Friday, 18th October 2024

ಅನಿವಾರ್ಯತೆ ದುರುಪಯೋಗಪಡಿಸಿಕೊಂಡರೆ?

ವರ್ತಮಾನ

maapala@gmail.com

ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಸರಕಾರದ ವಿರುದ್ಧವೇ ಹಿಂದೂಪರ ಸಂಘಟನೆಗಳು ಮತ್ತು ಪಕ್ಷದ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಅದಕ್ಕೆ ಕಾರಣ ಜನರ ಅನಿವಾರ್ಯವನ್ನು ದುರುಪಯೋಗಪಡಿಸಿಕೊಂಡ ಆ ಭಾಗದ ಬಿಜೆಪಿ ಪ್ರಮುಖರ ನಡವಳಿಕೆಯೇ ಹೊರತು ಬೇರೇನೂ ಅಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಹಿಂದೂಗಳು, ಅದರಲ್ಲೂ ಮುಖ್ಯವಾಗಿ ಆ ಪಕ್ಷದ ಕಾರ್ಯಕರ್ತರ ಆಕ್ರೋಶ ಮುಗಿಲುಮುಟ್ಟಿದೆ. ಬಿಜೆಪಿ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ.

ರಾಜ್ಯಾದ್ಯಂತ ಬಿಜೆಪಿಯ ನಾನಾ ಮೋರ್ಚಾ ಪದಾಧಿಕಾರಿಗಳು ರಾಜೀ ನಾಮೆ ನೀಡುತ್ತಿದ್ದಾರೆ. ಹಿಂದೂಗಳಿಗೆ ಸುರಕ್ಷತೆ ನೀಡುವುದಾಗಿ ಮತ ಪಡೆದು ಅಧಿಕಾರಕ್ಕೆ ಬಂದು ಈಗ ಹಿಂದೂಗಳ ಹತ್ಯೆಯಾದರೂ ಕೇವಲ ಬಾಯಿ ಮಾತಿನಲ್ಲಿ ಮಾತ್ರ ಕಠಿಣ ಕ್ರಮದ ಭರವಸೆ ನೀಡುತ್ತ ಸಮುದಾ ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಆಡಳಿತಾರೂಢ ಬಿಜೆಪಿಯನ್ನು ವಾಚಾಮಗೋಚರ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

ಇದರ ಮೂಲಕ್ಕೆ ಹೋಗುವ ಮುನ್ನ 2008-2013ರ ನಡುವಿನ ಪರಿಸ್ಥಿತಿ ಬಗ್ಗೆ ಗಮನಹರಿಸಬೇಕಾಗುತ್ತದೆ. 2008 ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 12 ಕ್ಷೇತ್ರಗಳ ಪೈಕಿ ಬಿಜೆಪಿ ಏಳು ಸ್ಥಾನ ಗೆದ್ದಿತ್ತು. ಬಿಜೆಪಿ ಅಧಿಕಾರಕ್ಕೆ ಬಂತು. ಬಿ.ಎಸ್.ಯಡಿಯೂರಪ್ಪ ಅವರ ನಂತರ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾದರು. ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಯಾದರೂ ಬಿಜೆಪಿ ಅಧಿಕಾರ ಉಳಿಸಿಕೊಂಡಿತ್ತು. ಆದರೆ, 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವಳಿ ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದಿದ್ದು 2 ಸ್ಥಾನ ಮಾತ್ರ. ಎಂಟು ಕ್ಷೇತ್ರಗಳಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಹೀನಾಯವಾಗಿ ಸೋತಿತ್ತು.

ಆ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಅಹಿತಕರ ಘಟನೆಗಳು ನಡೆದಿರಲಿಲ್ಲ. ಆದರೂ ಬಿಜೆಪಿ
ಸೋಲಲು ಕಾರಣ ಹಿಂದೂಗಳ ವಿಚಾರದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ. ಅಕ್ರಮ ಗೋವುಗಳ ಸಾಗಾಟ ವಿರುದ್ಧ ಸರಕಾರ
ಗಂಭೀರ ಕ್ರಮ ಕೈಗೊಂಡಿಲ್ಲ. ಅಕ್ರಮ ಗೋಸಾಗಣೆ ವಿರುದ್ಧ ಹೋರಾಡಿ ಜೈಲು ಸೇರಿದ ಹಿಂದೂ ಕಾರ್ಯಕರ್ತರನ್ನು
ಬಿಡಿಸಿಕೊಂಡು ಬರಲು ಬಿಜೆಪಿ ಯಾವುದೇ ಪ್ರಯತ್ನ ಮಾಡಲಿಲ್ಲ.

