Pahalgam Attack: ಶ್ರೀಲಂಕಾಕ್ಕೆ ಹಾರಿದ್ರಾ ಪಹಲ್ಗಾಮ್ ದಾಳಿಯ ಉಗ್ರರು? ಕೊಲಂಬೊದಲ್ಲಿ ವ್ಯಾಪಕ ಶೋಧ
Colombo Bandaranaike International Airport: ಪಹಲ್ಗಾಮ್ ದಾಳಿಯ ನಡೆಸಿದ ಉಗ್ರರು ಚೆನ್ನೈಯಿಂದ ವಿಮಾನದಲ್ಲಿ ಶ್ರೀಲಂಕಾಕ್ಕೆ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಯಿತು. ಸದ್ಯ ಶಂಕಿತರು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ.

ಕೊಲಂಬೊ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Attack) ಗುಂಡಿನ ಮಳೆಗೆರೆದು 26 ಮಂದಿಯ ಪ್ರಾಣ ಕಸಿದ ಪಾಕಿಸ್ತಾನ ಮೂಲದ ಉಗ್ರರಿಗಾಗಿ ಭಾರತ ತೀವ್ರ ಹುಡುಕಾಟ ನಡೆಸುತ್ತಿದೆ. ಈ ಮಧ್ಯೆ ಶಂಕಿತ ಉಗ್ರರು ಶ್ರೀಲಂಕಾಕ್ಕೆ ಪರಾರಿಯಾಗಿದ್ದಾರೆ ಎನ್ನುವ ಸಂಶಯ ಮೂಡಿದ್ದು, ಕೊಲಂಬೊ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Colombo Bandaranaike International Airport) ಸರ್ಚ್ ಆಪರೇಷನ್ ನಡೆಸಲಾಗಿದೆ. ಚೆನ್ನೈಯಿಂದ ಶ್ರೀಲಂಕಾಕ್ಕೆ ಹಾರಿದ ವಿಮಾನದಲ್ಲಿ ಪಹಲ್ಗಾಮ್ ದಾಳಿ ನಡೆಸಿದ 6 ಉಗ್ರರು ತೆರಳಿದ್ದಾರೆ ಎನ್ನುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹುಡುಕಾಟ ಚುರುಕುಗೊಳಿಸಲಾಗಿದೆ.
ಶನಿವಾರ (ಮೇ 4) ಬೆಳಗ್ಗೆ 11:59ಕ್ಕೆ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶ್ರೀಲಂಕಾ ಏರ್ಲೈನ್ಸ್ನ ವಿಮಾನ ಯುಎಲ್ 122 (Flight UL 122) ಅನ್ನು ಸಮಗ್ರ ತನಿಖೆಗೆ ಒಳಪಡಿಸಲಾಯಿತು. ವಿಮಾನದಲ್ಲಿ ಪಹಲ್ಗಾಮ್ ದಾಳಿ ನಡೆಸಿದ 6 ಶಂಕಿತ ಉಗ್ರರು ಇದ್ದಾರೆ ಎಂದು ಭಾರತೀಯ ಅಧಿಕಾರಿಗಳು ಶ್ರೀಲಂಕಾಕ್ಕೆ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಶಂಕಿತರು ಶ್ರೀಲಂಕಾ ಏರ್ಲೈನ್ಸ್ ವಿಮಾನದಲ್ಲಿ ಕೊಲಂಬೊಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಯಿತು.
ಶ್ರೀಲಂಕಾ ಪೊಲೀಸ್ ಪಡೆ, ಶ್ರೀಲಂಕಾ ವಾಯು ಪಡೆ ಮತ್ತು ವಿಮಾನ ನಿಲ್ದಾನ ಭದ್ರತಾ ಪಡೆ ಸಿಬ್ಬಂದಿ ಕೂಲಂಕುಷವಾಗಿ ಶೋಧ ನಡೆಸಿದ್ದಾರೆ. ಆದರೆ ಶಂಕಿತರು ಪತ್ತೆಯಾಗಿಲ್ಲ ಎಂದು ಸ್ಥಳೀಯ ಮೂಲಗಳಿ ತಿಳಿಸಿವೆ.
