Sunday, 8th September 2024

ಕಿಡ್ನಿ ಕಸಿ ಸುರಕ್ಷಿತ ಚಿಕಿತ್ಸೆ

ಕಿಡ್ನಿ ನಮ್ಮ ದೇಹದ ಅತ್ಯಾಧುನಿಕ ಫಿಲ್ಟರ್. ಹುರುಳಿ ಬೀಜದಂತಿರುವ ಈ ಕಿಡ್ನಿ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳು, ಹೆಚ್ಚುವರಿ ನೀರು ಮತ್ತು ರಕ್ತದಲ್ಲಿರುವ ಕಲ್ಮಶವನ್ನು ತೆಗೆದು ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೇಹದ ಆರೋಗ್ಯದಲ್ಲಿ ಮುಖ್ಯಸ್ಥನ ಪಾತ್ರ ವಹಿಸುವ ಈ ಕಿಡ್ನಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್ ೧೪ನ್ನು, ವಿಶ್ವ ಮೂತ್ರಪಿಂಡ ದಿನವನ್ನಾಗಿ ಆಚರಿಸ ಲಾಗುತ್ತದೆ.

? ಡಾ.ಗಣೇಶ್ ಶ್ರೀನಿವಾಸ್ ಪ್ರಸಾದ್. ಪಿ
ಡಿಎನ್ಬಿ(ಜನರಲ್ ಮೆಡಿಸಿನ್),
ಡಿಆರ್‌ಎನ್‌ಬಿ(ನೆ-ಲಜಿ) ಕನ್ಸಲ್ಟಂಟ್ ನೆಫ್ರಾಲಜಿ
ಮತ್ತು ಟ್ರಾನ್ಸ್‌ಪ್ಲಾಂಟ್
ನಾರಾಯಣ ಹೆಲ್ತ್ ಸಿಟಿ
೪ಸಂಪರ್ಕ : ೭೭೩೬೬ ೨೪೮೩೮

ಇತ್ತೀಚೆಗೆ ಮೂತ್ರಪಿಂಡದ ಕಾಯಿಲೆ ಅದರಲ್ಲೂ ಕ್ರೋನಿಕ್ ಕಿಡ್ನಿ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಭಾರತದಲ್ಲಂತೂ ಡಯಾಲಿಸಿಸ್ ಮಾಡುವವರ ಮಟ್ಟ ವರ್ಷಕ್ಕೆ ಶೇ. ೧೦ರಿಂದ ೧೫ರಷ್ಟು ವೃದ್ಧಿಸುತ್ತಿದೆ ಅಂದರೆ ಅದರ ಗಂಭೀರತೆ ಯನ್ನು ಅರ್ಥ ಮಾಡಿ ಕೊಳ್ಳಬಹುದು. ಮೂತ್ರಪಿಂಡದ ಸಮಸ್ಯೆ ಕೊನೆಯ ಹಂತಕ್ಕೆ ತಲುಪಿದಾಗ ಕಿಡ್ನಿ ಕಸಿ ಚಿಕಿತ್ಸೆ ಅನಿವಾರ್ಯ. ಇಂತಹ ಬಹಳಷ್ಟು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಿ ಅದರಲ್ಲಿ ಯಶಸ್ವಿಯಾಗಿರುವವರು, ನಾರಾಯಣ ಹೆಲ್ತ್ ಸಿಟಿಯ ಮೂತ್ರಪಿಂಡ ಶಾಸ್ತ್ರ ಮತ್ತು ಕಸಿ ತಜ್ಞ ಡಾ.ಗಣೇಶ್ ಶ್ರೀನಿವಾಸ್ ಪ್ರಸಾದ್. ವಿಶ್ವ ಕಿಡ್ನಿ ದಿನದ ಪ್ರಯುಕ್ತ ಮೂತ್ರಪಿಂಡದ ಆರೋಗ್ಯ ಮತ್ತು ಕಿಡ್ನಿ ಟ್ರಾನ್ ಪ್ಲಾಂಟ್ ಚಿಕಿತ್ಸೆ ಬಗ್ಗೆ ವೈದ್ಯರ ಜತೆ ನಡೆಸಿದ ಮಾತುಕತೆ
ಇಲ್ಲಿದೆ.

