RCB vs KKR: ನಾಳೆ ಐಪಿಎಲ್ ಪಂದ್ಯ; ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
IPL 2025: ಪಂದ್ಯವನ್ನು ನೋಡಲು ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವಿಶೇಷ ಬಸ್ ಸೇವೆ ಒದಗಿಸಿದೆ. ಜತೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಕೂಡ ಎಲ್ಲ ನಾಲ್ಕು ಮೆಟ್ರೊ ಟರ್ಮಿನಲ್ಗಳಿಂದ ಕೊನೆಯ ಮೆಟ್ರೊ ರೈಲು ಸೇವೆಯನ್ನು ರಾತ್ರಿ 12.30ರವರೆಗೆ ವಿಸ್ತರಿಸಿದೆ.


ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ(Chinnaswamy stadium)ದಲ್ಲಿ ಮೇ 17ರಂದು ಐಪಿಎಲ್(IPL 2025)ನ ಆರ್ಸಿಬಿ ಮತ್ತು ಕೆಕೆಆರ್(RCB vs KKR) ಕ್ರಿಕೆಟ್ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ-ಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ವಾಹನ ಸಂಚಾರ(Traffic advisory) ಮತ್ತು ನಿಲುಗಡೆ ನಿರ್ಬಂಧಿಸಲಾಗಿದೆ. ಶನಿವಾರ ಕ್ರೀಡಾಂಗಣದ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಲಿದ್ದು, ಸುಗಮ ಸಂಚಾರಕ್ಕಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕ್ರೀಡಾಂಗಣದ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳದ ಕೊರತೆ ಇರುವುದರಿಂದ ಸಾರ್ವಜನಿಕರು ಬಿಎಂಟಿಸಿ, ಮೆಟ್ರೊ ರೈಲಿನಲ್ಲಿ ಪಂದ್ಯ ವೀಕ್ಷಣೆಗೆ ಬರಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಓಲಾ, ಊಬರ್, ಆಟೊ, ಕ್ಯಾಬ್ಗಳ ಪಿಕ್ಆಪ್ ಮತ್ತು ಡ್ರಾಪ್ಗೆ ಸ್ಥಳ ನಿಗದಿಪಡಿಸಲಾಗಿದೆ.
ಶನಿವಾರ ಬಹುತೇಕ ಎಂಎನ್ಸಿ ಕಂಪನಿಗಿಗೆ ರಜೆ ಇರುವ ಕಾರಣ ಪಂದ್ಯಕ್ಕೆ ಭಾರೀ ಸಂಖ್ಯೆಯ ಪ್ರೇಕ್ಷಕರು ಬರುವ ನಿರೀಕ್ಷೆ ಇದ್ದು ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ-ಮುತ್ತಲಿನ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರು ಇದನ್ನು ಗಮನಿಸಬಹುದು. ವಿಶೇಷ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿ ವಾಹನಗಳನ್ನು ಕಬ್ಬನ್ ಪಾರ್ಕ್ ಒಳಭಾಗದ ಕೆ.ಜಿ.ಐ.ಡಿ ಬಿಲ್ಡಿಂಗ್ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಈ ರಸ್ತೆಯಲ್ಲಿ ನಿರ್ಬಂಧ
ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ವಿಧಾನಸೌಧ–ಹೈಕೋರ್ಟ್ ಎದುರಿನ ರಸ್ತೆ, ಟ್ರಿನಿಟಿ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ನೃಪತುಂಗ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ಸೇರಿದ ಕುಸಲ್ ಮೆಂಡಿಸ್
ನಿಲುಗಡೆಗೆ ಇಲ್ಲಿ ಅವಕಾಶ
ಸೇಂಟ್ ಜೋಸೆಫ್ ಇಂಡಿಯಾ ಸ್ಕೂಲ್ ಮೈದಾನ, ಯು.ಬಿ ಸಿಟಿ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಜಾಗ ಹಾಗೂ ಕಿಂಗ್ಸ್ ರಸ್ತೆಯಲ್ಲಿ ನಿಲ್ಲಿಸಬಹುದು.
ವಿಶೇಷ ಬಸ್ ವ್ಯವಸ್ಥೆ
ಪಂದ್ಯವನ್ನು ನೋಡಲು ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವಿಶೇಷ ಬಸ್ ಸೇವೆ ಒದಗಿಸಿದೆ. ಜತೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಕೂಡ ಎಲ್ಲ ನಾಲ್ಕು ಮೆಟ್ರೊ ಟರ್ಮಿನಲ್ಗಳಿಂದ ಕೊನೆಯ ಮೆಟ್ರೊ ರೈಲು ಸೇವೆಯನ್ನು ರಾತ್ರಿ 12.30ರವರೆಗೆ ವಿಸ್ತರಿಸಿದೆ.
ಬಿಎಂಟಿಸಿ ಬಸ್ಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (ಎಚ್ಎಎಲ್), ಸರ್ಜಾಪುರ (ಜಿ2) ಎಲೆಕ್ಟ್ರಾನಿಕ್ ಸಿಟಿ (ಜಿ3)(ಹೊಸೂರು ರಸ್ತೆ) ಬನ್ನೇರುಘಟ್ಟ ಮೃಗಾಲಯ (ಜಿ4), ಜನಪ್ರಿಯಟೌನ್ ಷಿಪ್ (ಜಿ7)(ಮಾಗಡಿರಸ್ತೆ), ಆರ್.ಕೆ.ಹೆಗಡೆ ನಗರ ಯಲಹಂಕ (ಜಿ10) (ನಾಗವಾರ ಟ್ಯಾನರಿ ರಸ್ತೆ) ಹೊಸಕೋಟೆ, ಬನಶಂಕರಿ (317 ಜಿ)(13) ಮಾರ್ಗಗಳಲ್ಲಿ ಪ್ರಯಾಣಿಬಹುದಾಗಿದೆ.