ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Haasan: ಕನ್ನಡಿಗರ ಕ್ಷಮೆ ಕೇಳಲ್ಲ; ಮತ್ತೆ ಕಮಲ್‌ ಹಾಸನ್‌ ಉದ್ಧಟತನ

Thug Life: ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ನೀಡಿದ್ದ ಕಾಲಿವುಡ್‌ ಸ್ಟಾರ್‌ ಕಮಲ್‌ ಹಾಸನ್‌ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಕ್ಷಮೆ ಕೋರಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದೆ. ಈ ಮಧ್ಯೆ ಕಮಲ್‌ ಹಾಸನ್‌ ತಮ್ಮ ಹೇಳಿಕೆಗೆ ಕ್ಷಮೆ ಕೋರಲು ನಿರಾಕರಿಸಿದ್ದಾರೆ.

ಕನ್ನಡಿಗರ ಕ್ಷಮೆ ಕೇಳಲ್ಲ ಎಂದ ಕಮಲ್‌ ಹಾಸನ್‌

ಕಮಲ್‌ ಹಾಸನ್‌.

Profile Ramesh B May 28, 2025 10:13 PM

ತಿರುವನಂತಪುರಂ: ತಮ್ಮ ಮುಂಬರುವ ʼಥಗ್‌ ಲೈಫ್‌ʼ (Thug Life) ಚಿತ್ರದ ಆಡಿಯೊ ಲಾಂಚ್‌ ವೇಳೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ನೀಡಿದ್ದ ಕಾಲಿವುಡ್‌ ಸ್ಟಾರ್‌ ಕಮಲ್‌ ಹಾಸನ್‌ (Kamal Haasan) ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿವಾದಾತ್ಮಕ ಹೇಳಿಕೆ ನೀಡಿದ ಅವರು ಕ್ಷಮೆ ಕೋರಬೇಕೆಂದು ಕನ್ನಡಪರ ಸಂಘಟನೆಗಳ ಮುಖಂಡರು, ಕರ್ನಾಟಕದ ವಿವಿಧ ರಂಗಗಳ ಗಣ್ಯರು ಆಗ್ರಹಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಸೊಪ್ಪೇ ಹಾಕದ ಕಮಲ್‌ ಹಾಸನ್‌ ಮತ್ತೆ ತಮ್ಮ ಉದ್ದಟತನ ಮೆರೆದಿದ್ದಾರೆ. ಕನ್ನಡದ ಬಗ್ಗೆ ಆಡಿದ್ದ ಮಾತಿಗಾಗಿ ಕ್ಷಮೆ ಕೋರುವುದಿಲ್ಲ ಎಂದು ತಿಳಿಸಿದ್ದಾರೆ.

ʼಥಗ್‌ ಲೈಫ್‌ʼ ಜೂ. 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿವಿಧ ರಾಜ್ಯಗಳಲ್ಲಿ, ನಗರಗಳಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದೆ. ಅದರಂತೆ ಬುಧವಾರ ಚಿತ್ರತಂಡ ಕೇರಳಕ್ಕೆ ತೆರಳಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್‌ ಹಾಸನ್‌ ತಮ್ಮ ಹೇಳಿಕೆ ಕ್ಷಮೆ ಕೋರಲು ನಿರಾಕರಿಸಿದರು.

ಕಮಲ್‌ ಹಾಸನ್‌ ಅವರ ಹೇಳಿಕೆ:



ಈ ಸುದ್ದಿಯನ್ನೂ ಓದಿ: Kamal Haasan: ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂದ ಕಮಲ್‌ ಹಾಸನ್‌; ಭುಗಿಲೆದ್ದ ವಿವಾದ

ಕಮಲ್‌ ಹಾಸನ್‌ ಹೇಳಿದ್ದೇನು?

ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಪ್ರೀತಿಯಿಂದ ಹಾಗೆ ಮಾತನಾಡಿದ್ದಾಗಿ ಕಮಲ್‌ ಸಮರ್ಥಿಸಿಕೊಂಡಿದ್ದಾರೆ. ʼ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ನಾನು ಸಾಕಷ್ಟು ಪ್ರೀತಿಯಿಂದಲೇ ಆ ಮಾತನ್ನು ಹೇಳಿದ್ದೆ. ಸಾಕಷ್ಟು ಇತಿಹಾಸಜ್ಞರು ಭಾಷೆಯ ಬಗ್ಗೆ ನನಗೆ ಕಲಿಸಿಕೊಟ್ಟಿದ್ದಾರೆ. ಅದರ ಹೊರತಾಗಿ ಇನ್ಯಾವುದೇ ಉದ್ದೇಶದಿಂದ ನಾನು ಆ ಮಾತನ್ನು ಹೇಳಿಲ್ಲʼʼ ಎಂದು ನುಡಿದಿದ್ದಾರೆ.

