Dr A jayakumar Shetty Column: ಜನಸಂಖ್ಯೆ ಹೊರೆಯಾಗದೆ ಸಂಪನ್ಮೂಲವಾಗಲಿ
146 ಕೋಟಿ ಜನಸಂಖ್ಯೆ ಹಾಗೂ ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತಕ್ಕೆ ಮಾನವ ಸಂಪನ್ಮೂಲ ವರವೂ ಹೌದು. ಅಧಿಕ ಸಂಖ್ಯೆಯಲ್ಲಿರುವ ಯುವಶಕ್ತಿಯು ಭಾರತದ ವರ್ತಮಾನ ಮತ್ತು ಭವಿಷ್ಯವಾಗಿದೆ. ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ.


ಜನಸಂಪತ್ತು
ಡಾ.ಎ.ಜಯಕುಮಾರ ಶೆಟ್ಟಿ
ಜನಸಂಖ್ಯೆ ಎಂಬುದನ್ನು ಮಾನವ ಸಂಪನ್ಮೂಲ ಎಂದು ಪರಿಭಾವಿಸಿದಾಗ ಅದು ದೇಶಕ್ಕೆ ಕೊಡುಗೆಯೇ. ಆದರೆ ಅದು ಕೇವಲ ಸಂಖ್ಯೆಯಷ್ಟೇ ಆದರೆ ದೇಶಕ್ಕೆ ಅದಕ್ಕಿಂತ ದೊಡ್ಡ ಸಮಸ್ಯೆ ಬೇರಿಲ್ಲ. ಇಂದಿನ ಅಭಿವೃದ್ಧಿಶೀಲ ಯುಗದಲ್ಲಿ ವೈಜ್ಞಾನಿಕ ಅನ್ವೇಷಣೆಗಳು ಮಾನವನನ್ನು ಈ ವಿಶ್ವದ ಒಡೆಯನಾಗಿ ಮಾಡಿದರೂ, ಅವನು ಮಾತ್ರ ತನ್ನನ್ನು ತಾನೇ ನಿಯಂತ್ರಣಕ್ಕೊಳಪಡಿಸು ವುದು ಅಸಾಧ್ಯವಾಗಿದೆ. ಜನಸಂಖ್ಯಾ ಸ್ಫೋಟವು ಜಗತ್ತಿನ ಬಹುತೇಕ ಭಾಗಗಳಲ್ಲಿ ಬಿಡಿಸಲಾಗದ ಒಗಟಾಗಿದೆ.
146 ಕೋಟಿ ಜನಸಂಖ್ಯೆ ಹಾಗೂ ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತಕ್ಕೆ ಮಾನವ ಸಂಪನ್ಮೂಲ ವರವೂ ಹೌದು. ಅಧಿಕ ಸಂಖ್ಯೆಯಲ್ಲಿರುವ ಯುವಶಕ್ತಿಯು ಭಾರತದ ವರ್ತಮಾನ ಮತ್ತು ಭವಿಷ್ಯವಾಗಿದೆ. ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ.
ಡೇ ಆಫ್ 5 ಬಿಲಿಯನ್: ಜನಸಂಖ್ಯೆಯು ಬಹಳ ಹಿಂದಿನಿಂದಲೂ ಮಾನವ ಸಮಾಜದಲ್ಲಿ ಆತಂಕ ಮೂಡಿಸುತ್ತಲೇ ಬಂದಿದೆ. ಕ್ರಿ.ಪೂ 4ನೇ ಶತಮಾನದಲ್ಲಿ ಜಗತ್ತಿನ ಜನಸಂಖ್ಯೆ ಕೇವಲ 20 ಕೋಟಿ ಇzಗಲೇ ಪ್ಲೇಟೋ ಮತ್ತು ಅರಿಸ್ಟಾಟಲ್ ಮೊದಲಾದ ದಾರ್ಶನಿಕರು ಕಟ್ಟುನಿಟ್ಟಿನ ಜನನ ನಿಯಂತ್ರಣ ಕ್ರಮಗಳಿಗೆ ಸಲಹೆ ನೀಡಿದ್ದರು.