#BREAKING: Srilankan Airlines says that its flight from Chennai in India to Colombo was subjected to comprehensive security search upon arrival. This was done following an alert from Chennai Area Control Centre regarding a suspect wanted in India believed to be onboard. pic.twitter.com/Uu0gKAdukM
— Aditya Raj Kaul (@AdityaRajKaul) May 3, 2025
ಈ ಸುದ್ದಿಯನ್ನೂ ಓದಿ: Ballistic Missile: ಯುದ್ಧದ ಭೀತಿ ನಡುವೆ ಪಾಕಿಸ್ತಾನದಿಂದ 450 ಕಿ.ಮೀ. ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಪರೀಕ್ಷೆ
ಏರ್ಲೈನ್ಸ್ ಹೇಳಿದ್ದೇನು?
ʼʼಚೆನ್ನೈಯಿಂದ ಎಚ್ಚರಿಕೆ ಸಂದೇಶ ಬಂದ ಹಿನ್ನಲೆಯಲ್ಲಿ ಯುಎಲ್ 122 ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು ಮತ್ತು ನಂತರ ಹೆಚ್ಚಿನ ಕಾರ್ಯಾಚರಣೆಗಾಗಿ ತೆರವುಗೊಳಿಸಲಾಯಿತುʼʼ ಎಂದು ಶ್ರೀಲಂಕನ್ ಏರ್ಲೈನ್ಸ್ ಮಾಹಿತಿ ನೀಡಿದೆ.
ʼʼವಿಮಾನವನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು ಮತ್ತು ನಂತರ ಹೆಚ್ಚಿನ ಕಾರ್ಯಾಚರಣೆಗಾಗಿ ತೆರವುಗೊಳಿಸಲಾಯಿತುʼʼ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಾಗ್ಯೂ ಕಡ್ಡಾಯ ಭದ್ರತಾ ಕಾರ್ಯವಿಧಾನದ ಪರಿಣಾಮವಾಗಿ ಸಿಂಗಾಪುರಕ್ಕೆ ತೆರಳುವ ಫ್ಲೈಟ್ ಯುಎಲ್ 308 ವಿಮಾನ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ. "ಪ್ರಯಾಣಿಕರು, ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆ ನಮ್ಮ ಅತ್ಯುನ್ನತ ಆದ್ಯತೆ. ಸುರಕ್ಷತೆಯ ಮಾನದಂಡಗಳನ್ನು ನಿರಂತರವಾಗಿ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತೇವೆ" ಎಂದು ಶ್ರೀಲಂಕಾ ಏರ್ಲೈನ್ ಮಾಹಿತಿ ನೀಡಿದೆ.
ಭಾರತಕ್ಕೆ ಬೇಕಾಗಿರುವ ಶಂಕಿತರು ಹಡಗಿನಲ್ಲಿ ಅಥವಾ ವಿಮಾನದಲ್ಲಿ ಶ್ರೀಲಂಕಾಕ್ಕೆ ಆಗಮಿಸಿದ್ದಾರೆ ಎನ್ನುವ ಮಾಹಿತಿ ಮೇರೆಗೆ ವ್ಯಾಪಕ ಶೋಧ ಕಾರ್ಯ ನಡೆಸಲಾಗಿದೆ ಎಂದು ವರದಿಯೊಂದು ವಿವರಿಸಿದೆ.
ಹೆಡೆಮುರಿ ಕಟ್ಟಲು ಎನ್ಐಎ ಸಿದ್ಧತೆ
40 ಯೋಧರನ್ನು ಬಲಿ ಪಡೆದ 2019ರ ಪುಲ್ವಾಮಾ ದಾಳಿ ನಂತರ ಪಹಲ್ಗಾಮ್ನಲ್ಲಿ ಏ. 22ರಂದು ಅತೀ ಭೀಕರ ದಾಳಿ ನಡೆದಿದ್ದು, ಉಗ್ರರನ್ನು ಹೆಡೆಮುರಿ ಕಟ್ಟಲು ರಾಷ್ಟ್ರೀಯ ತನಿಖಾ ಸಂಸ್ಥೆ ತೀವ್ರ ಕಾರ್ಯಾಚರಣೆ ಕೈಗೊಂಡಿದೆ. ದಾಳಿ ನಡೆಸಿದ ಉಗ್ರರು ದಕ್ಷಿಣ ಕಾಶ್ಮೀರದ ದಟ್ಟ ಕಾಡಿನಲ್ಲಿ ಅಡಗಿಕೊಂಡಿದ್ದಾರೆ ಎನ್ನುವ ಶಂಕೆಯೂ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ.