Pahalgam terror attack: ಪಾಕ್ ಜತೆ ಕ್ರಿಕೆಟ್ ಸಂಬಂಧ ಮುಕ್ತಾಯಕ್ಕೆ ಮಾಜಿ ಕ್ರಿಕೆಟಿಗನ ಆಗ್ರಹ
ಒಲಿಂಪಿಕ್ಸ್ ಬಾಕ್ಸಿಂಗ್ ಪದಕ ವಿಜೇತ ವಿಜೇಂದರ್ ಸಿಂಗ್, ಕ್ರಿಕೆಟಿಗ ಗೌತಮ್ ಗಂಭೀರ್, ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಒಲಿಂಪಿಕ್ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಜಾವೆಲಿನ್ ತಾರೆ ನೀರಜ್ ಚೋಪ್ರಾ, ಭಾರತ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಉಗ್ರರ ಈ ಕೃತ್ಯವನ್ನು ಖಂಡಿಸಿದ್ದಾರೆ.


ನವದೆಹಲಿ: ಪಹಲ್ಗಾಮ್ನಲ್ಲಿ ಉಗ್ರರ ದುಷ್ಕೃತ್ಯವನ್ನು(Pahalgam terror attack) ಕಟುವಾಗಿ ಟೀಕಿಸಿರುವ ಭಾರತದ ಮಾಜಿ ಕ್ರಿಕೆಟಿಗ ಶ್ರೀವತ್ಸ ಗೋಸ್ವಾಮಿ(Shreevats Goswami) ಅವರು ಪಾಕಿಸ್ತಾನದ ಜತೆ ಕ್ರಿಕೆಟ್ ಸಂಬಂಧಗಳನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದ್ದು, ಗಡಿಯಲ್ಲಿ ನಿರಂತರವಾಗಿ ಪ್ರಚೋದನೆ ನೀಡುವ ಮೂಲಕ ವಿಧ್ವಂಸಕ ಕೃತ್ಯ ಎಸಗುವುದನ್ನು ಮತ್ತೆ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜತೆ ಇನ್ನು ಕ್ರಿಕೆಟ್ ಸೇರಿ ಯಾವುದೇ ರೀತಿಯ ಕ್ರೀಡಾ ಸಂಬಂಧಗಳನ್ನು ಇಟ್ಟುಕೊಳ್ಳಬಾರದು ಎಂದು ಗೋಸ್ವಾಮಿ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರವೊಂದನ್ನು ಬರೆದಿರುವ ಶ್ರೀವತ್ಸ ಗೋಸ್ವಾಮಿ, ಪಾಕ್ ಜತೆ ಕ್ರಿಕೆಟ್ ಬೇಡವೇ ಬೇಡ. ಬಿಸಿಸಿಐ ಅಥವಾ ಕೇಂದ್ರ ಸರ್ಕಾರ ಪಾಕಿಸ್ತಾನದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಗೆ ಭಾರತವನ್ನು ಕಳುಹಿಸಲು ನಿರಾಕರಿಸಿದಾಗ, ಕೆಲವರು ಕ್ರೀಡೆಯ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದರು. ಇನ್ನಾದರೂ ಪಾಕ್ ಜತೆಗಿನ ಸಂಪೂರ್ಣ ಕ್ರೀಡಾ ಸಂಬಂಧಗಳನ್ನು ಕೊನೆಗೊಳಿಸಲು ದೃಢ ನಿರ್ಧಾರ ಕೈಗೊಳ್ಳಬೇಕು. ಪದೇಪದೆ ಭಾರತೀಯರ ಹತ್ಯೆಯನ್ನು ಸಹಿಸಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ.
ಒಲಿಂಪಿಕ್ಸ್ ಬಾಕ್ಸಿಂಗ್ ಪದಕ ವಿಜೇತ ವಿಜೇಂದರ್ ಸಿಂಗ್, ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಒಲಿಂಪಿಕ್ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಜಾವೆಲಿನ್ ತಾರೆ ನೀರಜ್ ಚೋಪ್ರಾ, ಭಾರತ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಉಗ್ರರ ಈ ಕೃತ್ಯವನ್ನು ಖಂಡಿಸಿದ್ದಾರೆ.
'ಖಂಡನೆಯಷ್ಟೇ ಸಾಲದು. ನ್ಯಾಯವೂ ದೊರಕಬೇಕು. ಪ್ರಾಣ ಕಳೆದುಕೊಂಡವರಿಗೆ ನಮ್ಮ ಹೃದಯ ಮಿಡಿಯುತ್ತಿದೆ. ಉಗ್ರ ಕೃತ್ಯ ಗೆಲ್ಲಲು ಅವಕಾಶ ನೀಡಬಾರದು' ಎಂದು ಶ್ರೀಜೇಶ್ ಟ್ವೀಟರ್ ಎಕ್ಸ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ Pahalgam terror attack: ಹೈದರಾಬಾದ್-ಮುಂಬೈ ಪಂದ್ಯದ ವೇಳೆ ಹುತಾತ್ಮರಿಗೆ ಗೌರವ ಸಲ್ಲಿಕೆ
ಈ ಭಯೋತ್ಪಾದಕ ಹೀನ ಕೃತ್ಯವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯ ಮತ್ತು ಮೊಹಮ್ಮದ್ ಹಫೀಜ್ ಖಂಡಿಸಿದ್ದಾರೆ. 'ದುಃಖಕರ ಮತ್ತು ಹೃದಯವಿದ್ರಾವಕ' ಎಂದು ಹಫೀಜ್ ಟ್ವೀಟ್ ಮಾಡಿದ್ದಾರೆ.