ವಿಶ್ವ ಜನಸಂಖ್ಯೆಯು 1987ರ ಜುಲೈ 11ರಂದು 500 ಕೋಟಿಯ ಗಡಿಯನ್ನು ತಲುಪಿತು. ಇದು ವಿಶ್ವಜನಸಂಖ್ಯಾ ಶಾಸದಲ್ಲಿ ಒಂದು ಹೆಗ್ಗುರತು ಕ್ಷಣವಾಗಿತ್ತು ಮತ್ತು ವಿಶ್ವದಾದ್ಯಂತ ತ್ವರಿತ ಜನ ಸಂಖ್ಯಾ ಬೆಳವಣಿಗೆಯತ್ತ ಗಮನ ಸಳೆಯಿತು. ಜನಸಂಖ್ಯೆ ಎನ್ನುವುದು ಕೇವಲ ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಉಳಿದಿಲ್ಲ.
ಇದನ್ನೂ ಓದಿ: Suresh Balachandran Column: ಉತ್ತರ ಇಲ್ಲದಾದಾಗ ವಿಷಯಾಂತರದ ಕಸರತ್ತು
ಇದು ಆಕಾಂಕ್ಷೆಗಳು, ಕನಸುಗಳು ಮತ್ತು ಪರಿವರ್ತನಾ ಸಾಮರ್ಥ್ಯದ ರೋಮಾಂಚನ ಅಸ್ತ್ರ ವಾಗಿದೆ. ಎಷ್ಟೋ ಮಿಲಿಯನ್ ವರ್ಷಗಳ ನಂತರ 1800ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ಒಂದು ಬಿಲಿಯನ್ ಅಂದರೆ 100 ಕೋಟಿಯನ್ನು ಮೊತ್ತ ಮೊದಲ ಬಾರಿಗೆ ತಲುಪಿತು. ಮುಂದೆ 127 ವರ್ಷಗಳ ನಂತರ, ಅಂದರೆ 1927ರಲ್ಲಿ ಜಗತ್ತಿನ ಜನಸಂಖ್ಯೆ ದ್ವಿಗುಣಗೊಂಡು 2 ಬಿಲಿಯನ್ ತಲುಪಿತು.
ಮುಂದಿನ 33 ವರ್ಷಗಳಲ್ಲಿ, ಅಂದರೆ 1960ರಲ್ಲಿ 3 ಬಿಲಿಯನ್ ತಲುಪಿ, ಮುಂದೆ 14 ವರ್ಷಗಳಲ್ಲಿ 1974ಕ್ಕೆ 4 ಬಿಲಿಯನ್ ತಲುಪಿತು. ಮುಂದೆ ಕೇವಲ 13 ವರ್ಷಗಳಲ್ಲಿ (1987) ಜುಲೈ 11ರಂದು ಜಗತ್ತಿನ ಜನಸಂಖ್ಯೆ 5 ಬಿಲಿಯನ್ ತಲುಪಿತು. ಮುಂದೇ ಕೇವಲ 12 ವರ್ಷಗಳ ಅಂತರದಲ್ಲಿ 6 ಬಿಲಿಯನ್ (1999) ಹಾಗೂ 7 ಬಿಲಿಯನ್ (2011) ತಲುಪಿತು.
