DK Suresh: ಬಮುಲ್ ರೈತರ ಸಂಸ್ಥೆ, ಇದನ್ನು ಬೆಳೆಸುವುದು ನಮ್ಮ ಕರ್ತವ್ಯ: ಡಿ.ಕೆ. ಸುರೇಶ್
DK Suresh: ನನಗೆ ಡೈರಿಯ ಸಂಬಳ, ಡೈರಿಯ ಅನುಕೂಲಗಳು ಬೇಡ. ನಾನು ಇರುವ ತನಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನನ್ನ ಮನವಿ ಎಂದರೆ ನಂದಿನಿ ಉಳಿಸಿ, ಬೆಳೆಸಿ, ಉತ್ಪನ್ನಗಳನ್ನು ಬಳಸಿ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.


ಮಾಗಡಿ, ಜು.13: "ಬಮುಲ್ ರೈತರ ಸಂಸ್ಥೆ ಇದನ್ನು ಬೆಳೆಸುವುದು ನಮ್ಮ ಕರ್ತವ್ಯ. ಈ ಕೆಲಸವನ್ನು ನಾನು ಮಾಡುತ್ತೇನೆ. ಇದಕ್ಕೆ ಎಲ್ಲಾ ನಾಯಕರ ಬೆಂಬಲ ಬೇಕು. ಎಲ್ಲರ ಜೊತೆಯೂ ನಾನು ಚರ್ಚೆ ನಡೆಸುತ್ತೇನೆ" ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ (DK Suresh) ತಿಳಿಸಿದರು. ಮಾಗಡಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸುರೇಶ್ ಅವರು ಭಾನುವಾರ ಮಾತನಾಡಿದರು.
"ನನಗೆ ಡೈರಿಯ ಸಂಬಳ, ಡೈರಿಯ ಅನುಕೂಲಗಳು ಬೇಡ. ನಾನು ಇರುವ ತನಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನನ್ನ ಮನವಿ ಎಂದರೆ ನಂದಿನಿ ಉಳಿಸಿ, ಬೆಳೆಸಿ, ಉತ್ಪನ್ನಗಳನ್ನು ಬಳಸಿ" ಎಂದರು.
"ನಂದಿನಿ ಉತ್ಪನ್ನಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಪನ್ನೀರಿನ ಬೇಡಿಕೆಗೆ ಶೇ 5 ರಷ್ಟು ಮಾತ್ರ ನಾವು ಪೂರೈಕೆ ಮಾಡುತ್ತಿದ್ದೇವೆ. ಇದನ್ನು ಹೆಚ್ಚು ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಜನರೇ ನಂದಿನಿ ಉತ್ಪನ್ನಗಳನ್ನು ಹೆಚ್ಚು ಬಳಸುವ ಮೂಲಕ ಮಾರುಕಟ್ಟೆ ಹೆಚ್ಚು ಮಾಡಿಕೊಡಬೇಕು" ಎಂದು ಹೇಳಿದರು.
"ಹೊಸಕೋಟೆಯಲ್ಲಿ 22 ಎಕರೆ ಜಮೀನು, ದೊಡ್ಡಬಳ್ಳಾಪುರದಲ್ಲಿಯೂ 8 ಎಕರೆ ಜಮೀನಿದೆ ಅಲ್ಲಿಯೂ ಹಾಲು ಸಂಸ್ಕರಣ ಕೇಂದ್ರ ತೆರೆಯಬೇಕು ಎಂಬುದು ಅಲ್ಲಿನವರ ಬೇಡಿಕೆ. ಮಾಗಡಿ ತಾಲ್ಲೂಕಿನ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ಕಾವೇರಿ, ಹೇಮಾವತಿ, ಎತ್ತಿನಹೊಳೆಯಿಂದಲೂ ನೀರು ಬರುವ ಸಂಭವವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು" ಎಂದರು.
ಸಮಸ್ಯೆ ಬಗೆಹರಿಸಲು ನಾನು ಕೆಟ್ಟವನಾಗಲೇ ಬೇಕು
"ನಾವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತಮ ಕೆಲಸ ಮಾಡಿದಾಗ ಮಾತ್ರ ಈ ಅಭಿನಂದನೆಗೆ ನಾವು ಅರ್ಹ ಎಂದು ಸಾಬೀತಾಗುತ್ತದೆ. ನನಗೆ ಹಾಲು ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಅನುಭವವಿಲ್ಲ. ಈ ಕ್ಷೇತ್ರದ ಪ್ರಕ್ರಿಯೆ, ಅದರ ಆಡಳಿತ ಬಗ್ಗೆ ನಾನು ಈಗಷ್ಟೇ ಪ್ರಾಮಾಣಿಕವಾಗಿ ಕಲಿಯುತ್ತಿದ್ದೇನೆ. ನಾನು ಕೆಟ್ಟವನಾಗಬೇಕಾ, ಒಳ್ಳೆಯವನಾಗಬೇಕಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಕೆಟ್ಟವನಾಗದೆ ನನಗೆ ಬೇರೆ ವಿಧಿ ಇಲ್ಲ" ಎಂದರು.
