ಮಂಗಳೂರು: ಇಲ್ಲಿನ ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ(Mumtaz Ali Missing case) ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ, ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಮಮ್ತಾಜ್ ಅಲಿ(Mumtaz Ali) ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಮಮ್ತಾಜ್ ಅವರು ಭಾನುವಾರ ಮುಂಜಾನೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರು ಕೂಳೂರು ಸೇತುವೆಯ ಬಳಿ ಅಪಘಾತಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಬೈಲ್, ಕಾರಿನ ಕೀ ಅಲ್ಲಿಯೇ ಇದ್ದ ಕಾರಣ ಆತ್ಮಹತ್ಯೆ ಮಾಡಿರುವ ಶಂಕೆಯಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಸೇತುವೆ ಆಸುಪಾಸಿನಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಸಹಿತ 7 ಸ್ಕೂಬಾ ಡೈವರ್ಗಳು, ಎನ್ಡಿಆರ್ಎಫ್ ತಂಡ ಹುಡುಕಾಟ ನಡೆಸಿತ್ತು. ಸೋಮವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಅವರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ Mumtaz Ali Missing case: ಮುಮ್ತಾಜ್ ಅಲಿ ಪತ್ತೆಗಿಳಿದ ಈಶ್ವರ ಮಲ್ಪೆ ತಂಡ; ಮಹಿಳೆಯ ಬ್ಲ್ಯಾಕ್ಮೇಲ್ ಕಾರಣ?
ಮಹಿಳೆಯೊಬ್ಬರು ಮುಮ್ತಾಜ್ ಅಲಿಗೆ ನಿರಂತರವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಮದುವೆ ಆಗುವಂತೆ ಮುಮ್ತಾಜ್ಗೆ ಮಹಿಳೆ ಪೀಡಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂಬ ದೂರು ಕೇಳಿಬಂದಿತ್ತು. ಪ್ರಕರಣ ಸಂಬಂಧ ಮಹಿಳೆ ಸಹಿತ ಆರು ಮಂದಿ ವಿರುದ್ದ ಎಫ್ಐಆರ್ ಕೂಡ ದಾಖಲಾಗಿದೆ. ರೆಹಮತ್ ಎಂಬ ಮಹಿಳೆ ಮತ್ತು ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಹೆಬ್, ಸೀರಜ್ ಆರೋಪಿಗಳು.
ಮಮ್ತಾಜ್ ಅಲಿ ಅವರಿಗೆ ಅಕ್ರಮ ಸಂಬಂಧ ಇತ್ತು ಎಂದು ಅಪಪ್ರಚಾರ ಮಾಡಿ ಈ ಆರೋಪಿಗಳು ಈಗಾಗಲೇ 50 ಲಕ್ಷ ರೂ ಪಡೆದುಕೊಂಡಿದ್ದರು. ಅಲ್ಲದೆ ಇದೀಗ ಮತ್ತೆ 50 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಮುಮ್ತಾಜ್ ಅಲಿ ಮನೆಯಿಂದ ಹೊರಟಿದ್ದರು. ಬಳಿಕ 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಮೇಲೆ ಮುಮ್ತಾಜ್ ಬಿಎಂಡಬ್ಲ್ಯು ಕಾರು ದೊರೆಕ್ಕಿತ್ತು. ಅವರ ಪುತ್ರಿಗೆ ಈ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರಿಗೆ ಸಣ್ಣದೊಂದು ಅಪಘಾತ ಆದಂತೆ ಕಂಡು ಬಂದಿದ್ದ ಕಾರಣ ಮುಮ್ತಾಜ್ ಅಲಿ ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು.