Pahalgam Terror Attack: ಉಗ್ರರಿಗೆ ಬೆಂಬಲ ನೀಡುತ್ತಿರುವುದು ಹೌದು... ಸಂದರ್ಶನದಲ್ಲಿ ಒಪ್ಪಿಕೊಂಡ ಪಾಕಿಸ್ತಾನ ರಕ್ಷಣಾ ಸಚಿವ
Pakistan Defense Minister: ಸಂದರ್ಶನವೊಂದರಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ತಮ್ಮ ದೇಶದ ಕುಕೃತ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನವು ಜಾಗತಿಕ ವೇದಿಕೆಗಳಲ್ಲಿ ಭಾರತದ ದೀರ್ಘಕಾಲೀನ ನಿಲುವನ್ನು ಸಮರ್ಥಿಸಿಕೊಂಡಿದೆ.


ಇಸ್ಲಾಮಾಬಾದ್: ಕಳೆದ ಮೂರು ದಶಕಗಳಿಂದ ತಮ್ಮ ದೇಶವು ಭಯೋತ್ಪಾದಕ (Terror Attack) ಸಂಘಟನೆಗಳನ್ನು ಬೆಂಬಲಿಸುತ್ತಿದೆ, ತರಬೇತಿ ನೀಡುತ್ತಿದೆ ಮತ್ತು ಹಣಕಾಸನ್ನು ಒದಗಿಸುತ್ತಿದೆ ಎಂಬುದಾಗಿ ಪಾಕಿಸ್ತಾನ ರಕ್ಷಣಾ ಸಚಿವರೇ (Pakistan Defence Minister) ಒಪ್ಪಿಕೊಂಡಿದ್ದಾರೆ. ಹಲವಾರು ದಶಕಗಳಿಂದ ಭಾರತ ಪಾಕಿಸ್ತಾನದ ಮೇಲೆ ಈ ಆರೋಪ ಮಾಡುತ್ತಿದ್ದರೂ ಅದನ್ನು ಪಾಕಿಸ್ತಾನ (Pakistan) ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಇದೀಗ ಸಂದರ್ಶನವೊಂದರಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ತಮ್ಮ ದೇಶದ ಕುಕೃತ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಅನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ಭವವಾಗಿರುವ ಉದ್ವಿಗ್ನತೆಯ ಕುರಿತು ಸ್ಕೈ ನ್ಯೂಸ್ ಪತ್ರಕರ್ತೆ ಯಾಲ್ಡಾ ಹಕೀಮ್ ಅವರು ನಡೆಸಿದ ಸಂದರ್ಶನದಲ್ಲಿ ಇದು ಬಹಿರಂಗವಾಗಿದೆ. ಸಂದರ್ಶನದಲ್ಲಿ ಪತ್ರಕರ್ತೆ ಯಾಲ್ಡಾ ಹಕೀಮ್ ಅವರು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರನ್ನು ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತದೆ, ಅದಕ್ಕೆ ತರಬೇತಿ ನೀಡುತ್ತದೆ ಮತ್ತು ಹಣಕಾಸನ್ನು ಒದಗಿಸುತ್ತಿದೆ ಎನ್ನುವ ದೀರ್ಘಕಾಲದ ಆರೋಪವನ್ನು ಹೊಂದಿದೆ.
ಇದನ್ನು ನೀವು ಒಪ್ಪುವಿರೋ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಆಸಿಫ್, ಹೌದು ಕಳೆದ ಮೂರು ದಶಕಗಳಿಂದ ನಾವು ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮ ದೇಶಗಳಿಗಾಗಿ ಈ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡರು.
ಇದನ್ನೂ ಓದಿ: Fawad Khan Movie: ಪಾಕ್ ನಟ ಫಯಾದ್ ಖಾನ್ ನಟನೆಯ ಅಬಿರ್ ಗುಲಾಲ್ ಸಿನಿಮಾದ ಹಾಡುಗಳು ಯೂಟ್ಯೂಬ್ನಿಂದ ಡಿಲೀಟ್
Sky News (@SkyYaldaHakim): “But you do admit, you do admit sir, that Pakistan has had a long history of backing and supporting and training and funding these terrorist organizations?”
— Drop Site (@DropSiteNews) April 24, 2025
Pakistan Def. Minister: “Well, we have been doing this dirty work for United States for 3… pic.twitter.com/sv5TRkCgCZ
ಈ ಸಂದರ್ಶನದಲ್ಲಿ ಆಸಿಫ್ ಅವರು ಲಷ್ಕರ್-ಎ-ತೈಬಾ ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎನ್ನುವ ವಿಚಿತ್ರ ಹೇಳಿಕೆಯನ್ನೂ ನೀಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಹೊತ್ತಿರುವ ಅದರ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಇರುವ ಬಗ್ಗೆ ತನಗೆ ತಿಳಿದಿಲ್ಲ ಎಂದ ಅವರು ಲಷ್ಕರ್ ಹಳೆಯ ಹೆಸರು. ಅದು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರು.
ಪಹಲ್ಗಾಮ್ ದಾಳಿಯ ಬಳಿಕ ಬುಧವಾರ ಭಾರತವು ಪಾಕಿಸ್ತಾನದ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿತ್ತು. ಇದರಲ್ಲಿ ಸಿಂಧೂ ಜಲ ಒಪ್ಪಂದ ರದ್ದು, ಅಟ್ಟಾರಿ ಗಡಿ ಬಂದ್, ಪಾಕಿಸ್ತಾನಿಯರ ಭಾರತ ವೀಸಾ ರದ್ದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಹಲವಾರು ಕ್ರಮಗಳನ್ನು ಘೋಷಿಸಿತು. ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕ್, ತನಗೆ ಸೇರಿದ ನೀರಿನ ಹರಿವನ್ನು ನಿಲ್ಲಿಸುವ ಯಾವುದೇ ಕ್ರಮ ಕೈಗೊಂಡರೂ ಅದು ಯುದ್ಧದ ಕೃತ್ಯಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಏಪ್ರಿಲ್ 27 ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ಭಾರತ ರದ್ದುಗೊಳಿಸಿದೆ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಆದಷ್ಟು ಬೇಗ ಮನೆಗೆ ಮರಳುವಂತೆ ಸೂಚಿಸಿದೆ.