Self Harming: ಮಧ್ಯಪ್ರದೇಶದಿಂದ ಕಳವು ಚಿನ್ನ ಜಪ್ತಿ ಮಾಡಿ ತಂದ ಮರುದಿನ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ದಾವಣಗೆರೆ ಪಿಎಸ್ಐ ಆತ್ಮಹತ್ಯೆ
ಕಳವು ಪ್ರಕರಣವೊಂದರಲ್ಲಿ ಚಿನ್ನಾಭರಣವನ್ನು ನ್ಯಾಯಾಲಯದ ಅನುಮತಿ ಪಡೆದು ಮಧ್ಯಪ್ರದೇಶದಿಂದ ಜಪ್ತಿ ಮಾಡಿ ತಂದಿದ್ದ ಬಡಾವಣೆ ಠಾಣೆ ಎಸ್ಐ ಬಿ ಆರ್ ನಾಗರಾಜಪ್ಪ, ಮರುದಿನವೇ ನಾಪತ್ತೆಯಾಗಿದ್ದರು. ವಿಶೇಷ ಕರ್ತವ್ಯ ಮುಗಿಸಿ ಜೂನ್ 30ರಂದು ಬೆಳಗ್ಗೆ 11ಕ್ಕೆ ಮನೆಗೆ ಮರಳಿದ್ದ ನಾಗರಾಜಪ್ಪ, ಜುಲೈ 1ರ ನಸುಕಿನಲ್ಲಿ ಮನೆ ತೊರೆದಿದ್ದರು.

ಪಿಎಸ್ಐ ಬಿಆರ್ ನಾಗರಾಜಪ್ಪ

ದಾವಣಗೆರೆ: ದಾವಣಗೆರೆ (Davanagere) ಪಿಎಸ್ಐ ಬಿಆರ್ ನಾಗರಾಜಪ್ಪ ಎಂಬವರು ತುಮಕೂರಿನ (Tumkur) ಲಾಡ್ಜ್ನಲ್ಲಿ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದಿಂದ ಚಿನ್ನ ಜಪ್ತಿ ಮಾಡಿ ತಂದ ಮರುದಿನವೇ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ ಏಕಾಏಕಿ ಆತ್ಮಹತ್ಯೆಗೆ ನಿರ್ಧರಿಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಕಳವು ಪ್ರಕರಣವೊಂದರಲ್ಲಿ ಚಿನ್ನಾಭರಣವನ್ನು ನ್ಯಾಯಾಲಯದ ಅನುಮತಿ ಪಡೆದು ಮಧ್ಯಪ್ರದೇಶದಿಂದ ಜಪ್ತಿ ಮಾಡಿ ತಂದಿದ್ದ ಬಡಾವಣೆ ಠಾಣೆ ಎಸ್ಐ ಬಿ ಆರ್ ನಾಗರಾಜಪ್ಪ, ಮರುದಿನವೇ ನಾಪತ್ತೆಯಾಗಿದ್ದರು.
ಕಳವು ಪ್ರಕರಣವೊಂದರಲ್ಲಿ ಮಧ್ಯಪ್ರದೇಶದಲ್ಲಿ ಸಿಕ್ಕಿಬಿದ್ದ ಆರೋಪಿಗಳು, ದಾವಣಗೆರೆಯಲ್ಲಿ ಕೃತ್ಯ ಎಸಗಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಬಡಾವಣೆ ಠಾಣೆ ಪೊಲೀಸರು, ಸ್ವತ್ತು ವಶಕ್ಕೆ ಎಸ್ಐ ನಾಗರಾಜಪ್ಪ ನೇತೃತ್ವದಲ್ಲಿ ಮಧ್ಯಪ್ರದೇಶಕ್ಕೆ ತೆರಳಿದ್ದರು. ವಿಶೇಷ ಕರ್ತವ್ಯ ಮುಗಿಸಿ ಜೂನ್ 30ರಂದು ಬೆಳಗ್ಗೆ 11ಕ್ಕೆ ಮನೆಗೆ ಮರಳಿದ್ದ ನಾಗರಾಜಪ್ಪ, ಜುಲೈ 1ರ ನಸುಕಿನಲ್ಲಿ ಮನೆ ತೊರೆದಿದ್ದರು.
