ಬೆಂಗಳೂರು: ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಗಣಿ ಅಧಿಕಾರಿಗಳಿಗೆ ಪೊಲೀಸ್ ಡ್ರೆಸ್ ನೀಡಲಾಗುವುದು. ಅವರ ದರ್ಜೆಗೆ ತಕ್ಕ ಸ್ಟಾರ್ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಅಧಿಕಾರಿಗಳಿಗೆ ಡ್ರೆಸ್ ಇರುವಂತೆ ಗಣಿ ಅಧಿಕಾರಿಗಳಿಗೂ ಸಮವಸ್ತ್ರವಿದ್ದರೆ ಶಿಸ್ತು ಬರುತ್ತದೆ. ಗಣಿಗಾರಿಕೆ ಪ್ರದೇಶಗಳಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಗಳ ನೇಮಕಕ್ಕೆ ಚರ್ಚೆ ನಡೆಯುತ್ತಿದೆ. ಸೆಕ್ಯುರಿಟಿ ಹೊರಗುತ್ತಿಗೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು, ಪ್ರತಿ ಜಿಲ್ಲೆಗೆ ಐದು ಜನರನ್ನು ನೇಮಿಸಿ ಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸುಮಾರು 2000 ಕ್ಕೂ ಹೆಚ್ಚು ಗಣಿ ಮಾಲೀಕರಿಗೆ ಪರವಾನಗಿ ಇಲ್ಲ. ಅವರು ಮೂರು ತಿಂಗಳು ಸಮಯ ಕೋರಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಕ್ರಷರ್ ಸ್ಥಗಿತ ಆಗುವುದರಿಂದ ನಿರುದ್ಯೋಗ ಸಮಸ್ಯೆ, ಅಭಿವೃದ್ಧಿಗೆ ಹಿನ್ನೆಡೆ ಹಾಗೂ ಹೊರ ರಾಜ್ಯದ ಕ್ರಷರ್ ಮಾಲಿಕರು ಹೆಚ್ಚಿನ ದರಕ್ಕೆ ಬಂದು ಮಾರಾಟ ಮಾಡುತ್ತಿದ್ದಾರೆ. ಮೂರು ತಿಂಗಳ ಒಳಗಾಗಿ ಡಿಜಿಎಂಎಸ್ ಪರವಾನಗಿ ಪಡೆಯಬೇಕು. ಕಡ್ಡಾಯವಾಗಿ 90 ದಿನದಲ್ಲಿ ತೆಗೆದುಕೊಳ್ಳುವ ಪತ್ರ ನೀಡ ಬೇಕು. ಈಗಾಗಲೆ ಡಿಜಿಎಂಎಸ್ ಪರವಾನಗಿ ಹೊಂದಿದರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪತ್ರ ನೀಡಬೇಕು ಎಂದರು.
2 ಕೆಜಿ ವರೆಗೂ ಸ್ಫೋಟಕ ಬಳಕೆ ಮಾಡಿಕೊಳ್ಳಲು ಅವಕಾಶ ಇದಕ್ಕೆ ಡಿಜಿಎಂಎಸ್ ಅನುಮತಿ ಅಗತ್ಯವಿಲ್ಲ. ಐದು ಎಕರೆಗಿಂತ ಕಡಿಮೆ ಜಮೀನಿನಲ್ಲಿ ಗಣಿಗಾರಿಕೆ ಮಾಡುವವರಿಗೆ ಡಿಜಿಎಂ ಎಸ್ ಪರವಾನಗಿ ಕಡ್ಡಾಯ ಮಾಡಬಾರದು ಎಂಬ ಮನವಿ ಮಾಡಿ ದ್ದಾರೆ. ಇದನ್ನು ಹೊಸ ಗಣಿ ನೀತಿಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ನಿರಾಣಿ ಹೇಳಿದರು.
ಗಣಿ ಅದಾಲತ್ ಮಾಡುವುದಕ್ಕೆ ತೀರ್ಮಾನಿಸಲಾಗಿದ್ದು, ಬೆಂಗಳೂರಲ್ಲಿ ಏಪ್ರಿಲ್ 17, ಬೆಳಗಾವಿಯಲ್ಲಿ ಏಪ್ರಿಲ್ 30, ಮಂಗಳೂರಿ ನಲ್ಲಿ ಜೂನ್ 21 ರಂದು ಅದಾಲತ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಶಿವಮೊಗ್ಗ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಿಯಾಗಿ ಬಳಕೆ ಮಾಡದಿರುವುದರಿಂದ ಅನಾಹುತ ಆಗಿದೆ ಎಂದ ಅವರು, ಪ್ರತಿ ಜಿಲ್ಲೆ ಯಲ್ಲಿ ಡಿಜಿಎಂಎಸ್ ಮೂಲಕ ಜಿಲ್ಲಾವಾರು ತರಬೇತಿ ನೀಡಲಾಗುವುದು. ಅದಾಲತ್ ನಲ್ಲಿ ಕಾನೂನು ಸರಳಿಕರಣ ಮಾಡಿ ಅವಕಾಶ ಕಲ್ಪಿಸಲಾಗುವುದು. ಅಕ್ರಮ ಮಾಡಿದವರಿಗೆ ದಂಡದ ಐದು ಪಟ್ಟು ವಸೂಲಿ ಮಾಡಲಾಗುವುದು. ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ತೀರ್ಮಾನ ಮಾಡಲಾಗುವುದು ಎಂದು ಮುರುಗೇಶ್ ನಿರಾಣಿ ಹೇಳಿದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