Operation Sindoor: ಕರಾಚಿ ಬಂದರು ಧ್ವಂಸ ಮಾಡಲು ಸಿದ್ಧವಾಗಿತ್ತು ಭಾರತೀಯ ನೌಕಾಪಡೆ!
ಯಾವುದೇ ಸಮಯದಲ್ಲಿ ಕರಾಚಿ ಸೇರಿದಂತೆ ಸಮುದ್ರ ಮತ್ತು ನೆಲದ ಮೇಲಿನ ಆಯ್ದ ಗುರಿಗಳನ್ನು ಹೊಡೆಯಲು ಭಾರತೀಯ ನೌಕಾಪಡೆ ಸಂಪೂರ್ಣ ಸನ್ನದ್ಧತೆ ಹೊಂದಿತ್ತು ಎಂದು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಆಪರೇಷನ್ ಸಿಂದೂರ್ (Operation Sindoor) ಬಗ್ಗೆ ತಿಳಿಸಿದ್ದಾರೆ.

ಭಾರತೀಯ ನೌಕಾಪಡೆ

ನವದೆಹಲಿ: ಆಪರೇಶನ್ ಸಿಂದೂರದ (Operation Sindoor) ಸಮಯದಲ್ಲಿ ಭಾರತೀಯ ನೌಕಾಪಡೆಯ (Indian Navy) ಪ್ರಮುಖ ನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿ, ಯಾವ ಕ್ಷಣದಲ್ಲಿ ಬೇಕಿದ್ದರೂ ಪಾಕಿಸ್ತಾನದ (Pakistan) ಮೇಲೆ ದಾಳಿಗೆ ಮುಂದಾಗುವಂತೆ ಸಜ್ಜಾಗಿ ನಿಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. "ಭಾರತೀಯ ನೌಕಾಪಡೆಯು ಸಂಪೂರ್ಣವಾಗಿ ಸನ್ನದ್ಧವಾಗಿತ್ತು. ಕರಾಚಿ ಸೇರಿದಂತೆ ಸಮುದ್ರ ಮತ್ತು ನೆಲದ ಮೇಲಿನ ಆಯ್ದ ಗುರಿಗಳನ್ನು ಹೊಡೆಯಲು ಸಂಪೂರ್ಣವಾಗಿ ಸಮರ್ಥವಾಗಿತ್ತು" ಎಂದು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಭಾನುವಾರ ಹೇಳಿದ್ದಾರೆ.
"ನಮ್ಮ ಪಡೆಗಳು ಅರೇಬಿಯನ್ ಸಮುದ್ರದಲ್ಲಿ ನಿರ್ಣಾಯಕ ರೀತಿಯಲ್ಲಿ ಮುಂಚೂಣಿಯಲ್ಲಿ ನಿಯೋಜಿಸಲ್ಪಟ್ಟಿದ್ದವು. ನಾವು ಯಾವುದೇ ಸಮಯದಲ್ಲಿ ಕರಾಚಿ ಸೇರಿದಂತೆ ಸಮುದ್ರ ಮತ್ತು ನೆಲದ ಮೇಲಿನ ಆಯ್ದ ಗುರಿಗಳನ್ನು ಹೊಡೆಯಲು ಸಂಪೂರ್ಣ ಸನ್ನದ್ಧತೆ ಮತ್ತು ಸಾಮರ್ಥ್ಯ ಹೊಂದಿದ್ದೆವು" ಎಂದು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಆಪರೇಷನ್ ಸಿಂದೂರ್ ಕುರಿತು ಮೂರು ಪಡೆಗಳ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ನೌಕಾಪಡೆಯ ಮುಂಚೂಣಿ ನಿಯೋಜನೆಯಿಂದಾಗಿ ಪಾಕಿಸ್ತಾನ ರಕ್ಷಣಾತ್ಮಕ ಸ್ಥಿತಿಯಲ್ಲಿರಲು ಮಾತ್ರ ಸಾಧ್ಯವಾಯಿತು. ಹೆಚ್ಚಾಗಿ ಬಂದರುಗಳ ಒಳಗೆ ಅಥವಾ ಕರಾವಳಿಗೆ ಬಹಳ ಹತ್ತಿರದಲ್ಲಿರಬೇಕಾಗಿ ಬಂತು. ಇದನ್ನು ಭಾರತೀಯ ಪಡೆಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದವು. ಭಾರತೀಯ ನೌಕಾಪಡೆಯು ಈ ಅವಧಿಯಲ್ಲಿ ಅಡೆತಡೆಯಿಲ್ಲದ ಕಡಲ ಕ್ಷೇತ್ರದ ಜಾಗೃತಿಯನ್ನು ಕಾಯ್ದುಕೊಂಡಿತು. ಪಾಕಿಸ್ತಾನಿ ಘಟಕಗಳ ನೆಲೆಗಳು ಮತ್ತು ಚಲನವಲನಗಳ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದಿತ್ತು" ಎಂದು ಅವರು ಹೇಳಿದರು.