? ಮೂತ್ರಪಿಂಡಕ್ಕೆ ಸಂಬಂಧಪಟ್ಟಂತೆ ಏನೇನು ಸಮಸ್ಯೆಗಳು ಕಾಣಿಸಿಕೊಳ್ಳಬಹುದು?
ಮೂತ್ರಪಿಂಡಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ಕಾಯಿಲೆಗಳು ಕಾಡಬಹುದು. ಒಂದು ದೀರ್ಘಾವಧಿಯ ಮೂತ್ರಪಿಂಡದ ಸಮಸ್ಯೆ(ಕ್ರೋನಿಕ್ ಕಿಡ್ನಿ ಡಿಸೀಸ್). ಈ ಕಾಯಿಲೆಗೆ ತುತ್ತಾದಲ್ಲಿ ಮೂತ್ರಪಿಂಡ ನಿಧಾನವಾಗಿ ಹಾನಿ ಆಗುತ್ತದೆ. ಇದರಲ್ಲಿ ಐದು ಹಂತ ಗಳಿದ್ದು, ಮೊದಲ ಮೂರು ಹಂತದಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೆ ಇರಬಹುದು. ನಾಲ್ಕು ಮತ್ತು ಐದನೇ ಹಂತದಲ್ಲಿ ಸ್ವಲ್ಪ ಸ್ವಲ್ಪವಾಗಿ ಲಕ್ಷಣಗಳು ಕಾಣಿಸಿ ಕೊಳ್ಳಲು ಆರಂಭವಾಗು ತ್ತದೆ. ಇದಕ್ಕೆ ಮುಖ್ಯ ಕಾರಣ ಡಯಾಬಿಟಿಸ್ ಮತ್ತು ರಕ್ತದೊತ್ತಡ. ಅಷ್ಟೇ ಅಲ್ಲದೆ ಪದೇ ಪದೇ ಮೂತ್ರಪಿಂಡದಲ್ಲಿ ಕಲ್ಲು, ಸೋಂಕು, ನೋವು ನಿವಾರಕ ಮಾತ್ರೆಯ ಸೇವನೆ, ರೋಗನಿರೋಧಕ ಶಕ್ತಿಯ ಅವ್ಯವಸ್ಥೆಯಿಂದಲೂ ಉಂಟಾಗಬಹುದು.

ಇನ್ನೊಂದು ಅಲ್ಪಾವಧಿಯ ಕಿಡ್ನಿ ಕಾಯಿಲೆ. ಈ ತೊಂದರೆಗೆ ಒಳಗಾದವರ ಕಿಡ್ನಿ ಏಕಾಏಕಿ ಹಾನಿಗೊಳಗಾಗಬಹುದು. ಇದಕ್ಕೆ ಕಾರಣ ಮುಖ್ಯವಾಗಿ ಮೂತ್ರ ಕೋಶ, ಶ್ವಾಸಕೋಶ, ಅಥವಾ ದೇಹದ ಯಾವುದೇ ಭಾಗದಲ್ಲಿ ತೀವ್ರವಾದ ಸೋಂಕು, ಹಾವು ಕಡಿಯುವುದು, ಗರ್ಭಾವಸ್ಥೆಯಲ್ಲಿನ ತೊಡಕುಗಳು, ವಾಂತಿ-ಬೇಧಿಯಿಂದ ದೇಹ ನಿರ್ಜಲೀಕರಣವಾಗಿ ಕಿಡ್ನಿ ಡ್ಯಾಮೇಜ್ ಆಗಬಹುದು. ಅಲ್ಪಾವಧಿಯ ಕಿಡ್ನಿ ತೊಂದರೆಗಳಲ್ಲಿ ಚೇತರಿಕೆಯ ಪ್ರಮಾಣ ಹೆಚ್ಚು. ಆದರೆ ದೀರ್ಘಾವಧಿಯಲ್ಲಿ ಶಾಶ್ವತವಾಗಿ ಕಿಡ್ನಿ ಹಾನಿಗೆ ಒಳಗಾಗಬಹುದು.