ಸ್ಥಳೀಯ ಸಮಸ್ಯೆಗಳಿಗೆ ಜನ ಆರಿಸಿ ಕಳುಹಿಸಿದವರು ಸ್ಪಂದಿಸಲಿಲ್ಲ ಎಂಬ ಸಣ್ಣ ಪುಟ್ಟ ಕಾರಣಗಳಿಂದ ೨೦೧೩ರಲ್ಲಿ ಬಿಜೆಪಿ ಜಿಲ್ಲೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಬೇಕಾಯಿತು. ಅದೇ ರೀತಿ ೨೦೧೪ರಲ್ಲಿ ನಳಿನ್‌ಕುಮಾರ್ ಕಟೀಲ್ ಸಂಸದರಾಗಿ ಗೆಲ್ಲುವುದು ಅಸಾಧ್ಯ ಎನ್ನುವಂತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರಣಕ್ಕಾಗಿ ಕ್ಷೇತ್ರದ ಜನರಿಗೆ ಕಟೀಲ್ ಗೆಲ್ಲಿಸುವುದು ಅನಿವಾರ್ಯವಾಗಿತ್ತು. ಇದೀಗ ಮತ್ತೆ ಅದೇ ಪರಿಸ್ಥಿತಿ ಉದ್ಭವಿಸುವ ಆತಂಕ ಆಡಳಿತಾರೂಢ ಬಿಜೆಪಿಗೆ ಬಂದಿದೆ. ೨೦೧೩ರಲ್ಲಿ ಬಿಜೆಪಿಯ ಬಗ್ಗೆ ಜನರಿಗೆ ಅಸಮಾಧಾನವಿತ್ತು. ಈ ಬಾರಿ ಅದು ಆಕ್ರೋಶವಾಗಿ ಬದಲಾಗಿದೆ. ಆಡಳಿತ ಪಕ್ಷದ ವಿರುದ್ಧ ಯಾವತ್ತೂ ಇಲ್ಲದ ಅಭಿಯಾನಗಳು ಶುರುವಾಗಿವೆ.

ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಅವರ ಪಾರ್ಥಿವ ಶರೀರವನ್ನು ನೋಡಲು ಬಂದ ಬಿಜೆಪಿಯ ರಾಜ್ಯ ಅಧ್ಯಕ್ಷರು, ಸಚಿವರಿಗೆ ಕಾರ್ಯಕರ್ತರು ಅರ್ಧ ಗಂಟೆಯೂ ಹೆಚ್ಚು ಕಾಲ ದಿಗ್ಭಂಧನ ವಿಧಿಸಿದರು. ಅವರ ವಾಹನವನ್ನು ಅಲುಗಾಡಿಸಿ ಉರುಳಿಸಲು ಪ್ರಯತ್ನಿಸಿದರು ಎಂದರೆ ಜನರ ಆಕ್ರೋಶ ಯಾವ ಮಟ್ಟಿಗೆ ಭುಗಿಲೆದ್ದಿದೆ ಎಂಬುದು ಅರ್ಥವಾಗುತ್ತದೆ. ಅದರಲ್ಲೂ ಈ ಆಕ್ರೋಶ
ಹೊರಹಾಕಿದವರು ಮೂಲ ಬಿಜೆಪಿಯವರು. ಅಂದರೆ, ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು.

ತಮ್ಮವರೊಬ್ಬರು, ಅದರಲ್ಲೂ ಯಾರಿಗೂ ಕೇಡು ಬಯಸದೇ ಇದ್ದ ಕಾರ್ಯಕರ್ತನೊಬ್ಬ ಮತಾಂಧ ಶಕ್ತಿಗಳಿಂದ ಕೊಲೆ ಯಾದಾಗ ಈ ಆಕ್ರೋಶ ಸಹಜ ಎಂದುಕೊಳ್ಳಬಹುದು. ಆದರೆ, ನಂತರದಲ್ಲಿ ಬಿಜೆಪಿ ಮತ್ತು ಪಕ್ಷದ ಜನಪ್ರತಿನಿಧಿಗಳ ವಿರುದ್ಧ ನಡೆಯುತ್ತಿರುವ ಅಭಿಯಾನ ಗಮನಿಸಿದರೆ ಎಲ್ಲೋ ಲೋಪವಾಗಿದೆ ಎಂಬುದು ಖಚಿತವಾಗುತ್ತದೆ.

ಹೌದು, ಬಿಜೆಪಿ ಆಕ್ರೋಶಕ್ಕೆ ಕಾರಣವಿದೆ. ಅದು ಕೇವಲ ತಮ್ಮವನೊಬ್ಬ ಕೊಲೆಯಾದ ಎಂಬುದಷ್ಟೇ ಅಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತು ಸುಳ್ಯದ ಶಾಸಕ ಎಸ್.ಅಂಗಾರ ವಿರುದ್ಧ ಬಿಜೆಪಿಯವರಿಗಿರುವ ಸಿಟ್ಟು. ಕೇವಲ ಅದು ಮಾತ್ರವಲ್ಲ, ಬೆಳ್ತಂಗಡಿ ತಾಲೂಕು ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳ ಬಿಜೆಪಿ ಶಾಸಕರ ಮೇಲೂ ಜನರಿಗೆ ಆಕ್ರೋಶವಿದೆ. ಇವರಾರೂ ನಮ್ಮ ನೆರವಿಗೆ ಧಾವಿಸುತ್ತಿಲ್ಲ ಎಂಬುದು ಮೂಲ ಬಿಜೆಪಿಗರ ಆರೋಪ.

ಕಳೆದ ಐದಾರು ವರ್ಷದಲ್ಲಿ ಆ ಭಾಗದ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲೆಲ್ಲ ಬಿಜೆಪಿ ಎಂದರೆ ಹಿಂದುತ್ವ ಎನ್ನುವಂತಿತ್ತು. ಹಿಂದುತ್ವ ಪ್ರತಿಪಾದಿಸುತ್ತಿದ್ದ ಎಲ್ಲಾ ಸಮುದಾಯದವರು ಪಕ್ಷದ ಜತೆಗಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಬೂತ್ ಮಟ್ಟದಿಂದ ಹಿಡಿದು ಜಿಲ್ಲೆಯವರೆಗೂ ಜಾತಿ ರಾಜಕಾರಣ ಹೆಚ್ಚಾಗಿದೆ. ಮೂಲ ಬಿಜೆಪಿಯವರನ್ನು ಹೊರಗಿಟ್ಟು ಕಾಂಗ್ರೆಸ್‌ ನಿಂದ ಬಂದವರನ್ನು ಪಕ್ಷದ ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿ ಅವರ ಕೈಕೆಳಗೆ ಮೊದಲಿನಿಂದಲೂ ಪಕ್ಷವನ್ನು
ಕಟ್ಟಿ ಬೆಳೆಸಿದವರು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ತಮ್ಮ ಜಾತಿಯವರು ಎಂಬ ಕಾರಣಕ್ಕೆ ಅವರು ಪಕ್ಷಕ್ಕೆ ಏನೂ ಕೊಡುಗೆ ನೀಡದೇ ಇದ್ದರೂ ಅಽಕಾರದಲ್ಲಿ ಕುಳ್ಳಿರಿಸಲಾಗುತ್ತಿದೆ.

ಯಾವುದೇ ಸಣ್ಣ ಪುಟ್ಟ ಕೆಲಸಗಳಾಗಬೇಕಾದರೂ ಬೇರೆ ಪಕ್ಷದಿಂದ ಬಂದವರ ಮುಂದೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ
ಎದುರಾಗಿದೆ. ಈ ಸಮಸ್ಯೆಯನ್ನು ಜನಪ್ರತಿನಿಽಗಳ ಬಳಿ ಹೇಳಿಕೊಂಡರೆ ಅವರಿಂದ ಸ್ಪಂದನೆ ಇಲ್ಲ. ಬಹಿರಂಗವಾಗಿ ಸಮಸ್ಯೆ ಹೇಳಿಕೊಂಡರೆ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿ ಇದ್ದ ಸಣ್ಣಪುಟ್ಟ ಹುದ್ದೆಗಳನ್ನೂ ಕಿತ್ತುಕೊಳ್ಳಲಾಗುತ್ತದೆ. ಇನ್ನು ಕ್ಷೇತ್ರದ ಸಮಸ್ಯೆಗಳು, ಸ್ಥಳೀಯವಾಗಿ ಆಗುತ್ತಿರುವ ತೊಂದರೆಗಳು, ಇತರೆ ಪಕ್ಷದ ಕಾರ್ಯಕರ್ತರಿಂದ ಆಗುವ ಕಿರಿಕಿರಿಗಳಿಗೂ ಇವರಿಂದ ಸ್ಪಂದನೆ ಸಿಗುತ್ತಿಲ್ಲ.

ಹಿಂದೂ ಉತ್ಸವಗಳನ್ನು ಮಾಡಲು ಹೊರಟರೆ ಸಹಕಾರವೂ ಸಿಗುತ್ತಿಲ್ಲ. ಶಾಸಕರು ಬಿಜೆಪಿಯವರಾದರೂ ಅವರ ಅಕ್ಕ ಪಕ್ಕ ಇರುವವರು ಕಾಂಗ್ರೆಸ್‌ನಿಂದ ಬಂದವರಾಗಿರುವುದರಿಂದ ಶಾಸಕರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದ ಸ್ಥಿತಿ ಅಲ್ಲಿನ ಬಿಜೆಪಿ ಕಾರ್ಯಕರ್ತರದ್ದು. ಇದೆಲ್ಲಕ್ಕೂ ಕಾರಣ ನಳಿನ್‌ಕುಮಾರ್ ಕಟೀಲ್ ಎಂಬುದು ಆ ಭಾಗದ ಜನ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನು ಸುಳ್ಯ ಕ್ಷೇತ್ರದ ಶಾಸಕ ಅಂಗಾರ ಅವರ ಪರಿಸ್ಥಿತಿ ಎಲ್ಲಕ್ಕಿಂತ ಭಿನ್ನ. ಒಳ್ಳೆಯ ಮನುಷ್ಯ, ಯಾರಿಗೂ ತೊಂದರೆ ನೀಡುವುದಿಲ್ಲ ಎಂಬಿತ್ಯಾದಿ ಗುಣಲಕ್ಷಣಗಳ ಜತೆಗೆ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಆರೋಪವೂ ಅವರ ಮೇಲಿದೆ.
ಅಂಗಾರ ಒಳ್ಳೆಯವರಾದರೂ ಅವರ ಸುತ್ತಮುತ್ತ ಇರುವವರು ಸರಿಯಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕರ್ತರ ಅಹವಾಲು ಗಳನ್ನು ಕೇಳುತ್ತಿಲ್ಲ ಎಂಬುದು ಅಲ್ಲಿನವರ ಕೊರಗು.

ಈ ವಿಚಾರವೇ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ವಿರುದ್ಧವೇ ಕಾರ್ಯಕರ್ತರು ತಿರುಗಿ ಬೀಳಲು ಕಾರಣವಾಗಿದೆ. 2008ರಲ್ಲಿ ಆಯ್ಕೆಯಾದ ಪಕ್ಷದ ಜನಪ್ರತಿನಿಧಿಗಳು ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ 2013ರಲ್ಲಿ ಅಲ್ಲಿನ ಜನ ಎಲ್ಲರನ್ನೂ ತಿರಸ್ಕರಿಸಿ ಕಾಂಗ್ರೆಸ್ಸನ್ನು ಬೆಂಬಲಿಸಿದರು. ಆದರೆ, ಪರಿಸ್ಥಿತಿ ಸುಧಾರಿಸಲಿಲ್ಲ. ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ಹೆಚ್ಚಾದವು. ಆಗ ಯಾರೂ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ 2018ರಲ್ಲಿ ಮತ್ತೆ ಬಿಜೆಪಿಯ ಕೈಹಿಡಿದರು. ಹಿಂದುತ್ವದ ಆಧಾರದ ಮೇಲೆ ರಾಜಕಾರಣ ನಡೆಯುವ ಆ ಭಾಗದ ಜನರಿಗೆ ಅದು ಅನಿವಾರ್ಯವೂ ಆಗಿತ್ತು. ಆದರೆ, ನಂತರದಲ್ಲಿ ಪರಿಸ್ಥಿತಿ ಮತ್ತಷ್ಟು ಹೀನಾಯ ಎನ್ನುವಂತಾಗಿದೆ.