ಪಾಕಿಸ್ತಾನದ ಆಕ್ರಮಣಕ್ಕೆ ಭಾರತದ ಲೆಕ್ಕಾಚಾರದ ಪ್ರತಿಕ್ರಿಯೆ ಆರಂಭದಿಂದಲೂ ಇತ್ತು. ಪ್ರಮಾಣಾನುಗುಣವಾಗಿ, ಉಲ್ಬಣಗೊಳ್ಳದ ಮತ್ತು ಜವಾಬ್ದಾರಿಯುತವಾಗಿ ದಾಳಿ ಮಾಡಲಾಗಿದೆ ಎಂದು ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಪುನರುಚ್ಚರಿಸಿದರು.
ಪಹಲ್ಗಾಮ್ ದಾಳಿಯ ನಂತರ, ಭಾರತೀಯ ಸರಕಾರ ಅಪರಾಧಿಗಳಿಗೆ "ಊಹಿಸಲಾಗದ ಶಿಕ್ಷೆ ನೀಡಲಿದ್ದೇವೆ" ಎಂದು ಪ್ರತಿಜ್ಞೆ ಮಾಡಿದ ನಂತರ, ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಲೈವ್-ಫೈರಿಂಗ್ ಕವಾಯತುಗಳು, ಉಡಾವಣಾ ಪರೀಕ್ಷೆಗಳು ಮತ್ತು ಯುದ್ಧ ಕಾರ್ಯಾಚರಣೆಯ ಕವಾಯತುಗಳನ್ನು ನಡೆಸಿತು. "ಭಯೋತ್ಪಾದಕ ದಾಳಿಯ 96 ಗಂಟೆಗಳ ಒಳಗೆ, ಅರೇಬಿಯನ್ ಸಮುದ್ರದಲ್ಲಿ ನೌಕಾಪಡೆಯು ಯುದ್ಧದ ತಂತ್ರಗಳು ಮತ್ತು ಕಾರ್ಯವಿಧಾನಗಳನ್ನು ಪರೀಕ್ಷಿಸಿತು. ಆಯ್ದ ಗುರಿಗಳ ಮೇಲೆ ನಿಖರವಾಗಿ ವಿವಿಧ ಶಸ್ತ್ರಾಸ್ತ್ರಗಳನ್ನು ಹಾಕಲು ಸಿಬ್ಬಂದಿ, ಶಸ್ತ್ರಾಸ್ತ್ರ, ಉಪಕರಣಗಳು ಮತ್ತು ವೇದಿಕೆಯನ್ನು ಸಿದ್ಧಪಡಿಸಿಕೊಂಡಿತು" ಎಂದು ನೌಕಾಪಡೆಯು Xನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಏಪ್ರಿಲ್ 22ರಂದು 26 ನಾಗರಿಕರ ಜೀವವನ್ನು ಬಲಿ ಪಡೆದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದೊಳಗಿನ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿತು. ಸೇನೆ ಮತ್ತು ವಾಯುಪಡೆಯು ವಾಯು ಮತ್ತು ನೆಲದಿಂದ ನಿಖರವಾದ ದಾಳಿಗಳನ್ನು ನಡೆಸಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ದೊಡ್ಡ ಪ್ರದೇಶವನ್ನು ನಾಶಪಡಿಸಿತು.
ಇದನ್ನೂ ಓದಿ: Operation Sindoor: ನಮಗೆ ಸಹಾಯ ಕೊಡಿ, ಪಾಕ್ ಅನ್ನು ಬಗ್ಗುಬಡಿಯುತ್ತೇವೆ: ಬಲೂಚಿ ಉಗ್ರರು