? ಮೂತ್ರಪಿಂಡದ ವೈಫಲ್ಯವನ್ನು ಹೇಗೆ ತಡೆಯಬಹುದು?
ಮುಖ್ಯವಾಗಿ ಆರಂಭದ ಮೂರು ಹಂತದಲ್ಲಿ ಇರುವ ವರಿಗೆ ಯಾವ ಲಕ್ಷಣವೂ ಕಾಣಿಸಿಕೊಳ್ಳುವುದಿಲ್ಲ. ಅದಕ್ಕೋಸ್ಕರ ಎಲ್ಲಾ ರೋಗಿಗಳು ವರ್ಷಕ್ಕೊಮ್ಮೆ ಕಿಡ್ನಿ ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಿಕೊಳ್ಳಬೇಕು. ಸೀರಮ್ ಕ್ರಿಯೇಟಿನೈನ್ ಮತ್ತು ಮೂತ್ರದಲ್ಲಿ ಪ್ರೋಟೀನ್ (ಪ್ರೋಟೀನು ರಿಯಾ), ಅಲ್ಟ್ರಾ ಸೌಂಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇವೆರಡು ಪರೀಕ್ಷೆಯಿಂದ ಕಿಡ್ನಿ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು. ಇದರಲ್ಲಿ ಏನಾದರೂ ವ್ಯತ್ಯಾಸ ವಿದ್ದಲ್ಲಿ ತಕ್ಷಣವೇ ಚಿಕಿತ್ಸೆ ತೆಗೆದುಕೊಳ್ಳಬೇಕು. ಇದರಿಂದ ಕಿಡ್ನಿ ವೈಫಲ್ಯವನ್ನು ತಡೆಗಟ್ಟಬಹುದು.

? ಕಿಡ್ನಿ ಕಸಿ ಯಾವಾಗ ಅತ್ಯಗತ್ಯ?
ಮೊದಲ ಮೂರು ಹಂತಗಳಲ್ಲಿ ಅದನ್ನು ಗುರುತಿಸಿ ಚಿಕಿತ್ಸೆ ತೆಗೆದುಕೊಂಡರೆ, ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಮತ್ತು ಗುಣಪಡಿಸ ಬಹುದು. ನಿರ್ಲಕ್ಷಿಸಿ ದಲ್ಲಿ ಕೊನೆಯ ಹಂತ ತಲುಪಿ, ಎರಡೂ ಮೂತ್ರಪಿಂಡ ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ಸಾಮಾನ್ಯವಾಗಿ ಐದನೇ ಹಂತ ಅಥವಾ ಕೊನೆಯ ಹಂತದಲ್ಲಿದ್ದಾಗ ಹಾಗೂ ಮೂತ್ರಪಿಂಡದ ಕಾರ್ಯವು ಶೇ ೯೦ಕ್ಕಿಂತ ಕಡಿಮೆಯಾದಾಗ ಮಾತ್ರ ಕಿಡ್ನಿ ಡಯಾ ಲಿಸಿಸ್
ಅಥವಾ ಮೂತ್ರಪಿಂಡ ಕಸಿ ಮಾಡಲು ಸಲಹೆ ನೀಡಲಾಗುತ್ತದೆ.

