Saturday, 27th July 2024

ಗಣಪತಿ ಪ್ರಕೃತಿ ಸ್ವರೂಪ; ಗೌರಿ ಸರ್ವಶಕ್ತಿಗಳ ಮೂಲರೂಪ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ ೮೨

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಗೌರಿ-ಗಣೇಶ ಹಬ್ಬದ ಮಹತ್ವ ಮತ್ತು ಆಚರಣೆ ಚರ್ಚೆ

ಬೆಂಗಳೂರು: ಭಾರತೀಯ ಪರಂಪರೆಯಲ್ಲಿ ಅನೇಕ ಹಬ್ಬಗಳನ್ನು ಚೈತ್ರಾದಿ ಮಾಸಗಳಲ್ಲಿ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಭಾದ್ರಪದವು ಗೌರಿಯನ್ನು ಪೂಜೆ ಮಾಡುವ ಮಾಸ ಎಂದು ವೇದಬ್ರಹ್ಮ ಭಾನುಪ್ರಕಾಶ್ ಶರ್ಮ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ಗೌರಿ-ಗಣೇಶ ಹಬ್ಬದ ಮಹತ್ವ ಮತ್ತು ಆಚರಣೆ; ಏನು ಹೇಗೆ?’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌರಿಯನ್ನು ಸ್ವರ್ಣಗೌರಿ ಅಂತಲೂ ಕರೆಯುತ್ತಾರೆ. ಅದಕ್ಕೆ ಕಾರಣ, ದಕ್ಷ ಬ್ರಹ್ಮ ವಿಶೇಷಯಾಗವನ್ನು ಏರ್ಪಾಟು ಮಾಡಿರುತ್ತಾನೆ. ಆದರೆ ಇದಕ್ಕೆ ಎಲ್ಲ ದೇವತೆಗಳಿಗೆ ಆಮಂತ್ರಣವಿದ್ದರೂ ಶಿವನಿಗೆ ಮಾತ್ರ ಆಮಂತ್ರಣವಿರುವುದಿಲ್ಲ.

ಆದರೂ ಯಜ್ಞಕ್ಕೆ ದಾಕ್ಷಾಯಿಣಿ ಹೋಗುತ್ತಾಳೆ. ಅಲ್ಲಿ ಇಂದ್ರಾದಿ ದೇವತೆಗಳು, ಲಕ್ಷ್ಮೀ ನಾರಾಯಣ, ಬ್ರಹ್ಮ ಸರಸ್ವತಿಯಾದಿಯಾಗಿ ಎಲ್ಲರೂ ಇರುತ್ತಾರೆ. ಅವರೆಲ್ಲಾ ದಾಕ್ಷಾಯಿಣಿಯನ್ನು ಶಿವನ ಕುರಿತಂತೆ ಪ್ರಶ್ನಿಸಿದಾಗ ಅವಮಾನಿತಳಾದ ದಾಕ್ಷಾಯಿಣಿ ಪ್ರದಕ್ಷಿಣಾಕಾರವಾಗಿ ಬಂದು ಯಜ್ಞಕುಂಡಕ್ಕೆ ಹಾರುತ್ತಾಳೆ.  ಆಗ ಅಲ್ಲಿದ್ದ ಸಪ್ತಋಷಿಗಳು ತಮ್ಮ ಕೈಚಾಚುತ್ತಾರೆ. ಅವರು ಕೈ ಚಾಚಿದಾಗ ಮಾತೆಯ ಅರ್ಧದೇಹ ಮಾತ್ರ ದೊರೆಯು ತ್ತದೆ. ಋಷಿಗಳ ಹಸ್ತಸ್ಪರ್ಶದ ಭಾಗವು ಸ್ವರ್ಣವಾಗುತ್ತದೆ. ಆದ್ದರಿಂದ ಸ್ವರ್ಣಗೌರಿ ವ್ರತ ಎಂದು ಹೆಸರು ಬಂತು ಎಂದು ಧಾರ್ಮಿಕ ಹಿನ್ನೆಲೆಯಲ್ಲಿ ವಿವರಿಸಿದರು.

