ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಸರ್ವಾಧಿಕಾರದ ಹೆಸರಲ್ಲಿ ದೇಶವನ್ನು ವಿಭಜಿಸುವ, ವಿನಾಶಕ್ಕೆ ಕೊಂಡೊಯ್ಯುವ ಮನಸ್ಥಿತಿ ವಿರುದ್ಧ ಹೋರಾಟ: ಸಿದ್ದರಾಮಯ್ಯ

CM Siddaramaiah: ಆರ್ಥಿಕವಾಗಿ ಸದೃಢವಾದ ಭಾರತವನ್ನು ಮಾತ್ರವಲ್ಲ, ಸಾಮಾಜಿಕವಾಗಿ, ತಾತ್ವಿಕವಾಗಿ, ಸಾಂವಿಧಾನಿಕವಾಗಿ ಸದೃಢವಾದ ರಾಷ್ಟ್ರ ನಿರ್ಮಾಣ ಮಾಡಬೇಕಿದೆ. ನಾವು ಇಲ್ಲಿ ಇರುವುದು ಅಧಿಕಾರಕ್ಕೋಸ್ಕರ ಅಲ್ಲ. ಒಂದು ಸದುದ್ದೇಶಕೋಸ್ಕರ ಮತ್ತು ಆ ಉದ್ದೇಶ ಪ್ರತಿಯೊಬ್ಬ ಭಾರತೀಯನಿಗಾಗಿ ಈ ಗಣರಾಜ್ಯವನ್ನು ಪುನರ್‌ ನಿರ್ಮಿಸುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಅಚ್ಛೇ ದಿನ್ʼ ಭರವಸೆ ಭಾರತೀಯನ ಪಾಲಿಗೆ ಹಾಸ್ಯ: ಸಿದ್ದರಾಮಯ್ಯ

Profile Siddalinga Swamy Apr 8, 2025 11:10 PM

ಗಾಂಧಿನಗರ: ನಮ್ಮ ಹೋರಾಟ ಒಂದು ಪಕ್ಷದ ವಿರುದ್ಧ ಮಾತ್ರವಲ್ಲ. ಅದು ಸರ್ವಾಧಿಕಾರದ ಹೆಸರಲ್ಲಿ ದೇಶವನ್ನು ವಿಭಜಿಸುವ, ವಿನಾಶಕ್ಕೆ ಕೊಂಡೊಯ್ಯುವ ಮನಸ್ಥಿತಿಯ ವಿರುದ್ಧ ಎಂಬುದನ್ನು ಮನಗಾಣಬೇಕಿದೆ ಮತ್ತು ಇದಕ್ಕೆ ತಕ್ಕ ಉತ್ತರ ಕರುಣೆ, ಧೈರ್ಯ ಮತ್ತು ಸಮರ್ಪಣೆ ಮನೋಭಾವದಿಂದ ನಾವು ಮುನ್ನಡೆಯುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಒಟ್ಟಾಗಿ ಆರ್ಥಿಕವಾಗಿ ಸದೃಢವಾದ ಭಾರತವನ್ನು ಮಾತ್ರವಲ್ಲ, ಸಾಮಾಜಿಕವಾಗಿ, ತಾತ್ವಿಕವಾಗಿ, ಸಾಂವಿಧಾನಿಕವಾಗಿ ಸದೃಢವಾದ ರಾಷ್ಟ್ರ ನಿರ್ಮಾಣ ಮಾಡಬೇಕಿದೆ. ನಾವು ಇಲ್ಲಿ ಇರುವುದು ಅಧಿಕಾರಕ್ಕೋಸ್ಕರ ಅಲ್ಲ. ಒಂದು ಸದುದ್ದೇಶಕೋಸ್ಕರ ಮತ್ತು ಆ ಉದ್ದೇಶ ಪ್ರತಿಯೊಬ್ಬ ಭಾರತೀಯನಿಗಾಗಿ ಈ ಗಣರಾಜ್ಯವನ್ನು ಪುನರ್‌ ನಿರ್ಮಿಸುವುದು ಎಂದು ಹೇಳಿದರು.