"ಅಧಿಕಾರಿಗಳು, ನಿರ್ದೇಶಕರ ಜತೆ ಪ್ರತ್ಯೇಕವಾಗಿ ಅನೇಕ ಸಭೆ ಮಾಡಿದ್ದೇನೆ. ರೈತರನ್ನು ಉದ್ಧಾರ ಮಾಡಿ, ಸಂಸ್ಥೆ ಉಳಿಸಲು ನೀವು ಏನೇ ನಿರ್ಧಾರ ಕೈಗೊಂಡರೂ ನಾವು ಬದ್ಧ ಎಂದು ಹೇಳಿದ್ದಾರೆ. ಇದು ನನ್ನ ಸಂಸ್ಥೆ, ನಿರ್ದೇಶಕರ ಸಂಸ್ಥೆ, ಸರ್ಕಾರಿ ಸಂಸ್ಥೆ ಅಲ್ಲ. ಇದು ರೈತರ ಬೆವರಿನಿಂದ ಕಟ್ಟಿರುವ ಸಂಸ್ಥೆ. ಹಾಲು ಸಂಗ್ರಹಿಸುವವರ ಸಂಸ್ಥೆ, ಹಾಲು ಮಾರುವವರ ಸಂಸ್ಥೆ. ಈ ಪ್ರತಿ ವಿಭಾಗದಲ್ಲೂ ಸಮಸ್ಯೆಗಳಿದ್ದು, ಎಲ್ಲವನ್ನು ಬಗೆಹರಿಸಬೇಕು. ರೈತರು, ಮಾರಾಟಗಾರರು, ಗ್ರಾಹಕರು ಎಲ್ಲರೂ ಚೆನ್ನಾಗಿರಬೇಕು" ಎಂದು ಹೇಳಿದರು.
"ಇಲ್ಲಿ ಕೆಲವರು ₹5 ಪ್ರೋತ್ಸಾಹ ಧನ ನೀಡಬೇಕು ಎಂದು ಹೇಳಿದರು, ಮೇವು ಪೂರೈಕೆದಾರರು ತಮ್ಮದೇ ಸಮಸ್ಯೆ ಹೇಳಿಕೊಂಡರು. ಇದನ್ನು ಖಾಸಗಿ ಅವರಿಗೆ ಕೊಟ್ಟಿರುವ ಕಾರಣ ಅವರು ಲಾಭ ನೋಡುತ್ತಿದ್ದಾರೆ. ನಾವು ಕನಕಪುರದಲ್ಲಿ ಸ್ಥಾಪಿಸಿರುವ ಹಾಲು ಕೇಂದ್ರ ಇಡೀ ಏಷ್ಯಾದಲ್ಲೇ ಅತ್ಯುತ್ತಮ ಘಟಕ. ನಾವು ಹೊಸ ಮಾರುಕಟ್ಟೆ ಹುಡುಕಬೇಕು. ಅದಕ್ಕೆ ಗುಣಮಟ್ಟದ ಅವಶ್ಯಕತೆ ಇದೆ. ಹಾಲು ಹಾಕುವವರಿಂದ ಕೊನೆಯದಾಗಿ ಮಾರುವವನವರೆಗೆ ಎಲ್ಲರೂ ಗುಣಮಟ್ಟ ನೋಡುತ್ತಾರೆ" ಎಂದು ಹೇಳಿದರು.