ಗೌರಿಯಲ್ಲಿ ಅನೇಕ ವಿಧವಾದ ವಿಚಾರಗಳಿವೆ. ಗೌರಿಯನ್ನು ಮನೆಗೆ ಕರೆತರುವ ಮೊದಲು ಮನೆಯನ್ನು ಸ್ವಚ್ಛಗೊಳಿಸಿ, ಶುಭ್ರವಾದ ಮಂಟಪ, ತಳಿರುತೋರಣ, ಬಾಳೆ ಕಂಬಗಳಿಂದ ಶೃಂಗರಿಸಬೇಕು. ಮೊರ ದೊಂದಿಗೆ ಅನೇಕ ಧಾನ್ಯಗಳ ಬಾಗಿನವನ್ನು ಮಾಡಿಟ್ಟುಕೊಂಡು ಗೌರಿಯನ್ನು ಆದರದಿಂದ ಆಹ್ವಾನಿಸಬೇಕು. ಗೌರಿ ಎಂದರೆ ಮರಳು. ಹಿಂದಿನ ಕಾಲದಲ್ಲಿ ಗೌರಿ ಮೂರ್ತಿಯನ್ನು ಮರಳಿನಿಂದ ಸೃಷ್ಟಿಸಿಕೊಳ್ಳುತ್ತಿದ್ದರು. ಆದ್ದರಿಂದ ಮರಳಿನ ಗೌರಿಯನ್ನು ಪೂಜಿಸುತ್ತಾರೆ. ಗೌರಿಯನ್ನು ೧೮ ಗಂಟುಗಳ ದಾರವನ್ನು ಮಾಡಿ ಪೂಜಿಸುತ್ತಾರೆ. ಈ ಸಂದರ್ಭದಲ್ಲಿ ಹುಗ್ಗಿಯಂತಹ ಅನೇಕ ಪ್ರಸಾದವನ್ನು ಮಾಡುತ್ತಾರೆ.

ಗೌರಿಯನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಮಾಡುವ ಮೂಲಕ ಪೂಜಿಸಲಾಗುತ್ತದೆ. ಗೌರಿಯನ್ನು ಅಂದೇ ಇಟ್ಟು ಪೂಜಿಸಿ ಸೂರ್ಯಾಸ್ತಮಾನದ ಬಳಿಕ ಗೋಧೂಳಿ ನಂತರ ಗೌರಿ ವಿಸರ್ಜನೆ ಮಾಡಬೇಕು. ಶುಭದಿನದಂದೇ ಗೌರಿಯನ್ನು ವಿಸರ್ಜಿಸಬೇಕು ಎಂದು ಸ್ವರ್ಣಗೌರಿ ವತ್ರದ ಬಗ್ಗೆ ವಿವರಿಸಿದರು. ಗಣೇಶ ಸೃಷ್ಟಿಯ ಮೂಲ: ಗಣಪತಿಯೇ ಸೃಷ್ಟಿಯ ಮೂಲ. ಮಹಾಭಾರತದ ಕಥೆ ಕೇಳಿ ರಚಿಸಿದವನು ಗಣಪತಿ. ಇಂತಹ ಗಣಪತಿಯನ್ನು ಭಾದ್ರಪದ ಶುಕ್ಲದ ಚೌತಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ.