ತಮ್ಮ ಕುಟುಂಬದತ್ತಲೂ ಗಮನಹರಿಸದೆ, ಪಕ್ಷವನ್ನು ಕಟ್ಟಿ ಬೆಳೆಸಿದ ಸಾಕಷ್ಟು ಪ್ರಮುಖರು ಮೂಲೆಗುಂಪಾಗಿದ್ದಾರೆ. ಇಷ್ಟೆಲ್ಲೂ ಕಾರಣ, ಆ ಭಾಗದ ಹಿಂದೂಗಳ ಅನಿವಾರ್ಯ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದಾಗಲೆಲ್ಲಾ ಮತಾಂಧರಿಂದ ತೊಂದರೆ ಗೊಳಗಾಗಬೇಕಾಗುತ್ತದೆ. ಸ್ಥಳೀಯವಾಗಿ ಅಂತಹ ಪರಿಸ್ಥಿತಿ ಇಲ್ಲದಿದ್ದರೂ ನೆರೆಯ ಕೇರಳದಿಂದ ಬರುವವರು ಜನರಲ್ಲಿ ಕೋಮು ದ್ವೇಷ ಹಬ್ಬಿಸಿ ಹೋಗುತ್ತಿದ್ದರು. ಈ ವೇಳೆ ಕಾಂಗ್ರೆಸ್ ಸಹಜವಾಗಿಯೇ ಮುಸ್ಲಿಮರ ಪರ ನಿಲ್ಲುತ್ತಿತ್ತು.

ಇಂತಹ ಸಂದರ್ಭದಲ್ಲಿ ಅವರಿಗೆ ಯಾರಾದರೂ ಒಬ್ಬರ ನೈತಿಕ ಬೆಂಬಲ ಬೇಕಾಗಿತ್ತು. ಅದು ಬಿಜೆಪಿಯಿಂದ ಸಿಗುತ್ತಿತ್ತು. ಈ
ಒಂದು ಕಾರಣಕ್ಕಾಗಿಯಷ್ಟೇ ಅವರು ಬಿಜೆಪಿ ಡಜತೆ ನಿಂತಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ. ಆದರೆ, ಅದೇ ಪಕ್ಷದ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ, ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕಾಗಿ ಮೂಲ ಬಿಜೆಪಿಗರನ್ನು, ಅವರ
ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ದಕ್ಷಿಣ ಕನ್ನಡದಲ್ಲಿ ಆಗಿದ್ದು ಮ್ಮ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿ ರುವವರ ವಿರುದ್ಧದ ಸ್ಫೋಟ. ಅದೀಗ ರಾಜ್ಯವ್ಯಾಪಿ ವಿಸ್ತಾರಗೊಳ್ಳುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ರಾಜೀನಾಮೆ ನೀಡಿದ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳ ಪಟ್ಟಿಯನ್ನೇ ತೆಗೆದುಕೊಳ್ಳಿ. ಅವರೆಲ್ಲರೂ ಮೂಲ ಬಿಜೆಪಿಯವರು. ಸಂಘ ಪರಿವಾರದ ಮೂಲದಿಂದ ಬಂದವರು. ಹೀಗಾಗಿ ಈ ಸೂಕ್ಷ್ಮವನ್ನು ಅರಿತು, ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಮುಂದಾಗದಿದ್ದರೆ 2013ರ ಫಲಿತಾಂಶ ಮರುಕಳಿಸಿದರೆ ಅದು ಅಚ್ಚರಿಯಲ್ಲ.

ಲಾಸ್ಟ್ ಸಿಪ್: ಮೂಗು ಹಿಡಿದರಷ್ಟೇ ಬಾಯಿ ಬಿಡುವುದು ಎನ್ನುವವರಿದ್ದ ಕಡೆ ಮೂಗು ಹಿಡಿದು ಬಾಯಿ ತೆಗೆಸುವವರು
ಇದ್ದೇ ಇರುತ್ತಾರೆ.