ವೈದ್ಯ ವಿದ್ಯಾರ್ಥಿಗಳಿಲ್ಲದೆ ಹಿರಿಯ ವೈದ್ಯರಿಗೆ ಒತ್ತಡ
ಚಿಕಿತ್ಸೆ ಸಿಗದೆ ಬಡರೋಗಿಗಳು ಪರದಾಟ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ನೀಟ್ ಸೀಟುಗಳ ಹಂಚಿಕೆ ವಿಳಂಬದಿಂದಾಗಿ ರಾಜ್ಯದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಮೇಲ್ನೋಟಕ್ಕೆ ನೀಟ್ ಫಲಿತಾಂಶದ ನಂತರ ವೈದ್ಯಕೀಯ ಸೀಟುಗಳ ಹಂಚಿಕೆಗೂ, ಆಸ್ಪತ್ರೆಗಳ ಚಿಕಿತ್ಸಾ ಸೌಲಭ್ಯಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ವಾಸ್ತವದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅದರಲ್ಲೂ ವೈದ್ಯಕೀಯ ಕಾಲೇಜುಗಳಲ್ಲಿ ಬರುವ ಆಸ್ಪತ್ರೆ ಗಳು ನೀಟ್ ನಂತರ ಸಿಗುವ ವೈದ್ಯಕೀಯ ಸೀಟುಗಳ ಮೇಲೆ ಅವಲಂಬನೆಯಾಗಿರುತ್ತದೆ.
ಕಳೆದ ನಾಲ್ಕು ತಿಂಗಳಿನಿಂದ ನೀಟ್ ಸೀಟು ಹಂಚಿಕೆ ಆಗದ ಕಾರಣ ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಗೆ ಬರುವ ಆಸ್ಪತ್ರೆಗಳು ವೈದ್ಯ ವಿದ್ಯಾರ್ಥಿಗಳಿಲ್ಲದೆ ತತ್ತರಿಸಿ ಹೋಗಿವೆ. ಅಷ್ಟೇ ಅಲ್ಲ. ಹಿರಿಯ ವೈದ್ಯರಿಗೆ ಹಿರಿಯರ ಸಹಾಯವಿಲ್ಲದೆ ದಿನವಿಡಿ ಅವಿರತವಾಗಿ ದುಡಿಯುವ ಅನಿವಾರ್ಯಕ್ಕೆ ಸಿಲುದ್ದಾರೆ. ಇದರಿಂದ ವೈದ್ಯಕೀಯ ಕಾಲೇಜುಗಳ ಚಿಕಿತ್ಸೆಯಲ್ಲಿ ಬಡ ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೆಡಿಕಲ್ ಕಾಲೇಜು, ಮೈಸೂರು ಹಾಗೂ ಬೌರಿಂಗ್ ಮೆಡಿಕಲ್ ಕಾಲೇಜು ಗಳಂತಹ ಸಂಸ್ಥೆಗಳ ವ್ಯಾಪ್ತಿಯ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಪಾಸಣೆಯೂ ಇಲ್ಲ, ಚಿಕಿತ್ಸೆಯೂ ಇಲ್ಲದ ದುಸ್ಥಿತಿ ಇದೆ. ಈ ಸಮಸ್ಯೆಗಳನ್ನು ಕಾಲೇಜುಗಳ ಆಡಳಿತ ಮಂಡಳಿ ಅನೇಕಬಾರಿ ಸರಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವೈದ್ಯಕ್ಕೆ ಕಾಲೇಜುಗಳ ಅಧಿಕಾರಿಗಳು.
ಏನಿದು ನೀಟ್ ಅವ್ಯವಸ್ಥೆ: ರಾಜ್ಯದಲ್ಲಿ ೧೫ ಸರಕಾರಿ ಮೆಡಿಕಲ್ ಕಾಲೇಜುಗಳು ಸೇರಿದಂತೆ ಒಟ್ಟು ೬೫ ಕಾಲೇಜುಗಳಿವೆ. ಪ್ರತಿವರ್ಷ ೫೦ ಸಾವಿರದಷ್ಟು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದರೆ ಅವರಲ್ಲಿ ೮೦೦೦ ವಿದ್ಯಾರ್ಥಿಗಳು ಮೆಡಿಕಲ್ ಪ್ರವೇಶ ಮಾಡುತ್ತಾರೆ. ಅದೇ ರೀತಿ ಸ್ನಾತಕೋತ್ತರ ಕಲಿಯಲು ಪ್ರವೇಶ ಪಡೆಯುವವರು ಸುಮಾರು ೨ ಸಾವಿರದಷ್ಟು ಇರು ತ್ತಾರೆ. ಈ ಕಾಲೇಜುಗಳಿಗೆ ತಲಾ ೨೫೦ ವಿದ್ಯಾರ್ಥಿಗಳು ಪ್ರತಿ ವರ್ಷ ಪ್ರಯೋಗಿಕ ಕಲಿಕೆಗಾಗಿ ಬರುತ್ತಾರೆ. ಅವರು ಕೂಡ ನೀಟ್ ಮೂಲಕವೇ ಆಯ್ಕೆಯಾ ಗುತ್ತಾರೆ. ಆದರೆ ನಾಲ್ಕು ತಿಂಗಳಿನಿಂದ ನೀಟ್ ಸೀಟುಗಳು ಹಂಚಿಕೆಯಾಗದೆ ಈ ವಿದ್ಯಾರ್ಥಿ ಗಳು ಕೂಡ ಅತಂತ್ರರಾಗಿದ್ದಾರೆ. ಇದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಬಂದು ಅಲೆದು ಹೋಗುತ್ತಿದ್ದಾರೆ.