ಇದೀಗ 11 ವರ್ಷಗಳ ಅಂತರದಲ್ಲಿ 8 ಬಿಲಿಯನ್ (2022) ತಲುಪಿ ಈಗ 8.23 ಬಿಲಿಯನ್ ಪ್ರಮಾಣ ದಲ್ಲಿದೆ. ಐವರು ಯುವಕರಲ್ಲಿ ಒಬ್ಬ ಭಾರತೀಯ:ಚೀನಾದ ನಂತರ ಅತಿ ಹೆಚ್ಚು ಜನರನ್ನು ಹೊಂದಿರುವ ದೇಶವಾದ ಭಾರತ ಭೌಗೋಳಿಕವಾಗಿ ಜಗತ್ತಿನ ಶೇ.2.4ರಷ್ಟು ಭೂಭಾಗವನ್ನು ಹೊಂದಿದೆ, ಆದರೆ ಜಗತ್ತಿನ ಶೇ.17.05ರಷ್ಟು ಜನರು ಭಾರತದಲ್ಲಿದ್ದಾರೆ.
ಜಗತ್ತಿನ ಪ್ರತಿ 6 ಜನರಲ್ಲಿ ಒಬ್ಬ ಭಾರತೀಯ. ಜಾಗತಿಕ ವರಮಾನದಲ್ಲಿ ಭಾರತದ ಪಾಲು ಕೇವಲ ಶೇ.2.51ರಷ್ಟು. ಭೌಗೋಳಿಕವಾಗಿ ಅಮೆರಿಕ ಭಾರತದ ಎರಡೂವರೆ ಪಟ್ಟು ದೊಡ್ಡದಿದೆ. ಆದರೆ ಜನಸಂಖ್ಯೆಯಲ್ಲಿ ಭಾರತವು ಅಮೆರಿಕದ ಮೂರೂವರೆ ಪಟ್ಟು ದೊಡ್ಡದಿದೆ. ಭಾರತದ ವಾರ್ಷಿಕ ಜನಸಂಖ್ಯಾ ಹೆಚ್ಚಳವು ಆಸ್ಟ್ರೇಲಿಯಾ ದೇಶದ ಒಟ್ಟು ಜನಸಂಖ್ಯೆಗೆ ಸಮನಾಗಿದೆ. 15 ರಿಂದ 25 ವರ್ಷ ವಯೋಮಾನದವರ ಸಂಖ್ಯೆ ಜಗತ್ತಿನಲ್ಲಿ 120 ಕೋಟಿ ಇದ್ದರೆ, ಭಾರತದ 25 ಕೋಟಿಗೂ ಅಽಕ ಇದೆ. ಅಂದರೆ ಜಗತ್ತಿನ ಪ್ರತಿ ಐವರು ಯುವಜನರಲ್ಲಿ ಒಬ್ಬರು ಭಾರತೀಯ. ಯುವಪೀಳಿಗೆ ಜಗತ್ತಿಗೆ ಹೊಸರೂಪ ಕೊಡಬೇಕಿದೆ. ಇದರಲ್ಲಿ ಭಾರತೀಯರೇ ಹೊರಬೇಕಾದ ಹೊಣೆಗಾರಿಕೆ ದೊಡ್ಡದು!
ಭಾರತವು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.66ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿ ರುವ ಯುವದೇಶವಾಗಿದೆ. ಯುವಜನರಲ್ಲಿರುವ ಅಪಾರ ಸಾಮರ್ಥ್ಯವನ್ನು ಬಳಸಿ ಕೊಳ್ಳಲು, ಅವರ ಶಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ನಡೆಸುವುದು ಹಾಗೂ ಅವರಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ಅಗತ್ಯವಾದ ಬೆಂಬಲ ಮತ್ತು ವೇದಿಕೆಯನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ.