"ಖಾಸಗಿ ಹಾಲು ಸಂಸ್ಥೆಗಳು ರೈತರಿಂದ ಸಂಗ್ರಹಿಸುತ್ತಿರುವ ಹಾಲಿನಲ್ಲಿ ಕೊಬ್ಬಿನಾಂಶದ ಗುಣಮಟ್ಟ ಶೇ.4.5ರಷ್ಟಿದೆ. ನಾವು ಸಂಗ್ರಹಿಸುತ್ತಿರುವ ಹಾಲಿನ ಕೊಬ್ಬಿನಾಂಶದ ಗುಣಮಟ್ಟ ಶೇ.4.1ರಷ್ಟಿದೆ. ಇದನ್ನು ಸರಿಪಡಿಸಲು ನಾನು 1 ತಿಂಗಳು ಸಮಯಾವಕಾಶ ನೀಡಿದ್ದೇನೆ. ಇದಕ್ಕೆ ಸಹಕಾರ ನೀಡುವುದಾಗಿ ಎಲ್ಲರೂ ಹೇಳಿದ್ದಾರೆ. ವ್ಯವಸ್ಥೆಗೆ ತಕ್ಕ ಹಾಲಿನ ಉತ್ಪಾದನೆ ಇಲ್ಲ. ನಮ್ಮಲ್ಲಿ 25 ಲಕ್ಷ ಲೀಟರ್ ಹಾಲು ಪರಿಷ್ಕರಣೆ ಸಾಮರ್ಥ್ಯ ಹೊಂದಿದ್ದು, ನಾವು ಮಾಡುತ್ತಿರುವುದು ಸರಾಸರಿ 15 ಲಕ್ಷ ಲೀಟರ್ ಮಾತ್ರ. ಇನ್ನು 10 ಲಕ್ಷ ಲೀಟರ್ ಹಾಲು ಪರಿಷ್ಕರಿಸುವ ಸಾಮರ್ಥ್ಯ ನಮ್ಮಲ್ಲಿದೆ. ಮುಂದಿನ ಒಂದು ವರ್ಷದಲ್ಲಿ ಬಮೂಲ್ ಸಂಸ್ಥೆಯಲ್ಲಿ 25 ಲಕ್ಷ ಹಾಲು ಉತ್ಪಾದನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಗುರಿ ನೀಡಿದ್ದೇನೆ" ಎಂದು ತಿಳಿಸಿದರು.
"ಕಳೆದ ಎರಡು ತಿಂಗಳಿಂದ ಸಂಸ್ಥೆ ನಷ್ಟ ಅನುಭವಿಸಿದೆ. ರೈತರ ಮೇಲೆ ಹೊರೆ ಹಾಕಿ ಈ ನಷ್ಟ ಭರಿಸಲು ನನಗೆ ಇಷ್ಟವಿಲ್ಲ. ಹಾಲು ಉತ್ಪಾದನೆ ಜಾಸ್ತಿ ಮಾಡಿ 2 ರೂ. ಕಡಿಮೆ ಮಾಡಿ ಲಾಭಾಂಶ ತೋರಿಸಬಹುದು. ಆದರೆ ಅದು ಸರಿಯಲ್ಲ. ಈಗಿರುವ ವ್ಯವಸ್ಥೆ ಸರಿಪಡಿಸಿ, ಹಸುಗಳು ಹೆಣ್ಣು ಕರುಗಳನ್ನು ಹಾಕಬೇಕು. ನಾವು ಅವುಗಳ ಬಗ್ಗೆ ಗಮನ ಹರಿಸಿಡಿದ್ದೇವೆ. ಹೆಚ್ಚು ಪಶು ವೈದ್ಯರು, ನಾಯಿ ಬೆಕ್ಕು ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಡೈರಿ ಹಾಗೂ ಸರ್ಕಾರದಲ್ಲೂ ಪಶು ವೈದ್ಯರಿಲ್ಲ. ಇರುವವರು ವೈದ್ಯ ಕೆಲಸ ಬಿಟ್ಟು ಆಡಳಿತ ಮಂಡಳಿ ಸೇರಿದ್ದಾರೆ" ಎಂದರು.
"ಇದೆಲ್ಲದಕ್ಕೂ ಪರಿಹಾರ ಹುಡುಕಬೇಕಾದರೆ ನಾನು ಕೆಟ್ಟವನಾಗಲೇ ಬೇಕು. ನಾನು ನಿಮ್ಮ ಮೇಲೆ ಹೊರೆ ಹಾಕಲು ಇಷ್ಟವಿಲ್ಲ. ನಾನು ಅಧ್ಯಕ್ಷನಾದ ಮೂರೇ ದಿನಕ್ಕೆ ಎಂ.ಡಿ ಅವರು ಕರೆ ಮಾಡಿ ಮೇವಿನ ಬೆಲೆ ₹500 ಜಾಸ್ತಿ ಮಾಡಿದ್ದೇವೆ ಎಂದು ಹೇಳಿದರು. ನಾನು ಅದನ್ನು ತಡೆದು, ಮರು ದಿನ ಸಭೆ ನಡೆಸಿ ಹೊಸ ಆಡಳಿತ ಮಂಡಳಿ ಬರುವವರೆಗೂ ಇದನ್ನು ತಡೆಹಿಡಿಯುವಂತೆ ಮಾಡಿದ್ದೇನೆ" ಎಂದರು.
