಸಿನಲ್ಲಿ ಇದ್ದಾರೆ.

ಶುಭಾ ನಾಗಚಂದ ಹೆಗಡೆ, 
ಬೆಂಗಳೂರು

Leave a Reply

Your email address will not be published. Required fields are marked *

error: Content is protected !!