ಯುವಕರ ಸಬಲೀಕರಣ: ಇಂದು, ಪ್ರಪಂಚವು 10 ರಿಂದ 24 ವರ್ಷದೊಳಗಿನ 1.8 ಶತಕೋಟಿ ಯುವಜನರನ್ನು ಹೊಂದಿದೆ. ಇತಿಹಾಸದಲ್ಲಿ ಅತಿದೊಡ್ಡ ಪೀಳಿಗೆಯಾದ ಇವರು ಆರ್ಥಿಕ ಅಭದ್ರತೆ, ಲಿಂಗ ಅಸಮಾನತೆ, ಸೀಮಿತ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ, ಹವಾಮಾನ ವೈಪರೀತ್ಯ ಮತ್ತು ಸಂಘರ್ಷವನ್ನು ಎದುರಿಸುತ್ತಿದ್ದಾರೆ. ಆದುದರಿಂದ 2025ರ ಜನಸಂಖ್ಯಾ ದಿನಾಚರಣೆಯ ಧ್ಯೇಯವಾಕ್ಯ- ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ತಾವು ಬಯಸುವ ಕುಟುಂಬಗಳನ್ನು ರಚಿಸಲು ಯುವಜನರನ್ನು ಸಬಲೀಕರಣಗೊಳಿಸುವುದು, ಯುವಕರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಕ್ಕುಗಳು, ಸಾಧನಗಳು ಮತ್ತು ಅವಕಾಶಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು.
ಯುವಕರು ನಮ್ಮ ಭವಿಷ್ಯವನ್ನು ಮಾತ್ರ ರೂಪಿಸುತ್ತಿಲ್ಲ; ಅವರು ನ್ಯಾಯಯುತ, ಅಂತರ್ಗತ ಮತ್ತು ಸುಸ್ಥಿರವಾದದ್ದನ್ನು ಬೇಡುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋ ನಿಯೊ ಗುಟೆರೆಸ್ ಒತ್ತಿ ಹೇಳುತ್ತಾರೆ.
ವರದಾನವಾಗುವ ಅಂಶಗಳು
- ಯುವ ಶಕ್ತಿ-ಶ್ರಮಶಕ್ತಿ: ಭಾರತದಲ್ಲಿ ಶೇ.60ಕ್ಕಿಂತ ಹೆಚ್ಚು ಜನರು 15 ರಿಂದ 59 ವಯಸ್ಸಿನ ನಡುವೆ ಇದ್ದು, ಈ ಜನಶಕ್ತಿ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ. ಇದನ್ನು ‘ಲಾಭದಾಯಕ ಜನಸಂಖ್ಯಾ ಕಿಟಕಿ’ ಎಂದು ಕರೆಯಲಾಗುತ್ತದೆ.
- ಆವಿಷ್ಕಾರ ಮತ್ತು ಉದ್ಯಮಶೀಲತೆ: ಯುವಜನತೆಗೆ ಇರುವ ಹೊಸ ಆಲೋಚನೆಗಳು ಹಾಗೂ ತಂತ್ರಜ್ಞಾನ ಪ್ರಿಯ ಮನಸ್ಥಿತಿಯು ನೂರಾರು ಸ್ಟಾರ್ಟ್-ಅಪ್ಗಳ ರೂಪದಲ್ಲಿ ವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ.
- ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ‘ಸ್ಟಾರ್ಟ್-ಅಪ್ ಇಕೋಸಿಸ್ಟಂ’ ಹೊಂದಿದೆ. ದೊಡ್ಡ ಆಂತರಿಕ ಮಾರುಕಟ್ಟೆ: ದೇಶದ ವಿಶಾಲ ಜನಸಂಖ್ಯೆಯು ವ್ಯಾಪಾರ-ವ್ಯವಹಾರಕ್ಕೆ ಬೃಹತ್ ಗ್ರಾಹಕ ಮಾರುಕಟ್ಟೆಯಾಗಿ ಕೆಲಸ ಮಾಡುತ್ತಿದೆ. ಇದು ದೇಶೀಯ ಉತ್ಪಾದನೆಯ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ.
