Friday, 18th October 2024

ಡ್ರಗ್ಸ್ ಪ್ರಕರಣ: ಸಿದ್ದಾಂತ್ ಕಪೂರ್’ಗೆ ಸಿಕ್ಕಿತು ಜಾಮೀನು

ಬೆಂಗಳೂರು:ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರಿಗೆ ಡ್ರಗ್ಸ್ ಪ್ರಕರಣದಲ್ಲಿ ಠಾಣೆ ಜಾಮೀನು ಸಿಕ್ಕಿದೆ.

ಸಿದ್ದಾಂತ್ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದರಿಂದ ಸೋಮವಾರ ಬಂಧನ ಕ್ಕೊಳಗಾಗಿದ್ದರು. ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ಇರುವ ದಿ ಪಾರ್ಕ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಸುದ್ದಿ ತಿಳಿದ ಪೊಲೀಸರು ದಾಳಿ ನಡೆಸಿದ್ದರು. ಹಲಸೂರು ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು. ನಟ ಸಿದ್ದಾಂತ್ ಕಪೂರ್ ಸೇರಿದಂತೆ ಐವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ತನಿಖಾಧಿಕಾರಿ ಮಂಜುನಾಥ್ ಹೇಳಿದ್ದರು.

ಸೋಮವಾರ ರಾತ್ರಿ ವೇಳೆಗೆ ಠಾಣೆ ಜಾಮೀನು ಸಿಕ್ಕಿದ್ದು, ಸಿದ್ಧಾಂತ್ ಕಪೂರ್ ಹೊರ ಬಂದಿದ್ದಾರೆ. ಮಂಗಳವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ, ಪೊಲೀಸರ ಕ್ರಮವನ್ನು ಸಿದ್ಧಾಂತ್ ಸ್ವಾಗತಿಸಿದ್ದಾರೆ.

ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಇರುವ ದಿ ಪಾರ್ಕ್ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ನಡೆದಿರುವ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹಲಸೂರು ಠಾಣೆ ಎಸ್ ಐ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.