ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Siddaganga Shri Award: ಡಾ. ಗೊ.ರು. ಚನ್ನಬಸಪ್ಪಗೆ ಸಿದ್ಧಗಂಗಾಶ್ರೀ ಪ್ರಶಸ್ತಿ

Siddaganga Shri Award: ಶ್ರೀ ಸಿದ್ಧಗಂಗಾ ಮಠದಲ್ಲಿ ಜ.21 ರಂದು ಆಯೋಜಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುತ್ತದೆ.

Siddaganga Shri Award: ಡಾ. ಗೊ.ರು. ಚನ್ನಬಸಪ್ಪಗೆ ಸಿದ್ಧಗಂಗಾಶ್ರೀ ಪ್ರಶಸ್ತಿ

Profile Prabhakara R Jan 1, 2025 7:28 PM
ತುಮಕೂರು: ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ 2024ನೇ ಸಾಲಿನ ಸಿದ್ದಗಂಗಾಶ್ರೀ‌ ಪ್ರಶಸ್ತಿಗೆ ನಾಡಿನ ಹಿರಿಯ ಜಾನಪದ ಮತ್ತು ಶರಣ ಸಾಹಿತ್ಯ ವಿದ್ವಾಂಸ ಡಾ. ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀ ಸಿದ್ಧಗಂಗಾ ಮಠದಲ್ಲಿ ಜ.21 ರಂದು ಆಯೋಜಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1 ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಕೆ.ಎಚ್.ಶಿವರುದ್ರಯ್ಯ ತಿಳಿಸಿದ್ದಾರೆ.
ಗೊ.ರು. ಚನ್ನಬಸಪ್ಪ ಅವರ ಪರಿಚಯ
ಜಾನಪದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿಯಲ್ಲಿ 1930ರ ಮೇ 18ರಂದು ರುದ್ರಪ್ಪಗೌಡ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಗ್ರಾಮೀಣ ಬದುದು ಮತ್ತು ಜಾನಪದ ಕ್ಷೇತ್ರವು ಅವರ ಆಸಕ್ತಿ ಕ್ಷೇತ್ರವಾಗಿದ್ದು, 1967ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಕೃತಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥದ ಸಂಪಾದಕರಾಗಿದ್ದಾರೆ. ಕೆ.ಆರ್. ಲಿಂಗಪ್ಪ ಅಭಿನಂದನಾ ಸಮಿತಿ ಪ್ರಕಟಿಸಿದ ‘ಗ್ರಾಮಜ್ಯೋತಿ’ ಇವೆರಡೂ ಕೃತಿಗಳೂ ಗೊ. ರು. ಚನ್ನಬಸಪ್ಪಅವರು ಸಂಪಾದಿಸಿ ವಿಶಿಷ್ಟ ಆಕರಗ್ರಂಥಗಳಾಗಿವೆ. ಜಾನಪದ ವಸ್ತುವನ್ನಾಧರಿಸಿ ಬರೆದ ’ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೋ’ ರಂಗಭೂಮಿಯ ಮೇಲೆ ಅಪೂರ್ವ ಯಶಸ್ಸು ಕಂಡ ನಾಟಕಗಳಾಗಿವೆ.
’ವಿಭೂತಿ, ದಾಸೋಹ, ಸೇವಾ ಸಂಪದ’ ಮೊದಲಾದ ವಿಶಿಷ್ಟ ಕೃತಿರಚನೆ ಮಾಡಿದ್ದು, ವಾರ್ತಾ ಇಲಾಖೆಯ ‘ಪಂಚಾಯತ್ ರಾಜ್ಯ’, ‘ಜನಪದ’ ಮಾಸಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಪರಿಷತ್ ಪತ್ರಿಕೆ, ಜಾನಪದ ಜಗತ್ತು ಪತ್ರಿಕೆಗಳ ಸಂಪಾದಕರ ಜವಾಬ್ದಾರಿ ಜತೆಗೆ ಚಿತ್ರರಂಗದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ವಜ್ರಮಹೋತ್ಸವ, ಕರ್ನಾಟಕ ಜಾನಪದ ಕಲೆ, ಕನ್ನಡ ಪತ್ರಿಕೋದ್ಯಮ, ಸುತ್ತೂರ ಸಿರಿ, ಮೊದಲಾದ 40ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡಿನಾದ್ಯಂತ ಪ್ರವಾಸ ಮಾಡಿ, ಸಾಹಿತ್ಯಾಭಿಮಾನಿಗಳಿಂದ ಏಳೆಂಟು ಲಕ್ಷರೂ ಸಂಗ್ರಹಣೆ ಮಾಡಿದ್ದಾರೆ. ಪರಿಷತ್ತಿನ ಸಿಬ್ಬಂದಿಯನ್ನು ಅನುದಾನದ ವ್ಯಾಪ್ತಿಗೆ ತಂದ ಕೀರ್ತಿ ಸಾಂಸ್ಕೃತಿಕ ಕಾರ್ಯಕ್ರಮ ಗೀತ-ಸಂಗೀತ, ಕಾವ್ಯ-ಕಾವೇರಿ ಪ್ರಾರಂಭಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರ ಸಾಧನೆಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳು ಸಂದಿವೆ. ಇವರು 2024ರ ಡಿಸೆಂಬರ್ 20, 21 ಮತ್ತು 22ರವರೆಗೆ ಮಂಡ್ಯದಲ್ಲಿ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Journalism Awards: ಅಭಿವೃದ್ಧಿ-ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ; ವಿಜಯಲಕ್ಷ್ಮಿ ಶಿಬರೂರು, ಗಿರೀಶ್ ಲಿಂಗಣ್ಣ ಸೇರಿ ಹಲವರು ಆಯ್ಕೆ