ನಮ್ಮ ಗಣರಾಜ್ಯ ಹಲವು ಅಪಾಯಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಈ ಸಭೆಯು ಆಧುನಿಕ ಭಾರತ ನಿರ್ಮಾಣದ ಮೂಲತತ್ವಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಪುನಃ ಜೀವ ತುಂಬಲಿದೆ ಎಂದರು.

ನಮ್ಮ ದೇಶ ಇಂದು ಅಪಾಯಕಾರಿಯಾದ ಕವಲುದಾರಿಯಲ್ಲಿ ನಿಂತಿದೆ. ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ನಮ್ಮ ಸಂವಿಧಾನದ ಅಡಿಪಾಯಗಳು. ಈ ಅಡಿಪಾಯಗಳು ಇಂದು ಅಧಿಕಾರದ ಅಮಲು ಹಾಗೂ ನಿಯಂತ್ರಣದ ಗೀಳು ತುಂಬಿರುವ ಅಧಿಕಾರದ ಹಿಡಿತಕ್ಕೆ ಸಿಲುಕಿವೆ ಎಂದು ತಿಳಿಸಿದರು.

‘ಅಚ್ಛೇ ದಿನ್ʼ ಎಂಬ ಭರವಸೆ ಸಾಮಾನ್ಯ ಭಾರತೀಯನ ಪಾಲಿಗೆ ಕ್ರೂರ ಹಾಸ್ಯ

ಶತಮಾನಗಳಿಂದ ಅನ್ಯಾಯದ ವಿರುದ್ಧ ಹೋರಾಡುತ್ತಾ ಬಂದಿರುವ ನಮ್ಮ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಇನ್ನಷ್ಟು ಅಂಚಿಗೆ ತಳ್ಳಲಾಗುತ್ತಿದೆ. ದ್ವೇಷದಿಂದ ಸಾಮಾಜಿಕ ವ್ಯವಸ್ಥೆಯನ್ನು ಘಾಸಿಗೊಳಿಸಲಾಗಿದೆ. ಅಭಿವೃದ್ಧಿಯ ರಾಜಕಾರಣವನ್ನು, ವಿಭಜಿಸುವ ರಾಜಕಾರಣವನ್ನಾಗಿ ಬದಲಿಸಲಾಗುತ್ತಿದೆ. ಯುವಜನತೆ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆಲೆ ಏರಿಕೆ ಹೆಚ್ಚುತ್ತಿವೆ. ‘ಅಚ್ಛೇ ದಿನ್ʼ ಎಂಬ ಭರವಸೆ ಯೆಂಬುದು, ಸಾಮಾನ್ಯ ಭಾರತೀಯನ ಪಾಲಿಗೆ ಕ್ರೂರ ಹಾಸ್ಯವಾಗಿದೆ ಎಂದು ತಿಳಿಸಿದ ಅವರು ಇದು ಕೇವಲ ಆಡಳಿತದ ಬಿಕ್ಕಟ್ಟಲ್ಲ. ಇದು ನೈತಿಕತೆಯ ಬಿಕ್ಕಟ್ಟು ಎಂದರು.

ಚುನಾವಣಾ ಆಯೋಗವು, ಇಂದು ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿರೋಧ ಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯಪಾಲರನ್ನು ರಾಜಕೀಯ ಏಜೆಂಟ್ಸ್‌ಗಳಾಗಿ ಬಳಸಲಾಗುತ್ತಿದೆ

