Chikkaballapur News: ಕನ್ನಡಕ್ಕೆ ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗಲಿವೆ ಕ ಸಾ ಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಎಚ್ಚರಿಕೆ
ಹರಿಯಾಣದಲ್ಲಿ ಸರ್ಕಾರದಿಂದ ಮೂಲ ಸೌಕರ್ಯಗಳನ್ನು ಪಡೆದಿರುವ ಸಂಸ್ಥೆಗಳು 30 ಸಾವಿರಕ್ಕೂ ಹೆಚ್ಚು ಸಂಬಳದ ಹುದ್ದೆಗೆ ಸ್ಥಳಿಯರಿಗೆ ಆದ್ಯತೆ ನೀಡಬೇಕು. ಶೇ.20 ರಷ್ಟು ಹುದ್ದೆಗಳು ಹೊರಗಿನವರಿಗೆ ಹಾಗೂ ಶೇ.80 ರಷ್ಟು ಪ್ರಾದೇಶಿಕ ಭಾಷೆಯಲ್ಲಿ ಓದಿದವರಿಗೆ ಸಿಗಬೇಕೆಂಬ ಆದೇಶಕ್ಕೆ ನ್ಯಾಯಾಲಯವು ಒಂದೇ ದಿನ ತಡೆಯಾಜ್ಞೆ ನೀಡಿತು


ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕನ್ನಡ ಪರಿಸ್ಥಿತಿಯ ವಿಚಾರವಾಗಿ ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗುವ ಆತಂಕದ ಪರಿಸ್ಥಿತಿ ಇದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ನಾಡೋಜ ಡಾ ಮಹೇಶ್ ಜೋಶಿ ಎಚ್ಚರಿಕೆ ನೀಡಿದರು. ನಗರದಲ್ಲಿನ ಕನ್ನಡ ಕಲಾ ಭವನದಲ್ಲಿ ಕೈಗೊಂಡಿದ್ದ ಕನ್ನಡ ಸಾಹಿತ್ಯ 10 ನೇ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಬೋಧನೆ ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಎರಡು ಕನಸಿನ ಗುರಿಯೊಂದಿಗೆ ಕಸಾಪ ಪರಿಷತ್ತಿನ ಅಧ್ಯಕ್ಷಗಾದಿಯನ್ನು ಏರಲಾಯಿತು. ಆದರೆ, ಈ ಎರಡರಲ್ಲೂ ಕಾನೂನಾತ್ಮಕ ಹಿನ್ನಡೆಯನ್ನು ಅನುಭವಿಸಲಾಗಿದೆ. ಈಗ ದೊಡ್ಡ ಭ್ರಮೆಯ ನಿರೀಕ್ಷೆ ಯಲ್ಲಿರುವಂತೆ ಭಾಸವಾಗುತ್ತಿದೆ ಎಂದು ಬೇಸರಿಸಿದರು.
ಇದನ್ನೂ ಓದಿ: Chikkaballapur News: ಮಳೆಯಿಂದ ಮನೆ ಕಳೆದುಕೊಂಡ: ಸಂತ್ರಸ್ತರ ವೃದ್ದಗೆ ಪರಿಹಾರ ಚೆಕ್ ವಿತರಣೆ
ಹರಿಯಾಣದಲ್ಲಿ ಸರ್ಕಾರದಿಂದ ಮೂಲ ಸೌಕರ್ಯಗಳನ್ನು ಪಡೆದಿರುವ ಸಂಸ್ಥೆಗಳು 30 ಸಾವಿರ ಕ್ಕೂ ಹೆಚ್ಚು ಸಂಬಳದ ಹುದ್ದೆಗೆ ಸ್ಥಳಿಯರಿಗೆ ಆದ್ಯತೆ ನೀಡಬೇಕು. ಶೇ.20 ರಷ್ಟು ಹುದ್ದೆಗಳು ಹೊರಗಿನವರಿಗೆ ಹಾಗೂ ಶೇ.80 ರಷ್ಟು ಪ್ರಾದೇಶಿಕ ಭಾಷೆಯಲ್ಲಿ ಓದಿದವರಿಗೆ ಸಿಗಬೇಕೆಂಬ ಆದೇಶಕ್ಕೆ ನ್ಯಾಯಾಲಯವು ಒಂದೇ ದಿನ ತಡೆಯಾಜ್ಞೆ ನೀಡಿತು. ಕರ್ನಾಟಕದಲ್ಲಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಕಡ್ಡಾಯಗೊಳಿಸಿರುವುದರ ವಿರುದ್ಧ ಸವೋಚ್ಛ ನ್ಯಾಯಾಲಯವು ತೀರ್ಪು ನೀಡಿತು. ರಾಜ್ಯದಲ್ಲಿ ಬಹಳಷ್ಟು ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ ಎಂದು ವಿಷಾದಿಸಿದರು.