- ವೈವಿಧ್ಯಮಯ ಪ್ರತಿಭೆಗಳು: ಜನಸಂಖ್ಯೆಯಲ್ಲಿನ ವೈವಿಧ್ಯ- ಭಾಷೆ, ಸಂಸ್ಕೃತಿ, ಕೌಶಲ- ದೇಶದ ಸೇವಾ, ತಂತ್ರಜ್ಞಾನ, ಸೃಜನಾತ್ಮಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ನಿರಂತರ ಬೆಳವಣಿಗೆಯನ್ನು ತರುತ್ತಿದೆ. ಭಾರತದಲ್ಲಿ ಡೆಮಾಗ್ರಫಿಕ್ ಡಿವಿಡೆಂಡ್: ಜನಸಂಖ್ಯೆಯ ವಯಸ್ಸಿನ ರಚನೆಯ ಬದಲಾವಣೆಯು ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಸಂಭವನೀಯತೆಯನ್ನು ‘ಡೆಮಾ ಗ್ರಫಿಕ್ ಡಿವಿಡೆಂಡ್’ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಅವಲಂಬಿತ ಜನಸಂಖ್ಯೆಯ ಪ್ರಮಾಣ ಕಡಿಮೆಯಾಗಿ, ಕೆಲಸ ಮಾಡುವ ವಯಸ್ಸಿನ ಜನರ ಪ್ರಮಾಣ ಹೆಚ್ಚಾಗುವ ಸ್ಥಿತಿಯಾಗಿರುತ್ತದೆ.
ಜನಸಂಖ್ಯಾ ಸ್ಫೋಟದ ಈ ಸಂದರ್ಭದಲ್ಲಿ ಭಾರತ ಈಗ ಆರ್ಥಿಕ ಬೆಳವಣಿಗೆಗೆ ಅನುಕೂಲಕರ ವಾದ ವಾತಾವರಣವನ್ನು ಹೊಂದಿದೆ. ಹೆಚ್ಚುತ್ತಿರುವ ಜನಸಂಖ್ಯೆ ಒಂದೆಡೆ ಸವಾಲಾದರೆ, ಇನ್ನೊಂಡೆಡೆ ಅದು ಬೆಳವಣಿಗೆಗೆ ಅವಕಾಶವನ್ನೂ ಒದಗಿಸಿಕೊಡುತ್ತದೆ.
ಭಾರತದ ಜನಸಂಖ್ಯೆಯಲ್ಲಿ ಶೇ.62.5ರಷ್ಟು ಜನರು ಕೆಲಸ ಮಾಡುವ/ಉದ್ಯೋಗಸ್ಥ (15-59) ಪ್ರಾಯದವರಾಗಿದ್ದಾರೆ. ಈ ಪ್ರಮಾಣವು 2036ರಲ್ಲಿ ಗರಿಷ್ಠ ಶೇ.65ರ ಮಟ್ಟವನ್ನು ತಲುಪಲಿದೆ. ಈ ರೀತಿಯ ಲಾಭವನ್ನು ಭಾರತವು 2006ರಿಂದ 2036ವರೆಗೆ ಮೂರು ದಶಕಗಳ ಕಾಲ ಅನುಭವಿಸಲಿದೆ. ಆದರೆ ಇದು ವಾಸ್ತವವಾಗಬೇಕಾದಲ್ಲಿ ಜನರ ಜೀವನಮಟ್ಟ ಸುಧಾರಿಸುವಂಥ ಅನೇಕ ವಲಯಗಳಲ್ಲಿ ಹಣಹೂಡಿಕೆ ಅಗತ್ಯವಾಗುತ್ತದೆ.
ಜನಸಂಖ್ಯೆ ಸಂಪನ್ಮೂಲವಾಗಲಿ: ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯವಿದೆ. ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತಕ್ಕೆ ಜನಸಂಖ್ಯೆ ವರದಾನವಾಗಿದೆ, ಯುವಶಕ್ತಿಯು ಭಾರತದ ವರ್ತಮಾನ ಮತ್ತು ಭವಿಷ್ಯವಾಗಿದೆ.
ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ. ಯುವಜನರಲ್ಲಿ ಸಮಕಾಲೀನ ಕೌಶಲವರ್ಧನೆ ಮಾಡುವ ಮೂಲಕ ಜನಸಂಖ್ಯೆಯನ್ನು ಮಾನವ ಸಂಪತ್ತು ಆಗಿ ಪರಿವರ್ತಿಸಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ.
