Sunday, 12th May 2024

ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರಕ್ಕೆ ಕುರಿಯ ಗಣಪತಿ ಶಾಸ್ತ್ರಿ ಆಯ್ಕೆ

ಉಡುಪಿ: ಯತಿಶ್ರೇಷ್ಠ ಶ್ರೀವಿದ್ಯಾಮಾನ್ಯತೀರ್ಥರ ಹೆಸರಿನಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ನೀಡುವ ‘ಶ್ರೀ ವಿದ್ಯಾ ಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ಕುರಿಯ ಗಣಪತಿ ಶಾಸ್ತ್ರಿ ಆಯ್ಕೆಯಾಗಿದ್ದಾರೆ.

ಇವರು ತೆಂಕುತಿಟ್ಟಿನಲ್ಲಿ ಮೂರು ದಶಕಗಳ ಕಾಲ ಭಾಗವತರಾಗಿ, ಅನುಭವಿ ರಂಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಕುರಿಯ ಮನೆತನದವರಾದ ಗಣಪತಿ ಶಾಸ್ತ್ರಿಗಳು, ತಮ್ಮ ದೊಡ್ಡತಂದೆಯವರಾದ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯರಾಗಿ ಪ್ರಸಿದ್ಧ ವೇಷ ಧಾರಿಯಾಗಿದ್ದವರು. ಅಗರಿ ಶ್ರೀನಿ ವಾಸ ಭಾಗವತರ ಪ್ರೇರಣೆಯೊಂದಿಗೆ ಭಾಗವತಿಕೆ ಕ್ಷೇತ್ರವನ್ನು ಪ್ರವೇಶಿಸಿದರು.

ಕಟೀಲು ಮೇಳದಲ್ಲಿ ಪ್ರದಾನ ಭಾಗವತರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಕುರಿಯ ಶಾಸ್ತ್ರಿಗಳು, ಈ ಅವಧಿಯಲ್ಲಿ ನೆಡ್ಲೆ ನರಸಿಂಹ ಭಟ್, ಮರವಂತೆ ನರಸಿಂಹದಾಸ, ಪಡ್ರೆ ಚಂದ್ರು, ಕೇದಗಡಿ ಗುಡ್ಡಪ್ಪ ಗೌಡ, ಮುದುಕುಂಜ ವಾಸುದೇವ ಪ್ರಭು, ಕುಡಾಣ ಗೋಪಾಲ ಭಟ್, ಕೋಡಿ ಕುಷ್ಠ ಗಾಣಿಗ, ಪುಂಡರಿಕಾಕ್ಷ ಉಪಾಧ್ಯಾಯ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮುಂತಾದ ಹಿರಿಯ ಕಲಾವಿದ ರೊಂದಿಗೆ ಒಡನಾಟದ ಅನುಭವ ಹೊಂದಿದ್ದಾರೆ.

ಮೇ 11ರಂದು ಪಲಿಮಾರಿನಲ್ಲಿ ನಡೆಯುವ ಶ್ರೀವಿದ್ಯಾಮಾನ್ಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳಿಗೆ ‘ಶ್ರೀವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ ಪ್ರಶಸ್ತಿ ಫಲಕ ಮತ್ತು 50 ಸಾವಿರ ರೂ. ನಿಧಿಯನ್ನು ಪ್ರದಾನ ಮಾಡಲಾಗು ವುದು.

error: Content is protected !!