೬೦೦ ವೈದ್ಯ ಸೀಟುಗಳ ನಷ್ಟ!
ಇದೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಕೆಲವು ಹೊಸದಾಗಿ ಚಿಕ್ಕಬಳ್ಳಾಪುರ ಹಾವೇರಿ ಮತ್ತು ಚಿಕ್ಕಮಗಳೂರು ಹಾಗೂ ಯಾದಗಿರಿ ಕಾಲೇಜುಗಳ
ಆರಂಭಕ್ಕೆ ಮತ್ತು ಸಿಬ್ಬಂದಿ ನೇಮಕಕ್ಕೆ ಸರಕಾರ ತಲಾ ೧೫೦ ಕೋಟಿ ರು.ಗಳನ್ನು ಮಂಜೂರು ಮಾಡಿತ್ತು. ಆದರೆ ಇದಕ್ಕೆ ಸಂಬಂಧಿಸಿದವರು ಕಾಲೇಜು ಗಳ ಸಿಬ್ಬಂದಿ ನೇಮಕ ಮಾಡಲಿಲ್ಲ. ಇದರಿಂದ ಕಾಲೇಜುಗಳಿಗೆ ಸಿಗಬೇಕಾದ ೧೫೦ಕ್ಕೆ ಸೀಟುಗಳು ಈಗ ಕೈತಪ್ಪಿ ಹೋಗಿದೆ. ಅಂದರೆ ಇಲಾಖೆಗೆ ಸಂಬಂಧಿ ಸಿದವರು ಕಾಲೇಜು ಆರಂಭಿಸಿದ್ದರೆ, ಕೇಂದ್ರ ವೈದ್ಯಕೀಯ ಮಂಡಳಿಯಿಂದ ರಾಜ್ಯಕ್ಕೆ ಸುಮಾರು ೬೦೦ ಸೀಟುಗಳ ಹಂಚಿಕೆಗೆ ಅನುಮೋದನೆ
ಸಿಗುತ್ತಿತ್ತು. ಆದರೆ ಆ ಪ್ರಯತ್ನಕ್ಕೆ ಸರಕಾರ ಕೈ ಹಾಕದ ಕಾರಣ ಎಲ್ಲಾ ವೈದ್ಯಕ್ಕೆ ಸೀಟುಗಳು ರಾಜ್ಯಕ್ಕೆ ಕೈತಪ್ಪಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈದ್ಯ ವಿದ್ಯಾರ್ಥಿಗಳು ತತ್ತರ
ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡುತ್ತಾರೆ. ಪ್ರಾಥಮಿಕ ಪರೀಕ್ಷೆಗಳನ್ನು ಕಿರಿಯ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ನಡೆಸುತ್ತಾರೆ. ಆದರೆ ಆಸ್ಪತ್ರೆಗಳಲ್ಲಿ ವೈದ್ಯವಿದ್ಯಾರ್ಥಿಗಳು ಇಲ್ಲ. ಏಕೆಂದರೆ ನೀಟ್ ಸೀಟ್ ಹಂಚಿಕೆ ಆಗದೆ ವೈದ್ಯ ವಿದ್ಯಾರ್ಥಿಗಳು ಬರುತ್ತಿಲ್ಲ. ಈಗಾಗಲೇ ಇರುವ ಹಿರಿಯ ವೈದ್ಯರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾಕಿ ಹೋಗುತ್ತಿದ್ದಾರೆ. ಅನೇಕ ಕಡೆ ರಜೆ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಅನೇಕ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ನೀಟ್ ಸೀಟು ಹಂಚಿಕೆ ಗೊಂದಲವನ್ನು ಬೇಗ ನಿವಾರಿಸಿ ಎಂದು ಆಗ್ರಹಿಸಿದ್ದಾರೆ.
***
ಸಾಮಾನ್ಯ ಪರೀಕ್ಷೆ ಬಿಟ್ಟು ನೀಟ್ ಮತ್ತು ಸಿಇಟಿಯಂತಹ ಪ್ರವೇಶ ಪರೀಕ್ಷೆಗಳನ್ನು ಆರಂಭಿಸಿದ್ದೆ ತಪ್ಪು. ಅದರ ಫಲವೇ ಈ ಗೊಂದಲ. ಈಗ ಯಾವಾಗ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ? ಯಾವಾಗ ಅಂತ್ಯವಾಗುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ಇದು ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಹಾಳುಮಾಡುವ ಪ್ರಯತ್ನ.
-ನಿರಂಜನಾರಾಧ್ಯಖ್ಯಾತ ಶಿಕ್ಷಣತಜ್ಞ