ಮಡಿಯನ್ನುಟ್ಟು, ಕೆಂಪು ವಸ, ೨೧ ಗೆಜ್ಜೆ ವಸ ಹಾಕಿ ಪೂಜಿಸಬೇಕು. ಇನ್ನು ನೈವೇದ್ಯವಾಗಿ ತೆಂಗಿನಕಾಯಿ, ಬಾಳೆಹಣ್ಣು, ಗರಿಕೆಯ ನೈವೇದ್ಯವನ್ನು ಮಾಡ ಲಾಗುತ್ತದೆ. ಗಣಪತಿಯನ್ನು ಪೂಜಿಸುವುದಕ್ಕೂ ಮೊದಲು ಚಿಕ್ಕ ಗಣಪತಿಯನ್ನು ಪೂಜಿಸಬೇಕು. ಆನೆಗಿಷ್ಟವಾದ ದ್ರವ್ಯಗಳಿಂದ ಮಾಡಿದ ನೈವೇದ್ಯ ಗಳೊಂದಿಗೆ ಪೂಜಿಸಲಾಗುತ್ತದೆ. ಇದರೊಂದಿಗೆ ಮಹಾಮಂಗಳಾರತಿ, ಮೆರವಣಿಗೆ, ನೃತ್ಯದೊಂದಿಗೆ ವಿಸರ್ಜಿಸಲಾಗುತ್ತದೆ. ಮಣ್ಣಿನ ಗಣಪತಿಯನ್ನು ಮಾಡಿ ಪೂಜಿಸುವುದು ಶ್ರೇಷ್ಠ ಎಂದು ಹೇಳಿದರು. ಪಂಡಿತ ಕಲ್ಲಾಪುರ ಪವಾಮಾನಾಚಾರ್ ಮಾತನಾಡಿ, ಗಣಪತಿಯನ್ನು ಆದಿಯಲ್ಲಿ ಪೂಜಿಸಲಾಗುತ್ತದೆ. ಹಿರಿಯರಿಗೆ ನಮಿಸಿದರೆ ಎಲ್ಲ ಅಪೇಕ್ಷೆಗಳು ಪೂರ್ಣಗೊಳ್ಳುತ್ತವೆ. ವ್ಯಕ್ತಿಯ ವ್ಯಕ್ತಿತ್ವ ತಿಳಿದು ಬಾಗುವುದು ಅವರಿಗೆ ಮಾಡುವ ಪುರಸ್ಕಾರವಾಗುತ್ತದೆ. ಯಾಕೆ? ಹೇಗೆ ಎಂದು ತಿಳಿದು ಮಾಡು ವುದೇ ಅತ್ಯುತ್ತಮ. ದೇವರು ಸರ್ವವ್ಯಾಪಿ. ನಾವು ಪಂಚಭೂತಗಳಲ್ಲಿ ಭಗವಂತನನ್ನು ಕಾಣುತ್ತೇವೆ. ಅದೇ ರೀತಿ ಒಂದು ಮಹಾಭಾರತ ಶ್ಲೋಕವನ್ನು ಓದಿದರೆ ಪುಣ್ಯ ದೊರೆಯುತ್ತದೆ ಎಂದು ಹೇಳಿದರು.

