Rebel Star Ambareesh: ಅಂಬಿ ಜನ್ಮದಿನೋತ್ಸವ; ರೆಬೆಲ್ ಸ್ಟಾರ್ ಕುರಿತ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ
ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರು ಅತ್ಯದ್ಭುತ ಅಭಿನಯದ ಮೂಲಕವೇ ಅಪಾರ ಜನರ ಮನ ಮೆಚ್ಚಿದ ನಟನಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮತ್ತು ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ರೆಬಲ್ ಸ್ಟಾರ್ ಅಂಬರೀಶ್ ಅವರ 73ರ ಹುಟ್ಟುಹಬ್ಬ ಇಂದು. ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಸಿನಿಮಾರಂಗದ ಹೊರತಾಗಿಯೂ ಅಂಬರೀಶ್ ಅವರ ಜೀವನ ಅನೇಕರಿಗೆ ಸ್ಫೂರ್ತಿ ತುಂಬುವಂತದ್ದಾಗಿದೆ.



1952 ಮೇ 29ರಂದು ದೊಡ್ಡರಸನ ಕೆರೆ ಗ್ರಾಮದಲ್ಲಿ ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ ಅವರ ಮುದ್ದು ಮಗನಾಗಿ ಜನಿಸಿದ ಅಂಬಿ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಇವರ ಮೂಲ ಹೆಸರಾಗಿದೆ. ತುಂಬು ಕುಟುಂಬದಲ್ಲಿ ಜನಿಸಿದ್ದ ಅಂಬಿಗೆ ಹೊಸ ವಿಚಾರಗಳ ಕಲಿಕೆ ಬಗ್ಗೆ ಬಹಳ ಆಸಕ್ತಿ ಇತ್ತಂತೆ. ಶಾಲಾ ದಿನಗಳಲ್ಲಿ ಆಟ ಪಾಠ ಎರಡರಲ್ಲೂ ಮುಂದಿದ್ದ ನಟ ಇವರಿಗೆ ಆಹಾರ ಖಾದ್ಯಗಳೆಂದರೆ ಪಂಚಪ್ರಾಣ. ಮಂಡ್ಯ ಮಿಠಾಯಿ, ನಾಟಿ ಕೋಳಿ ಸಾರು, ಮಟನ್ ಕೈಮಾ ಅವರಿಗೆ ಅಚ್ಚುಮೆಚ್ಚು. ಹೀಗಾಗಿ ಫಿಲಂ ಶೂಟಿಂಗ್ ನಡುವೆಯೂ ತರಾವೇರಿ ಆಹಾರ ಖಾದ್ಯ ಸವಿಯುವುದು ಅವರು ಇಷ್ಟ ಪಡುತ್ತಿದ್ದರಂತೆ.

ಓದಿನಲ್ಲಿ ಸದಾ ಮುಂದಿದ್ದರೂ ಅಂಬಿ ಪಿಯುಸಿಯಲ್ಲಿ ಮೊದಲ ಬಾರಿ ಫೇಲ್ ಆಗಿದ್ರಂತೆ ಹಾಗಿದ್ದರೂ ಅದನ್ನು ಹೆಚ್ಚು ತಲೆಕೆಡಿಸಿಕೊಳ್ಳದೆ ಎಲ್ಲವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದರಂತೆ. ಆರಂಭದಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡಿ ಬಳಿಕ ನಟನೆ ಬಗ್ಗೆ ಆಸಕ್ತಿ ಹೊಂದಿ ಕೆಲ ವಿಚಾರವನ್ನು ಇವರು ಅಭ್ಯಾಸ ಮಾಡಿದ್ದಾರೆ.

ಕನ್ನಡ ಚಲನಚಿತ್ರ ರಂಗಕ್ಕೆ 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಜಲೀಲ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಚಿರಪರಿಚಿತರಾದರು. ಹೆ ಬುಲ್ ಬುಲ್ ಮಾತಾಡಕಿಲ್ವಾ ಅನ್ನುವ ಡೈಲಾಗ್ ಇಂದಿಗೂ ಫೇಮಸ್ ಆಗಿದೆ.

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನ ಚಿತ್ರಗಳಾದ ಪಡುವಾರಳ್ಳಿ ಪಾಂಡವರು, ಶುಭಮಂಗಳ, ಮಸಣದ ಹೂವು, ರಂಗನಾಯಕಿ ಚಿತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದರು. ರಾಜ್ ಕುಮಾರ್, ವಿಷ್ಣುವರ್ಧನ್ ನಂತಹ ದಿಗ್ಗಜ ನಟರೊಂದಿಗೂ ಸ್ಕ್ರೀನ್ ಶೇರ್ ಮಾಡಿಕೊಂಡು ಅಂಬಿ ಸುಮಾರು 200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಾವೇರಿ ಹೋರಾಟದಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದು ಇವರ ಸೇವೆ ಅನೇಕ ಪ್ರಶಸ್ತಿ ಗೌರವಗಳು ಕೂಡ ದೊರೆತಿದೆ. 1982ರಲ್ಲಿ ಅಂತ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ, ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ, ಫಿಲ್ಮ್ ಫೇರ್ ಅತ್ಯುತ್ತಮ ನಟ, ಆಂಧ್ರ ಸರ್ಕಾರವು ನಂದಿ ಪ್ರಶಸ್ತಿ, ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ, 2013ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ಅನೇಕ ಪ್ರಶಸ್ತಿ ಲಭಿಸಿವೆ.

ಅಂಬರೀಶ್ ಮಾತು ಒರಟು, ಹೃದಯ ಮೃದು ಅನ್ನೋದು ಬಹುತೇಕರಿಗೆ ಗುತ್ತಿರುವ ವಿಚಾರವೇ ಆಗಿದೆ. ಹೀಗಾಗಿ ಯಾವುದೆ ಸಮಸ್ಯೆ ಬಂದರು ಅದನ್ನು ಬಗೆಹರಿಸುವ ನಿಸ್ಸಿಮತೆ ಅವರಲ್ಲಿತ್ತು.ಸಿನಿಮಾ ಜೊತೆಗೆ ರಾಜಕೀಯದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದ ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ಧಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿ ಬಹುಮತದಿಂದ ಗೆದ್ದಿದ್ದರು.

ಇಂದಿಗೂ ಮಂಡ್ಯ ಕ್ಷೇತ್ರದಲ್ಲಿ ಅಂಬರೀಶ್ ಅವರನ್ನು ರಾಜಕೀಯ ನಾಯಕನಾಗಿ ಆರಾಧಿಸುವ ಅಭಿಮಾನಿ ಬಳಗವೇ ಇದೆ. ಅವರು 2016ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾವೇರಿ ಹೋರಾಟಕ್ಕಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ನಟ ಅಂಬರೀಶ್ ಅವರಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ಚಿಕಿತ್ಸೆ ಫಲಿಸದೇ 2018ರ ನವೆಂಬರ್ 24ರಂದು ಇಹಲೋಕ ತ್ಯಜಿಸಿದರು. ಅವರಿಗೆ ಮಂಡ್ಯ, ಬೆಂಗಳೂರು, ರಾಮನಗರ, ಚಿತ್ರದುರ್ಗ, ಮೈಸೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಅಭಿಮಾನಿ ಬಳಗವಿದ್ದು ಪ್ರತೀ ವರ್ಷ ಇವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅಂಬರೀಶ್ ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅಭಿಮಾನಿಗಳ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.