ಸಂಸತ್ ಅನ್ನು ಕೇವಲ ರಬ್ಬರ್ ಸ್ಟ್ಯಾಂಪ್‌ನ ಮಟ್ಟಕ್ಕೆ ಇಳಿಸಲಾಗಿದೆ. ಯಾವುದೇ ಚರ್ಚೆಗಳಿಲ್ಲದೇ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಿ, ಧ್ವನಿಗಳನ್ನು ಮೌನಗೊಳಿಸಲಾಗುತ್ತಿದೆ ಮತ್ತು ಸತ್ಯವನ್ನು ಅಪೇಕ್ಷಿಸಿದ್ದಕ್ಕಾಗಿ ವಿರೋಧ ಪಕ್ಷದ ಸಂಸದರನ್ನು ಅಮಾನತ್ತುಗೊಳಿಸಲಾಗುತ್ತಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಅಭದ್ರಗೊಳಿಸಲು ಸಂವಿಧಾನಬದ್ಧವಾಗಿ ಪಕ್ಷಾತೀತವಾಗಿರಬೇಕಾದ ರಾಜ್ಯಪಾಲರುಗಳನ್ನೂ ರಾಜಕೀಯ ಏಜೆಂಟ್ಸ್‌ಗಳಾಗಿ ಬಳಸಲಾಗುತ್ತಿದೆ ಎಂದು ದೂರಿದರು.

ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಪಕ್ಷ ಎನ್ನುತ್ತಾ, ಭಾರತವನ್ನು ಸಂಕುಚಿತತೆಯತ್ತ ನೂಕುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ. ತಮಿಳುನಾಡು ಹಾಗೂ ಕರ್ನಾಟಕ ಮೇಲೆ NEET ಮಾಡಿರುವ ಪರಿಣಾಮಗಳನ್ನು ನೋಡುವುದಾದರೆ , ಉತ್ತಮವಾಗಿ ಸ್ಥಾಪಿತವಾಗಿದ್ದ ಗ್ರಾಮೀಣ, ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದ ಎಲ್ಲರನ್ನೊಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ಈಗ ʼರಾಷ್ಟ್ರೀಯ ಮಾನದಂಡʼ ದ ಹೆಸರಿನಲ್ಲಿ ಹಾಳುಗೆಡವಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಲ್ಲರಿಗೂ ಒಂದೇ ಅಳತೆ’ ಎಂಬ ಮಾದರಿ ಅಪಾಯಕಾರಿ

ಯುಜಿಸಿಯಿಂದ ತರಲಾಗಿರುವ ಸುಧಾರಣೆಗಳು, ಶಿಕ್ಷಣದ ಮೇಲಿನ ಕ್ರೇಂದ್ರೀಕೃತ ನಿಯಂತ್ರಣ ಸ್ಥಾಪಿಸುವ ಹಾಗೂ ಜ್ಞಾನ, ಅವಶ್ಯಕತೆ ಹಾಗೂ ಪ್ರತ್ಯೇಕ ರಾಜ್ಯಗಳ ಆಶಯಗಳನ್ನು ಕಡೆಗಣಿಸುವಂತಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಕಾಗದದ ಮೇಲೆ ಎಷ್ಟೇ ಮಹತ್ವಾಕಾಂಕ್ಷಿಯಾಗಿ ತೋರಿದರೂ, ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ‘ಎಲ್ಲರಿಗೂ ಒಂದೇ ಅಳತೆ’ ಎಂಬ ಮಾದರಿ ಅಪಾಯಕಾರಿಯಾಗಿದೆ ಎಂದು ಹೇಳಿದರು.

ಶಿಕ್ಷಣ, ಅಭಿವೃದ್ಧಿ ಮತ್ತು ಯುವ ಜನಾಂಗವನ್ನು ಅವಕಾಶಗಳ ಜಗತ್ತಿಗೆ ಸಂಪರ್ಕಿಸಲು ತಂತ್ರಜ್ಞಾನವನ್ನು ಬಳಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಬಿಜೆಪಿಯ ಅಧಿಕಾರಾವಧಿಯಲ್ಲಿ ಮನಸ್ಸುಗಳನ್ನು ಒಡೆಯಲು, ಸತ್ಯವನ್ನು ತಿರುಚಲು ಹಾಗೂ ಸೌಹಾರ್ದತೆಯನ್ನು ಹಾಳು ಮಾಡಲು ತಂತ್ರಜ್ಞಾನವನ್ನು ಅಸ್ತ್ರವನ್ನಾಗಿಸಿಕೊಳ್ಳಲಾಗಿದೆ ಎಂದು ಸಿಎಂ ಹೇಳಿದರು.