ಮಾತು ಮುಂದುವರಿಸಿ, ʼʼತಮಿಳುನಾಡು ಬಹಳ ವಿಶೇಷವಾದ ರಾಜ್ಯ. ಇಲ್ಲಿ ಒಬ್ಬ ಮೆನನ್ ಸಿಎಂ ಆಗಿದ್ದಾರೆ. ಒಬ್ಬ ರೆಡ್ಡಿ ಸಿಎಂ ಆಗಿದ್ದಾರೆ. ಕರ್ನಾಟಕದ ಮಂಡ್ಯದ ಕನ್ನಡಿಗ ಐಯ್ಯಂಗಾರ್ ಒಬ್ಬರು ಸಿಎಂ ಆಗಿದ್ದಾರೆ. ರಾಜಕಾರಣಿಗಳು ಭಾಷೆಯ ಬಗ್ಗೆ ಮಾತನಾಡಲು ಅರ್ಹರಲ್ಲ. ನಾನು ಸೇರಿದಂತೆ ಅವರಿಗೆ ಅದರ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ. ಈ ಎಲ್ಲ ಆಳವಾದ ಚರ್ಚೆಗಳನ್ನು ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಮತ್ತು ಭಾಷಾ ತಜ್ಞರಿಗೆ ಬಿಡೋಣ. ನಾವೆಲ್ಲ ಒಂದು ಕುಟುಂಬ ಮತ್ತು ನಮ್ಮ ಭಾಷೆಗಳೂ ಸಹʼʼ ಎಂದು ಅವರು ಹೇಳಿದ್ದಾರೆ.

ಕ್ಷಮೆ ಕೋರಲ್ಲ ಎಂದ ಕಮಲ್‌

ʼʼಪ್ರೀತಿ ಪೂರ್ವಕವಾಗಿ ನಾನು ನೀಡಿದ ಹೇಳಿಕೆಯನ್ನು ಟೀಕೆ ಮಾಡಲಾಗಿದೆ. ಅವರ ಕೋನದಿಂದ ನೋಡಿದರೆ ಅವರು ಹೇಳಿದ್ದು ಸರಿ ಎನಿಸಬಹುದು, ನನ್ನ ದೃಷ್ಟಿಕೋನದಿಂದ ನೋಡಿದರೆ ನಾನು ಹೇಳಿದ್ದು ಸರಿ ಎನಿಸಬಹುದು. ಆದರೆ ಇದಕ್ಕೆ ಮೂರನೇ ಕೋನವೊಂದಿದೆ. ಇತಿಹಾಸತಜ್ಞರು, ಭಾಷಾ ಪಂಡಿತರು ಯಾವುದು ಸರಿ ಎನ್ನುವುದನ್ನು ಹೇಳಬೇಕು. ಇದು ಪ್ರಜಾಪ್ರಭುತ್ವ ರಾಷ್ಟ್ರ. ಈಗ ನಾನು ನೀಡಿರುವುದು ಸ್ಪಷ್ಟನೆ. ಕ್ಷಮೆ ಅಲ್ಲ. ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲʼʼ ಎಂದು ಕ್ಷಮೆಕೋರಲು ನಿರಾಕರಿಸಿದ್ದಾರೆ.

ಕಮಲ್ ಹಾಸನ್ ವಿರುದ್ಧ ದೂರು

ಕನ್ನಡಿಗರ ಸ್ವಾಭಿಮಾನ ಕೆರಳಿಸುವಂತ ಹೇಳಿಕೆ ನೀಡಿದ್ದ ಕಮಲ್ ಹಾಸನ್ ವಿರುದ್ಧ ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಗೆ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ದೂರು ನೀಡಿದ್ದಾರೆ.

ಹ್ಯಾಟ್ರಿಕ್ ಹೀರೊ ಶಿವ ರಾಜ್‌ಕುಮಾರ್ ಅವರ ಎದುರೇ ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರು ಕ್ಷಮೆ ಕೇಳದಿದ್ದರೆ ʼಥಗ್‌ ಲೈಫ್‌ʼ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್‌ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.