? ಕಿಡ್ನಿ ಕಸಿ ಮಾಡುವ ವಿಧಾನ ಹೇಗೆ? ಇದು ಸುರಕ್ಷಿತವೇ?
ರಸ್ತೆ ಅಪಘಾತಕ್ಕೆ ಒಳಗಾದವರ ಮೆದುಳು ಸ್ಥಗಿತ ಗೊಂಡಾಗ, ಅವರ ಮನೆಯವರು ಅಥವಾ ಸಂಬಂಧಿಕರು, ಮೃತರ ಅವಯವಗಳನ್ನು ದಾನ ಮಾಡಿದಲ್ಲಿ ಕಿಡ್ನಿ ಕಸಿ ಮಾಡಿಸಿಕೊಳ್ಳಬಹುದು. ಇದನ್ನು ಕೆಡಾವರ್ ಕಿಡ್ನಿ ಡೊನೇಶನ್ (ಮೃತ ದಾನಿಗಳಿಂದ ಕಸಿ) ಎನ್ನಲಾಗುತ್ತದೆ. ಹಾಗೆಯೇ ನಮ್ಮ ದೇಶದಲ್ಲಿ ಲೀವಿಂಗ್ ಡೋನರ್ ಟ್ರಾನ್ ಪ್ಲಾಂಟ್( ಜೀವಂತ ದಾನಿಗಳಿಂದ ಕಸಿ) ಮಾಡುವ ವರ ಸಂಖ್ಯೆ ಜಾಸ್ತಿ ಇದೆ. ಈ ವಿಧಾನದಲ್ಲಿ ಮನೆಯವರು
ಅಥವಾ ಸಂಬಂಧಿಕರು ರೋಗಿಗೆ ತಮ್ಮ ಮೂತ್ರಪಿಂಡ ದಾನ ಮಾಡುತ್ತಾರೆ. ಆದರೆ ವಿದೇಶಗಳಲ್ಲಿ ಬ್ರೈನ್ ಡೆಡ್ ಡೊನೇಷನ್ ಅಥವಾ ಕೆಡಾವರ್ ಕಿಡ್ನಿ ಡೊನೇಷನ್ ಬಗ್ಗೆ ತಿಳಿವಳಿಕೆ ಚೆನ್ನಾಗಿದೆ. ಒಟ್ಟಾರೆಯಾಗಿ ಕಿಡ್ನಿ ಕಸಿ ಸುರಕ್ಷಿತ ವಿಧಾನವೂ ಹೌದು. ಈ ಚಿಕಿತ್ಸೆಯಿಂದ ರೋಗಿಗಳಿಗೆ ಹಾಗೂ ದಾನಿಗಳಿಗೆ ಯಾವುದೇ ತೊಂದರೆ ಇಲ್ಲ.

? ಮೂತ್ರಪಿಂಡದ ಸಮಸ್ಯೆ ಬಗ್ಗೆ ಜನರಿಗೆ ಯಾವ ರೀತಿ ಅರಿವು ಮೂಡಿಸಬಹುದು?
ಕೊನೆಯ ಹಂತ ತಲುಪುವವರೆಗೆ ಜನರಿಗೆ ಮೂತ್ರಪಿಂಡದ ವ್ಯಾಧಿಯ ಬಗ್ಗೆ ಅರಿವೇ ಇರುವುದಿಲ್ಲ. ಜನರಿಗೆ ತಿಳಿವಳಿಕೆ ಮೂಡಿಸಲೆಂದೇ, ವಿಶ್ವದಾದ್ಯಂತ ವಿಶ್ವ ಕಿಡ್ನಿ ದಿನ ಆಚರಿಸಲಾಗುತ್ತದೆ. ವರ್ಷಕ್ಕೊಮ್ಮೆ ಮಧು ಮೇಹ, ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡಿದ್ದರೂ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವವರು ಬಹಳಷ್ಟು ಕಡಿಮೆ. ನಮ್ಮಲ್ಲಿ ಶೇ.೫೦ರಷ್ಟು ಭಾಗ ಕಿಡ್ನಿ ವೈಫಲ್ಯ ಉಂಟಾಗುವುದು ಡಯಾಬಿಟಿಸ್ ಕಾರಣದಿಂದ. ಆರಂಭದಲ್ಲೇ ಎಚ್ಚೆತ್ತುಕೊಂಡು, ಯಾವ ರೀತಿಯ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂಬ ಅರಿವು ಮೂಡಿದರೆ, ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಮೂತ್ರಪಿಂಡದ ಚಿಕಿತ್ಸೆ ಮತ್ತು ಟ್ರಾನ್ಸ್‌ಪ್ಲಾಂಟ್ ಬಗ್ಗೆ ಅರಿವಿನ ಕೊರತೆ ಇದೆ. ಮೂತ್ರ ಪಿಂಡದ ಕಸಿ ಮಾಡಿಕೊಂಡರೆ ತುಂಬಾ ವರ್ಷ ಆರೋಗ್ಯ ವಂತ ಜೀವನ ನಡೆಸಬಹುದು.

 

Leave a Reply

Your email address will not be published. Required fields are marked *

error: Content is protected !!