ವೈಚಾರಿಕ ಚಿಂತನೆಯನ್ನು ಪೋಷಿಸುವ ಬದಲಿಗೆ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಆಂದೋಲನವನ್ನೇ ಕೈಗೊಳ್ಳಲಾಗುತ್ತಿದೆ. ವಿಜ್ಞಾನ ಮತ್ತು ಕರುಣೆಯನ್ನು ಹೇಳಿಕೊಡುವ ಬದಲು, ಭಯ ಮತ್ತು ಕ್ರೋಧವನ್ನು ಹುಟ್ಟುಹಾಕಲು ವಿನ್ಯಾಸಗೊಳಿಸಿರುವ ಹಿಂದುತ್ವದ ಪ್ರಸರಣದಿಂದ ಆಲ್ಗೋರಿದಮ್‌ಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ದೂರಿದರು.

ಹಿಂದೂ ಧರ್ಮವು ಸಹಿಷ್ಣುತೆ, ಶಾಂತಿ, ಶೋಧನೆ ಮತ್ತು ಒಳಗೊಳ್ಳುವಿಕೆಯಲ್ಲಿ ನಂಬಿಕೆಯಿರಿಸಿದೆ. ಆದರೆ ನಾವು ಹಿಂದುತ್ವ ಎಂಬ ದ್ವೇಷವನ್ನೇ ಬೋಧಿಸುವ, ಇತರನ್ನು ಹೊರತುಪಡಿಸುವ ಮತ್ತು ಮಹಾನ್ ಧರ್ಮವನ್ನು ಅಧಿಕಾರಕ್ಕಾಗಿ ಬಳಸುವ ಸಾಧನವಾಗಿರುವ ರಾಜಕೀಯ ಸಿದ್ಧಾಂತವನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | DK Shivakumar: ಪಕ್ಷ ಸಂಘಟನೆಗೆ ಒತ್ತು, ಪಕ್ಷದ ಎಲ್ಲಾ ಘಟಕಗಳ ಬಲವರ್ಧನೆ ಬಗ್ಗೆ ಚರ್ಚೆ- ಡಿ.ಕೆ.ಶಿವಕುಮಾರ್

ರಾಷ್ಟ್ರೀಯತೆ ಮತ್ತು ಧರ್ಮದ ಹೆಸರಿನಲ್ಲಿ ಇತಿಹಾಸವನ್ನು ತಿದ್ದಲಾಗುತ್ತಿದ್ದು, ವಾಸ್ತವಾಂಶವನ್ನು ತಿರುಚಲಾಗುತ್ತಿದೆ ಹಾಗೂ ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಇತ್ತೀಚಿನ ವಕ್ಫ್ ಮಂಡಳಿ ವಿವಾದ ಇದಕ್ಕೊಂದು ಉದಾಹರಣೆ. ನೈಜ ಸಂಗತಿಗಳಾದ ಬಡತನ, ನಿರುದ್ಯೋಗ ಮತ್ತು ರೈತರ ಸಂಕಷ್ಟಗಳನ್ನು ಬಗೆಹರಿಸುವ ಬದಲಿಗೆ ಬಿಜೆಪಿ ನಾಯಕರು ಮುಸಲ್ಮಾನರನ್ನು ಗುರಿಯಾಗಿಸಲು, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಲು ಹಾಗೂ ನೆರೆಹೊರೆಗಳನ್ನು ರಣರಂಗವಾಗಿ ಪರಿವರ್ತಿಸಲು ಸುಳ್ಳು ಕಥೆಗಳನ್ನು ಪ್ರಚುರಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.