Chikkaballapur News: ಕಾರ್ಮಿಕರ ಯೋಗಕ್ಷೇಮ ಕಾಪಾಡುವುದು ಮಾಲಿಕರ ಕರ್ತವ್ಯ : ಸಿವಿಲ್ ನ್ಯಾಯಾಧೀಶೆ ಪುಷ್ಪ
ಜೀವದ ಹಂಗು ತೊರೆದು ದುಡಿಯುವ ಕಾರ್ಮಿಕರ ಶ್ರಮವೇ ದೇಶದ ಸಂಪತ್ತಿಗೆ ಕಾರಣವಾಗಿದೆ. ಅವರ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಬೇಕು. ಮಹಿಳಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ದೌರ್ಜನ್ಯ, ಲೈಂಗಿಕ ಕಿರುಕುಳದಂತಹ ಘಟನೆಗಳು ಕಂಡು ಬಂದಲ್ಲಿ ತಕ್ಷಣ ಸಂಬಂಧ ಪಟ್ಟವರಿಗೆ ದೂರು ನೀಡಿದರೆ ನ್ಯಾಯ ಸಿಗಲಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಮಿಕರ ಪರವಾಗಿ ಧ್ವನಿ ಎತ್ತಬೇಕು

ಕಾರ್ಮಿಕರ ಯೋಗಕ್ಷೇಮ ಕಾಪಾಡುವುದು ಮಾಲಿಕರ ಕರ್ತವ್ಯ ಎಂದು ಸಿವಿಲ್ ನ್ಯಾಯಾಧೀಶೆ ಪುಷ್ಪ ತಿಳಿಸಿದರು.

ಗೌರಿಬಿದನೂರು : ಕಾರ್ಖಾನೆಗಳಲ್ಲಿ ಹಗಲಿರುಳು ದುಡಿಯುವ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಹಾಗೂ ಇತರೆ ಸೌಲಭ್ಯ ನೀಡಿ ಅವರ ಯೋಗ ಕ್ಷೇಮ ನೋಡಿಕೊಳ್ಳುವುದು ಕಾರ್ಖಾನೆ ಮಾಲೀಕರ ಆದ್ಯ ಕರ್ತವ್ಯವಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ, ಪುಷ್ಪ ಅಭಿಪ್ರಾಯ ಪಟ್ಟರು. ನಗರದ ಮರಿಗಮ್ಮ ದೇವಸ್ಥಾನದ ಆವರಣದಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಮತ್ತು ಕಾರ್ಮಿಕ ಇಲಾಖೆ ವತಿಯಿಂದ, ಬುಧವಾರ ನಡೆದ ಕಾರ್ಮಿಕ ದಿನಾಚರಣೆಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜೀವದ ಹಂಗು ತೊರೆದು ದುಡಿಯುವ ಕಾರ್ಮಿಕರ ಶ್ರಮವೇ ದೇಶದ ಸಂಪತ್ತಿಗೆ ಕಾರಣವಾಗಿದೆ. ಅವರ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಬೇಕು. ಮಹಿಳಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ದೌರ್ಜನ್ಯ, ಲೈಂಗಿಕ ಕಿರುಕುಳದಂತಹ ಘಟನೆಗಳು ಕಂಡು ಬಂದಲ್ಲಿ ತಕ್ಷಣ ಸಂಬಂಧ ಪಟ್ಟವರಿಗೆ ದೂರು ನೀಡಿದರೆ ನ್ಯಾಯ ಸಿಗಲಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಮಿಕರ ಪರವಾಗಿ ಧ್ವನಿ ಎತ್ತಬೇಕು ಎಂದು ತಿಳಿಸಿದರು.

ಕಾರ್ಮಿಕ ನಿರೀಕ್ಷಕ ಸತೀಶ್ ಮಾತನಾಡಿ, ೧೯೬೦ ರ ಅಸುಪಾಸಿನಲ್ಲಿ, ಕಾರ್ಮಿಕರು ೧೦ ರಿಂದ ೧೨ ಘಂಟೆಗಳ ಕಾಲ ಕೆಲಸ ಮಾಡಬೇಕಾಗಿತ್ತು, ಆಗ ನಡೆದ ಹೋರಾಟಗಳ ಪರಿಣಾಮ ಇಂದು ೮ ಘಂಟೆಗಳ ಕಾಲ ಕೆಲಸ ಮಾಡುವಂತಾಗಿದೆ, ಹಾಗೂ ಕಾರ್ಮಿಕರಿಗೆ ಹೆಚ್ಚಿನ ಶಕ್ತಿ ಬಂದಿದೆ, ಕಾರ್ಮಿಕರು ೮ ಘಂಟೆ ಕೆಲಸ ಮಾಡಬೇಕು, ಮಾಲೀಕರು ಸಮಯಕ್ಕೆ ಸರಿಯಾಗಿ ವೇತನ ನೀಡ ಬೇಕು, ರಜಾ ದಿನಗಳನ್ನು ಕಡ್ಡಾತವಾಗಿ ನೀಡಬೇಕು ಗರ್ಭಿಣಿ ಮಹಿಳೆಯರನ್ನು ಕೆಲಸದಿಂದ ತೆಗೆಯುವಂತಿಲ್ಲ, ಹೀಗೆ ಅನೇಕ ಕಾರ್ಮಿಕರ ಪರವಾದ ಕಾನೂನುಗಳನ್ನು ರೂಪಿಸಲಾಗಿದೆ ಎಂದ ಅವರು ಸರ್ಕಾರ ಕಟ್ಟಡ ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಬಳಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: RCB IPL Records: ಆರ್ಸಿಬಿ ಐಪಿಎಲ್ ಸಾಧನೆಯ ಇಣುಕು ನೋಟ
ಸರ್ಕಾರಿ ಅಭಿಯೋಜಕ ಫಯಾಜ್ ಪಟೇಲ್ ಮಾತನಾಡಿ, ಕಾರ್ಮಿಕರಿಲ್ಲದೆ ದೇಶ ಮುಂದುವರೆ ಯಲು ಸಾಧ್ಯವಿಲ್ಲ, ಪ್ರತಿ ಕಾರ್ಮಿಕನು ಕಾಯಕವೇ ಕೈಲಾಸ ಎಂದು ಕೆಲಸ ಮಾಡುತ್ತಾನೆ, ಇವರು ಶೋಷಣೆಗೆ ಒಳಪಟ್ಟಾಗ ಅವರಿಗೆ ನ್ಯಾಯ ಒದಗಿಸುವ ಕೆಲಸ ಎಲ್ಲರೂ ಮಾಡಬೇಕು ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ವಿಜಯ ಕುಮಾರ್ ಮಾತನಾಡಿ, ಕೆಲಸಕ್ಕೆ ಬರುವ ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು, ಅವರಿಗೆ ತೊಂದರೆಯಾದಾಗ ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ, ಶಮೀರ್ ಮತ್ತು ವಕೀಲರ ಸಂಘದ ಕಾರ್ಯದರ್ಶಿ ಲಿಂಗಪ್ಪ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು.
ಇದೇ ವೇಳೆ, ಕಟ್ಟಡ ಕಾರ್ಮಿಕರಿಗೆ ಪರಿಕರ ಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಖಜಾಂಚಿ ನಾಗರಾಜು, ವಕೀಲ ಜಗದೀಶ್, ಪ್ರಭಾಕರ್,ಕಾರ್ಮಿಕ ಇಲಾಖೆ ಸಿಬ್ಬಂದಿ,ಪವನ್ ಕಟ್ಟಡ ಮತ್ತು ಶ್ರಮಿಕರ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ, ಉಪಾಧ್ಯಕ್ಷ ಧನಂಜಯ, ನಾಗೇಶ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟಾದ್ರಿ ರಮೇಶ್ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.