Friday, 20th September 2024

ಓಲೈಕೆಗಾಗಿ ಹೇಳಿಕೆಗಳನ್ನು ನೀಡಬೇಡಿ

ಗಣೇಶ ಉತ್ಸವಕ್ಕೆ ಅಡ್ಡಿ ಮಾಡಿದರೆ ನಾವು ಕೇಳುವುದಿಲ್ಲ. ನಾವು ಉತ್ಸವ ಮಾಡುವುದಕ್ಕೆ ನಿಮ್ಮ ಅನುಮತಿ ಯೂ ಬೇಕಿಲ್ಲ. ಗಣೇಶ ಉತ್ಸವ ಮಾಡಿದರೆ ಮಾತ್ರ ಕರೋನಾ ಬರುತ್ತಾ?. ನಾನು ಮುಖ್ಯಮಂತ್ರಿಗೆ ಹೇಳಿದ್ದೇನೆ, ನೀವು ಅದ್ಧೂರಿಯಾಗಿ ಗಣೇಶೋತ್ಸವ ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳ ವಿಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನಪ್ರತಿನಿಧಿಗಳು ಕೆಲ ಸಮುದಾಯಗಳ ಓಲೈಕೆಗಾಗಿ ಕರೋನಾ ಬಗ್ಗೆ ಜನರನ್ನು ತಪ್ಪು ದಾರಿಗೆಳೆಯುತ್ತಿರುವ ಕುರಿತು ಇದೊಂದು ಉದಾಹರಣೆ ಅಷ್ಟೇ. ಇಂಥ ಅನೇಕ ರಾಜಕಾರಣಿಗಳ ಹೇಳಿಕೆಗಳು, ಜಾಥಾಗಳು, ಸಭೆ, ಸಮಾರಂಭಗಳು ಕರೋನಾ ನಡುವೆಯೂ ನಡೆಯುತ್ತಲೇ ಇವೆ. ಆದರೆ ಯಾವ ಅಧಿಕಾರಿಗಳೂ ಈವರೆಗೂ ಯಾವುದೇ ಜನಪ್ರತಿನಿಽಯ ಮೇಲೆ ಪ್ರಕರಣ ದಾಖಲಿಸಿರುವ ಉದಾಹರಣೆ ಇಲ್ಲ. ಜನರಲ್ಲಿ ಜಾಗೃತಿ ಮೂಡಿಸ ಬೇಕಾದ ಬಹುತೇಕ ರಾಜಕಾರಣಿಗಳು ಕರೋನಾ ಬಗ್ಗೆ ಅಸಡ್ಡೆ ತೋರಿದ್ದಕ್ಕೇ ಸೋಂಕು ಉಲ್ಬಣಗೊಳ್ಳಲು ಕಾರಣವೆಂದು ಇತ್ತೀಚೆಗೆ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.

ಕರೋನಾ ವೈರಸ್ ಸೋಂಕು ನಮ್ಮ ನಡುವಿನಿಂದ ಮಾಯವೇನೂ ಆಗಿಲ್ಲ. ಆದರೆ ಜನತೆ ಅದಕ್ಕೆ ಒಂದು ರೀತಿಯಿಂದ ಒಗ್ಗಿ ಹೋಗಿzರೆ. ದೈನಂದಿನ ಬದುಕು ಹಳಿಗೆ ಮರಳುತ್ತಿರುವುದರ ನಿದರ್ಶನವಾಗಿ, ಇದೀಗ ತಾನೆ ಮುಗಿದ ಹಬ್ಬಗಳ ಸೀಸನ್‌ನಲ್ಲಿ ಜನರು ವರ್ತಿಸಿದ ರೀತಿಯೇ ಅದಕ್ಕೆ ಉದಾಹರಣೆ. ಜನಪ್ರತಿನಿಧಿ ಗಳೇ ಹೀಗೆ ಬೇಜವಾಬ್ದಾರಿ ಕರೆ ಕೊಟ್ಟರೆ ಸಮಾಜದ ಆರೋಗ್ಯ ನಿರೀಕ್ಷಿಸುವುದಾದರೂ ಹೇಗೆ. ಕಾನೂನು ಮಾಡಿರುವುದು ಎಲ್ಲರಿಗಾಗಿ ಎಂದು ಸಾರಿ ಹೇಳಬೇಕಾದ ಶಾಸಕರೇ ಈ ರೀತಿ ಅಸಡ್ಡೆ ತೋರಿದರೆ ಎರಡನೇ ಅಲೆಯಲ್ಲಿ ಎದುರಿಸಿದ ಸಂಕಷ್ಟ, ಸಾವು-ನೋವುಗಳು ಮತ್ತೆ ಮರುಕಳಿಸುವುದರಲ್ಲಿ ಸಂಶಯವೇ ಇಲ್ಲ.