ಈಗಲಾದರೂ ರಾಜ್ಯದಲ್ಲಿ ಕನ್ನಡದ ಅಭಿಮಾನ, ಗರಿಮೆಯನ್ನು ಬಿತ್ತದಿದ್ದಲ್ಲಿ ಮತ್ತಷ್ಟು ಆತಂಕದ ಕರಾಳ ದಿನಗಳನ್ನು ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ನಾಡದ್ರೋಹಿ ಗಳಾಗಿ ಉಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ನಾಡು ನುಡಿಯು ಮಸುಕಾಗುತ್ತಿರುವ ಲಕ್ಷಣಗಳ ಗೋಚರವಾಗುತ್ತಿವೆ. ಈ ನಿಟ್ಟಿನಲ್ಲಿ ಸಮ್ಮೇಳನಗಳು ಕನ್ನಡ ವಿವೇಕವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಬೇಕು. ಹಾಗೆಯೇ, ನಿರ್ಣಯ ಗಳಿಗೆ ಅನುಗುಣವಾಗಿ ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಂಸತ ಶ್ಲೋಕಗಳ ಮೂಲಕ ಆಲಿಸುತ್ತಿದ್ದ ದೇವರನ್ನು ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಗೆ ಕರೆದುಕೊಂಡು ಬರುವಲ್ಲಿ ವಚನಗಳ ಪಾತ್ರ ಮಹತ್ತರವಾದುದು. ಹಿಂದೆ ಪರ ವಿಚಾರ ಹಾಗೂ ಪರ ಧರ್ಮಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಇಂದು ಪ್ರಶ್ನಿಸುವಂತಿಲ್ಲ. ಹೋರಾಟಗಾರರನ್ನು ಟೀಕಿಸಿ ಅಣಕಿಸುವಂತಹ ವಾತಾವರಣ ಇದೆ. ಕರ್ನಾಟಕದಲ್ಲಿ ಭಾಷೆ ಸಾಹಿತ್ಯ, ಶಿಲ್ಪ ಕಲೆ, ಪರಂಪರೆಗೆ ಜೈನರು, ಮುಸ್ಲಿಮರು, ಕ್ರಿಶ್ಚಿಯನ್ ಸೇರಿದಂತೆ ಹಲವು ಸಮುದಾಯಗಳು ಸಹ ವಿಶೇಷ ಕೊಡುಗೆಯನ್ನು ನೀಡಿವೆ ಎಂದು ತಿಳಿಸಿದರು.
ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಕಠೋರವಾಗಿದ್ದರೂ ವಾಸ್ತವ ವಿಚಾರಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಪ್ರಚಲಿತ ಜಗತ್ತಿನಲ್ಲಿ ನಿರಂತರವಾಗಿ ಅನಿವಾರ್ಯ ಬದಲಾವಣೆಗಳು ಕಂಡು ಬರುತ್ತಿರುತ್ತವೆ. ಜನರ ಹಿತ ಚಿಂತನೆಯಲ್ಲಿ ಪ್ರತಿಯೊಬ್ಬರು ಸರಿಯಾದ ಹಾದಿಯಲ್ಲಿ ಸಾಗಬೇಕು ಎಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್ ಬಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ ಎನ್.ಭಾಸ್ಕರ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ ಕೋಡಿರಂಗಪ್ಪ ಮತ್ತಿತರರು ಇದ್ದರು.
ಶಿಳ್ಳೆಗಳಲ್ಲಿ ಸಂತಸ
ಸಮ್ಮೇಳನದ ಎರಡನೇ ದಿನದ ಸಾಂಸತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಶಿಳ್ಳೆ, ಘೋಷಣೆ ಗಳೊಂದಿಗೆ ಕುಣಿದು ಕುಪ್ಪಳಿಸುತ್ತ ಸಂತಸ ವ್ಯಕ್ತಪಡಿಸಿದರು. ಗಾಯಕರು ಜಾನಪದಗೀತೆಗಳು ಹಾಗೂ ಡಾ ರಾಜ್ ಕುಮಾರ್ ಅಭಿನಯದ ಗೀತೆಗಳ ಗಾಯನದ ಮೂಲಕ ರಂಜಿಸಿದರು.
ಐಶ್ವರ್ಯ ಕಲಾನಿಕೇತನ ಕಾರ್ಯದರ್ಶಿ ಜಿ.ವಿ.ಪ್ರಸನ್ನ ಕುಮಾರ್ ನಿರ್ದೇಶನದಲ್ಲಿ ಆಕರ್ಷಕವಾಗಿ ಮೂಡಿ ಬಂದ ಮಿಸ್ ಸೇವಂತಿ ನಾಟಕ ಪ್ರದರ್ಶನವನ್ನು ಡಿಸಿ, ಸಿಇಒ, ಎಡಿಸಿ ಸೇರಿದಂತೆ ಹಲವರು ವೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಧಕರಿಗೆ ಸನ್ಮಾನ
ನಾಡೋಜ ಮುಖವೀಣೆ ಆಂಜನಪ್ಪ ಸೇರಿದಂತೆ ಕಲೆ, ಮಾಧ್ಯಮ, ಶಿಕ್ಷಣ, ಸಮಾಜ ಸೇವೆ, ಕ್ರೀಡೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.