ಪರಮಾತ್ಮ ಒಲಿಯುವ ದಿನ

ಸಂಸ್ಕೃತಿ ಚಿಂತಕಿ ಆರತಿ ಕೌಂಡಿನ್ಯ ಮಾತನಾಡಿ, ಗೌರಿ ಅಂದರೆ ಜಗನ್ಮಾತೆ. ಗಣೇಶನಾಗಿ, ಗೌರಿಯಾಗಿ ಪರಮಾತ್ಮನು ಒಲಿಯುವ ದಿನವೇ ಈ ಹಬ್ಬ. ಜಗನ್ಮಾತೆ ಗೌರಿ ಆದರ್ಶವಾದಿ, ಸೀತತ್ವದ ಊರ್ಜಿತ ಸತ್ವ. ಜ್ಞಾನ ಗುರುವಾಗಿ, ತಪಶ್ವಿನಿಯಾಗಿ, ಪರಾಕ್ರಮಿಯಾಗಿ, ಮಾತೆಯಾಗಿಯೂ ಗೌರಿ ಕಾಣುತ್ತಾಳೆ. ಮನುಷ್ಯನಲ್ಲಿರುವ ಅಂತರ್ಗತ ಶಕ್ತಿಯನ್ನು ವ್ಯವಸ್ಥಿತವಾಗಿ ಅಭಿವ್ಯಕ್ತಗೊಳಿಸಿದರೆ ಇವೆಲ್ಲಾ ನಮಗೆ ತಿಳಿಯುತ್ತದೆ. ಗೌರಿ ಧ್ಯಾನ ನಮ್ಮೊಳಗಿನ ಸತ್ವವನ್ನು ತೋರುತ್ತದೆ. ೧೬ ಸಂಕೇತಗಳಲ್ಲಿ ಗೌರಿಯನ್ನು ಪೂಜಿಸಿದರೆ ಶುಭಫಲ. ಗೌರಿ ಮಾತೃತ್ವದ ಪ್ರತೀಕ. ಸದಾ ವಾತ್ಸಲ್ಯಮಯಿ. ಅಹೇತುರ ಪ್ರೀತಿಯನ್ನು
ನೀಡುತ್ತಾಳೆ. iಹಾಮಾತೆಯಾಗಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ. ಈಕೆ ಸತೀತತ್ವದ ಪ್ರತೀಕ. ಜೀವನದಲ್ಲಿ ಅನುಭವ ಕೊಟ್ಟು ಮಾಗಿಸುತ್ತಾಳೆ. ಗೌರಿ ವಿಶ್ವಾತ್ಮಿಕೆ, ಜಗತ್ತನ್ನೇ ಆಳುವ ರಾಜರಾಜೇಶ್ವರಿ. ಸರ್ವಶಕ್ತಿಗಳ ಮೂಲರೂಪ. ಗೌರಿತತ್ವವನ್ನು ಪೂಜಿಸಿದಾಗ ಭಕ್ತಿ ಅರ್ಥಪೂರ್ಣವಾಗುತ್ತದೆ ಎಂದರು.

? ಮೃಣ್ಮಯ ಗಣಪತಿಯ ಪೂಜೆ ನಡೆಯಬೇಕು
? ಗಣಪತಿ ಸದಾ ಬಾಲರೂಪ
? ಹಾಸ್ಯ ರಸದೇವತೆ ಗಣೇಶ
? ಆದಿ ಪೂಜಿತ ಗಣಪತಿ
? ಗಣಪತಿ ಪ್ರಕೃತಿ ಸ್ವರೂಪ
? ಗೌರಿ ಸರ್ವಶಕ್ತಿಗಳ ಮೂಲರೂಪ

? ವ್ಯಕ್ತಿಯ ವ್ಯಕ್ತಿತ್ವ ತಿಳಿದು ಬಾಗುವುದು ಅವರಿಗೆ ಮಾಡುವ ಪುರಸ್ಕಾರ
? ವಿಶ್ವಾತ್ಮಿಕೆ ಗೌರಿ
? ಮಾತೃತ್ವದ ಪ್ರತೀಕ
? ಧಾರ್ಮಿಕ ಕ್ರಿಯೆಯಲ್ಲಿ ತೊಡಗಿದರೆ ಮನಃಶುದ್ದಿ

***

ನಮ್ಮ ಸಂಸ್ಕೃತಿಯಲ್ಲಿ ಗಣೇಶನಿಗೆ ಮೊದಲ ಸ್ಥಾನವನ್ನು ನೀಡಿದ್ದೇವೆ. ಹತ್ತಾರು ದೇಶಗಳಲ್ಲಿ ಸಂಚರಿಸಿದಾಗ ಗಣೇಶನಿಗೆ ಪೂಜೆ ಸಲ್ಲಿಸುವದನ್ನು ಕಂಡಿದ್ದೇನೆ. ಭಾರತೀಯರು ಎಲ್ಲೆಲ್ಲಿ ಇದ್ದಾರೋ ಅಲ್ಲಿ ಗಣಪತಿಯ ಮಂದಿರವನ್ನು ಕಾಣಬಹುದು.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕ

Leave a Reply

Your email address will not be published. Required fields are marked *

error: Content is protected !!