'ಜೂನ್ 30ರ ರಾತ್ರಿ ಕೌಟುಂಬಿಕ ವಿಚಾರವಾಗಿ ಪತಿಯೊಂದಿಗೆ ಗಲಾಟೆ ನಡೆಯಿತು. ಇದರಿಂದ ಬೇಸರ ಮಾಡಿಕೊಂಡ ಅವರು ನಸುಕಿನ 2 ಗಂಟೆಯ ಹೊತ್ತಿಗೆ ಮನೆಯಿಂದ ಹೊರಹೋಗಿದ್ದರು. ಮನೆಗೂ ಮರಳದೇ ಕರ್ತವ್ಯಕ್ಕೂ ಹಾಜರಾಗದೇ ಇರುವುದು ಆತಂಕ ಮೂಡಿಸಿದೆ. ಕಾಣೆಯಾಗಿರುವ ಪತಿಯನ್ನು ಹುಡುಕಿಕೊಡಿ' ಎಂದು ಪತ್ನಿ ಕೆ ಇ ಲಲಿತಾ ಕೆಟಿಜೆ ನಗರ ಠಾಣೆಗೆ ಜುಲೈ 2ರಂದು ದೂರು ನೀಡಿದ್ದರು.
ತುಮಕೂರಿನ ಲಾಡ್ಜ್ನಲ್ಲಿ ಬಿ.ಆರ್. ನಾಗರಾಜಪ್ಪ ಅವರ ಶವ ಪತ್ತೆಯಾಗಿದ್ದು, ಕೆಟಿಜೆ ನಗರದ ಪೊಲೀಸ್ ವಸತಿ ಗೃಹದ ಮನೆಯಲ್ಲಿಭಾನುವಾರ ಶೋಕ ಮಡುಗಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆ ಎಸ್ಪಿ ಸೂಚನೆ ಮೇರೆಗೆ ಬಡಾವಣೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಲ್ಲಮ್ಮ ಆರ್.ಚೌಬೆ ನೇತೃತ್ವದ ತಂಡವನ್ನು ತುಮಕೂರಿಗೆ ಕಳುಹಿಸಿಕೊಡಲಾಗಿತ್ತು. ತುಮಕೂರು ಪೊಲೀಸರು ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಭಾನುವಾರ 5.30ರ ಸುಮಾರಿಗೆ ಶವವನ್ನು ದಾವಣಗೆರೆಗೆ ತರಲಾಯಿತು. ಬಳಿಕ ಸಕಲ ಗೌರವಗಳೊಂದಿಗೆ ಶವಸಂಸ್ಕಾರ ನೆರವೇರಿಸಲಾಗಿದೆ.
ಮೂಲತಃ ದಾವಣಗೆರೆ ತಾಲೂಕು ಜವಳಘಟ್ಟ ಗ್ರಾಮದವರಾದ ನಾಗರಾಜಪ್ಪ, ದಾವಣಗೆರೆ ಜಿಲ್ಲಾಪೊಲೀಸ್ ಇಲಾಖೆಯಲ್ಲಿ31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಶಿಸ್ತಿನ ಕರ್ತವ್ಯ ನಿರ್ವಹಣೆಗೆ ಹೆಸರಾಗಿದ್ದ ಅವರು, ಕಳೆದ ಒಂದೂವರೆ ವರ್ಷದಿಂದ ಬಡಾವಣೆ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ: Heart Attack: ನಿಲ್ಲದ ಹೃದಯಾಘಾತ ಸಾವಿನ ಸರಣಿ, ನಿನ್ನೆ ಒಂದೇ ದಿನ 8 ಮಂದಿ ಸಾವು