ಹಾಲು ಉತ್ಪಾದಕರ ಉತ್ತೇಜನಕ್ಕೆ 2 ಲಕ್ಷ ವರೆಗೂ ಸಾಲ
"ನಮ್ಮ ಒಕ್ಕೂಟದಲ್ಲಿ 1.28 ಲಕ್ಷ ರೈತರು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಮಾಗಡಿಯಲ್ಲಿ 12 ಸಾವಿರ ರೈತರು ಹಾಲು ಉತ್ಪಾದನೆ ಮಾಡುತ್ತಿದ್ದು, ನೀವು ಹೆಚ್ಚು ಹಸುಗಳನ್ನು ಕಟ್ಟಿ ನಮಗೆ ಸಹಕಾರ ನೀಡಬೇಕು. ನಿಮಗೆ ಅಗತ್ಯವಿರುವ ಆರ್ಥಿಕ ನೆರವಿಗಾಗಿ 3% ಬಡ್ಡಿದರದಲ್ಲಿ 2 ಹಸು ಖರೀದಿ ಮಾಡಲು 2 ಲಕ್ಷವರೆಗೂ ಸಾಲ ನೀಡಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಾಲು ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ, ರೈತರ ಹಾಲಿನ ಗುಣಮಟ್ಟ ಎಷ್ಟಿದೆ ಎಂದು ಸ್ಥಳದಲ್ಲೇ ತಿಳಿಸಲು ಅಗತ್ಯ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಇದರ ಮಾಹಿತಿಯನ್ನು ಪ್ರತಿ ನಿತ್ಯ ನಿಮಗೆ ನೀಡಲಾಗುವುದು" ಎಂದು ತಿಳಿಸಿದರು.
ನಮ್ಮಲ್ಲೇ ಮಾರುಕಟ್ಟೆ ವಿಸ್ತರಣೆಗೆ ಅವಕಾಶವಿದೆ:
"ಹಾಲು ಮಾರುಕಟ್ಟೆ ಸರಿಪಡಿಸಲು ಚರ್ಚೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ 2995 ಹಾಲು ಸಹಕಾರಿ ಸಂಘಗಳಿವೆ. ಈ ಸಂಘಗಳ ಕಾರ್ಯದರ್ಶಿಗಳು ತಮ್ಮ ಊರಿನಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ನಂದಿನಿ ಹಾಲು ಬಳಸುವ ಕಾರ್ಯಕ್ರಮ ರೂಪಿಸಿದರೆ. ನಾವು ನಮ್ಮ ಹಾಲನ್ನು ಹೊರ ರಾಜ್ಯದಲ್ಲಿ ಹಾಲನ್ನು ಮಾರುವ ಅಗತ್ಯವಿಲ್ಲ. ನಮ್ಮಲ್ಲೇ ಮಾರುಕಟ್ಟೆ ಕಂಡುಕೊಳ್ಳಬಹುದು" ಎಂದರು.
ಒಟ್ಟಾಗಿ ಹೋರಾಟ ಮಾಡಬೇಕು:
"ಶ್ರೀರಂಗ ನೀರಾವರಿ ಯೋಜನೆ ಬಗ್ಗೆ ತುಮಕೂರಿನವರು ಕೇವಲವಾಗಿ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ಎಲ್ಲರು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ನೀವು ಕಾವೇರಿ ಜಲಾನಯನ ಪ್ರದೇಶದ ಒಳಗೆ ಬರುವವರು. ನೀವು ತಮಿಳುನಾಡಿಗೆ ಸೇರಿದವರಲ್ಲ. ನೀವು ವ್ಯವಸಾಯಕ್ಕೆ ನೀರು ಕೇಳುತ್ತಿಲ್ಲ. ಕುಡಿಯುವುದಕ್ಕೆ ಕೇಳುತ್ತಿರುವುದು" ಎಂದು ಹೇಳಿದರು.