ಶಿಕ್ಷಣ ಸಂಸ್ಥೆಗಳು ಕೇವಲ ಪದವೀಧರರನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳಾಗದೆ, ಜ್ಞಾನ, ಕೌಶಲ, ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪೋಷಿಸುವ ಕೇಂದ್ರಗಳಾಗಬೇಕು. ಸಂಶೋಧನೆ ಮತ್ತು ನಾವಿನ್ಯಗಳು ಉನ್ನತ ಶಿಕ್ಷಣದ ಪ್ರಮುಖ ಅಂಶಗಳಾಗಬೇಕು. ನಮ್ಮ ದೇಶದ ಸಮಸ್ಯೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸುವ ಹಾಗೂ ಹೊಸತನವನ್ನು ಕಂಡುಕೊಳ್ಳುವ ಪ್ರಕ್ರಿಯೆಗಳಲ್ಲಿ ಯುವಮನಸ್ಸುಗಳು ತೊಡಗಿಸಿಕೊಳ್ಳುವಂತಾಗಬೇಕು.
ಮಾನವ ಸಂಪತ್ತನ್ನು ಸಮರ್ಪಕವಾಗಿ ಹೂಡಿಕೆ ಮಾಡುವ ಮೂಲಕ, ಕೌಶಲಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಭಾರತವು ತನ್ನ ಜನಸಂಖ್ಯಾ ಲಾಭಾಂಶವನ್ನು ಸಾರ್ಥಕವಾಗಿಸ ಬಹುದು. ಇದು ದೇಶದ ಉದ್ಯಮ, ನಾವೀನ್ಯ ಹಾಗೂ ಉತ್ಪಾದಕತೆಯನ್ನು ಉತ್ತೇಜಿಸಿ, ದೀರ್ಘಕಾಲಿಕ ಆರ್ಥಿಕ ಶಕ್ತಿಯಾಗಿ ಭಾರತವನ್ನು ರೂಪಿಸಲು ನೆರವಾಗುತ್ತದೆ.
ಸಮರ್ಥ ಯೋಜನೆಗಳು ಹಾಗೂ ಜವಾಬ್ದಾರಿಯುತ ನಾಗರಿಕತೆಯಿಂದ ಜನಸಂಖ್ಯೆ ಶಕ್ತಿಯಾಗ ಬಹುದು. ಆದರೆ ಹೊಣೆಗಾರಿಕೆ, ಯೋಜನೆ, ಶಿಕ್ಷಣ ಹಾಗೂ ಸಮರ್ಥ ಆಡಳಿತದ ಮೂಲಕ ಮಾತ್ರ ಜನಸಂಖ್ಯೆ ಒಂದು ವರದಾನವಾಗಲು ಸಾಧ್ಯ. ದೇಶದ ಶ್ರಮಶಕ್ತಿಯನ್ನು ದೇಶದ ಶಕ್ತಿಯನ್ನಾಗಿ ಪರಿವರ್ತಿಸುವ ಸವಾಲು ನಮ್ಮ ಮುಂದಿದೆ. ಭಾರತವು ತನ್ನ ಯುವಜನಸಂಖ್ಯೆಯ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸುವ ಮತ್ತು ಜಾಗತಿಕ ನಾಯಕನಾಗುವ ಹಾದಿಯನ್ನು ರೂಪಿಸುವ ಸಮಯ ಕೂಡಿಬಂದಿದೆ. ಜನಸಂಖ್ಯೆ ಒಂದು ಶಕ್ತಿ- ಅದನ್ನು ಸಮರ್ಥವಾಗಿ ರೂಪಿಸುವ ಕೌಶಲ ನಮ್ಮದಾಗಲಿ.
(ಲೇಖಕರು ವಿಶ್ರಾಂತ ಪ್ರಾಂಶುಪಾಲರು)