Saregamapa Manjamma: ಸರಿಗಮಪ ಖ್ಯಾತಿಯ ಗಾಯಕಿ ಮಂಜಮ್ಮ ಇನ್ನಿಲ್ಲ
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋ ಮೂಲಕ ಜನಪ್ರಿಯರಾದ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.


ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋ ಮೂಲಕ ಜನಪ್ರಿಯರಾದ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ (Saregamapa Manjamma). ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿ ಗ್ರಾಮದ ಮಂಜಮ್ಮ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ಅವರನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅಂಧರಾಗಿದ್ದ ಮಂಜಮ್ಮ ಸುಮಧುರ ಧ್ವನಿಯಿಂದಲೇ ಜನಪ್ರಿಯರಾಗಿದ್ದರು.
ಅಂಧ ಸಹೋದರಿಯರಾದ ಮಂಜಮ್ಮ ಮತ್ತು ರತ್ನಮ್ಮ ಝೀ ಕನ್ನಡ ವಾಹಿನಿಯ ಸರಿಗಮಪ ಶೋದಲ್ಲಿ ಪಾಲ್ಗೊಂಡು ಜನ ಮನ್ನಣೆ ಗಳಿಸಿದ್ದರು. ಇದೀಗ ಅನಾರೋಗ್ಯದಿಂದ ಮಂಜಮ್ಮ ಮೃತಪಟ್ಟಿದ್ದಾರೆ.
ಸರಿಗಮಪ ಸೀಸನ್ 17ರಲ್ಲಿ ಭಾಗಿಯಾಗುವ ಮುನ್ನ ಅಂಧ ಗಾಯಕಿ ಸಹೋದರಿಯರಾದ ಮಂಜಮ್ಮ ಮತ್ತು ರತ್ನಮ್ಮ ದೇವಸ್ಥಾನದ ಬಳಿ ಹಾಡುತ್ತಿದ್ದರು. ಇವರ ಕಂಠಕ್ಕೆ ಮನಸೋತು ಝೀ ಕನ್ನಡ ಸರಿಗಮಪ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮಂಜಮ್ಮ ಹಾಗೂ ರತ್ನಮ್ಮ ಇಬ್ಬರೂ ಹುಟ್ಟಿನಿಂದ ಕಣ್ಣಿಲ್ಲದವರು. ಆದರೆ ಇವರು ಮಧುರ ಕಂಠದ ಹಾಡುಗಳ ಮೂಲಕ ಜನ ಮನ ಗೆದ್ದಿದ್ದರು.
ಈ ಸುದ್ದಿಯನ್ನೂ ಓದಿ: Bare Keshava Bhat: ಹಿರಿಯ ಅರ್ಥಧಾರಿ, ಲೇಖಕ ಬರೆ ಕೇಶವ ಭಟ್ಟ ಇನ್ನಿಲ್ಲ
ಹಲವರಿಂದ ಸಹಾಯಹಸ್ತ
ಸರಿಗಮಪ ಸೀಸನ್ 17ರಲ್ಲಿ ಪಾಲ್ಗೊಂಡಿದ್ದ ಈ ಸಹೋದರಿಯರ ಪ್ರತಿಭೆಗೆ ಇಡೀ ಕರುನಾಡೇ ಮನಸೋತಿತ್ತು. ಜತೆಗೆ ಇವರ ಬಡತನಕ್ಕೆ ಮರುಗಿದ್ದ ಹಲವರು ನೆರವು ನೀಡಲು ಮುಂದೆ ಬಂದಿದ್ದರು. ಸರಿಗಮಪ ತೀರ್ಪುಗಾರರಲ್ಲಿ ಒಬ್ಬರಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಅಂಧ ಸಹೋದರಿಯ ಕುಟುಂಬದ ತಿಂಗಳ ರೇಷನ್ ವ್ಯವಸ್ಥೆ ಮಾಡಿದ್ದರು. ಇನ್ನು ಡಾ.ಹಂಸಲೇಖ ಅವರು ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸಲು ಸಜ್ಜಾಗಿದ್ದರು.
4 ವರ್ಷದ ಹಿಂದೆ ಜಗ್ಗೇಶ್ ಅಭಿಮಾನಿಗಳ ಸಂಘ ಹಾಗೂ ಫ್ರೆಂಡ್ಸ್ ಗ್ರೂಪ್ ವತಿಯಿಂದ ಮಂಜಮ್ಮ ಹಾಗೂ ರತ್ನಮ್ಮ ಅವರಿಗೆ ಪರಿಮಳಾ ಜಗ್ಗೇಶ್ ಹೆಸರಿನಲ್ಲಿ ಮನೆ ಕಟ್ಟಿಸಿ ಕೊಟ್ಟಿಸಿಕೊಡಲಾಗಿತ್ತು. ಸ್ವತಃ ಜಗ್ಗೇಶ್ ಕುಟುಂಬ ಸಮೇತ ಬಂದು ಮನೆಯನ್ನು ಹಸ್ತಾಂತರಿಸಿದ್ದರು. ಮನೆಗೆ ಜಗ್ಗೇಶ್-ಪರಿಮಳ ನಿಲಯ ಎಂದು ಹೆಸರಿಡಲಾಗಿದೆ.