"ಲಿಂಕ್ಕೆನಾಲ್ ಮಾಡಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಸರ್ಕಾರ ಬದ್ದವಾಗಿದೆ. ಕುಣಿಗಲ್ ಗೆ 2.5 ಟಿಎಂಸಿ ನೀರು ನಿಗದಿಯಾಗಿದೆ. ಆದರೆ 25 ವರ್ಷಗಳಿಂದ ನೀರೇ ಬಂದಿಲ್ಲ. ನಾನು ಸಂಸದನಾಗಿದ್ದಾಗ ಇದಕ್ಕೆ ಒಪ್ಪಿಗೆ ಕೊಡಿಸಿದೆ. ಆದರೆ ರಾಜಕೀಯ ಕಾರಣಗಳಿಂದ ನೀರು ಹರಿಸುತ್ತಿಲ್ಲ. ಲಿಂಕ್ ಕೆನಾಲ್ ಮಾಡುವುದಕ್ಕೂ ಬಿಡುತ್ತಿಲ್ಲ. ನಾವು ಮಾಗಡಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಬದ್ದವಾಗಿದ್ದೇವೆ. ಇಲ್ಲಿನ ರೈತರಿಗೆ ನಿಮ್ಮ ನೀರನ್ನು ಕೇಳಲು ಹಕ್ಕಿದೆ. ತುಮಕೂರು ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಬದ್ದವಾಗಿದೆ" ಎಂದು ಸ್ಪಷ್ಟಪಡಿಸಿದರು.
ನನಗೆ ಅಧಿಕಾರ ಇಲ್ಲದಿದ್ದರೂ ನಿಮ್ಮ ಕೆಲಸ ಮಾಡುವೆ
"ಜನ ನನಗೆ ವಿಶ್ರಾಂತಿ ನೀಡಿದ್ದು, ನನಗೆ ಯಾವುದೇ ಒತ್ತಡವಿಲ್ಲ. ನನಗೆ ಅಧಿಕಾರ ಇಲ್ಲದಿದ್ದರೂ ನಿಮ್ಮ ಪರವಾಗಿ ಕೆಲಸ ಮಾಡುತ್ತೇನೆ. 2028ರಲ್ಲಿ ನಿಮ್ಮನ್ನು ಮತ್ತೆ ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ನಾನು ಮಾಡುತ್ತೇನೆ.ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮದೇ ಸರ್ಕಾರ ಇದೆ. ನಾನು ಹಾಗೂ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡುವ ಮಾತು ಕೊಟ್ಟಿದ್ದೇವೆ. ನಾವು ಅದನ್ನು ಮಾಡುತ್ತೇವೆ" ಎಂದರು.
"ಇದು ಕೂಡ ಬೆಂಗಳೂರು ಜಿಲ್ಲೆ. ಇದು ಈಗ ಬೆಂಗಳೂರು ಆಗಿದ್ದಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದು ಬೆಂಗಳೂರು. ಈ ಹೆಸರು ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಬಿಜೆಪಿ, ಜೆಡಿಎಸ್ ನಾಯಕರು ಟೀಕೆ ಮಾಡಿದರು. ಈ ಹೆಸರು ಬದಲಾವಣೆಯಿಂದ ಅಭಿವೃದ್ಧಿ ಖಂಡಿತಾ ಆಗುತ್ತದೆ. ಇದರಿಂದ ನಮ್ಮ ಗುರುತು ಮತ್ತಷ್ಟು ಬಲಿಷ್ಠವಾಗುತ್ತದೆ" ಎಂದರು.
ಈ ಸುದ್ದಿಯನ್ನೂ | Sigandur Bridge: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಿ; ಕೇಂದ್ರ ಸಚಿವ ಗಡ್ಕರಿಗೆ ಸಿಎಂ ಪತ್ರ
"ಎರಡನೇ ವಿಮಾನ ನಿಲ್ದಾಣ ಎಲ್ಲಿ ಬರುತ್ತದೆಯೋ ಗೊತ್ತಿಲ್ಲ. ಒಟ್ಟು ಮಾಗಡಿ ಸುತ್ತಮುತ್ತಲೇ ಬರುತ್ತದೆ. ಬೆಂಗಳೂರು ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶದ ಜನರ ರೈತರ ಮಕ್ಕಳು ರೈತರಾಗಿ ಇರಲು ಒಪ್ಪುತ್ತಿಲ್ಲ. ಈ ಚಿಂತನೆಯೇ ನಮ್ಮಲ್ಲಿದೆ. ನಿಮ್ಮ ಮನೆಗೆ ಸೊಸೆ ಬಂದು ಸಗಣಿ ಎತ್ತು ಎಂದರೆ ಎತ್ತುತ್ತಾರೆಯೇ? ನಿಮ್ಮ ಮಕ್ಕಳು ಎತ್ತುತ್ತಾರೆಯೇ? ಇದಕ್ಕೆ ಏನು ಮಾಡಬೇಕು ಎಂಬುದೇ ನನ್ನ ಚಿಂತೆಯಾಗಿದೆ" ಎಂದು ತಿಳಿಸಿದರು.